ನವದೆಹಲಿ: ಪ್ರವಾಸಿಗರಿಗಾಗಿ ಬರೋಬ್ಬರಿ 19 ಕೋಟಿ ವೆಚ್ಚದಲ್ಲಿ ರೂಪಿಸಲಾಗಿರುವ ದೇಶದ ಮೊದಲ ಅತ್ಯಾಧುನಿಕ ನೇಚರ್ ಸಫಾರಿಯನ್ನು ಬಿಹಾರದ ನಳಂದಾ ಜಿಲ್ಲೆಯಲ್ಲಿರುವ ರಾಜ್ ಗೀರ್ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಾರ್ಚ್ 26 ರಂದು ಉದ್ಘಾಟನೆಗೊಳಿಸುವ ಮೂಲಕ ಪ್ರವಾಸಿಗರ ಬಳಕೆಗೆ ಮುಕ್ತವಾಗಿಸಲಿದ್ದಾರೆ.
ಈ ಕುರಿತಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅಧಿಕಾರಿಗಳು ಈ ನೇಚರ್ ಸಫಾರಿಯನ್ನು ಅರಣ್ಯ ಇಲಾಖೆಯು ಅಭಿವೃದ್ಧಿ ಪಡಿಸಿದ್ದು, ಇದು ಬರೋಬ್ಬರಿ 500 ಹೆಕ್ಟೇರ್ ವಿಸ್ತೀರ್ಣವನ್ನು ಒಳಗೊಂಡಿದೆ. ಈ ನೇಚರ್ ಸಫಾರಿಯಲ್ಲಿ ಪ್ರವಾಸಿಗರು ಗ್ಲಾಸ್ ಸ್ಕೈ ವಾಕ್ , ಸಸ್ಪೆನ್ಷನ್ ಬ್ರಿಡ್ಜ್, ಅಡ್ವೆಂಚರ್ ಪಾರ್ಕ್ ಹಾಗೂ ವಿವಿಧ ಬಗೆಯ ಚಿಟ್ಟೆಗಳನ್ನು ಒಳಗೊಂಡಿರುವ ಪಾರ್ಕ್ ನ ಸುಂದರ ಅನುಭವವನ್ನು ಸವಿಯಬಹುದಾಗಿದೆ ಎಂದಿದ್ದಾರೆ.
ಇದಿಷ್ಟೇ ಅಲ್ಲದೆ ಈ ನೇಚರ್ ಸಫಾರಿಯಲ್ಲಿ ಬಿಲ್ಲುಗಾರಿಕೆಯ ಅನುಭವವನ್ನು ಸವಿಯುವವರಿಗೂ ಅವಕಾಶಗಳಿದ್ದು, ಜೊತೆ ಜೊತೆಗೆ ರಾಕ್ ಕ್ಲೈಬಿಂಗ್ ಗೋಡೆಗಳು ಹಾಗೂ ಕುಸ್ತಿ ವಲಯಗಳನ್ನು ಒಳಗೊಂಡಂತೆ ಇನ್ನೂ ಹಲವಾರು ವೈವಿಧ್ಯಮಯ ಸೌಲಭ್ಯಗಳನ್ನು ಕಾಣಬಹುದಾಗಿದೆ.
ಇದನ್ನೂ ಓದಿ:ನೂರಾರು ಕರುಗಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆಯಲ್ಲಿ ಎಸೆದ ಕಿಡಿಗೇಡಿಗಳು!
ಮುಖ್ಯಮಂತ್ರಿಗಳು ನೇಚರ್ ಸಫಾರಿ ಉದ್ಘಾಟನೆ ಜೊತೆ ಜೊತೆಯಲ್ಲಿಯೇ ರಾಜ್ ಗೀರ್ ನಲ್ಲಿರುವ ರತ್ನಗಿರಿ ಬೆಟ್ಟದಲ್ಲಿ ರೂಪಿಸಲಾಗಿರುವ ಕ್ಯಾಬಿನ್ ಕಾರ್ ರೋಪ್ ವೇ ಗೂ ಕೂಡಾ ಚಾಲನೆ ನೀಡುತ್ತಿದ್ದು, ಈ ರೋಪ್ ವೇ ನಲ್ಲಿ ಒಟ್ಟು ಎಂಟು ಆಸನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರವಾಸಿಗರು ಈ ವ್ಯವಸ್ಯೆಯ ಮೂಲಕ ರಾಜ್ ಗೀರ್ ನ ರತ್ನಾಗಿರಿ ಬೆಟ್ಟದ ಮೇಲಿರುವ ವಿಶ್ವ ಶಾಂತಿ ಸ್ತೂಪಕ್ಕೆ ಪ್ರಯಾಣ ಬೆಳೆಸಲು ಅನುಕೂಲವಾಗಲಿದೆ ಎಂದು ವರದಿ ತಿಳಿಸಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಹಿರಿಯ ಅರಣ್ಯ ಅಧಿಕಾರಿ ಗೋಪಾಲ್ ಸಿಂಗ್ , ಗ್ಲಾಸ್ ಸ್ಕೈ ವಾಕ್ ಸೇರಿದಂತೆ ಹಲವು ವಿಭಿನ್ನ ಸೌಲಭ್ಯಗಳನ್ನು ಕಲ್ಪಿಸಿರುವ ಭಾರತದ ಮೊದಲ ಸಫಾರಿ ಇದಾಗಿದ್ದು, ಪ್ರವಾಸಿಗರನ್ನು ಒಳಗೊಂಡಂತೆ ಸಾಹಸಿಗರು ಇಲ್ಲಿ ಅತ್ಯಂತ ಸುಂದರ ಅನುಭವಗಳನ್ನು ಪಡೆದುಕೊಳ್ಳಬಹುದಾಗಿದೆ. ಮುಂಬರುವ ಹೋಳಿ ಹಬ್ಬಕ್ಕಿಂತ ಮೊದಲು ಇದು ಜನರ ಬಳಕೆಗೆ ಲಭ್ಯವಾಗಲಿದೆ ಎಂದಿದ್ದಾರೆ.