Advertisement

ಅಸ್ಸಾಂ ಪ್ರವಾಹ: ಓರ್ವ ಮೃತ್ಯು, ಸಂಕಷ್ಟದಲ್ಲಿ 5 ಲಕ್ಷ ಮಂದಿ…

02:46 PM Jun 23, 2023 | Team Udayavani |

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ತೀವ್ರವಾಗಿ ಮುಂದುವರೆದಿದ್ದು, ಪ್ರವಾಹದಿಂದಾಗಿ ಸುಮಾರು ಐದು ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

Advertisement

ಪ್ರವಾಹದಿಂದ ಬ್ರಹ್ಮಪುತ್ರ ಸೇರಿದಂತೆ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಭಾರತೀಯ ಹವಾಮಾನ ಇಲಾಖೆ ಮುಂದಿನ ಕೆಲವು ದಿನಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದ್ದು ಪ್ರವಾಹದ ಮಟ್ಟ ಮತ್ತಷ್ಟು ಹೆಚ್ಚಗೊಳ್ಳುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಅಲ್ಲದೆ ಪ್ರವಾಹಕ್ಕೆ ಸಂಬಂಧಿಸಿ ಮುಂಜಾಗ್ರತಾ ಕ್ರಮವಾಗಿ ಲಕ್ಷಾಂತರ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಉದಲ್‌ಗುರಿ ಜಿಲ್ಲೆಯ ತಮುಲ್‌ಪುರದಲ್ಲಿ ಪ್ರವಾಹದಿಂದಾಗಿ ಓರ್ವ ಸಾವನ್ನಪ್ಪಿರುವ ವರದಿಯಾಗಿದೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ, ಗುರುವಾರ ಸಂಜೆಯವರೆಗೆ 4.95 ಲಕ್ಷ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ನೇಮತಿಘಾಟ್ (ಜೋರ್ಹತ್) ಮತ್ತು ಧುಬ್ರಿಯಲ್ಲಿ ಬ್ರಹ್ಮಪುತ್ರ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಕೇಂದ್ರ ಜಲ ಆಯೋಗದ (ಸಿಡಬ್ಲ್ಯೂಸಿ) ವರದಿ ಹೇಳಿದೆ. ಇತರ ನದಿಗಳಾದ ಪುತಿಮರಿ (ಕಾಮ್ರುಪ್), ಪಗ್ಲಗಿಯಾ (ನಲ್ಬರಿ) ಮತ್ತು ಮಾನಸ್ (ಬಾರ್ಪೆಟಾ) ಕೂಡ ಅಪಾಯದ ಮಟ್ಟ ತಲುಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಕೆಲವು ಪ್ರದೇಶಗಳಲ್ಲಿ ಪ್ರವಾಹದ ನೀರು ಮನೆಗಳಿಗೆ ನುಗ್ಗಿದ್ದು ಮತ್ತು ಕೆಲವು ಗುಡಿಸಲುಗಳು ಪ್ರವಾಹಕ್ಕೆ ಸಿಲುಕಿದ ಕಾರಣ ಅಲ್ಲಿದ್ದ ಜನರನ್ನು ಬಲವಂತವಾಗಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು.

ಇದುವರೆಗೆ 16 ಜಿಲ್ಲೆಗಳು ಮತ್ತು ಇತರ ನಾಲ್ಕು ಉಪವಿಭಾಗಗಳು ಪ್ರವಾಹದಿಂದ ಹಾನಿಗೊಳಗಾಗಿವೆ. ರಾಜ್ಯದ ಅತಿ ಹೆಚ್ಚು ಹಾನಿಗೊಳಗಾದ ವಿಭಾಗವಾದ ಬಜಾಲಿ ಉಪವಿಭಾಗದಲ್ಲಿ 2.60 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Meghalaya: 6 ತಿಂಗಳ ಹಿಂದೆ ಉದ್ಘಾಟನೆಗೊಂಡ ಫುಟ್ಬಾಲ್ ಕ್ರೀಡಾಂಗಣದ ತಡೆಗೋಡೆ ಕುಸಿತ

Advertisement

Udayavani is now on Telegram. Click here to join our channel and stay updated with the latest news.

Next