Advertisement

ಪ್ರವಾಸಿ ಕ್ಷೇತ್ರಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ

11:40 PM Feb 26, 2020 | mahesh |

ಪುತ್ತೂರು: ಆರಂಭಿಕ ಪೈಪೋಟಿಯನ್ನು ಕಳೆದು ಕೊಂಡು ಕಳಪೆ ಸೇವೆಗೆ ಜಾರಿರುವ ಮೊಬೈಲ್‌ ನೆಟ್‌ವರ್ಕ್‌ ಸಂಸ್ಥೆಗಳು ಗ್ರಾಮಾಂತರ ಭಾಗಗಳಲ್ಲಿ ಸಂಪೂರ್ಣ ಸ್ತಬ್ಧಗೊಳ್ಳುತ್ತಿದ್ದು, ಗ್ರಾಮೀಣ ಗ್ರಾಹಕರನ್ನು ವಂಚಿಸುತ್ತಿವೆ. ಗ್ರಾಮಾಂತರದ ಬಡಗನ್ನೂರು, ಪಡುವನ್ನೂರು, ನೆಟ್ಟಣಿಗೆ ಮುಟ್ನೂರು, ಅರಿಯಡ್ಕ ವ್ಯಾಪ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿವಿಧ ಸಂಸ್ಥೆಗಳ ನೆಟ್‌ವರ್ಕ್‌ಗಳು ಜಂಕ್ಷನ್‌ಗಳನ್ನು ಹೊರತುಪಡಿಸಿ ವಸತಿ ಪ್ರದೇಶಗಳನ್ನು ತಲುಪುವಲ್ಲಿ ದಿನದಿಂದ ದಿನಕ್ಕೆ ವಿಫಲಗೊಳ್ಳುತ್ತಿವೆ. ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌, ಏರ್‌ಟೆಲ್‌, ಐಡಿಯಾ (ವೊಡಾಫೋನ್‌) ಮೊದಲಾದ ನೆಟ್‌ವರ್ಕ್‌ಗಳು ಲಭ್ಯವಿದ್ದರೂ ಕರೆಗಳು ಬಂದರೆ ಮಾತನಾಡಲು ಸಾಧ್ಯವಾಗುವಷ್ಟು ಸಾಮರ್ಥ್ಯವನ್ನು ಹೊಂದಿಲ್ಲ. ಇನ್ನು ಇಂಟರ್‌ನೆಟ್‌ ಸೇವೆಯಂತೂ ಬಲುದೂರ ಸರಿದಿದೆ.

Advertisement

ಪ್ರವಾಸಿ ಕ್ಷೇತ್ರಗಳು
ಈ ವ್ಯಾಪ್ತಿಯಲ್ಲಿ ಜನಾಕರ್ಷಣೆಯ ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಗೊಂಡಿವೆ. ಈಶ್ವರಮಂಗಲ ಹನುಮಗಿರಿ ಕ್ಷೇತ್ರ ಅಭಿವೃದ್ಧಿಗೊಂಡು ಭಕ್ತರನ್ನು ಆಕರ್ಷಿಸುತ್ತಿದೆ. ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ-ಚೆನ್ನಯರ ಹುಟ್ಟು ಹಾಗೂ ಸಾಧನೆಗೆ ಸಾಕ್ಷಿಯಾದ ಗೆಜ್ಜೆಗಿರಿ ನಂದನ ಬಿತ್ತಿಲ್‌ ಕ್ಷೇತ್ರ, ಪಡುಮಲೆ ಕ್ಷೇತ್ರಗಳು ಅಭಿವೃದ್ಧಿ ಹೊಂದುತ್ತಿವೆ. ಕ್ಷೀಣ ನೆಟ್‌ವರ್ಕ್‌ ಪ್ರವಾಸಿಗರನ್ನು ಸಂವಹನ, ಇಂಟರ್ನೆಟ್‌ ಬಳಕೆಯ ಅವಕಾಶದಿಂದ ವಂಚಿತಗೊಳಿಸುತ್ತಿದೆ.

ಅಭಿವೃದ್ಧಿಗೂ ತೊಡಕು
ಗ್ರಾಮೀಣ ಪ್ರದೇಶಗಳಿಗೆ ಸಂವಹನ ಮಾಧ್ಯಮ ಅತಿ ಅಗತ್ಯ. ತಂತ್ರಜ್ಞಾನ ಯುಗದಲ್ಲೂ ಈ ವ್ಯವಸ್ಥೆಗಳು ಸಮರ್ಪಕವಾಗಿ ತಲುಪದಿದ್ದರೆ ಸರಕಾರಿ ಹಾಗೂ ಖಾಸಗಿ ಪ್ರಾಯೋಜಿತ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಇಂತಹದೇ ಸಮಸ್ಯೆ ಬಡಗನ್ನೂರು ಹಾಗೂ ಸುತ್ತಲಿನ ಗ್ರಾಮಗಳನ್ನು ಕಾಡುತ್ತಿದೆ. ಗ್ರಾ.ಪಂ.ಗಳಲ್ಲಿ ಜನರ ಅಗತ್ಯದ ವ್ಯವಸ್ಥೆಗಳನ್ನು ಮಾಡಿಕೊಡಲೂ ಈ ನೆಟ್‌ವರ್ಕ್‌ ವ್ಯವಸ್ಥೆ ಶಾಪವಾಗಿ ಪರಿಣಮಿಸಿದೆ.

ಬಡಗನ್ನೂರು, ಅರಿಯಡ್ಕ, ನೆಟ್ಟಣಿಗೆ ಮುಟ್ನೂರು, ನಿಡ³ಳ್ಳಿ ಗ್ರಾ.ಪಂ.ಗಳ ವ್ಯಾಪ್ತಿಯ ಅನಿಲೆ, ಕೊçಲ, ಈಶ್ವರಮಂಗಲ, ನಿಡ³ಳ್ಳಿ, ಪಾಪೆಮಜಲು, ಪದಡ್ಕ ಮೊದಲಾದ ಕಡೆಗಳಲ್ಲಿ ನೆಟ್‌ವರ್ಕ್‌ ಟವರ್‌ಗಳನ್ನು ಅಳವಡಿಸಲಾಗಿದೆ. ಕೆಲವು ಟವರ್‌ಗಳಲ್ಲಿ ಬೇರೆ ಬೇರೆ ಸಂಸ್ಥೆಗಳ ನೆಟ್‌ವರ್ಕ್‌ಗಳನ್ನು ಜೋಡಿಸಿಕೊಳ್ಳಲಾಗಿದೆ. ಆದರೆ ಟವರ್‌ ಸಮೀಪದ ಒಂದಷ್ಟು ವ್ಯಾಪ್ತಿಯನ್ನು ಬಿಟ್ಟರೆ ಉಳಿದೆಡೆಗಳಿಗೆ ಇದರ ಪ್ರಯೋಜನವನ್ನು ಕನಿಷ್ಠ ಸಾಮರ್ಥ್ಯಕ್ಕೆ ಸೀಮಿತಗೊಳಿಸಲಾಗಿದೆ.

ತುರ್ತು ಕರೆಯೂ ಇಲ್ಲ
ತುರ್ತು ಸಂದರ್ಭಗಳಲ್ಲಂತೂ ಈ ಪ್ರದೇಶಗಳ ಒಳಭಾಗದ ಮನೆಗಳಿಗೆ ದೂರವಾಣಿ ಕರೆ ಸಾಧ್ಯವಾಗುವುದಿಲ್ಲ. ಒಂದು ವೇಳೆ ಕರೆ ಬಂದರೂ ಸಂವಹನ ಸಾಧ್ಯವಾಗುತ್ತಿಲ್ಲ. ಅಷ್ಟಕ್ಕೂ ಕರೆ ಮಾಡಲೇಬೇಕೆಂದಿದ್ದರೆ ಎತ್ತರದ ಪ್ರದೇಶಕ್ಕೆ ತೆರಳಬೇಕು ಅಥವಾ ಮರ ಏರಬೇಕು. ನೆಟ್‌ವರ್ಕ್‌ ವ್ಯವಸ್ಥೆ ಗ್ರಾಮಗಳನ್ನು ಪ್ರವೇಶಿಸಿದ ಆರಂಭದಲ್ಲಿ ಇದ್ದ ಸ್ಥಿತಿಯೇ ಇಲ್ಲಿ ಮರುಕಳಿಸಿದೆ.

Advertisement

ಲೈನ್‌ ಸಮಸ್ಯೆ ಇತ್ತು
ಬಿಎಸ್ಸೆನ್ನೆಲ್‌ ನೆಟ್‌ವರ್ಕ್‌ಗೆ ಸಂಬಂಧಿಸಿದ ಒಎಫ್‌ಸಿ ಲೈನ್‌ ಕುಂಬ್ರ ಸಮೀಪ ತುಂಡಾಗಿದೆ. ಸ್ಪಷ್ಟ ಜಾಗ ಹುಡುಕುವ ಕೆಲಸ ನಡೆಯುತ್ತಿದೆ. ಈ ಕಾರಣದಿಂದ ಕೆಲವು ದಿನಗಳಿಂದ ಕುಂಬ್ರ, ಈಶ್ವರಮಂಗಲ, ಬಡಗನ್ನೂರು, ಸುಳ್ಯಪದವು ಪರಿಸರದಲ್ಲಿ ನೆಟ್‌ವರ್ಕ್‌ ಡೌನ್‌ ಆಗಿದೆ. ವಿದ್ಯುತ್‌ ವ್ಯತ್ಯಯ, ಲೋ ವೋಲ್ಟೆàಜ್‌ನಿಂದಲೂ ನೆಟ್‌ವರ್ಕ್‌ ಸಮಸ್ಯೆ ಉಂಟಾಗುತ್ತದೆ. ಟವರ್‌ನ ಸಾಮರ್ಥ್ಯವನ್ನು ಕಡಿಮೆಗೊಳಿಸುವುದಿಲ್ಲ.
– ಆನಂದ್‌ ಬಿ.ಎಜಿಎಂ, ಬಿಎಸ್ಸೆನ್ನೆಲ್‌ ಪುತ್ತೂರು

ಗ್ರಾಹಕರಿಗೆ ವಂಚನೆ
ಗ್ರಾಮಾಂತರ ಭಾಗಗಳ ನೆಟ್‌ವರ್ಕ್‌ಗೆ ಸಂಬಂಧಿಸಿದಂತೆ ಸಂಸ್ಥೆಗಳು ಸೇವಾ ದಕ್ಷತೆ ವಹಿಸದೆ ನಿರ್ಲಕ್ಷé ಮಾಡುವ ಮೂಲಕ ಗ್ರಾಹಕ ಹಕ್ಕುಗಳನ್ನು ವಂಚಿಸುತ್ತಿದ್ದಾರೆ. ಶುಲ್ಕಗಳನ್ನು ಪಾವತಿಸುತ್ತಿದ್ದರೂ ಬಳಕೆಗೆ ಸಿಗುತ್ತಿಲ್ಲ. ಪ್ರವಾಸಿ ಕ್ಷೇತ್ರಗಳನ್ನೂ ಒಳಗೊಂಡಿರುವ ಬಡಗನ್ನೂರು ವ್ಯಾಪ್ತಿಯಲ್ಲಂತೂ ನೆಟ್‌ವರ್ಕ್‌ ಸಮಸ್ಯೆ ತೀವ್ರಗೊಂಡಿದೆ. ಈ ಕುರಿತು ಸಂಸ್ಥೆಗಳ ಜತೆಗೆ ಆಡಳಿತ ವ್ಯವಸ್ಥೆ, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು.
– ಲಿಂಗಪ್ಪ ಗೌಡ,ಅಧ್ಯಕ್ಷ, ಶ್ರೀಕೃಷ್ಣ ಯುವಕ ಮಂಡಲ ಪಟ್ಟೆ

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next