Advertisement

ಕುಂಬ್ಲಾಡಿ ಗದ್ದೆಯಲ್ಲಿ ಭಕ್ತರಿಂದಲೇ ನೇಜಿ ನಾಟಿ

11:02 PM Jul 02, 2019 | mahesh |

ಕಾಣಿಯೂರು: ದೇವಸ್ಥಾನವೆಂದರೆ ಊರ ಭಕ್ತರ ಶ್ರದ್ಧಾಭಕ್ತಿಯ ತಾಣ. ಗ್ರಾಮದ ದೇವಸ್ಥಾನದಲ್ಲಿ ಪ್ರತೀ ವರ್ಷ ಗಣೇಶ ಚತುರ್ಥಿಯಂದು ದೇವಸ್ಥಾನದಲ್ಲಿ ನಡೆಯುವ ಚೌತಿ ಪೂಜೆಗೆ ಪೈರನ್ನು ಸಿದ್ಧಪಡಿಸಲು ಭಕ್ತರೇ ಗದ್ದೆಯಲ್ಲಿ ಉಳುಮೆ ಮಾಡಿ, ನೇಜಿ ನಾಟಿ ಮಾಡಿ, ಗದ್ದೆ ತಯಾರಿ ಮಾಡಿದ್ದಾರೆ.

Advertisement

ಇದು ಕುಂಬ್ಲಾಡಿ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಗದ್ದೆಯಲ್ಲಿ ನಡೆದ ಕಾರ್ಯ. ಇಲ್ಲಿನ ಭಕ್ತರೇ ಸೇರಿಕೊಂಡು ನೇಜಿ ನಾಟಿ ಮಾಡಿ ಸಂಭ್ರಮಿಸಿದರು. 50ಕ್ಕೂ ಅಧಿಕ ಮಂದಿ ಈ ಕೆಲಸದಲ್ಲಿ ತೊಡಗಿಸಿಕೊಂಡರು.

ಆಡಳಿತ ಸಮಿತಿಯ ನೇತೃತ್ವ
ದೇವಸ್ಥಾನದ ಗದ್ದೆಯಲ್ಲಿ ಶ್ರಮದಾನದ ಮೂಲಕ ನಾಟಿ ಮಾಡುವ ಕಾರ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋನಪ್ಪ ಗೌಡ ಉಳವ, ಆಡಳಿತ ಪಂಗಡದ ಸಂಚಾಲಕ ವಿಶ್ವನಾಥ ಕಂಪ, ವಿಶ್ವನಾಥ ಖಂಡಿಗ, ಜನಾರ್ದನ ಅವರ ಮೇಲುಸ್ತುವಾರಿಯಲ್ಲಿ ನಡೆಯಿತು.

ದೇವಸ್ಥಾನದ ಪೈರು ಮನೆಗೆ ತೆನೆ
ಹೀಗೆ ದೇವಸ್ಥಾನದ ಗದ್ದೆಯಲ್ಲಿ ಬೆಳೆಸಲಾದ ಪೈರನ್ನು ಗಣೇಶ ಚತುರ್ಥಿಯ ದಿನ ದೇವಸ್ಥಾನದಲ್ಲಿ ನಡೆಯುವ ಪೈರು ಪೂಜೆಗೆ ಬಳಸಲಾಗುತ್ತದೆ. ಆ ದಿನ ದೇವಸ್ಥಾನಕ್ಕೆ ಬರುವ ಎಲ್ಲ ಭಕ್ತರಿಗೂ ಮನೆಯಲ್ಲಿ ತೆನೆ ತುಂಬಲು ಪೈರನ್ನು ನೀಡಲಾಗುತ್ತದೆ. ದೇವಸ್ಥಾನದಿಂದ ಕೊಂಡುಹೋದ ಪೈರನ್ನು ಬಳಸಿಕೊಂಡು ಮನೆ ತುಂಬಿಸುವ ವಿಧಿ-ವಿಧಾನದ ಬಳಿಕ ಮನೆಯಲ್ಲಿ ತೆನೆ ಕಟ್ಟಲಾಗುತ್ತದೆ. ದೇವಸ್ಥಾನದ ಗದ್ದೆಯಲ್ಲಿ ಬೆಳೆದ ಪೈರು ಆಗಿರುವುದರಿಂದ ಭಕ್ತರಿಗೂ ವಿಶೇಷ ಮಹತ್ವದ್ದಾಗಿರುತ್ತದೆ. ವರ್ಷಂಪ್ರತಿ ಇದೇ ರೀತಿಯ ಕಾರ್ಯ ಕುಂಬ್ಲಾಡಿ ದೇವಸ್ಥಾನದಲ್ಲಿ ನಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next