Advertisement

ಪಕ್ಷಿ ಸಂಕುಲ ಉಳಿಸಲು ನೂತನ ಅಭಿಯಾನ

08:51 PM Apr 11, 2021 | Team Udayavani |

ಮುದ್ದೇಬಿಹಾಳ: ಪಕ್ಷಿ ಪ್ರೇಮಿಗಳ ಕಾಳು, ನೀರು ಕೊಡಿ-ಪಕ್ಷಿ ರಕ್ಷಿಸಿ ಅಭಿಯಾನ ದಿನೇ ದಿನೇ ಮಹತ್ವ ಪಡೆದುಕೊಳ್ಳುತ್ತಿದೆ. ಸಣ್ಣ ಪ್ರಯತ್ನವೊಂದರಿಂದ ಆರಂಭಗೊಂಡಿರುವ ಅಭಿಯಾನ ಬೇಸಿಗೆ ಮುಗಿಯುವವರೆಗೂ ಮುಂದುವರಿಯುವ ಸಂಕಲ್ಪ ಹೊಂದಿದೆ. ಬೇಸಿಗೆಯಲ್ಲಿ ಪಕ್ಷಿಗಳನ್ನು ರಕ್ಷಿಸುತ್ತೇವೆ ಎನ್ನುವ ಪ್ರಮಾಣದೊಂದಿಗೆ ಮಕ್ಕಳೂ ಸಹಿತ ಅಭಿಯಾನದಲ್ಲಿ ಭಾಗವಹಿಸುತ್ತಿರುವುದು ಪ್ರೇರಣೆಯಂತಾಗಿದೆ.

Advertisement

ಏನಿದು ಅಭಿಯಾನ?:

ಪರಿಸರದ ಸಮತೋಲನಕ್ಕೆ ಅತ್ಯಗತ್ಯವಾಗಿರುವ ರೈತ ಮಿತ್ರ ಪಕ್ಷಿಗಳು ಹೆಚ್ಚುತ್ತಿರುವ ಕಾಂಕ್ರೀಟ್‌ ಕಾಡು, ಮೊಬೈಲ್‌ ಟಾವರ್‌ಗಳ ವಿಕೀರಣದಿಂದಾಗಿ ನಗರ ಪ್ರದೇಶ ತೊರೆಯುತ್ತಿವೆ. ಇದರಿಂದಾಗಿ ದಶಕಗಳ ಹಿಂದಿದ್ದ ಕಲರವ, ಚಿಂವ್‌ಚಿಂವ್‌ ನಾದ ಕೇಳಿ ಬರುವುದು ಬಹುತೇಕ ನಿಂತೆ ಹೋಗಿದೆ. ಗುಬ್ಬಿ, ಕಾಗೆ, ಕೆಲ ಪಕ್ಷಿಗಳು ಅಲ್ಲಲ್ಲಿ ಕಂಡು ಬರುತ್ತವೆ. ಹೀಗೆ ಕಾಣುವ ಪಕ್ಷಿಗಳನ್ನಾದರೂ ರಕ್ಷಿಸಿಕೊಳ್ಳಬೇಕೆನ್ನುವ ಪರಿಕಲ್ಪನೆಯಿಂದ ಕೆಲವರು ಮನೆಗಳ ಮೇಲ್ಛಾವಣಿ, ಮನೆ ಎದುರು ಬೆಳೆಸಿದ ಗಿಡಗಳಲ್ಲಿ ಬಾಟಲ್‌, ಅಗಲವಾದ ಪಾತ್ರೆ, ತಟ್ಟೆ ಮುಂತಾದವುಗಳನ್ನು ಕಟ್ಟಿ ನೀರು, ಕಾಳು ಇಟ್ಟು ಅನುಕೂಲ ಕಲ್ಪಿಸಿದ್ದರು. ಈ ವರ್ಷ ಬೇಸಿಗೆ ಹೆಚ್ಚಾಗುವ ಮುನ್ಸೂಚನೆ ದೊರೆತಿದ್ದರಿಂದ ಕೆಲ ಪಕ್ಷಿ ಪ್ರಿಯರು ಸಾಮೂಹಿಕವಾಗಿ ಅಭಿಯಾನವನ್ನೇ ಪ್ರಾರಂಭಿಸಿದರು. ಎಲ್ಲೆಲ್ಲಿ ಸ್ಥಳಾವಕಾಶ ಇದೆಯೋ ಅಲ್ಲೆಲ್ಲ ಪಕ್ಷಿಗಳ ದಾಹ ತೀರಿಸುವ ಸೇವೆಗೆ ಪ್ರಚಾರ ಕೊಡತೊಡಗಿದರು. ಇದರಿಂದಾಗಿ ಅಭಿಯಾನ ಅನೇಕರಿಗೆ ಪ್ರೇರಣೆ ನೀಡತೊಡಗಿದೆ.

ಯಾರಿಂದ ಅಭಿಯಾನ?:

ಪಟ್ಟಣದಲ್ಲಿ ಎಲ್ಲೆಡೆ ಹಸಿರೀಕರಣದ ಸಂಕಲ್ಪ ತೊಟ್ಟಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸಿರು ತೋರಣ ಗೆಳೆಯರ ಬಳಗ ಅಭಿಯಾನದ ಮುಂಚೂಣಿಯಲ್ಲಿದೆ. ಬೇಸಿಗೆ ಪ್ರಾರಂಭದಲ್ಲೇ ಪಕ್ಷಿ ರಕ್ಷಿಸುವ ಅಭಿಯಾನ ಪ್ರಾರಂಭಿಸಿದೆ. ಬಳಗದ ಸದಸ್ಯರು ಮೊದಲಿಗರಾಗಿ ಪಕ್ಷಿಗಳಿಗೆ ನೀರು, ಕಾಳು ಇಡಲು ಉಚಿತ ಸೇವೆಯೊಂದಿಗೆ ಜಾಗೃತಿ ಮೂಡಿಸತೊಡಗಿದೆ. ಸರೂರಿನ ಆದಿಶಕ್ತಿ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮುದ್ದೇಬಿಹಾಳದ ಅಗಸ್ತ್ಯ ಎಜ್ಯುಕೇಶನಲ್‌ ಅಕಾಡೆಮಿ, ಎಂಜಿವಿಸಿ ಕಾಲೇಜಿನ ಬಯಾಲಜಿ ವಿಭಾಗದ ತಂಡ, ದಿ| ಶೃಂಗಾರಗೌಡ ಪಾಟೀಲ ಫೌಂಡೇಶನ್‌, ಜಂಗಮ ಸಮಾಜ ಬಳಗ, ಸಂತ ಕನಕದಾಸ ಶಾಲೆ ಮಕ್ಕಳು ಸೇರಿ ಹಲವು ಸಂಘಟನೆಗಳು ಸ್ವಯಂಪ್ರೇರಿತರಾಗಿ ಅಭಿಯಾನಕ್ಕೆ ಕೈ ಜೋಡಿಸಿವೆ. ಉಚಿತವಾಗಿ ಬಟ್ಟಲು, ಕಾಳು ನೀಡಿ, ಬಟ್ಟಲಲ್ಲಿ ನೀರು ತುಂಬಿ ಗಿಡಕ್ಕೆ ಕಟ್ಟುವುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿವೆ.

Advertisement

ಎಲ್ಲೆಲ್ಲಿ ಅಭಿಯಾನ ಅನುಷ್ಠಾನ?:

ಮುಖ್ಯ ಅಂಚೆ ಕಚೇರಿ, ಹುಡ್ಕೊ, ಉದ್ಯಾನವನಗಳು, ಓಂಶಾಂತಿ ಭವನ, ಸಂತ ಕನಕದಾಸ ಶಾಲೆ, ವಿವಿಧ ಶಾಲಾ, ಕಾಲೇಜುಗಳ ಆವರಣ, ಪಟ್ಟಣದ ಪ್ರಮುಖ ಸ್ಥಳಗಳಲ್ಲಿರುವ ಗಿಡ ಮರಗಳ ರೆಂಬೆ ಕೊಂಬೆಗಳಿಗೆ ನೀರು, ಕಾಳು ತುಂಬಿದ ಬಟ್ಟಲು ಕಟ್ಟಿ ಅಭಿಯಾನ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಹಳೆಯ ಬಾಟಲ್‌, ಅಗಲವಾದ ಪಾತ್ರೆ, ಬಟ್ಟಲುಗಳಲ್ಲಿ ನೀರು ತುಂಬಿಸಿ ಸಣ್ಣ ಹಗ್ಗ, ತಂತಿ, ದಾರದ ಸಹಾಯದಿಂದ ಮೇಲ್ಛಾವಣಿ, ಟೆರೇಸ್‌, ಗ್ರಿಲ್‌ ಹೀಗೆ ಎಲ್ಲೆಲ್ಲಿ ಪಕ್ಷಿಗಳು ಬರಲು ಅವಕಾಶ ಇದೆಯೋ ಅಲ್ಲೆಲ್ಲ ಕಟ್ಟಬೇಕು. ಅದರೊಟ್ಟಿಗೆ ಮನೆಯಲ್ಲಿ ಅಳಿದುಳಿದ ದ್ವಿದಳ ಧಾನ್ಯವನ್ನೋ, ರಾತ್ರಿ ತಿಂದುಳಿದ ಆಹಾರ ಪದಾರ್ಥವನ್ನೋ, ಹಣ್ಣಿನ ಸಿಪ್ಪೆಯನ್ನೋ, ಅಳಿದುಳಿದ ದವಸಧಾನ್ಯ ಸೇರಿ ಪಕ್ಷಿಗಳಿಗೆ ಆಹಾರವಾಗಬಹುದಾದುದನ್ನು ಇಡಬೇಕು. ಆದಷ್ಟು ಜನಸಂದಣಿಯಿಂದ ಎತ್ತರದಲ್ಲಿ ಅಥವಾ ದೂರದಲ್ಲಿ ಈ ವ್ಯವಸ್ಥೆ ಇರುವುದು ಹೆಚ್ಚು ಅನುಕೂಲ. ಆಕಾಶದಲ್ಲಿ ಸ್ವತ್ಛಂದವಾಗಿ ವಿಹರಿಸುವ ಗುಬ್ಬಿಗಳಾದಿಯಾಗಿ ವಿವಿಧ ಜಾತಿಯ ಪಕ್ಷಿಗಳ ಅತಿಸೂಕ್ಷ್ಮ ದೃಷ್ಟಿಗೆ ಈ ವ್ಯವಸ್ಥೆ ಬಿದ್ದರೆ ಖಂಡಿತ ಅವು ಅಲ್ಲಿಗೆ ಹಾರಿಬಂದು ಹಸಿವು, ದಾಹ ಎರಡನ್ನೂ ತೀರಿಸಿಕೊಳ್ಳುತ್ತವೆ.

ಡಿ.ಬಿ. ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next