Advertisement

ನವರಾತ್ರಿ ಸಡಗರಕ್ಕೆ ಸಕಲ ಸಜ್ಜು; 9 ದಿನಗಳ ಕಾಲ ದೇವಿ ಆರಾಧನೆ

12:02 PM Sep 25, 2022 | Team Udayavani |

ರಬಕವಿ-ಬನಹಟ್ಟಿ: ಸೆ.26ರಿಂದ ಆರಂಭವಾಗುವ ನವರಾತ್ರಿ ಉತ್ಸವವನ್ನು ಈ ಬಾರಿ ಪ್ರತಿಯೊಂದು ಪಟ್ಟಣ ಮತ್ತು ಗ್ರಾಮದ ದೇವಸ್ಥಾನಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. 26ರಂದು ಅಂದು ಬೆಳಿಗ್ಗೆ ನಗರದ ಪ್ರಮುಖ ಬೀದಿಗಳಲ್ಲಿ ದುರ್ಗೆಯ ಮೂರ್ತಿ ಮೆರವಣಿಗೆ ನಡೆಯಲಿದ್ದು, ಮಹಿಳೆಯರು, ಮಕ್ಕಳು ಪಾಲ್ಗೊಳ್ಳುತ್ತಾರೆ.

Advertisement

ನಗರದ ಪ್ರಮುಖ ಬೀದಿಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಿ 9 ದಿನಗಳ ಕಾಲ ಪೂಜೆ ಮಾಡಿ ದೇವಿಯನ್ನು ಆರಾಧಿಸಲಾಗುತ್ತದೆ. 9 ದಿನಗಳ ಕಾಲ ದೇವತೆಯ ವಿವಿಧ ರೂಪಗಳ ಹೆಸರಿನಲ್ಲಿ ದೇವಿಯನ್ನು ಆರಾಧಿಸಿ ಪೂಜಿಸುವ ಕಾರ್ಯಕ್ರಮ ನಡೆಸಲಾಗುತ್ತದೆ.

ಅಲ್ಲದೇ ಮೈಸೂರಿನಲ್ಲಿರುವಂತೆ ಇಲ್ಲಿಯೂ ಕೂಡಾ ಕೆಲವು ಮನೆಗಳಲ್ಲಿ ಬೊಂಬೆ ಪ್ರದರ್ಶನ ನಡೆಯುತ್ತದೆ. ಅಲ್ಲಿ ಸುಮಾರು 100ಕ್ಕೂ ಹೆಚ್ಚು ವಿವಿಧ ಕಲೆಗಳನ್ನು ಬಿಂಬಿಸುವ ಬೊಂಬೆಗಳ ಪ್ರದರ್ಶನ ಇರುತ್ತದೆ. ಜನರು ಅವರ ಮನೆಗಳಿಗೆ ತೆರಳಿ ಸಂಭ್ರಮಿಸುತ್ತಾರೆ. ನವರಾತ್ರಿಯಲ್ಲಿ ಆಯುಧ ಪೂಜೆಗೆ ವಿಶಿಷ್ಟ ಸ್ಥಾನವಿದೆ. ಆಯುಧ ಪೂಜೆ ನಡೆಸಿ ಸಂಜೆ ನಗರದ ಹಾಗೂ ಸಮಾಜದ ಹಿರಿಯರು ಸೇರಿಕೊಂಡು ಹೊಸ ಧರಿಸಿ ನಿಗದಿತ ಸ್ಥಳದಲ್ಲಿ ಬನ್ನಿ ಬಂಗಾರ ಮುಡಿಯುವುದರ ಮೂಲಕ ದಸರಾ ಹಬ್ಬ ಸಂಭ್ರಮದಿಂದ ಆಚರಿಸುತ್ತಾರೆ. ಅಲ್ಲಿ ಪರಸ್ಪರ ಬನ್ನಿ-ಬಂಗಾರ ಕೊಟ್ಟು ಶುಭಾಶಯ ವಿನಿಮಯ ಮಾಡಿಕೊಂಡು ಕಿರಿಯರು ಹಿರಿಯರ ಆಶೀರ್ವಾದ ಪಡೆಯುವ ಸಂಪ್ರದಾಯ ಇಲ್ಲಿಯ ಪಟ್ಟಣ ಮತ್ತು ಗ್ರಾಮಗಳಲ್ಲಿದೆ.

ನಗರದಲ್ಲಿ ಪ್ರತಿಷ್ಟಾಪಿಸಿರುವ ದುರ್ಗಾದೇವಿ ಮೂರ್ತಿ ಎದುರು ಪ್ರತಿದಿನ ಸಂಜೆ ಪೂಜೆ,ನಂತರ ಎಲ್ಲ ಸ್ತ್ರೀ-ಪುರುಷರು, ಮಕ್ಕಳು ಕೋಲಾಟ ಆಡುವ ಸಂಪ್ರದಾಯ ಇದೆ. ನವರಾತ್ರಿ ನಿಮಿತ್ತ ವಿವಿಧ ಮಠಗಳಲ್ಲಿ ಪ್ರವಚನ ಕಾರ್ಯಕ್ರಮಗಳು ನಡೆಯುತ್ತವೆ.

ಬಾದಾಮಿ ವೆಂಕಟೇಶ್ವರ ದೇವಸ್ಥಾನ

Advertisement

ಬಾದಾಮಿ: ನಗರದ ಪುರಾತನ ಶ್ರೀ ವೆಂಕಟೇಶ್ವರ ದೇವರ ನವರಾತ್ರಿ ಉತ್ಸವ ಸೆ.26ರಿಂದ ಆರಂಭವಾಗಿ ಅ.6 ರವರೆಗೆ ನಡೆಯಲಿವೆ. ಸೆ.26ರಂದು ಸೋಮವಾರ ಬೆಳಿಗ್ಗೆ ಸುಪ್ರಭಾತದೊಂದಿಗೆ ನವರಾತ್ರಿ ಉತ್ಸವ ಆರಂಭವಾಗಲಿದೆ. ಬೆಳಿಗ್ಗೆ 11 ಗಂಟೆಗೆ ಘಟಸ್ಥಾಪನೆ, ಪ್ರತಿದಿನ ಹೋಮ ಹವನ, ಶ್ರೀ ವೆಂಕಟೇಶ್ವರ ಪುರಾಣ, ರಾತ್ರಿ 7 ಗಂಟೆಗೆ ಪಲ್ಲಕ್ಕಿ ಸೇವೆ ರಾತ್ರಿ 7.30 ಗಂಟೆಗೆ ವಾಹನೋತ್ಸವ ನಡೆಯಲಿದೆ.

ಸೆ.28 ರಂದು ಬುಧವಾರ ಸಪ್ತ ರಾತ್ರೋತ್ಸವ 7 ದಿನಗಳ ಕಾಲ ದೀಪ ಹಾಕುವುದು. ಸೆ.30 ರಂದು ಶುಕ್ರವಾರ ಗರುಡ ಪಂಚಮಿ, 5 ದಿನಗಳ ಕಾಲ ದೀಪ ಹಾಕುವುದು. ಅ.2 ರಂದು ರವಿವಾರ ತ್ರಿರಾತ್ರೋತ್ಸವ/ಸರಸ್ವತಿ ಆಹ್ವಾನ-3 ದಿವಸ ದೀಪ ಹಾಕುವುದು.

ಅ.3ರಂದು ಸೋಮವಾರ ಏಕರಾತ್ರೋತ್ಸವ, ದುರ್ಗಾಷ್ಟಮಿ, ಸರಸ್ವತಿ ಪೂಜೆ ನಡೆಯಲಿದೆ. ಅ.4ರಂದು ಮಂಗಳವಾರ ಮಹಾನವಮಿ, ಆಯುಧಪೂಜೆ, ಅ.5ರಂದು ಬುಧವಾರ ವಿಜಯದಶಮಿ, ಬೆಳಿಗ್ಗೆ 8 ಗಂಟೆಗೆ ಶ್ರೀ ವೆಂಕಟೇಶ್ವರ ಪುರಾಣ ಮಂಗಲ, ಬೆಳಿಗ್ಗೆ 9 ಗಂಟೆಗೆ ರಥಾಂಗ ಹೋಮ, ಮಧ್ಯಾಹ್ನ 12 ಗಂಟೆಗೆ ರಥೋತ್ಸವ ಜರುಗಲಿದೆ. ಸಂಜೆ 6.30 ಗಂಟೆಗೆ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶಮೀಪೂಜೆ ಬನ್ನಿ ಮುಡಿಯುವ ಕಾರ್ಯಕ್ರಮ, ಅ.6ರಂದು ಗುರುವಾರ ಬೆಳಿಗ್ಗೆ 9 ಗಂಟೆಗೆ ಅವಭೃತ ಸ್ನಾನ(ಚಕ್ರಸ್ನಾನ) ನಡೆಯಲಿದೆ. ಅ.9ರಂದು ರವಿವಾರ ಕಳಸ ಇಳಿಯುವುದು ಕಾರಣ ಎಲ್ಲ ಭಕ್ತಾದಿಗಳು ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೋರಲಾಗಿದೆ.

ಲೋಕಾಪುರ

ಲೋಕಾಪುರ: ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ಸೆ.26ರಂದು ಘಟಸ್ಥಾಪನೆಯೊಂದಿಗೆ ನವರಾತ್ರಿ ಉತ್ಸವ ಆರಂಭವಾಗಲಿದೆ. ನವರಾತ್ರಿ ಉತ್ಸವ ಅಂಗವಾಗಿ ಪ್ರತಿದಿವಸ ಕಾಕಡಾರತಿ, ಚಿಂತನ, ಪಂಚಾಮೃತ ಅಭಿಷೇಕ, ಮಹಾಪೂಜೆ, ಅಲಂಕಾರ, ಮಹಾಮಂಗಳಾರತಿ, ಮಂತ್ರಪುಷ್ಟ ಹಾಗೂ ಸಂಜೆ 5 ಗಂಟೆಗೆ ಬಾಗಲಕೋಟೆಯ ಸಂದರ್ಶ ಆಚಾರ್ಯ ಕಂಚಿ ಇವರಿಂದ ವೆಂಕಟೇಶ್ವರ ಮಹಾತ್ಮೆ ಪುರಾಣ, ನಂತರ ವಾಹನೋತ್ಸವ, ಸರ್ವಸೇವಾ, ಸ್ವಸ್ತಿವಾಚನ, ತಾರತಮ್ಯ ಭಜನೆ, ಸಂಗೀತ ಕಾರ್ಯಕ್ರಮಗಳು ಸಾಂಗವಾಗಿ ಜರುಗಲಿವೆ. 30ರಂದು ಗರುಡ ಪಂಚಮಿ, 3ರಂದು ದುರ್ಗಾಷ್ಟಮಿ, ರಂಗವಲ್ಲಿ ಸ್ಪರ್ಧೆ, 4ರಂದು ಖಂಡೆ ನವಮಿ, ಆಯುಧ ಪೂಜೆ, 5ರಂದು ರಥೋತ್ಸವ ಜರುಗಲಿದೆ ಎಂದು ಅರ್ಚಕ ಬಿ.ಎಲ್‌.ಬಬಲಾದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next