Advertisement

ನಮ್ಮವರಿಂದಲೇ ಕಲಾ ಪ್ರಕಾರಗಳ ನಿರ್ಲಕ್ಷ್ಯ

02:21 PM Jul 14, 2017 | Team Udayavani |

ದಾವಣಗೆರೆ: ಯಕ್ಷಗಾನಕ್ಕೆ ಕರಾವಳಿ ಮಂದಿಯಷ್ಟು ಆದ್ಯತೆ, ಪ್ರೋತ್ಸಾಹ, ಆಸಕ್ತಿ ರೀತಿ ಬಯಲಾಟಕ್ಕೆ ಉತ್ತರ ಕರ್ನಾಟಕದವರು ನೀಡುತ್ತಿಲ್ಲ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ, ನಾಡೋಜ ಬೆಳಗಲ್ಲು ವೀರಣ್ಣ ಹೇಳಿದ್ದಾರೆ.

Advertisement

ನಗರದ ಕುವೆಂಪು ಕನ್ನಡ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಶಿಕ್ಷಣ ಸಂಸ್ಥೆ, ಕಾಲೇಜು, ಸಂಘದೊಂದಿಗೆ ಅಕಾಡೆಮಿ ಹಮ್ಮಿಕೊಂಡಿರುವ ಎರಡು ದಿನಗಳ ಬಯಲಾಟ ಯಕ್ಷಗಾನ ಕಲಾ ಸಂಭ್ರಮದ ಗುರುವಾರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರಾವಳಿ ಪ್ರದೇಶದಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಹಂತದಿಂದ ಕಾಲೇಜುವರೆಗೂ ಯಕ್ಷಗಾನ ಅಭಿರುಚಿ ಬೆಳೆಸುವ ಮೂಲಕ ಆ ಕಲೆ ನಶಿಸಿ ಹೋಗದಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ, ಬಯಲಾಟ, ಸಣ್ಣಾಟ, ಪಾರಿಜಾತದಂತಹ ಕಲಾ ಪ್ರಕಾರಗಳಿಗೆ ಮೂಲ ನೆಲೆಯಾದ ಉತ್ತರ ಕರ್ನಾಟಕದಲ್ಲೇ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು
ವಿಷಾದಿಸಿದರು.

ಕರಾವಳಿಯಲ್ಲಿ ವಿದ್ಯಾವಂತರು, ಪ್ರಜ್ಞಾವಂತರು, ವಿದ್ವಾಂಸರು ಯಕ್ಷಗಾನ ಅವನತಿ ಅಂಚಿಗೆ ಹೋಗದಂತೆ ಎಚ್ಚರವಹಿಸುತ್ತಿದ್ದಾರಲ್ಲದೆ, ಆ ಕಲೆ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದಾರೆ. ಹಾಗಾಗಿಯೇ ಇಂದು ಯಕ್ಷಗಾನ ದೇಶ-ವಿದೇಶಗಳಲ್ಲೂ 
ಪಸರಿಸಲು ಕಾರಣವಾಗಿದೆ. ಆದರೆ, ಬಯಲಾಟ, ಸಣ್ಣಾಟ, ಪಾರಿಜಾರದಂಥಹ ಕಲಾ ಪ್ರಕಾರಗಳು ಮರೆಯಾಗಲು ಬರೀ ಪ್ರೇಕ್ಷಕರ ಕೊರತೆಯೊಂದೇ ಕಾರಣವಲ್ಲ. ಕಲಾವಿದರೂ ಸಹ ಪ್ರಾಮಾಣಿಕವಾಗಿ ಆ ಕಲೆಗಳ ಉಳಿಸಲು ಶ್ರಮಿಸಬೇಕು. ಗುಣಮಟ್ಟದಿಂದ ಕೂಡಿದ ಯಾವುದೇ ಕಲೆ ಪ್ರೇಕ್ಷಕರಿಂದ ತಾತ್ಸಾರಕ್ಕೊಳಗಾಗದು. ಆದ್ದರಿಂದ ಹೊಸ ಹೊಸ ವಿಧಾನ ಅಳವಡಿಸಿಕೊಂಡು ಪ್ರೇಕ್ಷಕರ
ಆಕರ್ಷಿಸುವ ನಿಟ್ಟಿನಲ್ಲಿ ಆಲೋಚಿಸಬೇಕು. ಇಂಥಹ ಪ್ರಯತ್ನ ತಾವು ತೊಗಲುಗೊಂಬೆ ಪ್ರದರ್ಶನದಲ್ಲಿ ಪ್ರಯೋಗಿಸಿದ್ದರಿಂದಲೇ ಆ ಕಲೆ ವಿದೇಶಗಳಲ್ಲಿ ಕಾಣುವಂತಾಯಿತು. ನನ್ನಂಥ ಕಲಾವಿದ ಸಹ ಹಲವಾರು ದೇಶ ಸುತ್ತುವ ಅವಕಾಶ ದೊರೆಯಿತು ಎಂದು ಹೇಳಿದರು.

ಈ ಹಿಂದೆ ಮೈಸೂರು ಸಮಾವೇಶದಲ್ಲಿ ಉತ್ತರ ಕರ್ನಾಟಕದ ಕಲಾ ಪ್ರಕಾರಗಳಿಗೆ ಅವಕಾಶವನ್ನೇ ನೀಡಲಿಲ್ಲ. ಕೆಲವು ದಿನಗಳಲ್ಲಿ ದಾವಣಗೆರೆಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಹಾಗಾಗದಿರಲಿ. ದಾವಣಗೆರೆ ಕಲೆ, ಸಂಸ್ಕೃತಿ, ಸಾಂಸ್ಕೃತಿಕ, ನಾಟಕ ಮುಂತಾದವುಗಳಿಗೆ ಸದಾ ಪ್ರೋತ್ಸಾಹ, ಗೌರವ ನೀಡುವ ನಗರಿ. ಮುಂದಿನ ಸಮ್ಮೇಳನದಲ್ಲಿ ಉತ್ತರ ಕರ್ನಾಟಕದ ಕಲೆಗಳಿಗೆ
ಆದ್ಯತೆ ದೊರೆಯುವಂತಾಗಲಿ ಎಂದು ಇದೇ ಸಂದರ್ಭದಲ್ಲಿ ವೀರಣ್ಣ ಆಶಿಸಿದರು.

ಇಂದು ಇಂಗ್ಲಿಷ್‌ ಸಂಸ್ಕೃತಿ ಹಾವಳಿಯಿಂದ ಶಾಲಾ-ಕಾಲೇಜುಗಳಲ್ಲಿ ವಾತಾವರಣವೇ ಬದಲಾಗಿದೆ. ಶ್ರೇಷ್ಠ ಭಾರತೀಯ ಸಂಸ್ಕೃತಿ ಕೈ ಬಿಟ್ಟರೆ ನಮ್ಮನ್ನು ನಾವೇ ಕಳೆದುಕೊಂಡಂತೆ. ಆದ್ದರಿಂದ ಅಧ್ಯಾಪಕರು ಮಕ್ಕಳಲ್ಲಿ ಸಂಸ್ಕೃತಿ ಬೆಳೆಸಲು ಮುಂದಾಗಬೇಕು. ಮೇಲಾಗಿ ಶಿಕ್ಷಕರು ಮೊದಲು ತಾವು ಬಯಲಾಟ, ಸಣ್ಣಾಟ, ಪಾರಿಜಾತದಂಥಹ ಕಲಾ ಪ್ರಕಾರಗಳ ಬಗ್ಗೆ ತಿಳಿದುಕೊಂಡು ಮಕ್ಕಳಲ್ಲಿ ಅವುಗಳನ್ನು ಬೆಳೆಸಲು ಕಾರ್ಯೋನ್ಮುಖರಾಗಬೇಕಿದೆ ಎಂದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಮಾತನಾಡಿ, ಕಲೆ ಮನುಷ್ಯನ ಜೀವನವನ್ನ ಎಲ್ಲಿಯೋ ಕರೆದೊಯ್ಯಲಿದೆ. ಅಂಥಹ ಶಕ್ತಿ ಕಲೆಗಿದೆ. ಕಲಾ ಪ್ರಕಾರಗಳಲ್ಲಿ ಯಕ್ಷಗಾನ ಬಹು ಎತ್ತರದ ಸ್ಥಿತಿಯಲ್ಲಿ ನಿಲ್ಲಲಿದೆ. ಮುಖ್ಯವಾಗಿ ಯಕ್ಷಗಾನ ಭೌತಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಯಿಂದ ಕೂಡಿದೆ. ವ್ಯಕ್ತಿ ಪ್ರತಿದಿನ ಕೊಂಚ ಕಾಲ ಸಂಗೀತ, ನೃತ್ಯ ಇಲ್ಲವೆ ಯಾವುದೇ ಕಲಾ ಪ್ರಕಾರದಲ್ಲಿ ತೊಡಗುವುದರಿಂದ ಸದೃಢ ಆರೋಗ್ಯವಲ್ಲದೆ, ಮನಸ್ಸಿಗೆ ಶಾಂತಿ ಲಭ್ಯವಾಗಲಿದೆ ಎಂದರು.

Advertisement

ಎಲ್ಲಾ ಕಲಾ ಪ್ರಕಾರಗಳೂ ಕ್ಷೀಣಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಅಕಾಡೆಮಿ ಮೂಲಕ ಉಳಿಸಲು ಪ್ರಯತ್ನಿಸುತ್ತಿರುವುದು ನಿಜಕ್ಕೂ
ಒಳ್ಳೆಯ ಕೆಲಸ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವುದು ಬಹುಮುಖ್ಯ ಎಂದು ಒತ್ತಿ ಹೇಳಿದರು.

ದಾವಿವಿ ಸಿಂಡಿಕೇಟ್‌ ಸದಸ್ಯ ಡಾ|ಎಚ್‌. ವಿಶ್ವನಾಥ್‌ ಮಾತನಾಡಿ, ಬಯಲಾಟ-ಯಕ್ಷಗಾನ ರಂಗಭೂಮಿಯ ಇನ್ನೊಂದು ಮುಖ. ನಶಿಸಿ ಹೋಗುತ್ತಿರುವ ಕಲಾ ಪ್ರಕಾರಗಳನ್ನ ಹಿಡಿದಿಡುವಲ್ಲಿ ಅಕಾಡೆಮಿ ಬಹುದೊಡ್ಡ ಪ್ರಯತ್ನ ಮಾಡುತ್ತಿದೆ. ಇಂದು ಜಾನಪದರ ಬದುಕು ಅತ್ಯಂತ ದುಸ್ಥಿತಿಯಲ್ಲಿದೆ. ಮುಖ್ಯವಾಗಿ ನಮ್ಮ ಕಲೆಗಳ ಬಗ್ಗೆ ಯುವ ಪೀಳಿಗೆ ತಿಳಿದುಕೊಳ್ಳಬೇಕಿದೆ ಎಂದರು. ಸಿದ್ದಗಂಗಾ ಶಾಲೆ ಮುಖ್ಯ ಶಿಕ್ಷಕಿ ಜಸ್ಟಿನ್‌ ಡಿಸೋಜ ಮಾತನಾಡಿ, ಶ್ರೀಮಂತ ಕಲಾ ಪ್ರಕಾರಗಳನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡುವ ಕೆಲಸ ಆಗಬೇಕಿದೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿ, ಮುಂದಿನ ದಿನಗಳಲ್ಲಿ ಬಯಲಾಟ ಹಾಗೂ ಯಕ್ಷಗಾನ ಅಕಾಡೆಮಿ ಪ್ರತ್ಯೇಕ ಆಗಲಿವೆ. ಇಲಾಖೆಗೆ ಸರ್ಕಾರ ಹೆಚ್ಚು ಅನುದಾನ ನೀಡಿದೆ.
ಕಲಾವಿದರ ಬಗ್ಗೆ ಸರ್ಕಾರ ಕೂಡ ಸಾಕಷ್ಟು ಕಾಳಜಿ ವಹಿಸಿದೆ ಎಂದು ತಿಳಿಸಿದರು. ಅಕಾಡೆಮಿ ರಿಜಿಸ್ಟ್ರಾರ್‌ ಎಸ್‌.ಎಚ್‌.ಶಿವರುದ್ರಪ್ಪ
ವೇದಿಕೆಯಲ್ಲಿದ್ದರು. ಸದಸ್ಯ ಸಂಚಾಲಕ ಡಾ| ಬಿ.ಎಂ. ಗುರುನಾಥ ಸ್ವಾಗತಿಸಿದರು. ಎನ್‌.ಎಸ್‌.ರಾಜು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next