Advertisement

ಹೆದ್ದಾರಿ ಬಳಿಯ ಗೂಡಂಗಡಿ ತೆರವಿಗೆ ಗಣ್ಯರ ಅಸಮಾಧಾನ

12:33 PM Feb 23, 2017 | Team Udayavani |

ಕೋಟ: ಸಾಸ್ತಾನದ ಗುಂಡ್ಮಿ ಟೋಲ್‌ಗೇಟ್‌ ಸಮೀಪ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಸಂದರ್ಭದಲ್ಲಿ ಅತಿಕ್ರಮಣಗೊಂಡ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ  ಮೂರು ಗೂಡಂಗಡಿಗಳನ್ನು ಫೆ. 21ರಂದು ಕುಂದಾಪುರ ಸಹಾಯಕ ಕಮಿಷನರ್‌ ಅವರ ಆದೇಶದ ಮೇರೆಗೆ, ಬ್ರಹ್ಮಾವರ ವಿಶೇಷ ತಹಶೀಲ್ದಾರರು ತೆರವುಗೊಳಿಸಿದ ಸ್ಥಳಕ್ಕೆ ಬುಧವಾರ ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ್‌ ಪೂಜಾರಿ, ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್‌, ಕಾರ್ಮಿಕ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ರವಿ ಶೆಟ್ಟಿ, ರಾಮ ಸೇನೆಯ ರಾಜ್ಯ ಉಪಾಧ್ಯಕ್ಷ ಶಿವ ಕುಮಾರ್‌ ಕರ್ಜೆ ಸಹಿತ ಹಲವು ಗಣ್ಯರು ಭೇಟಿ ನೀಡಿದರು ಹಾಗೂ ಸೂಕ್ತ ಕ್ರಮಕೈಗೊಳ್ಳದೆ ಅಂಗಡಿಗಳನ್ನು ತೆರವುಗೊಳಿಸಿದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಬದಲಿ ವ್ಯವಸ್ಥೆ ಮಾಡಿಕೊಳ್ಳುವ ತನಕ ಅವಕಾಶ ನೀಡಿ 
ಹೊಟ್ಟೆಪಾಡಿಗಾಗಿ ಬೀದಿ ವ್ಯಾಪಾರ ನಡೆಸುವವರಿಗೆ ಯಾವುದೇ ಸೂಚನೆ ನೀಡದೆ ತೆರವುಗೊಳಿಸಿದ್ದು ಸರಿಯಲ್ಲ. ಈ ಕುರಿತು ಸಹಾಯಕ ಕಮಿಷನರ್‌, ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ ಹಾಗೂ ಬದಲಿ ವ್ಯವಸ್ಥೆ ಮಾಡಿಕೊಳ್ಳುವ ತನಕ ಸಮಸ್ಯೆ ಮಾಡದಂತೆ  ಮನವಿ ಮಾಡುವುದಾಗಿ ಸ್ಥಳಕ್ಕಾಗಮಿಸಿದ ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ್‌ ಪೂಜಾರಿ ತಿಳಿಸಿದರು.

ಸಕಾರಣವಿಲ್ಲದೆ ತೆರವು ಸರಿಯಲ್ಲ 
ರಾಷ್ಟ್ರೀಯ ಹೆದ್ದಾರಿಗಾಗಿ ವಶಪಡಿಸಿಕೊಂಡ ಜಾಗದಲ್ಲಿ ಸರ್ವೀಸ್‌ ರಸ್ತೆ  ಅಥವಾ ಬೇರೆ ಯಾವುದೇ ಅಭಿವೃದ್ಧಿ ನಡೆಯುವ ಕಾರಣಕ್ಕಾಗಿ ಗೂಡಂಗಡಿ ತೆರವುಗೊಳಿಸಿದರೆ ತೊಂದರೆ ಇರಲಿಲ್ಲ. ಆದರೆ ಯಾವುದೇ ಸಕಾರಣವಿಲ್ಲದೆ ಅಂಗಡಿ ಹಿಂದಿನ ಜಾಗದ ಮಾಲೀಕರ ಮನವಿಗಾಗಿ  ಸುಮಾರು ಇಪ್ಪತ್ತು ವರ್ಷಕ್ಕೂ ಹೆಚ್ಚು ಸಮಯದಿಂದ ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದವರ ಮೇಲೆ ಯಾವುದೇ ಸೂಚನೆ ನೀಡದೆ ಕ್ರಮಕೈಗೊಂಡಿದ್ದು ಸರಿಯಲ್ಲ. 

ರಾಷ್ಟ್ರೀಯ ಹೆದ್ದಾರಿಗೆ  ಅತಿಕ್ರಮಣವಾದ ಜಾಗ ಎನ್ನುವ ಕಾರಣಕ್ಕೆ ಕ್ರಮಕೈಗೊಳ್ಳುವುದಾದರೆ ಹೆದ್ದಾರಿ ಪಕ್ಕದಲ್ಲಿರುವ ಎಲ್ಲ ಕಟ್ಟಡಗಳ ಮೇಲೂ ಕ್ರಮಕೈಗೊಳ್ಳಬೇಕು. ಈ ಸಮಸ್ಯೆಯನ್ನು ಸಂಸದರ ಗಮನಕ್ಕೆ ತರಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್‌ ಪತ್ರಿಕೆಗೆ ತಿಳಿಸಿದ್ದಾರೆ.

ಬಡ ಕಾರ್ಮಿಕನಿಗೆ ಅನ್ಯಾಯ ವಾದರೆ ಜಿಲ್ಲಾ ವ್ಯಾಪ್ತಿ ಹೋರಾಟ ಕೋಟ್ಯಂತರ ಖರ್ಚು ಮಾಡಿ ಹೆದ್ದಾರಿಗೆ ಅತಿಕ್ರಮಣವಾದ ಜಾಗದಲ್ಲಿ ನಿರ್ಮಿಸಿದ ಕಟ್ಟಡಗಳ ಮೇಲೆ ಯಾವುದೇ  ಕ್ರಮಕೈಗೊಳ್ಳದ ಸಹಾಯಕ ಕಮಿಷನರ್‌ ಅವರು ಹೊಟ್ಟಪಾಡಿಗಾಗಿ ಕೆಲಸ ಮಾಡುವ ಮೂರು ಮಂದಿ ಬಡ ಕಾರ್ಮಿಕರ ಮೇಲೆ ಕ್ರಮಕೈಗೊಳ್ಳಲು ಮುಂದಾಗಿರುವುದು ಸರಿಯಲ್ಲ. 

Advertisement

ಸಕಾರಣವಿಲ್ಲದೆ ಯಾವುದೇ ಕಾರಣಕ್ಕೂ ಅಂಗಡಿ ತೆರವಿಗೆ ಅವಕಾಶ  ನೀಡುವುದಿಲ್ಲ. ಒಂದು ವೇಳೆ ನಮ್ಮ ಮನವಿಯನ್ನು ಧಿಕ್ಕರಿಸಿ ಕ್ರಮಕೈಗೊಂಡಲ್ಲಿ ಜಿಲ್ಲೆಯಾದ್ಯಂತ ಕಾರ್ಮಿಕ ವೇದಿಕೆ ಮೂಲಕ ಹೋರಾಟ ನಡೆಸಲಾಗುವುದು ಎಂದು ಕಾರ್ಮಿಕ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಪತ್ರಿಕೆಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next