Advertisement

NDA Government: ಆರ್ಥಿಕತೆಗೆ ಸವಾಲಾದ ಬೆಲೆಯೇರಿಕೆ, ನಿರುದ್ಯೋಗ

01:32 AM Jul 15, 2024 | Team Udayavani |

ಕೇಂದ್ರದಲ್ಲಿ ಎನ್‌ಡಿಎ ಸರಕಾರ ಮೂರನೆಯ ಅವಧಿಗೆ ಅಧಿಕಾರ ಹಿಡಿದಿದೆ. ಸರಕಾರಗಳು ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ಮೊದಲ ಆದ್ಯತೆಯಾಗಬೇಕು. ಪ್ರಸಕ್ತ ಸನ್ನಿವೇಶದಲ್ಲಿ ಆರ್ಥಿಕಾಭಿ ವೃದ್ಧಿ ಕಾರ್ಯಗಳು ಮುಂದುವರಿದು ನಿರುದ್ಯೋಗಕ್ಕೆ ಪರ್ಯಾಯ ಕಾರ್ಯಸಾಧ್ಯತೆಯ ಮಾನದಂಡ ಗಳು, ಹಣದುಬ್ಬರ ನಿಯಂತ್ರಣದ ಬಗ್ಗೆ ದೇಶದ ಜನತೆ ಇರಿಸಿಕೊಂಡಿರುವ ಬೆಟ್ಟದಷ್ಟು ನಿರೀಕ್ಷೆಯನ್ನು ಈಡೇರಿಸಬೇಕಾದ ಗುರುತರ ಹೊಣೆಗಾರಿಕೆ ಹೊಸ ಸರಕಾರದ ಮೇಲಿದೆ.ಈ ವಿಷಯಗಳಲ್ಲಿ ರಾಜ್ಯ ಸರಕಾರವೂ ಸಹಭಾಗಿಯಾಗಬೇಕು. ಕಳೆದೊಂದು ದಶಕದಲ್ಲಿ ದೇಶದಲ್ಲಿ ಆರ್ಥಿಕ ಸುಧಾರಣೆಗಳಾಗಿರು ವುದು ಮುಚ್ಚುಮರೆಯಿಲ್ಲದ ಸತ್ಯ. ಇದರೊಂದಿಗೆ ಈ ಸುಧಾರಣೆಗಳಿಗೆ ಮಾನವ ಸ್ಪರ್ಶಅತ್ಯವಶ್ಯಕ.

Advertisement

ಜಾಗತಿಕ ಅಪಾಯಗಳ ನಡುವೆಯೂ ದೇಶದ ಅರ್ಥಿಕತೆ ಮತ್ತು ಹಣಕಾಸು ವ್ಯವಸ್ಥೆ ಸದೃಢವಾಗಿದೆ. ಹತ್ತು ವರ್ಷಗಳ ಹಿಂದೆ ಭಾರತದ ಆರ್ಥಿಕತೆ ಯಾವಾಗ ಬೇಕಾದರೂ ನೆಲಕಚ್ಚಬಹುದು ಎನ್ನುವ ಮಟ್ಟವನ್ನು ತಲುಪಿತ್ತು. ಎನ್‌ಡಿಎ ಸರಕಾರ ಹತ್ತು ವರ್ಷಗಳ ತನ್ನ ಆಡಳಿತದಲ್ಲಿ ಆರ್ಥಿಕ ಸುಧಾರಣೆಗಳ ಮೂಲಕ ಭಾರತವನ್ನು ಜಾಗತಿಕ ಮಟ್ಟದಲ್ಲಿ 5ನೇ ಸ್ಥಾನಕ್ಕೇರಿಸಿದ ಅನಂತರ ಕೇಂದ್ರ ಸರಕಾರದ ಕನಸಿನ “ವಿಕಸಿತ ಭಾರತ’ ಪರಿಕಲ್ಪನೆಗೆ ಚಾಲನೆ ದೊರೆತಂತಾಗಿದೆ. ಇದಕ್ಕೆ ಪೂರಕವಾಗಿ ವಿಶ್ವಬ್ಯಾಂಕ್‌ ಭಾರತದ ಆರ್ಥಿಕತೆ ಆಬಾಧಿತ ಎಂದು ವಿಶ್ಲೇಷಿಸಿದೆ.

ದೇಶದ ಅರ್ಥವ್ಯವಸ್ಥೆಯ ನಿಯಂತ್ರಕ ಆರ್‌ಬಿಐ ಜಗತ್ತಿನಲ್ಲೇ ಅತ್ಯುತ್ತಮ ರೆಗ್ಯುಲೇಟರ್‌ ಬ್ಯಾಂಕ್‌ಗಳ
ಲ್ಲೊಂದಾಗಿದೆ. ಕೋವಿಡ್‌ ಅವಧಿ ಸಹಿತ ಜಾಗತಿಕ ಅನಿಶ್ಚತತೆಗಳ ಸಂದರ್ಭಗಳಲ್ಲೂ ಆರ್ಥಿಕ ಸಮಸ್ಯೆ
ಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿ ಸಿದ ಹಿರಿಮೆ ಆರ್‌ಬಿಐಗಿದೆ. ಕೇಂದ್ರ ಸರಕಾರಕ್ಕೆ ಆರ್‌ಬಿಐ ರೂ. 2.11ಲಕ್ಷ ಕೋಟಿ ಡಿವಿಡೆಂಡ್‌ ಘೋಷಿಸಿದೆ. ಇದರಿಂದ ವಿತ್ತೀಯ ಕೊರತೆ ಶೇ.0.3ರಷ್ಟು ಕಡಿಮೆ ಯಾಗಲಿದೆ. ಹಣದುಬ್ಬರವನ್ನು ಶೇ. 4ಕ್ಕೆ ತರುವ ಪ್ರಯತ್ನದಲ್ಲಿರುವ ಆರ್‌ಬಿಐ ಸತತ ಎಂಟನೆಯ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದು ಕೊಂಡು ತನ್ನ ಜವಾಬ್ದಾರಿಗೆ ಬದ್ಧವಾಗಿದೆ.

ಆರ್ಥಿಕತೆ ಸದೃಢ
2023-2024ರ ಜಿಡಿಪಿ ದರವು ವಾರ್ಷಿಕ ನೆಲೆಯಲ್ಲಿ ಶೇ.8.2ರಷ್ಟು ದಾಖಲಾಗಿ ದೇಶದ ಆರ್ಥಿಕತೆ 3.5ಲಕ್ಷ ಡಾಲರ್‌ಗಳಿಗೇರಿದೆ. ಮುಂದಿನ ದಿನಗಳಲ್ಲಿ ಇದು 5 ಲಕ್ಷ ಕೋಟಿ ಡಾಲರ್‌ಗಳಷ್ಟಾಗಲು ಸಹಕಾರಿಯಾಗಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ.7ಕ್ಕಿಂತ ಹೆಚ್ಚಾಗಲಿದ್ದು ಶೇ.7.5 ತಲುಪುವ ಅಂದಾಜನ್ನು ಎನ್‌ಪಿಇಅರ್‌ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ. ಆರ್‌ಬಿಐ ಶೇ. 7.2ರ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ. ಮೊದಲ ತ್ತೈಮಾಸಿಕದಲ್ಲಿ ಕಂಡುಬಂದ ಹೆಚ್ಚಳ, ಹೂಡಿಕೆ, ಬೆಳವಣಿಗೆ, ಸ್ಥೂಲ ಆರ್ಥಿಕ ಸ್ಥಿರತೆ ಮತ್ತು ಸಾಮಾನ್ಯ ಮುಂಗಾರು ನಿರೀಕ್ಷೆಯು ಈ ಅಂದಾಜುಗಳಿಗೆ ಪೂರಕವಾಗಲಿದೆ.

ಇಡೀ ವಿಶ್ವವೇ ಭಾರತದಲ್ಲಿ ವ್ಯಾಪಾರ ಮತ್ತು ಹೂಡಿಕೆಗೆ ಇಚ್ಛಿಸುತ್ತಿದೆ. ಹೊಸ ರಫ್ತುಗಳು ಗಣನೀಯ ಹೆಚ್ಚಿದ್ದು, ಏಷ್ಯಾ, ಆಸ್ಟ್ರೇಲಿಯಾ, ಬ್ರೆಜಿಲ್‌, ಕೆನಡಾ, ಯುರೋಪ್‌ ಮತ್ತು ಅಮೆರಿಕದಿಂದ ಉತ್ತಮ ಬೇಡಿಕೆಯಿಂದ ಒಳಹರಿವು ಹೆಚ್ಚಿದೆ. ಇದೀಗ ಪ್ರಪ್ರಥಮ ಬಾರಿಗೆ ಭಾರತೀಯ ಷೇರು ಮಾರುಕಟ್ಟೆ ಮೌಲ್ಯ 5 ಟ್ರಿಲಿಯನ್‌ ಗಡಿ ದಾಟುವ ಮೂಲಕ ಅಮೆರಿಕ, ಚೀನ, ಜಪಾನ್‌, ಹಾಂಕಾಂಗ್‌ನ ರ್‍ಯಾಂಕ್‌ ಕ್ಲಬ್‌ಗ ಭಾರತದ ಇಕ್ವಿಟಿ ಮಾರ್ಕೆಟ್‌ ಸೇರ್ಪಡೆಯಾಗಿದೆ. ಕೇವಲ ಆರು ತಿಂಗಳಲ್ಲಿ ಷೇರು ವಿನಿಮಯ ಕಂಪೆನಿಗಳ ಬಂಡವಾಳಕ್ಕೆ ಒಂದು ಟ್ರಿಲಿಯನ್‌ ಡಾಲರ್‌ ಸೇರ್ಪಡೆಗೊಳಿಸಿದೆ.

Advertisement

ದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳು ಭರ್ಜರಿ ಲಾಭದ ಹಳಿಯಲ್ಲಿ ಸಾಗುತ್ತಿವೆ. 2018ರಲ್ಲಿ ಭಾರತೀಯ ಬ್ಯಾಂಕ್‌ಗಳು ರೂ. 85,390 ಕೋಟಿ ನಷ್ಟ ಅನುಭವಿಸಿ ದ್ದವು. 2023-24 ನೇ ಸಾಲಿನಲ್ಲಿ ರೂ. 3.10 ಲಕ್ಷ ಕೋಟಿ ಲಾಭವನ್ನು ದಾಖಲಿಸಿವೆ. ಮಾರ್ಚ್‌ ಅಂತ್ಯಕ್ಕೆ ವಾಣಿಜ್ಯ ಬ್ಯಾಂಕ್‌ಗಳು ವಸೂಲಾಗದ ಸಾಲ(ಎನ್‌ಪಿಎ)ದ ಸರಾಸರಿ ಪ್ರಮಾಣವು 12 ವರ್ಷಗಳ ಕನಿಷ್ಠ ಮಟ್ಟವಾದ ಶೇ.2.8ಕ್ಕೆ ತಗ್ಗಿದೆ ಎಂದು ಆರ್‌ಬಿಐ ಹಣಕಾಸು ಸ್ಥಿರತೆ ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

ನಿವ್ವಳ ಎನ್‌ಪಿಎ ಶೇ.0.6ಕ್ಕೆ ಇಳಿಕೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂತ್ಯಕ್ಕೆ ಸರಾಸರಿ ಎನ್‌ಪಿಎ ಪ್ರಮಾಣವು ಶೇ.2.5 ಕ್ಕೆ ಇಳಿಕೆಯಾಗಲಿದೆ. ಬ್ಯಾಂಕ್‌ಗಳ ಆಸ್ತಿಯ ಗುಣಮಟ್ಟ ಸುಧಾರಣೆ ಕಂಡಿದೆಯೆಂದು ಆರ್‌ಬಿಐ ಹೇಳಿದೆ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ನಗದು ಲಭ್ಯತೆ ಪ್ರಮಾಣ ಹೆಚ್ಚಿದೆ. ಅಲ್ಲದೆ ಸಾಲ ನೀಡಿಕೆಯಲ್ಲಿ ಸುಸ್ಥಿರತೆ ಕಾಯ್ದುಕೊಂಡಿರುವುದು ಆರ್ಥಿಕ ಚಟುವಟಿಕೆಗಳಿಗೆ ವರದಾನವಾಗಿದೆ ಯೆಂದು ಹೇಳಲಾಗಿದೆ.

ಕೇಂದ್ರ ಸರಕಾರವು ತನ್ನ ಆದಾಯದ ಗುರಿಯನ್ನು ತಲುಪಿದೆ. ತೆರಿಗೆ ಸಂಗ್ರಹ 2023-24ನೇ ಸಾಲಿನಲ್ಲಿ ರೂ. 23.26 ಲಕ್ಷ ಕೋಟಿ. ದೇಶದ ಆಂತರಿಕ ಉತ್ಪಾದನೆ ರೂ. 173.82ಲಕ್ಷ ಕೋಟಿಗಳಷ್ಟಾಗಿದೆ. ಜೂನ್‌ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ ಶೇ.8 ರಷ್ಟು ಏರಿಕೆಯಾಗಿ ರೂ.1.74 ಲಕ್ಷಕ್ಕೆ ತಲುಪಿದೆ. ಈ ಹಣಕಾಸು ವರ್ಷ (ಎಪ್ರಿಲ…-ಜೂನ್‌) ಈವರೆಗೆ ರೂ.5.57 ಕೋಟಿ ಸಂಗ್ರಹವಾಗಿದೆ.

ಬೆಲೆ ಏರಿಕೆ: ಬೆಲೆ ಏರಿಕೆ ವಿಚಾರದಲ್ಲಿ ರಾಜಕೀಯ ಸಲ್ಲದು. ಜನರ ಬದುಕಿನ ಬವಣೆ ನಿವಾರಣೆಗೆ ಯಾವತ್ತೂ ರಾಜಕಾರಣ ಕಂಟಕವಾಗಬಾರದು. ರಾಜ್ಯವಾಗಲೀ ಅಥವಾ ಕೇಂದ್ರವೇ ಆಗಿರಲಿ ಬೆಲೆಯೇರಿಕೆ ನಿಯಂತ್ರಣವನ್ನು ಜಂಟಿ ಜವಾಬ್ದಾರಿ ಯೆಂದು ಪರಿಗಣಿಸಿ ಅದ್ಯತೆಯ ಮೇರೆಗೆ ಪರಿಹಾರ ಕಂಡುಕೊಳ್ಳದೇ ಹೋದರೆ ಜನರ ಆಕ್ರೋಶವನ್ನು ಶಮನ ಮಾಡುವುದು ಕಷ್ಟವಾಗಬಹುದು. ಸಂಪ ನ್ಮೂಲ ಸಂಗ್ರಹಣೆ ಹೆಚ್ಚಿಸುವ ಗುರಿಯನ್ನು ಸಡಿಲಿಸಿ ತೆರಿಗೆ ಕಡಿಮೆಗೊಳಿಸಿದರೆ ಮತ್ತು ಪ್ರಮುಖ ದೈನಂದಿನ ಪದಾರ್ಥಗಳನ್ನು ಗುರುತಿಸಿ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು ಪಕ್ಷಾತೀತವಾದ ಕ್ರಮವಾಗಬೇಕು. ರಾಜಕೀಯ ಭಿನ್ನಮತಗಳು ಬಡ, ಮಧ್ಯಮ ವರ್ಗದ ಜನರ ಜೀವನದ ಮೇಲೆ ಸವಾರಿ ಮಾಡಬಾರದು.

ನಿರುದ್ಯೋಗ: ದೇಶದಲ್ಲಿ ನಿರುದ್ಯೋಗ ಹಾಗೂ ಅರೆ ಉದ್ಯೋಗದ ಸಮಸ್ಯೆ ಒಂದಿಷ್ಟು ತೀವ್ರವಾಗಿಯೇ ಕಾಡಲಾರಂಭಿಸಿರುವುದು ಒಟ್ಟಾರೆ ಪರಿಸ್ಥಿತಿ ಹದಗೆಡುವಂತೆ ಮಾಡಿದೆ. ಬೃಹತ್‌ ಕಂಪೆನಿಗಳಲ್ಲಿ ಉದ್ಯೋಗ ಕಡಿತಗಳು ಹೆಚ್ಚುತ್ತಿವೆ. ಫ್ರೆಶರ್ಸ್‌ಗೆ ಅವಕಾಶಗಳು ಕಡಿಮೆಯಾಗಿವೆ. ಆಧುನಿಕ ಶಿಕ್ಷಣ ಪುನಾರಚನೆ ಯಾಗಿ ಶಿಕ್ಷಣದಲ್ಲಿ ಕೌಶಲ ಸಾಮರ್ಥ್ಯ ಹೆಚ್ಚಬೇಕು. ಸಾಫ್ಟ್ವೇರ್‌ ಎಂಜಿನಿಯರ್‌ಗಳು ಎಐ (ಕೃತಕ ಬುದ್ಧಿ ಮತ್ತೆ)ಗೆ ಹೊಂದಿಕೊಳ್ಳಬೇಕು. ಹೊಸ ಟೆಕ್ನಾಲ ಜಿಗೆ ಮತ್ತು ಸಂಭವನೀಯ ಅಪಾಯಗಳಿಗೆ ಹೆದ ರದೆ ಭಾರತೀಯರು ಟೆಕ್ನಾಲಜಿ ವಿಷಯದಲ್ಲಿ ಹೊಂದಿ ಕೊಂಡರೆ ಉತ್ಪಾದಕತೆಯನ್ನು ಹೆಚ್ಚಿಸಬಹುದು. ಇದು ಭಾರತೀಯರಿಗೆ ಕಷ್ಟಸಾಧ್ಯ ವಾದ ವಿಷಯವೇನಲ್ಲ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು(ಎಂಎಸ್‌ಎಂಇ) ಪ್ರಗತಿಯ ಎಂಜಿನ್‌
ಗಳು. ದೇಶದಲ್ಲಿ 4.59 ಕೋಟಿ ಎಂಎಸ್‌ಎಂಇ ನೋಂದಣಿಯಾಗಿವೆ. ಇವುಗಳು 19.90 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿವೆ. ಜಿಡಿಪಿಗೆ ಶೇ.30ರಷ್ಟು ಕೊಡುಗೆಯನ್ನು ನೀಡಿ ರಫ್ತಿನ ಬಹುಪಾಲು ಭಾಗ ವನ್ನು ಹೊಂದಿವೆ. ಇವುಗಳಿಗೆ ಎಲ್ಲ ವಿಧದ ಸಬ್ಸಿಡಿ, ಬಡ್ಡಿ ರಿಯಾಯಿತಿ ಮತ್ತು ಉದ್ಯೋಗಿಗಳ ಸಾಧನೆಗೆ ನೆರವು ನೀಡಬೇಕು. ಇವು ದೇಶದ ಆರ್ಥಿಕತೆಯ ಬೆನ್ನೆ ಲುಬು ಎಂಬುದನ್ನು ಸರಕಾರಗಳು ಮರೆಯಬಾರದು.

ವಿತ್ತಿಯ ಕೊರತೆ: 2024ರ ಮಾರ್ಚ್‌ಗೆ ರೂ. 171.78 ಕೋಟಿಗೆ ಏರಿಕೆಯಾಗಿದೆ. ಕೇವಲ ಒಂದು ತ್ತೈಮಾಸಿಕದ ಅವಧಿಯಲ್ಲಿ ಶೇ.34 ರಷ್ಟು ಏರಿಕೆಯಾಗಿದೆ. 2023 ಡಿಸೆಂಬರ್‌ ಅಂತ್ಯದಲ್ಲಿ ಸಾಲದ ಮೊತ್ತ ರೂ. 166.14 ಲಕ್ಷ ಕೋಟಿಯಿತ್ತು. ವಿತ್ತಿಯ ಕೊರತೆ ನಿವಾರಣೆಗೆ ಮುಂದಿನ ಬಜೆಟ್‌ ಆದ್ಯತೆ ನೀಡಬೇಕಾಗಿದೆ.

ಕೇಂದ್ರ ಸರಕಾರ ತನ್ನ ಮುಂದಿನ ಬಜೆಟ್‌ನಲ್ಲಿ ಆರ್ಥಿಕ ಸುಧಾರಣೆ, ತೆರಿಗೆ ನೀತಿಯಲ್ಲಿ ಬದಲಾವಣೆ ದೂರಗಾಮಿ ಪರಿಣಾಮಗಳನ್ನು ಹೊಂದಿರುವ ನೀತಿಗಳ ಜತೆಗೆ ಭಾರತವನ್ನು ವಿಶ್ವದ 3ನೇ ಅತೀದೊಡ್ಡ ಆರ್ಥಿಕತೆ ಮಾಡಲು ಅಗತ್ಯವಾದ ಭವಿಷ್ಯದ ಗುರಿಯನ್ನು ಮುಂದಿಡಲಿದೆ ಎಂದು ರಾಷ್ಟ್ರಪತಿಯವರೇ ತಿಳಿಸಿದ್ದು ಕುತೂಹಲ ಕೆರಳಿಸಿದೆ. ಈ ಬಾರಿ ಕೇಂದ್ರ ಸರಕಾರದಿಂದ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ವೇಗಗೊಳಿಸುವ ಬಜೆಟ್‌ನ್ನು ನಿರೀಕ್ಷಿಸಬಹುದು.

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next