Advertisement

ಹೈನುಗಾರರ ಏಳ್ಗೆಯನ್ನೇ ಗುರಿಯಾಗಿಸಿಕೊಂಡ ಸಂಸ್ಥೆ

10:26 PM Feb 15, 2020 | Team Udayavani |

ಗ್ರಾಮದಲ್ಲಿ ಹಾಲು ಉತ್ಪಾದನೆ ಹೆಚ್ಚಳದ ಉದ್ದೇಶದೊಂದಿಗೆ ಹೈನುಗಾರರಿಗೂ ಬೆನ್ನೆಲುಬಾಗಿ ನಿಂತು ಸ್ಥಳೀಯ ಆರ್ಥಿಕತೆಯನ್ನು ಪ್ರೋತ್ಸಾಹಿಸಿದ ಹಿರಿಮೆ ನಾವುಂದ ಹಾಲು ಉತ್ಪಾದಕರ ಸಂಘದ್ದು.

Advertisement

ಉಪ್ಪುಂದ: ಹೈನುಗಾರರ ಏಳ್ಗೆಯನ್ನೇ ಪರಮಗುರಿಯಾಗಿಸಿಕೊಂಡ ನಾವುಂದ ಹಾಲು ಉತ್ಪಾದಕರ ಸಹಕಾರಿ ಸಂಘ ಮಾದರಿ ಸಂಘವಾಗಿ ಇಂದು ಬೆಳೆದು ನಿಂತಿದೆ. ಹೈನುಗಾರರು ಹಾಕುವ ಹಾಲಿಗೆ ಯೋಗ್ಯ ದರವನ್ನೂ ನೀಡಿ, ಈ ಮೂಲಕ ಸ್ಥಳೀಯ ಆರ್ಥಿಕತೆಗೆ ಆಧಾರವೂ ಆಗಿದೆ.

ಸಂಘವು 2 ಸಾವಿರ ರೂ. ಬಂಡವಾಳದೊಂದಿಗೆ 1980 ಆ.20ರಂದು ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡಿತು. ಟಿ.ಎ.ಪೈ ಅವರೇ ಇದರ ಉದ್ಘಾಟನೆಯನ್ನು ನೆರವೇರಿಸಿದ್ದು ಹೆಗ್ಗಳಿಕೆ. ಸಂಘದಲ್ಲಿ ಆರಂಭದಲ್ಲಿ 120 ಮಂದಿ ಸದಸ್ಯರಿದ್ದು, 50-60 ಲೀ. ಹಾಲು ಸಂಗ್ರಹವಾಗುತ್ತಿತ್ತು.

1160 ಲೀ. ಹಾಲು
18 ವರ್ಷಗಳ ಕಾಲ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದ ಸಂಘವು 1998 ಡಿ. 12ರಂದು ಸ್ವಂತ ಜಾಗದಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಇದು ಪ್ರಸುತ್ತ 260 ಮಂದಿ ಸದಸ್ಯರನ್ನು ಒಳಗೊಂಡಿದೆ. ಹಾಲು ಹಾಕುವ 170 ಮಂದಿ ಸದಸ್ಯರಿದ್ದಾರೆ. ನಿತ್ಯ ಸುಮಾರು 1160 ಲೀ.ಹಾಲು ಸಂಗ್ರವಾಗುತ್ತಿದೆ.

ಕಾರ್ಯಚಟುವಟಿಕೆ
ಸಂಘವು ದ.ಕ.ಸಹಕಾರಿ ಹಾಲು ಒಕ್ಕೂಟ ಮತ್ತು ಸರಕಾರದ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲು ಶ್ರಮಿಸುತ್ತಿದ್ದು ಯಶಸ್ವಿನಿ ರೈತರ ಆರೋಗ್ಯ ವಿಮೆ, ಮಹಿಳಾ ಸಹಕಾರ ನಾಯಕತ್ವ ಯೋಜನೆ, ಜಾನುವಾರುಗಳಿಗೆ ಬೇಕಾದ ಪಶು ಆಹಾರ, ಹಸಿರು ಮೇವಿನ ಬೀಜ, ರೋಗ ನಿರೋಧಕ ಚುಚ್ಚು ಮದ್ದು, ಕೃತಕ ಗರ್ಭಧಾರಣೆ, ಲವಣ ಮಿಶ್ರಿತ ಆಹಾರವನ್ನು ಸಕಾಲದಲ್ಲಿ ಒದಗಿಸಲು ಶ್ರಮಿಸುತ್ತಿದೆ. ವೈಜ್ಞಾನಿಕ ಹೈನುಗಾರಿಕೆ ಬಗ್ಗೆ ಮಾಹಿತಿ, ರಾಸುಗಳು ಮರಣ ಹೊಂದಿದಾಗ ಸಂಘದಿಂದ ಪರಿಹಾರ, ಹಾಲು ಉತ್ಪಾದಕರಿಗೆ ಬೋನಸ್‌, ಪಶು ಇಲಾಖೆಯ ಸಹಾಯದಿಂದ ಕಾಲು ಬಾಯಿ ಲಸಿಕೆ ಹಾಕುವುದನ್ನೂ ಮಾಡುತ್ತಿದೆ.

Advertisement

ಪ್ರಾರಂಭದಲ್ಲಿ ನಾವುಂದ, ಮರವಂತೆ, ಬಡಾಕೆರೆ, ಹೇರೂರು ಗ್ರಾಮಗಳ ಕಾರ್ಯ ವ್ಯಾಪ್ತಿ ಹೊಂದಿದ್ದು, ಇದೀಗ ಮರವಂತೆ, ಬಡಾಕೆರೆ, ಅರೆಹೊಳೆ ಪ್ರತ್ಯೇಕ ಸಂಘಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಹಾಲಿ ನಾವುಂದ ಗ್ರಾಮಕ್ಕೆ ಮಾತ್ರ ಸೀಮಿತವಾಗಿದ್ದು ಅರೆಹೊಳೆ ಕ್ರಾಸ್‌ನಲ್ಲಿ ಉಪಕೇಂದ್ರ ಹೊಂದಿದೆ. ಸಂಘವು 2005-06ರಲ್ಲಿ ಬೆಳ್ಳಿಹಬ್ಬ ಆಚರಿಸಿದ್ದು ಇದರ ಸವಿ ನೆನಪಿಗಾಗಿ ಸಭಾಭವನ ನಿರ್ಮಿಸಲಾಗಿದೆ.

ಸಾಧಕ ಹಾಲು ಉತ್ಪಾದಕರು
ಸಂಘವು ಹೆಚ್ಚು ಗುಣಮಟ್ಟದ ಹಾಲು ಸಂಗ್ರಹಿಸುವ ಯೋಜನೆ ಹಮ್ಮಿಕೊಂಡಿದ್ದು ಹೈನುಗಾರರಿಗೆ ಇನ್ನಷ್ಟು ಹಾಲು ಉತ್ಪಾದಿಸಲು ಪ್ರೊತ್ಸಾಹ ನೀಡುತ್ತಿದೆ. ವರೋ ರೆಬೊಲೋ, ಲಲಿತಾ, ಮುತ್ತು ಸಂಘಕ್ಕೆ ಅತೀ ಹೆಚ್ಚು ಹಾಲು ನೀಡುತ್ತಿರುವ ಹೈನುಗಾರರಾಗಿದ್ದಾರೆ.

ಸಂಘದ ಸದಸ್ಯರ ಎಲ್ಲ ಜಾನುವಾರುಗಳನ್ನು ಮಿಮೆಗೆ ಒಳಪಡಿಸಲು ಪ್ರಯತ್ನಿಸಲಾಗುತ್ತಿದೆ. ಸಂಘದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಸದಸ್ಯರಿಗೆ ಪೂರಕ ಸೌಲಭ್ಯಗಳನ್ನು ವಿಸ್ತರಿಸಲಾಗುವುದು.
-ನಾರಾಯಣ ಪೂಜಾರಿ
ಅಧ್ಯಕ್ಷರು, ನಾವುಂದ ಹಾ.ಉ.ಸ.ಸಂಘ

ಅಧ್ಯಕ್ಷರು:
ಬಿ.ಎ.ಅಹಮದ್‌, ಎ.ನಾರಾಯಣ ರಾವ್‌, ಎಂ.ಎ.ಕಾದರ್‌, ಬಿ.ಎ.ಸೈಯ್ಯದ್‌, ಎಂ.ವಿನಾಯಕರಾವ್‌, ಹರಿಕೃಷ್ಣ ಕಾರಂತ, ವೆಂಕಟರಮಣ ಗಾಣಿಗ, ಪ್ರಭಾಕರ ಶೆಟ್ಟಿ, ನಾರಾಯಣ ಪೂಜಾರಿ (ಹಾಲಿ)
ಕಾರ್ಯದರ್ಶಿಗಳು:
ಬಿ.ಎಚ್‌.ಹಮಿದ್‌, ವಿನಯ ಕುಮಾರ, ಅಶೋಕ ನಾಯರಿ (ಹಾಲಿ)

-  ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next