Advertisement

ಮಲೆನಾಡಲ್ಲಿ ಮತ್ತೆ ನಕ್ಸಲರ ಹೆಜ್ಜೆ ಗುರುತು

06:00 AM Sep 21, 2018 | Team Udayavani |

ಬೆಂಗಳೂರು: ಭೀಕರ ಮಳೆ, ಪ್ರವಾಹದಿಂದ ತತ್ತರಿಸಿರುವ ಕೇರಳ, ಕರ್ನಾಟಕದ ಕೊಡಗು ಹಾಗೂ ಮಲೆನಾಡು – ಕರಾವಳಿ ಪ್ರದೇಶಗಳ ಜಿಲ್ಲೆಗಳು ಚೇತರಿಸಿಕೊಳ್ಳುವ ಹಾದಿಯತ್ತ ಸಾಗುತ್ತಿರುವಂತೆಯೇ, ಈಗ ನಕ್ಸಲರ ಭೀತಿ ಎದುರಾಗಿದೆ. ಜನ ಸಾಮಾನ್ಯರ ಸಮಸ್ಯೆಗಳು ಮತ್ತು ಕೈಗೆಟುಕದ ಸರ್ಕಾರಿ ಯೋಜನೆಗಳಂತಹ ಸಮಸ್ಯೆಗಳನ್ನೇ ಬಂಡವಾಳವಾಗಿಸಿಕೊಂಡು ಲಾಭ ಪಡೆಯಲು ನಕ್ಸಲು ಮತ್ತೆ ಯತ್ನಿಸುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

Advertisement

ಕೊಡಗು, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡದ ಗಡಿ ಭಾಗ ಸಂಪಾಜೆ ಸುತ್ತಮುತ್ತ ನಕ್ಸಲರ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಜತೆಗೆ ಕೊಡಗಿಗೆ ಹೊಂದಿಕೊಂಡಿರುವ ವಯನಾಡು ಅರಣ್ಯ ಪ್ರದೇಶಗಳಲ್ಲೂ ನಕ್ಸಲರ ಜಾಡು ಇದೆ ಎನ್ನುವ ಮಾಹಿತಿ ಇದೆ ಎಂದು ಪೊಲೀಸ್‌ ಕೇಂದ್ರ ಕಚೇರಿ ಮೂಲಗಳು ತಿಳಿಸಿವೆ. ಈಗಾಗಲೇ ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ನಕ್ಸಲರ ಚಲನವಲನದ ಕುರಿತು ನಕ್ಸಲ್‌ ನಿಗ್ರಹ ದಳ (ಎಎನ್‌ಎಫ್) ಮತ್ತು ಕೇರಳ ಪೊಲೀಸರಿಗೆ ಈ ಮಾಹಿತಿ ರವಾನಿಸಿದೆ.

ಮೂಲವೊಂದು ನೀಡಿರುವ ಮಾಹಿತಿಯ ಪ್ರಕಾರ, ನಕ್ಸಲರ ತಂಡ ವಯನಾಡು, ಕೊಡಗು ಮೂಲಕ ಸಂಪಾಜೆ ಪ್ರದೇಶದವರೆಗೆ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ. ನೆರೆಯಿಂದ ಕಂಗೆಟ್ಟ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡಿರುವ ಮಾವೋವಾದಿಗಳು, ಸಮಸ್ಯೆಗಳಿಂದ ಕಂಗೆಟ್ಟಿರುವ ಜನರನ್ನು, ವಿಶೇಷವಾಗಿ ನೆರೆಯಿಂದ ಜರ್ಜರಿತರಾಗಿರುವ ಶ್ರಮಿಕ ವರ್ಗದ ಸಮಸ್ಯೆಗಳನ್ನು ತಮ್ಮ ಚಟುವಟಿಕೆಗೆ ಬಳಸಿಕೊಳ್ಳಲು ಸಜ್ಜಾಗಿದ್ದಾರೆ. ಹಾಗಾಗಿ ಈಗಾಗಲೇ ಎಎನ್‌ಎಫ್ ತಂಡ ನಕ್ಸಲರ ಚಲನವಲನದ ಬಗ್ಗೆ ಹೆಚ್ಚಿನ ನಿಗಾ ಇಟ್ಟಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಾಲ್ಕೈದು ತಂಡಗಳ ಓಡಾಟ:
ಕೇರಳದ ವಯನಾಡ್‌ ಅರಣ್ಯ ಪ್ರದೇಶದಲ್ಲಿ ನಕ್ಸಲ್‌ ಸದಸ್ಯರು ಕಳೆದ 20 ದಿನಗಳ ಅವಧಿಯಲ್ಲಿ ನಾಲ್ಕೈದು ತಂಡಗಳಾಗಿ ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಓಡಾಡಿರುವುದು ಪತ್ತೆಯಾಗಿದೆ. ಈ ತಂಡಗಳು ಪ್ರವಾಹದಿಂದ ತತ್ತರಿಸಿರುವ ಕೊಡಗಿನಿಂದ ದಕ್ಷಿಣ ಕನ್ನಡದ ಕಡೆಗಿನ ಅರಣ್ಯ ಪ್ರದೇಶಗಳಲ್ಲಿ ಸಂಚರಿಸಿರುವ ಸಾಧ್ಯತೆ ದಟ್ಟವಾಗಿದೆ ಎಂದು ಗುಪ್ತಚರ ದಳದ ಮೂಲಗಳು ತಿಳಿಸಿವೆ.

ಈ ಹಿಂದೆ ಫೆಬ್ರವರಿಯಲ್ಲಿ ನಕ್ಸಲರು ಓಡಾಡಿದ್ದನ್ನು ಹೊರತುಪಡಿಸಿದಂತೆ ಮತ್ತೆ ಸೆ.13ರಂದು ನಾಲ್ವರನ್ನು ಒಳಗೊಂಡ ನಕ್ಸಲರ ತಂಡ ಕೊಡಗು ಗಡಿಭಾಗದಲ್ಲಿ ಸಂಚರಿಸಿದೆ. ಮತ್ತೆ ತಮ್ಮ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು ಯೋಜನೆ ರೂಪಿಸಿರುವ ಸಾಧ್ಯತೆಗಳೂ ಹೆಚ್ಚಿವೆ. ಹೀಗಾಗಿ ಸದಾ ಎಚ್ಚರಿಕೆಯಿಂದ ಇರುವಂತೆ ನೆರೆ ರಾಜ್ಯದ ವಯ್‌ನಾಡ್‌ ಜಿಲ್ಲೆಯ ತಿರುನ್ನೇಳಿ, ಪೂಲಪಲ್ಲೆ, ವೆಲ್ಲಮುಂಡ, ಕಂಬಲಕ್ಕಾಡ್‌ ಪೊಲೀಸರು ಹಾಗೂ ಕೊಡಗು ಪೊಲೀಸರಿಗೆ  ಸೆ.19ರಂದು ರಾಜ್ಯ ಗುಪ್ತಚರ ದಳ ಸಂದೇಶ ರವಾನಿಸಿದೆ ಎಂದು ವಿಶ್ವಸನೀಯ ಮೂಲಗಳು ಉದಯವಾಣಿಗೆ ಖಚಿತಪಡಿಸಿವೆ.

Advertisement

ಸುತ್ತಮುತ್ತ ಹೆಚ್ಚಿನ ನಿಗಾ:
ಗುಪ್ತಚರ ದಳದ ಮಾಹಿತಿ ಆಧರಿಸಿ ಕೇರಳ, ಕೊಡಗು, ಚಿಕ್ಕಮಗಳೂರು ಸೇರಿ ಪಶ್ಚಿಮ ಘಟ್ಟಗಳಲ್ಲಿ ಪೊಲೀಸರು ಹೆಚ್ಚಿನ ನಿಗಾವಹಿಸಿದ್ದಾರೆ. ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆಗಳಿಗೆ ಬಹುತೇಕ  ಕಡಿವಾಣ ಬಿದ್ದಿತ್ತು. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದ ಅನೇಕ ಮಾವೋವಾದಿಗಳು ನೆರೆಯ ಕೇರಳದ ಕಾಡುಗಳಲ್ಲಿ ಆಶ್ರಯ ಪಡೆದುಕೊಂಡಿದ್ದರು ಎಂಬ ಮಾಹಿತಿ ಇತ್ತು. ಈಗ ಮತ್ತೆ ತಮ್ಮ ಚಟುವಟಿಕೆ ವಿಸ್ತರಿಸಲು ಅದೇ ತಂಡಗಳು ಕೊಡಗು ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕೊಡಗು, ಮಡಿಕೇರಿ ಸೇರಿದಂತೆ ರಾಜ್ಯದ ಯಾವ ಭಾಗಕ್ಕೂ ನಕ್ಸಲರು ಆಗಮಿಸದಂತೆ ನಿರಂತರವಾಗಿ ಕಟ್ಟೆಚ್ಚರ ವಹಿಸಲಾಗಿದೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ.
– ಕಮಲ್‌ಪಂಥ್‌, ಎಡಿಜಿಪಿ, ಕಾನೂನು ಸುವ್ಯವಸ್ಥೆ

– ಮಂಜುನಾಥ್‌ ಲಘುಮೇನಹಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next