Advertisement

CM Siddaramaiah ಮುಡಾ ಕೇಸ್‌ ನಡುವೆ ಹೊಸ ಸಿಎಂ ಚರ್ಚೆ ಬಿರುಸು

01:30 AM Sep 09, 2024 | Team Udayavani |

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುಡಾ ಪ್ರಕರಣದ ತೂಗುಗತ್ತಿ ತೂಗುತ್ತಿರುವಂತೆಯೇ ಕಾಂಗ್ರೆಸ್‌ ವಲಯದಲ್ಲಿ ಮತ್ತೆ ಹೊಸ ಮುಖ್ಯಮಂತ್ರಿ ಚರ್ಚೆ ಬಲವಾಗಿದೆ. ಸಿಎಂ ಗಾದಿಯ ವಿಚಾರವಾಗಿ ಯಾರೂ ಧ್ವನಿ ಎತ್ತಬಾರದು ಎಂಬ ಹೈಕಮಾಂಡ್‌ ಕಟ್ಟಪ್ಪಣೆಯ ಮಧ್ಯೆಯೇ ಅಲ್ಲೊಂದು, ಇಲ್ಲೊಂದು ಹೇಳಿಕೆಗಳು ಹೊರಬರುತ್ತಲೇ ಇವೆ. ಕೋರ್ಟ್‌ ತೀರ್ಪು ಏನಿರಲಿದೆ ಎಂಬ ಗೊಂದಲದ ಮಧ್ಯೆ ಒಂದು ವೇಳೆ ಸಿದ್ದರಾಮಯ್ಯ ಅವರು “ಪಟ್ಟದಿಂದ ಕೆಳಗಿಳಿದರೆ’ ಮುಂದೆ ಯಾರು ಎಂಬ ಬಗ್ಗೆ ಚರ್ಚೆ ತೀವ್ರಗೊಂಡಿದೆ.

Advertisement

ಇಂದು ವಿಚಾರಣೆ: ಈ ವಾರವೇ ತೀರ್ಪು?
ಅಪರಾಹ್ನ 3.30ಕ್ಕೆ ವಿಚಾರಣೆ ನಿಗದಿ; ಎ.ಜಿ. ಶಶಿಕಿರಣ್‌ ಶೆಟ್ಟಿ ವಾದ ಮಂಡನೆ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆಯ ಹಗರಣಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ಮುಂದುವರಿಯಲಿದ್ದು, ರಾಜ್ಯ ಸರಕಾರದ ಪರವಾಗಿ ಅಡ್ವೊಕೇಟ್‌ ಜನರಲ್‌ (ಎ.ಜಿ.) ಕೆ. ಶಶಿಕಿರಣ್‌ ಶೆಟ್ಟಿ ವಾದ ಮಂಡಿಸಲಿದ್ದಾರೆ.

ಅಪರಾಹ್ನ 3.30ಕ್ಕೆ ವಿಚಾರಣೆ ನಿಗದಿ ಯಾಗಿದೆ. ಎ.ಜಿ. ಅವರ ವಾದ ಮಂಡನೆ ಮುಗಿದ ಬಳಿಕ ತಮಗೆ ಮರು ವಾದ ಮಂಡನೆಗೆ ಸೆ. 12ರಂದು ಅವಕಾಶ ನೀಡಬೇಕು ಎಂದು ಸಿಎಂ ಪರ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಈಗಾಗಲೇ ಕೋರಿದ್ದಾರೆ. ಹಾಗಾಗಿ ಸೋಮವಾರದ ಬಳಿಕ ಅರ್ಜಿಯ ವಿಚಾರಣೆ ಮತ್ತೆ ಮುಂದೂಡಲ್ಪಡುವ ಸಾಧ್ಯತೆ ಇದೆ. ಪ್ರಕರಣಕ್ಕೆ ಸಂಬಂಧಿಸಿ ಆ. 19ರಂದು ಮೊದಲ ಬಾರಿ ವಿಚಾರಣೆ ನಡೆದಿತ್ತು.

ಬಳಿಕ ಆ. 29, 31 ಹಾಗೂ ಸೆ. 2ರಂದು ವಿಚಾರಣೆ ಮುಂದುವರಿದಿತ್ತು. ಸೆ. 9ರಂದು ನಡೆಯುವುದು 5ನೇ ಬಾರಿಯ ವಿಚಾರಣೆ ಆಗಿರಲಿದೆ. ಇಲ್ಲಿಯ ವರೆಗೆ ಸಿಎಂ ಪರ ಅಭಿಷೇಕ್‌ ಮನು ಸಿಂಘ್ವಿಪ್ರೊ| ರವಿವರ್ಮ ಕುಮಾರ್‌ ಪ್ರಾಥಮಿಕ ವಾದಗಳನ್ನು ಮಂಡಿಸಿದ್ದಾರೆ. ರಾಜ್ಯಪಾಲರ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರಾಥಮಿಕ ವಾದ ಪೂರ್ಣಗೊಳಿಸಿದ್ದಾರೆ. ದೂರುದಾರರ ಪರ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಮಣಿಂದರ್‌ ಸಿಂಗ್‌, ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ, ಕೆ.ಜಿ. ರಾಘವನ್‌, ರಂಗನಾಥ್‌ ರೆಡ್ಡಿ ತಮ್ಮ ವಾದಗಳನ್ನು ಪೂರ್ಣಗೊಳಿಸಿದ್ದಾರೆ.

ಸದ್ಯ ಬಲವಂತದ ಕ್ರಮ ಇಲ್ಲ
ಪ್ರಕರಣದ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿರುವ ಖಾಸಗಿ ದೂರುಗಳಿಗೆ ಸಂಬಂಧಿಸಿ ಆದೇಶ ಅಥವಾ ವಿಚಾರಣ ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ ಮತ್ತು ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿರುವ ಆದೇಶ ಆಧರಿಸಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಈ ಹಂತದಲ್ಲಿ ಯಾವುದೇ ಬಲವಂತದ ಅಥವಾ ಆತುರದ ಕ್ರಮ ಜರುಗಿಸುವಂತಿಲ್ಲ ಎಂದು ಹೈಕೋರ್ಟ್‌ ಆ. 19ರಂದು ನೀಡಿರುವ ಮಧ್ಯಾಂತರ ಆದೇಶ ಈವರೆಗೆ ಮುಂದುವರಿದಿದೆ.

Advertisement

ಸಚಿವ ಎಂ.ಬಿ. ಪಾಟೀಲ್‌ ಮುಖ್ಯಮಂತ್ರಿಯಾದರೆ ನನ್ನ ಅಭ್ಯಂತರವಿಲ್ಲ. ಸಿದ್ದರಾಮಯ್ಯ ಇರುವವರೆಗೂ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಅವರ ಬದಲಾವಣೆ ಆಗುವುದಿಲ್ಲ ಎಂಬ ವಿಶ್ವಾಸ ಇದೆ. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಸಿದ್ದರಾಮಯ್ಯ ತಪ್ಪೇ ಮಾಡಿಲ್ಲ ಎಂದರೆ ಯಾಕೆ ಬದಲಾವಣೆ ಆಗಬೇಕು?
– ಶಿವಾನಂದ ಪಾಟೀಲ್‌, ಸಚಿವ

ನಾನೂ ಮುಖ್ಯಮಂತ್ರಿ ಆಗುವ ಸಂಬಂಧ ಅಗತ್ಯ ತಯಾರಿ ಮಾಡುತ್ತಿದ್ದೇನೆ. ಆದರೆ ಈಗ ಸಿಎಂ ಆಗಲು ಅಲ್ಲ, ಬದಲಾಗಿ 2028ರಲ್ಲಿ ಆಗುವುದಕ್ಕೆ. ಅಲ್ಲಿಯವರೆಗೆ ಅಭಿಮಾನಿಗಳು ಸಮಾಧಾನದಿಂದ ಕಾಯಬೇಕು. ರಾಜ್ಯದಲ್ಲಿ ಈಗ ಸಿಎಂ ಬದಲಾವಣೆ ಸನ್ನಿವೇಶವೇ ಇಲ್ಲ. ಸಿದ್ದರಾಮಯ್ಯ ಅವರೇ ಮುಂದುವರಿ ಯುತ್ತಾರೆ ಎನ್ನುವ ನಂಬಿಕೆ ಇದೆ. ಅವರಿಗೆ ಸದಾ ನನ್ನ ಬೆಂಬಲ.
– ಸತೀಶ್‌ ಜಾರಕಿಹೊಳಿ, ಸಚಿವ

ಪ್ರಸ್ತುತ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅವರೇ ಮುಂದುವರಿಯುತ್ತಾರೆ. ಇದರಲ್ಲಿ ಸಂಶಯ ಬೇಡ. ನನಗೂ ಆಸೆ ಇದೆ. ನಾನೂ ಮುಂದೊಂದು ದಿನ ಮುಖ್ಯಮಂತ್ರಿ ಆಗುತ್ತೇನೆ. ಆದರೆ ಆ ಬಗ್ಗೆ ನನಗೆ ದುರಾಸೆ ಇಲ್ಲ. ಮುಂದೆಯೂ ನಾವೆಲ್ಲರೂ ಸಿದ್ದರಾಮಯ್ಯ ಪರವಾಗಿರುತ್ತೇವೆ. ಇದನ್ನು ನಾವೆಲ್ಲ ಜತೆ ಸೇರಿ ಸಚಿವ ಸಂಪುಟದಲ್ಲಿ ನಿರ್ಣಯ ಮಾಡಿದ್ದೇವೆ.
– ಎಂ.ಬಿ. ಪಾಟೀಲ್‌, ಸಚಿವ

ಮುಖ್ಯಮಂತ್ರಿ ಆಗುವ ಯೋಗ್ಯತೆ, ಅರ್ಹತೆ ಎಲ್ಲರಿಗೂ ಇರಬಹುದು. ಆದರೆ ಅದನ್ನು ತೀರ್ಮಾನ ಮಾಡುವವರು ಪಕ್ಷದ ಶಾಸಕರು, ಕೆಪಿಸಿಸಿ ಅಧ್ಯಕ್ಷರು, ಹೈಕಮಾಂಡ್‌. ಸದ್ಯಕ್ಕಂತೂ ಸಿದ್ದರಾಮಯ್ಯಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದರಲ್ಲಿ ಅನುಮಾನ ಇಲ್ಲ. ಹೀಗಾಗಿ ಈ ಬಗ್ಗೆ ಚರ್ಚಿಸಲು ಸಿಎಂ ಹುದ್ದೆ ಖಾಲಿ ಇಲ್ಲ.
– ಡಿ. ಸುಧಾಕರ್‌, ಸಚಿವ

ಸದ್ಯಕ್ಕಂತೂ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಮುಖ್ಯಮಂತ್ರಿ ಹುದ್ದೆಯ ವಿಚಾರದಲ್ಲಿ ಯಾವುದೇ ಬದಲಾವಣೆಯೂ ಆಗುವುದಿಲ್ಲ. ಮುಡಾ ಹಗರಣ ವಿಷಯದಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ಮುಗಿದು ವರದಿ ಬಂದ ಬಳಿಕ ಯಾರೇ ತಪ್ಪು ಮಾಡಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಮುಖ್ಯಮಂತ್ರಿ ಬದಲಾವಣೆ ಅಂತೂ ಸದ್ಯಕ್ಕೆ ಇಲ್ಲ.
-ಬೈರತಿ ಸುರೇಶ್‌, ಸಚಿವ

ಹೊರಗೆ ಸಿದ್ದರಾಮಯ್ಯನವರ ಪರವಾಗಿ ಬಂಡೆ ಹಾಗೆ ನಿಂತಿದ್ದೇವೆ ಅನ್ನುತ್ತಾರೆ. ಆದರೆ ಒಳಗೊಳಗೆ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಪರಮೇಶ್ವರ್‌, ಡಿಕೆಶಿ ಹೀಗೆ ಅನೇಕ ನಾಯಕರು ಸಾಲುಗಟ್ಟಿ ನಿಂತಿದ್ದಾರೆ. ಕಾಂಗ್ರೆಸ್‌ನವರು ಮೊದಲು ತಮ್ಮ ಮನೆ ಸರಿ ಮಾಡಿಕೊಳ್ಳಲಿ. ಅದನ್ನು ಬಿಟ್ಟು ನಾನು ನೀಡಿದ ಹೇಳಿಕೆಗೆ ಟೀಕೆ ಮಾಡುವುದಲ್ಲ.
– ಪ್ರಹ್ಲಾದ್‌ ಜೋಶಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next