Advertisement

ಹೊಸ ತಾಲೂಕು; BEO ನೇಮಕಕ್ಕೆ ತುಕ್ಕು ! ಮುಗಿಯದ ಹಳೇ ತಾಲೂಕು ಕೇಂದ್ರ ಅಲೆದಾಟ

12:30 AM Jul 30, 2023 | Team Udayavani |

ಕಾರ್ಕಳ: ರಾಜ್ಯದಲ್ಲಿ 47 ಹೊಸ ತಾಲೂಕುಗಳ ರಚನೆಯಾಗಿ ಹಲವು ವರ್ಷಗಳು ಗತಿಸಿವೆ. ಇಲ್ಲಿ ತಾಲೂಕು ಆಡಳಿತಕ್ಕೆ ಸಂಬಂಧಿಸಿದ ನಾನಾ ಕಚೇರಿಗಳು ಕಾರ್ಯಾರಂಭ ಮಾಡಿದ್ದರೂ ಅತ್ಯವಶ್ಯಕವಾದ ಶಿಕ್ಷಣಾಧಿಕಾರಿಗಳ ನೇಮಕ, ಶಿಕ್ಷಣಾಧಿಕಾರಿ ಕಚೇರಿ ಆರಂಭ ಆಗಿಲ್ಲ.

Advertisement

ಹೊಸ ತಾಲೂಕುಗಳಿಗೆ ಬಿಇಒಗಳ ನೇಮಕ ವಾಗದೆ ವಿದ್ಯಾರ್ಥಿಗಳು, ಪೋಷಕರು ಶೈಕ್ಷಣಿಕ ದಾಖಲಾತಿಯ ಕೆಲಸ ಕಾರ್ಯಗಳಿಗೆ ದೂರದ ಹಳೆಯ ತಾಲೂಕು ಕೇಂದ್ರಗಳಿಗೆ ಓಡಾಡಬೇಕಾದ ಪರಿಸ್ಥಿತಿ ಇದೆ. ಶಿಕ್ಷಕರು ಪಾಠ ಮಾಡುವುದಕ್ಕೆ ಬದಲಾಗಿ ಬದಲಿಗೆ ದೂರದ ಕಚೇರಿಗಳಿಗೆ ಕಡತ ಹಿಡಿದು ಅಲೆದಾಡ ಬೇಕಿದೆ. ಇದಕ್ಕೆ ಪರಿಹಾರವಾಗಿ ಶೈಕ್ಷಣಿಕ, ಸಾಮಾಜಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಮತ್ತು ಅಧಿಕಾರ ವಿಕೇಂದ್ರಿಕರಣ ಹಿನ್ನೆಲೆ ಯಲ್ಲಿ ಹೊಸ ತಾಲೂಕುಗಳಲ್ಲಿ ಬಿಇಒ ಕಚೇರಿ ತೆರೆದು ಬಿಇಒ ನೇಮಕಾತಿ, ಸಿಬಂದಿ ನೇಮಕಾತಿ ಆಗಬೇಕಿದೆ.

2013ರಲ್ಲಿ ಬಲು ಹುರುಪು- ಹುಮ್ಮಸ್ಸಿನಿಂದ ಹೊಸ ತಾಲೂಕುಗಳನ್ನು ಘೋಷಣೆ ಮಾಡಲಾಗಿತ್ತು. ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿ ಆಗಿದ್ದ ವೇಳೆ ಆಗಿನ ಸರಕಾರ ಹೊಸದಾಗಿ 43 ತಾಲೂಕುಗಳ ಘೊಷಣೆ ಮಾಡಿತ್ತು. ಅನಂತರ ಸಿದ್ದ ರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಮತ್ತೆ ನಾಲ್ಕು ತಾಲೂಕುಗಳ ಘೋಷಣೆ ಯಾಗಿತ್ತು. ಹೊಸ ತಾಲೂಕು ಘೋಷಣೆಯಾದ ಬಳಿಕ ಈಗಿನ ಸಿದ್ದರಾಮಯ್ಯ ಸೇರಿ 6 ಮಂದಿ ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದಾರೆ. ಹಲವು ಮಂದಿ ಶಿಕ್ಷಣ ಸಚಿವರಾಗಿದ್ದಾರೆ. ಇವರ್ಯಾರೂ ತಮ್ಮ ಅವಧಿಯಲ್ಲಿ ಬಿಇಒಗಳ ಕಚೇರಿ ತೆರೆಯುವುದಕ್ಕೆ ಮನಸ್ಸು ಮಾಡಿಲ್ಲ.

ಉಡುಪಿಯ ಬೈಂದೂರು, ಬ್ರಹ್ಮಾವರ ಹೊಸ ತಾಲೂಕಾಗಿದ್ದರೂ ಶೈಕ್ಷಣಿಕ ವಲಯ ವಾಗಿ ಹಿಂದಿನಿಂದಲೇ ಇತ್ತು.

ಇನ್ನುಳಿದಂತೆ ಹೆಬ್ರಿ ಹಾಗೂ ಕಾಪು, ದ.ಕ. ಜಿಲ್ಲೆಯ ಮೂಡುಬಿದಿರೆ, ಕಡಬ, ಮೂಲ್ಕಿ, ಉಳ್ಳಾಲ ತಾಲೂಕುಗಳಲ್ಲಿ ಇನ್ನೂ ಬಿಇಒ ಕಚೇರಿಗಳು ತೆರೆದಿಲ್ಲ. ಇದಲ್ಲದೆ ವಿಜಯಪುರ ಜಿಲ್ಲೆಯ ಅಲಮೇಲ, ಬಬಲೇಶ್ವರ, ನಿಡಗುಂದಿ, ತ್ರಿಕೋಟ, ದೇವರ ಹಿಪ್ಪರಗಿ, ತಾಳಿಕೋಟೆ, ಚಡಚಣ, ಕೋಲ್ಹಾರ, ಹಾವೇರಿ ಜಿಲ್ಲೆಯ ದಟ್ಟಿಹಳ್ಳಿ, ಮೈಸೂರಿನ ಸರಗೂರು, ಸಾಲಿಗ್ರಾಮ, ಚಿಕ್ಕಮಗಳೂರಿನ ಅಜ್ಜಂಪುರ, ಕಳಸ, ಉತ್ತರಕನ್ನಡ ಜಿಲ್ಲೆಯ ದಾಂಡೇಲಿ, ಕೊಪ್ಪಳದ ಕುಕನೂರು, ಕನಕಗಿರಿ, ಕಾರಟಗಿ, ಗದಗದ ಗಜೇಂದ್ರಗಡ, ಲಕ್ಷೇಶ್ವರ, ಧಾರವಾಡದ ಅಣ್ಣಿಗೇರಿ, ಅಳ್ನಾವರ, ಹುಬ್ಬಳ್ಳಿನಗರ, ದಾವಣಗೆರೆಯ ಶ್ಯಾಮತಿ, ರಾಮನಗರದ ಹಾರೋಹಳ್ಳಿ, ಚಿಕ್ಕಬಳ್ಳಾಪುರದ ಚೇಳೂರು, ಬಾಗಲಕೋಟೆಯ ತೆರದಾಳ, ಕೊಡಗಿನ ಪೊನ್ನಂಪೇಟೆ, ಕುಶಾಲನಗರ, ಹಾಸನದ ಶಾಂತಿಗ್ರಾಮ, ಬೆಳಗಾವಿಯ ಯದಗಟ್ಟಿ ಮೊದಲಾದ ತಾಲೂಕುಗಳಲ್ಲಿ ಇದೇ ಸ್ಥಿತಿ ಇದೆ. ಇದರಿಂದ ಹೊಸ ತಾಲೂಕು ವ್ಯಾಪ್ತಿಯಲ್ಲಿ ಶೈಕ್ಷಣಿಕ ಮಟ್ಟ ಕುಸಿಯುತ್ತಿದೆ ಎನ್ನುವ ಭೀತಿಯೂ ಶಿಕ್ಷಕ ವಲಯದಲ್ಲಿದೆ.

Advertisement

ಬಿಇಒ ಕಚೇರಿಗಳ ಸಮಸ್ಯೆಯ ಬಗ್ಗೆ ಅರಿವಿದೆ. ಇಲಾಖೆಯ ಬಜೆಟ್‌ ಅನುದಾನ ಹಂಚಿಕೆಯ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಿದ ಬಳಿಕ ಒಂದೊಂದಾಗಿ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ನಮ್ಮ ಮೊದಲ ಆದ್ಯತೆ ಸರಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವುದು.
– ಮಧು ಬಂಗಾರಪ್ಪ , ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ

ಹಲವು ಬಾರಿ ಸರಕಾರದ ಗಮನಕ್ಕೆ ತಂದಿದ್ದೇವೆ. ಆರ್ಥಿಕ ಮುಗ್ಗಟ್ಟಿನ ನೆಪದಲ್ಲಿ ಬಿಇಒಗಳ ನೇಮಕಾತಿಗೆ ಹಿಂದೇಟು ಹಾಕಲಾಗುತ್ತಿದೆ. ಇತರ ಕಚೇರಿಗಳನ್ನು ಹೊಸದಾಗಿ ಆರಂಭಿಸಿದ್ದರೂ ಶಿಕ್ಷಣ ಇಲಾಖೆಯ ಪ್ರಮುಖ ಹುದ್ದೆ ಬಿಇಒಗಳನ್ನು ನೇಮಿಸದೆ ಅನ್ಯಾಯವಾಗಿದೆ.
– ಚಂದ್ರು ನುಗ್ಗಿ , ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಬೆಂಗಳೂರು

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next