Advertisement

ಬೆಂಗರೆಯಲ್ಲಿ ಮಲ್ಪೆ ಮಾದರಿಯ “ಸೀ ವಾಕ್‌’ಅನುಷ್ಠಾನಕ್ಕೆ ಸರಕಾರ ಉತ್ಸುಕ

01:07 AM Mar 16, 2020 | Sriram |

ಮಹಾನಗರ: ಕೇರಳ ಹಾಗೂ ಉಡುಪಿಯ ಮಲ್ಪೆಯಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಆಕರ್ಷಣೆ ಸೃಷ್ಟಿಸಿರುವ “ಸೀ ವಾಕ್‌’ ಪರಿಕಲ್ಪನೆಯನ್ನು ಮಂಗಳೂರಿನ ಬೆಂಗರೆ ಪರಿಸರದ ಬ್ರೇಕ್‌ ವಾಟರ್‌ನಲ್ಲಿ ಕೈಗೊಳ್ಳುವ ಬಗ್ಗೆ ರಾಜ್ಯಸರಕಾರ ಇಚ್ಛಾಶಕ್ತಿ ತೋರಿದೆ.
ಮಂಗಳೂರು ಪರಿಸರದ ಬೀಚ್‌ ಅಭಿವೃದ್ಧಿ ನಿಟ್ಟಿನಲ್ಲಿ ಯಾವುದೇ ಹೊಸ ಯೋಜನೆಯನ್ನು ಆರಂಭ ಮಾಡುತ್ತಿಲ್ಲ ಎಂಬ ಪ್ರವಾಸಿಗರ ಆಕ್ಷೇಪದ ಮಧ್ಯೆಯೇ ಇದೀಗ ಸೀ ವಾಕ್‌ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರಕಾರ ಉತ್ಸುಕತೆ ತೋರಿದೆ. ಇದು ಸಾಧ್ಯವಾದರೆ, ಇಲ್ಲಿನ ಬೀಚ್‌ ಪ್ರವಾಸೋದ್ಯಮದಲ್ಲಿ ಹೊಸ ನಿರೀಕ್ಷೆ ಮೂಡಿದಂತಾಗುತ್ತದೆ.

Advertisement

ಕೇರಳದಲ್ಲಿ ಯಶಸ್ವಿ
ಕೇರಳದ ಹಲವು ಕಡಲ ಕಿನಾರೆಗಳಲ್ಲಿ ಈಗಾಗಲೇ ಸೀ ವಾಕ್‌ ಪರಿಕಲ್ಪನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಪ್ರವಾಸೋದ್ಯಮ ಕೇಂದ್ರಗಳಾಗಿ ಬೆಳೆದಿದೆ. ರಾಜ್ಯದಲ್ಲಿ ಮೊದಲ ಸೀ ವಾಕ್‌ ಮಲ್ಪೆಯಲ್ಲಿ ಎರಡು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಇಲ್ಲೂ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡಿ ಸಮುದ್ರದ ಸೌಂದರ್ಯ ಆಸ್ವಾದಿಸುತ್ತಿದ್ದಾರೆ. ಮಲ್ಪೆ ಬೋಟ್‌ ಜೆಟ್ಟಿಯ ಬಳಿ ಸಮುದ್ರದಲ್ಲಿ ಹಿಂದೆ ಇದ್ದ ಬ್ರೇಕ್‌ ವಾಟರ್‌ ಕಲ್ಲಿನ ಹಾದಿಯ ಮೇಲೆ ರಾಜ್ಯದ ಮೊದಲ ಸೀ ವಾಕ್‌ ವೇ ನಿರ್ಮಾಣಗೊಂಡಿದೆ. ಸಮುದ್ರ ಮೇಲ್ಭಾಗದಲ್ಲಿ 450 ಮೀ. ಉದ್ದ ಹಾಗೂ 2.4 ಮೀ. ಅಗಲವಿದೆ. ಇಲ್ಲಿ ಪ್ರವಾಸಿಗರು ನಡೆದಾಡಲು ಅನುಕೂಲವಾಗುವಂತೆ ಇಂಟರ್‌ಲಾಕ್‌ ಅಳವಡಿಸಲಾಗಿದೆ. ಸಮುದ್ರ ಸೌಂದರ್ಯವನ್ನು ಕುಳಿತು ವೀಕ್ಷಿಸಲು ಕಲ್ಲಿನ ಬೆಂಚ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ವಾಕ್‌ವೆà ಅಂತರದಲ್ಲಿ ಸುಂದರ ಕಲಾಕೃತಿ, ಅಲಂಕಾರಿಕಾ ದೀಪಗಳನ್ನು ಅಳವಡಿಸಲಾಗಿದೆ.

ಸಮುದ್ರದ ಸೊಬಗು
ಸವಿಯುವ ಅವಕಾಶ
ಸಾಮಾನ್ಯವಾಗಿ ಮಳೆಗಾಲದ ಅವಧಿಯಲ್ಲಿ ಸಮುದ್ರಕ್ಕೆ ಇಳಿಯಲು ಅವಕಾಶ ಇರುವುದಿಲ್ಲ. ಸಮುದ್ರ ಹೆಚ್ಚು ರಫ್‌ ಆಗಿರುವುದರ ಜತೆಯಲ್ಲಿ ಹೆಚ್ಚು ಅಪಾಯಕಾರಿಯಾಗಿರುತ್ತದೆ. ಸೀ ವಾಕ್‌ ನಿರ್ಮಾಣವಾದರೆ ಮಳೆಗಾಲದ ಸಂದರ್ಭದಲ್ಲೂ ಸಮುದ್ರದ ಸೊಬಗನ್ನು ಸವಿಯುವ ಅವಕಾಶ ಲಭ್ಯವಾಗಲಿದೆ.

ಏನಿದು ಸೀ ವಾಕ್‌?
ಸೀ ವಾಕ್‌ ಅಂದರೆ ಸಮುದ್ರದ ಮೇಲೆ ನಡೆದಾಡುವುದು ಎಂದರ್ಥ. ಈಗಾಗಲೇ ಇರುವ ಬ್ರೇಕ್‌ವಾಟರ್‌ನ ಮೇಲೆ ಪ್ರವಾಸಿಗರಿಗೆ ನಡೆದಾಡುವ ಪಾಥ್‌ ನಿರ್ಮಿಸಲಾಗುವುದು. ಸಮುದ್ರದಲ್ಲಿ ಸುಮಾರು ಒಂದು ಕಿ.ಮೀ. ದೂರದವರೆಗೆ ನಡೆದಾಡುವ ಅನುಭವವನ್ನು ಇದು ನೀಡಲಿದೆ. ಸಮುದ್ರದ ಅಲೆಗಳಿಂದ ಏಳುವ ರಭಸದ ಗಾಳಿಗೆ ಮೈಯೊಡ್ಡುವ ಅವಕಾಶ, ಯುವಜನರ ಕ್ರೇಜಿಗಾಗಿ ಸೆಲ್ಫಿ ಪಾಯಿಂಟ್‌, ಸುಂದರ ದೀಪಸ್ತಂಭಗಳು, ನಡೆದಾಡಲು ಅನುಕೂಲ ಆಗುವ ವ್ಯವಸ್ಥೆ ಇದರಲ್ಲಿ ಒಳಗೊಳ್ಳಲಿದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುವುದು ಈ ಯೋಜನೆಯ ಉದ್ದೇಶ.

ವರದಿಗೆ ಸೂಚನೆ
ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಮಂಗಳೂರಿನ ಸಮುದ್ರದಲ್ಲೂ ಸೀ ವಾಕ್‌ ನಿರ್ಮಿಸುವ ಸಾಧ್ಯತೆಗಳ ಬಗ್ಗೆ ವರದಿ ನೀಡುವಂತೆ ಬಂದರು, ಒಳನಾಡು ಜಲಸಾರಿಗೆ ಇಲಾಖೆಗೆ ಸೂಚನೆ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಯು ಈ ಬಗ್ಗೆ ವಿಶೇಷ ಆದ್ಯತೆ ನೀಡಿ ಕಾರ್ಯ ನಡೆಸಲಿದೆ. ಸೀ ವಾಕ್‌ನಿಂದ ಕಡಲ ಕಿನಾರೆಗೆ ಇನ್ನಷ್ಟು ಪ್ರವಾಸಿಗರು ಬರುವ ನಿರೀಕ್ಷೆಯಿದೆ.
 -ಡಿ. ವೇದವ್ಯಾಸ ಕಾಮತ್‌, ಶಾಸಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next