Advertisement

ನೇತ್ರಾವತಿ ಸೇತುವೆ –ಮಂಗಳೂರು ಸೆಂಟ್ರಲ್‌: ರೈಲು ಹಳಿ ದ್ವಿಗುಣ

12:13 AM Feb 11, 2020 | mahesh |

ಮಹಾನಗರ: ನಗರದ ಮೋರ್ಗನ್‌ಗೆಟ್‌ ಸಮೀಪದ ನೇತ್ರಾ ವತಿ ರೈಲ್ವೇ ಸೇತುವೆಯಿಂದ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದವರೆಗಿನ ಒಂದೂವರೆ ಕಿ.ಮೀ. ಉದ್ದದ ಬಹು ನಿರೀಕ್ಷಿತ ರೈಲು ಹಳಿ ದ್ವಿಗುಣ ಕಾಮಗಾರಿಗೆ ಇದೀಗ ಮರುಜೀವ ದೊರಕಿದೆ. 2016 -17ರಲ್ಲಿ ರೈಲ್ವೇ ಇಲಾಖೆಯಿಂದ ಅನುಮೋದನೆಯಾದ ಈ ಯೋಜನೆ ಸದ್ಯ ಅನುಷ್ಠಾನ ಹಂತದಲ್ಲಿದ್ದು, ಈ ಕಾಮಗಾರಿ ಮುಗಿದ ಬಳಿಕ ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ರೈಲುಗಳು ನಿಲು ಗಡೆ ಇಲ್ಲದೆ (ನೇತ್ರಾವತಿ ಸೇತುವೆ ಬಳಿ) ನೇರ ವಾಗಿ ಸಂಚರಿಸಲು ಸಾಧ್ಯವಾಗಲಿದೆ.

Advertisement

2017ರಲ್ಲಿ ಶಿಲಾನ್ಯಾಸ ನಡೆದಿತ್ತು
ಹಳಿ ದ್ವಿಗುಣ ಕಾಮಗಾರಿಗೆ 2017ರ ಆ. 18ರಂದು ನಗರದಲ್ಲಿ ಶಿಲಾನ್ಯಾಸ ನಡೆದಿತ್ತು. ಅಂದಿನ ರೈಲ್ವೇ ಸಚಿವ ಸುರೇಶ್‌ ಪ್ರಭು ಅವರು ಹೊಸದಿಲ್ಲಿಯ ರೈಲ್ವೇ ಮಂಡಳಿ ಸಭಾಭವನದಿಂದ ವೀಡಿಯೋ ಕಾನ್ಫರೆನ್ಸ್‌ ಮೂಲಕ ಶಿಲಾನ್ಯಾಸ ನಡೆಸಿದ್ದರು. 28.05 ಕೋ.ರೂ.ವೆಚ್ಚದಲ್ಲಿ ಹಳಿದ್ವಿಗುಣ ಕಾಮಗಾರಿ ಕೈಗೆತ್ತಿ ಕೊಳ್ಳಲಾಗಿದೆ ಎಂದು ಅಂದು ತಿಳಿಸಲಾಗಿತ್ತು. ಆದರೆ ಅನಂತರ ಈ ಯೋಜನೆ ಅಂತಿಮ ರೂಪ ಪಡೆದಿರಲೇ ಇಲ್ಲ. ಪ್ರಸ್ತುತ ಇದರ ಅಂದಾಜು ಮೊತ್ತ ಕೂಡ ಸುಮಾರು 38 ಕೋ.ರೂ.ಗೂ ಮೀರಿದೆ.

ಈಗ ನೇತ್ರಾವತಿ ಸೇತುವೆಯಿಂದ ಬಲಭಾಗದ ರೈಲು ಹಳಿಯು ಮಂಗಳೂರು ಜಂಕ್ಷನ್‌ವರೆಗೆ (ಕಂಕನಾಡಿ) ದ್ವಿಗುಣಗೊಂಡಿದೆ. ಆದರೆ ನೇತ್ರಾವತಿ ಸೇತು ವೆಯಿಂದ ಮಂಗಳೂರು ಸೆಂಟ್ರಲ್‌ ಹಾಗೂ ಸೆಂಟ್ರಲ್‌ನಿಂದ ಮಂಗಳೂರು ಜಂಕ್ಷನ್‌ (ಕಂಕನಾಡಿ) ಮಧ್ಯೆ ರೈಲು ಹಳಿ ದ್ವಿಗುಣಗೊಂಡಿಲ್ಲ.

“ಫಿಟ್‌ ಲೈನ್‌’ ಸ್ಥಳಾಂತರ
ರೈಲು ಹಳಿ ದ್ವಿಗುಣಗೊಳ್ಳುವ ಕಾರಣದಿಂದ ಮಂಗಳೂರು ಸೆಂಟ್ರಲ್‌ನಲ್ಲಿ ಇನ್ನೊಂದು ಫ್ಲಾಟ್‌ಫಾರಂ ಕೂಡ ನಿರ್ಮಾಣಗೊಳ್ಳಲಿದೆ. ಹಾಗಾಗಿ ಈಗ ಸೆಂಟ್ರಲ್‌ನಲ್ಲಿರುವ “ಫಿಟ್‌ ಲೈನ್‌'(ಬೋಗಿಗಳ ತಾಂತ್ರಿಕ ಕಾಮಗಾರಿ ನಡೆಸುವ ಹಳಿ)ಅನ್ನು ಸ್ಥಳಾಂತರಿಸಬೇಕಾಗಿದೆ. ಸದ್ಯ ಫಿಟ್‌ಲೈನ್‌ ಅನ್ನು ಈಗಿರುವ ಜಾಗ ದಿಂದ ಸ್ವಲ್ಪ ದೂರಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ನೇತ್ರಾವತಿ ಸೇತುವೆಯಿಂದ ಸೆಂಟ್ರಲ್‌ವರೆಗಿನ ಹಳಿ ದ್ವಿಗುಣದ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆಗೆ ಸೇರಿದ ಭೂಮಿಯೇ ಅಧಿಕ ವಿದ್ದು, ಕೊಂಚ ಖಾಸಗಿ ಭೂಮಿ ಇದೆ. ಹೀಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಶೋರ್ನೂರುವಿನಿಂದ ಮಂಗಳೂರುವರೆಗೆ ರೈಲು ಹಳಿ ದ್ವಿಗುಣ ಕಾಮಗಾರಿಯನ್ನು ಸುದೀರ್ಘ‌ವಾಗಿ ವರ್ಷದ ಹಿಂದೆ ಕೈಗೊಳ್ಳಬಹುದಾಗಿತ್ತು. ಆದರೆ ಮಂಗಳೂರು ಸೆಂಟ್ರಲ್‌ಗೆ ಬರಬೇಕಾದ ದ್ವಿಗುಣ ಸವಲತ್ತು ಮಂಗಳೂರು ಜಂಕ್ಷನ್‌(ಕಂಕನಾಡಿ) ಪಾಲಾಯಿತು. ಕೇರಳದಿಂದ ಬರುವ ರೈಲುಗಳು ಮಂಗಳೂರು ಜಂಕ್ಷನ್‌ ಅನ್ನೇ ನೆಚ್ಚಿ ಕೊಂಡ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್‌ಗೆ ರೈಲು ದ್ವಿಗುಣ ಸವಲತ್ತು ದೊರೆತಿರಲಿಲ್ಲ. ಕೆಲವು ವರ್ಷಗಳ ಹಿಂದೆ ಈ ತಾರತಮ್ಯವನ್ನು ಖಂಡಿಸಿ ಕರಾ ವಳಿ ಭಾಗದ ರೈಲ್ವೇ ಹೋರಾಟ ಗಾರರು ಕೇಂದ್ರ ಸರಕಾರದ ಗಮನಕ್ಕೆ ತಂದ ಬಳಿಕ ರೈಲು ಹಳಿಯು ದ್ವಿಗುಣ ಪ್ರಕ್ರಿಯೆಗೆ ಜೀವಬಂದಿದೆ.

Advertisement

ರೈಲು ಕಾಯುವ ಪ್ರಮೇಯವಿರಲ್ಲ!
ಮಂಗಳೂರು ಸೆಂಟ್ರಲ್‌ನಿಂದ ನೇತ್ರಾವತಿ ಸೇತುವೆವರೆಗೆ ಸದ್ಯ ಒಂದೇ ರೈಲು ಹಳಿ ಇದೆ. ಹೀಗಾಗಿ ಸೆಂಟ್ರಲ್‌ನಿಂದ ಒಂದು ರೈಲು ಹೊರಟ ಅನಂತರ ಅದು ನೇತ್ರಾವತಿ ಸೇತುವೆ ದಾಟುವವರೆಗೆ, ಕೇರಳ ಭಾಗದಿಂದ ಇನ್ನೊಂದು ರೈಲು ಬರಲು ಅವಕಾಶವಿಲ್ಲ. ಅದಕ್ಕಾಗಿ ಕೇರಳ ಭಾಗದಿಂದ ಬರುವ ರೈಲು ಸುಮಾರು 10-15 ನಿಮಿಷ ನೇತ್ರಾವತಿ ಸೇತುವೆ ಬಳಿ ನಿಲ್ಲಬೇಕಾಗುತ್ತದೆ. ಹಳಿ ದ್ವಿಗುಣಗೊಂಡರೆ ಇಂತಹ ಸಮಸ್ಯೆ ಇರುವುದಿಲ್ಲ. ಅದರ ಜತೆಗೆ ಹೊಸ ರೈಲು ಓಡಾಟಕ್ಕೂ ಅವಕಾಶ ಸಿಗಲಿದೆ ಎಂಬುದು ರೈಲ್ವೇ ಮೂಲಗಳ ಮಾಹಿತಿ.

ಕಾಮಗಾರಿ ಆರಂಭ
ಮಂಗಳೂರು ಸೆಂಟ್ರಲ್‌ನಿಂದ ನೇತ್ರಾವತಿ ಸೇತುವೆವರೆಗಿನ ರೈಲು ಹಳಿ ದ್ವಿಗುಣ ಕಾಮಗಾರಿ ಇತ್ತೀಚೆಗೆ ಆರಂಭವಾಗಿದೆ. ಇದು ಪೂರ್ಣಗೊಂಡ ಬಳಿಕ ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣಕ್ಕೆ ಇನ್ನಷ್ಟು ರೈಲು ಸೇವೆ ದೊರೆಯುವ ನಿರೀಕ್ಷೆಯಿದೆ.
 - ಕಿಶನ್‌ ಕುಮಾರ್‌ ಎಂ.ಎಸ್‌., ಡೆಪ್ಯುಟಿ ಸ್ಟೇಷನ್‌ ಮ್ಯಾನೇಜರ್‌ (ವಾಣಿಜ್ಯ)
ಮಂಗಳೂರು ಸೆಂಟ್ರಲ್‌

- ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next