Advertisement

ಕೋವಿಡ್‌ ಮಾರ್ಗಸೂಚಿ ಅನುಸರಿಸಿ ದೇವರ ದರ್ಶನ: ಸಚ್ಚಿದಾನಂದ

07:43 PM Oct 19, 2020 | Suhan S |

ಮುಂಬಯಿ, ಅ. 18: ಮೀರಾರೋಡ್‌ ಪೂರ್ವದ ಗೀತಾ ನಗರದಲ್ಲಿರುವ ಪ್ರತಿಷ್ಠಿತ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯ ಅವರಣದಲ್ಲಿ ಶರವನ್ನವರಾತ್ರಿ ಉತ್ಸವವು ಅ. 17ರಂದು ಪ್ರಾರಂಭಗೊಂಡಿದ್ದು, ಅ. 25ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

Advertisement

ಪಲಿಮಾರು ಮಠದ ಟ್ರಸ್ಟಿ ಸಚ್ಚಿದಾನಂದ ರಾವ್‌ ಅವರು ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಪಲಿಮಾರು ಮಠದ ಶ್ರೀ ವಿದ್ಯಾ ಧೀಶ ತೀರ್ಥ ಸ್ವಾಮೀಜಿ ಅವರ ಸಲಹೆ-ನಿರ್ದೇಶನದಂತೆ, ಕೋವಿಡ್‌ 19ರ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸರಕಾರದ ಮಾರ್ಗ ಸೂಚಿಯಂತೆ ಮಠದ ಪ್ರತಿಯೊಂದು ಧಾರ್ಮಿಕ, ಆಧ್ಯಾತ್ಮಿಕ ಆಚರಣೆ ಸರಳವಾಗಿ ನಡೆಯಲಿದೆ. ನವರಾತ್ರಿ ಪ್ರಯುಕ್ತ ಪ್ರತಿದಿನ ಬೆಳಗ್ಗೆ ಶ್ರೀ ಚಂಡಿಕಾಯಾಗ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 5 ರಿಂದ ಭಜನೆ, ರಾತ್ರಿ 7ರಿಂದ ವಿದ್ವಾನ್‌ ರಾಮರಾಜ್‌ ಅವರಿಂದ ರಾಮ ಕಥಾ ಪ್ರವಚನವನ್ನು ಆಯೋಜಿಸಲಾಗಿದೆ. ವಿಜಯದಶಮಿಯ ದಿನದಂದು ಮಧ್ವಜಯಂತಿ, ಬ್ರಹ್ಮೋತ್ಸವದ ಪೂರ್ವಭಾವಿಯಾಗಿ ಬೆಳಗ್ಗೆ ಕಲಶ ಪ್ರತಿಷ್ಠೆ, ಪ್ರಧಾನ ಹವನ ಮಹಾಪೂಜೆ, ಅಪರಾಹ್ನ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ರಿಂದ ಶ್ರೀ ಬಾಲಾಜಿ ಸನ್ನಿಧಿಯ ಮಹಿಳಾ ಸದಸ್ಯೆಯರಿಂದ ಭಜನೆ, ಸಾಂಕೇತಿಕ ರಥೋತ್ಸವ, ಶ್ರೀನಿವಾಸ ದೇವರಿಗೆ ರಂಗಪೂಜೆ ಮತ್ತು ಪರಿವಾರ ದೇವರಾದ ಶ್ರೀ ಗಣಪತಿ, ಹಿಮಾಲಯದ ಸ್ವಾಮಿಗಳಿಂದ ಪೂಜಿತ ಓಂಕಾರ ಇರುವ ಮಾಣಿಕ್ಯ ಲಿಂಗ ಶ್ರೀ ಮುಂಗೇಶಿ ಮಹಾ ಮೃತ್ಯುಂಜಯ ರುದ್ರ ದೇವರು, ಶ್ರೀ ಪದ್ಮಾಂಬಿಕೆ, ಶ್ರೀ ಆಂಜನೇಯ, ಶ್ರೀ ನಾಗದೇವರು, ನವಗ್ರಹ ದೇವರಿಗೆ ವಿಶೇಷ ಪೂಜೆಗಳು ನಡೆಯಲಿವೆ ಎಂದು ಪೂಜಾ ವಿವರ ನೀಡಿದ ಅವರು ಶ್ರೀ ಚಂಡಿಕಾ ಯಾಗದ ಸಂಕಲ್ಪ ಕೈಗೊಂಡರು.

ಮದುಮತಿ ಸಚ್ಚಿದಾನಂದ ರಾವ್‌ ಅವರು ಆಗ್ನಿ ಪ್ರತಿಷ್ಠೆ ಮಾಡಿದರು. ಧಾರ್ಮಿಕ ಕಾರ್ಯಕ್ರಮವಾಗಿ ಶುದ್ಧ ಪುಣ್ಯಾಹ ವಾಚನ, ಸಂಕಲ್ಪ, ಕಲಶ ಪ್ರತಿಷ್ಠಾಪನೆ, ಪ್ರಧಾನ ಹೋಮ, ಕಲ್ಪೋಕ್ತ ಪೂಜೆ, ಪೂರ್ಣಾಹುತಿ, ಸುಹಾಸಿನಿ ಪೂಜೆ ಬಳಿಕ ಭಕ್ತರು ಮಂಗಲ ದ್ರವ್ಯ, ಮಂಗಲ ವಸ್ತ್ರ, ಫಲಪುಷ್ಪ ಸುವಸ್ತುಗಳನ್ನು ಯಜ್ಞಕುಂಡಕ್ಕೆ ಸಮರ್ಪಿಸಿ ಪ್ರಸಾದ ಸ್ವೀಕರಿಸಿದರು.

ಮೀರಾರೋಡ್‌ ಪಲಿಮಾರು ಮಠದಲ್ಲಿ  ಪ್ರತಿ ತಿಂಗಳ ಹುಣ್ಣಿಮೆ ದಿನ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರತಿ ತಿಂಗಳ ಅಮಾವಾಸ್ಯೆ ದಿನ ಸಾರ್ವಜನಿಕ ಶನಿಪೂಜೆ, ಧಾರ್ಮಿಕ ವಿಧಿ  ವಿಧಾನಗಳ ಪೂಜೆ, ನವಗ್ರಹ ಪೂಜೆ, ಶಾಂತಿ, ಉಪನಯನ, ವಿವಾಹ, ಜೋತಿಷ, ಜಾತಕ ಮೊದಲಾದುವುಗಳಿಗೆ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ಪಲಿಮಾರು ಮಠದ ಪ್ರಬಂಧಕ ವಾಸುದೇವ ಎಸ್‌. ಉಪಾಧ್ಯಾಯ ತಿಳಿಸಿದರು.

ವಿದ್ವಾನ್‌ ರಾಮರಾಜ್‌, ವಾಸುದೇವ ಉಪಾಧ್ಯಾಯ, ಸಂತೋಷ್‌ ಬಕ್ರೆ, ಕಾರ್ತಿಕ್‌ ಭಟ್‌ ವಿವಿಧ ಪೂಜೆಗಳನ್ನು ನೆರವೇರಿಸಿದರು. ಕರಮಚಂದ್ರ ಗೌಡ ಮತ್ತು ಶ್ರೀ ಬಾಲಾಜಿ ಭಜನ ಸನ್ನಿಧಿಯ ಸದಸ್ಯರು ಸಹಕರಿಸಿದರು. ಸರಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಭಕ್ತರು ದೇವರ ದರ್ಶನ ಪಡೆದರು.

Advertisement

 

ಚಿತ್ರ-ವರದಿ : ರಮೇಶ ಅಮೀನ್‌.

Advertisement

Udayavani is now on Telegram. Click here to join our channel and stay updated with the latest news.

Next