Advertisement

ನಿಸರ್ಗ ಚಿಕಿತ್ಸೆ ದುಬಾರಿ ಅಲ್ಲವೇ ಅಲ್ಲ.. ನಿಸರ್ಗ ಚಿಕಿತ್ಸೆ ಪಾರ್ಲರ್‌ ವೆಚ್ಚಕ್ಕಿಂತ ಕಡಿಮೆ

12:44 PM Dec 02, 2021 | Team Udayavani |

ಹುಬ್ಬಳ್ಳಿ: “ನಿಸರ್ಗ ಚಿಕಿತ್ಸೆ ದುಬಾರಿ ಎಂಬ ಅನೇಕರ ತಪ್ಪು ಕಲ್ಪನೆ ದೂರವಾಗಬೇಕಾಗಿದೆ. ಮಧುಮೇಹ, ರಕ್ತದೊತ್ತಡ, ಸಂಧಿವಾತದಂತಹ ದೀರ್ಘ‌ಕಾಲಿನ ವ್ಯಾಧಿಗಳಿಗೆ ನಿಸರ್ಗ ಚಿಕಿತ್ಸೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ನಿಸರ್ಗ ಚಿಕಿತ್ಸೆ ಜನಸಾಮಾನ್ಯರಿಗೆ ತಲುಪಬೇಕಾಗಿದೆ. ಈ ಬಗ್ಗೆ ಜಾಗೃತಿ ಕಾರ್ಯದಲ್ಲಿ ತೊಡಗಿದ್ದೇನೆ. ಸ್ವಯಂ ಸೇವಾ ಸಂಸ್ಥೆಗಳು ಈ ನಿಟ್ಟಿನಲ್ಲಿ
ಸಹಾಯಕ್ಕೆ ಮುಂದಾದರೆ ಜಾಗೃತಿ ಕಾಯಕದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವೆ. ವಿದೇಶಗಳಲ್ಲಿ ಜನಪ್ರಿಯವಾಗುತ್ತಿರುವ ನಿಸರ್ಗ ಚಿಕಿತ್ಸೆ ತವರಿನಲ್ಲಿ ಉದಾಸೀನತೆಗೆ ಸಿಲುಕಿರುವುದು ನೋವು ತರಿಸುತ್ತಿದೆ’ ನಿಸರ್ಗ ಚಿಕಿತ್ಸೆ ಎಂದರೆ ನಿಸರ್ಗದ ಜತೆಗಿನ ಬಾಂಧವ್ಯ, ಜೀವನಶೈಲಿಯ ಬದಲಾವಣೆ, ಆಹಾರ ಬದ್ಧತೆ, ಯೋಗ, ಬಹುತೇಕ ಔಷಧ ರಹಿತ ಚಿಕಿತ್ಸೆಯಾಗಿದೆ. ನಿಸರ್ಗ ತತ್ವ ಪಾಲಿಸಿದರೆ ಬಹುತೇಕವಾಗಿ ಆರೋಗ್ಯ ಸಮಸ್ಯೆ ಇರದು ಎಂಬುದು ನಿಸರ್ಗ ಚಿಕಿತ್ಸೆ-ಜಾಗೃತಿಯಲ್ಲಿ ಕಳೆದ 10-15 ವರ್ಷಗಳಿಂದ ತೊಡಗಿಸಿಕೊಂಡಿರುವ ಡಾ| ಎಚ್‌.ಯು.ಸುಕುಮಾರಿ ಅವರ ಅನಿಸಿಕೆ.

Advertisement

ನಿಸರ್ಗ ಚಿಕಿತ್ಸೆ ಮಹತ್ವ, ಕೋವಿಡ್‌ನ‌ಂತಹ ಸಾಂಕ್ರಾಮಿಕ ವ್ಯಾಧಿ ಹಾಗೂ ಸಂಕಷ್ಟ ಸ್ಥಿತಿಯಲ್ಲಿ ನಿಸರ್ಗ ಚಿಕಿತ್ಸೆ, ಯೋಗದ ಅವಶ್ಯಕತೆ, ನಿಸರ್ಗ ಚಿಕಿತ್ಸೆ ಬಗ್ಗೆ ಜನರಲ್ಲಿ ತೊಲಗಬೇಕಾದ ತಪ್ಪು ಕಲ್ಪನೆ ಹಾಗೂ ಮೂಡಬೇಕಾದ ಜಾಗೃತಿ ಕುರಿತಾಗಿ ಡಾ| ಸುಕುಮಾರಿ ಅವರು “ಉದಯವಾಣಿ’ಯೊಂದಿಗೆ ಮಾತನಾಡಿದರು. ತುಮಕೂರಿನಲ್ಲಿ ಸುಮಾರು 10 ವರ್ಷ ನಿಸರ್ಗ ಚಿಕಿತ್ಸೆ ಕಾಯಕದಲ್ಲಿ ತೊಡಗಿದ್ದೆ.

ನಿಸರ್ಗ ಚಿಕಿತ್ಸೆ, ಯೋಗ, ಆರೋಗ್ಯ ಕುರಿತಾಗಿ ಉಪನ್ಯಾಸ ನೀಡಲು ಧಾರವಾಡ, ಗಂಗಾವತಿ ಸೇರಿದಂತೆ ವಿವಿಧೆಡೆ ಬರುತ್ತಿದ್ದೆ. ಇಲ್ಲಿನ ಜೀವನ ಶೈಲಿ, ಆರೋಗ್ಯ ಸ್ಥಿತಿ ಗಮನಿಸಿ, ಈ ಭಾಗದಲ್ಲಿ ನಿಸರ್ಗ ಚಿಕಿತ್ಸೆ ಜಾಗೃತಿ ಅಧಿಕವಾಗಿದೆ ಎಂಬುದರಿತು ಕಳೆದ ಎರಡು ವರ್ಷಗಳಿಂದ ಧಾರವಾಡದಲ್ಲಿಯೇ ನೆಲೆಸಿದ್ದೇನೆ. ಯುವ ಸಮೂಹವನ್ನೇ ಗುರಿಯಾಗಿಸಿಕೊಂಡು ಶಾಲಾ- ಕಾಲೇಜುಗಳಿಗೆ ಹೋಗಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇನೆ.

ಆಹಾರಾಧೀನಂ ಆರೋಗ್ಯಂ
ನಿಸರ್ಗ ಚಿಕಿತ್ಸೆ ವೇದಕಾಲದಿಂದಲೂ ಜಾರಿಯಲ್ಲಿದೆ. ನಮ್ಮ ಪೂರ್ವಜರು ನಿಸರ್ಗಸ್ನೇಹಿ ಬದುಕು, ಯೋಗ, ಆಹಾರ ಬದ್ಧತೆ, ಸಕಾರಾತ್ಮಕ ಚಿಂತನೆಗಳಿಗೆ ಹೆಚ್ಚು ಒತ್ತು, ನಿಸರ್ಗ ತತ್ವಗಳ ಪಾಲನೆಯೊಂದಿಗೆ ಆರೋಗ್ಯ ಕಾಯ್ದುಕೊಂಡಿದ್ದರು. ಅದಕ್ಕಾಗಿಯೇ ಆಹಾರಾಧೀನಂ ಆರೋಗ್ಯಂ ಎಂದು ಗ್ರಂಥಗಳಲ್ಲಿ ಹೇಳಲಾಗಿದೆ. ಹಲವು ವ್ಯಾಧಿಗಳನ್ನು ತನ್ನಿಂದ ತಾನೇ ವಾಸಿಪಡಿಸಿಕೊಳ್ಳುವ ಸಾಮರ್ಥ್ಯವನ್ನು ದೇಹ ಹೊಂದಿದೆ. ಆದರೆ ನಾವು ಸಣ್ಣ ನೆಗಡಿಯಾದರೂ ಸಾಕು ತಕ್ಷಣಕ್ಕೆ ವೈದ್ಯರ ಸಂಪರ್ಕ, ಮಾತ್ರೆ, ಔಷಧ ಎಂದು ತೆಗೆದುಕೊಳ್ಳುವ ಮೂಲಕ ದೇಹಕ್ಕೆ ಮತ್ತೂಂದು ರೂಪದ ಅಡ್ಡ ಪರಿಣಾಮ, ಹೊಸ ವ್ಯಾಧಿಗೆ ದಾರಿ ಮಾಡಿಕೊಡುತ್ತಿದ್ದೇವೆ. ಶೇ. 98 ವ್ಯಾಧಿಗಳು ನಮ್ಮಲ್ಲಿನ ನಕಾರಾತ್ಮಕ ಭಾವನೆಗಳಿಂದಲೇ ಬರುತ್ತವೆ. ಜನರಿಗೆ ಇದರ ಬಗ್ಗೆ ಮನನ ಮಾಡುವ ಬದಲು ತಪಾಸಣೆ, ಪರೀಕ್ಷೆ, ಚುಚ್ಚುಮದ್ದು, ಔಷಧಕ್ಕೆ ಒತ್ತು ನೀಡುತ್ತಿದ್ದೇವೆ. ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಪ್ರತಿಜೀವಕ(ಆ್ಯಂಟಿಬಯೋಟಿಕ್‌)ವನ್ನು ರದ್ದು ಪಡಿಸಲಾಗಿದೆ. ಆದರೆ ನಮ್ಮಲ್ಲಿ ಪ್ರತಿಯೊಂದಕ್ಕೂ ಅದನ್ನು ಹೆಚ್ಚು ಹೆಚ್ಚು ಬಳಸುತ್ತಿದ್ದೇವೆ. ಮಕ್ಕಳಿಗೆ ಸ್ವಲ್ಪ ಕೆಮ್ಮು-ನೆಗಡಿ, ಜ್ವರ ಕಾಣಿಸಿಕೊಂಡರೂ ಮನೆ ಮದ್ದಿನ ಪ್ರಯೋಗ ಬದಲು ತಕ್ಷಣಕ್ಕೆ ಆ್ಯಂಟಿಬಯೋಟಿಕ್‌ ನೀಡಲಾರಂಭಿಸುತ್ತೇವೆ.ಸೂರ್ಯನ ಬೆಳಕು ಹಲವು ವ್ಯಾಧಿಗಳನ್ನು ವಾಸಿಪಡಿಸುವ ಗುಣ ಹೊಂದಿದೆ. ಆದರೆ ನಾವು ಸೂರ್ಯನ ಬೆಳಕು ತಾಗಬಾರದೆಂದು ಸನ್‌ಸ್ಕ್ರೀನ್ ಲೋಷನ್‌ಗಳನ್ನು ಬಳಸುತ್ತಿದ್ದೇವೆ. ಶಾಂಪೂ, ಫೇಸ್‌ ಕ್ರೀಂ, ಲಿಪ್‌ಸ್ಟಿಕ್‌ಗಳಲ್ಲಿ ಮರ್ಕ್ಯುರಿ ಬಳಸಲಾಗುತ್ತಿದ್ದು, ಇವು ಕ್ಯಾನ್ಸರ್‌ ಕಾರಕವಾದರೂ ನಮಗೆ ಅವುಗಳ ಮೇಲಿನ ಮೋಹ ತೊಲಗಿಲ್ಲ. ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ಬ್ರಾಂಡ್ ಗಳ ಅಡುಗೆ ಎಣ್ಣೆ ರಾಸಾಯನಿಕಯುಕ್ತವಾಗಿದೆ. ಅದನ್ನು ಪದೇ ಪದೇ ಕರಿದು ಬಳಸಿದರೆ ಅದೂ ಕ್ಯಾನ್ಸರ್‌ ಕಾರಕವಾಗಲಿದೆ. ಪಿಜ್ಜಾ, ಬರ್ಗರ್‌ನಂತಹ ಪದಾರ್ಥಗಳು ಆಲ್ಕೋಹಾಲ್‌ಗಿಂತ ಹೆಚ್ಚು ಅಪಾಯಕಾರಿಯಾಗಿದ್ದು, ಯಕೃತ್‌ ಗೆ ಧಕ್ಕೆ ಮಾಡಲಿದ್ದು, ನರಮಂಡಲ
ಬಲಹೀನಗೊಳಿಸುತ್ತವೆ. ಮಾನಸಿಕ ಒತ್ತಡ ಹೆಚ್ಚಿಸುತ್ತವೆ. ತಂಪು ಪಾನೀಯಗಳಲ್ಲಿ ಅತ್ಯಧಿಕ ಸಕ್ಕರೆ ಅಂಶ ಇದ್ದು, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಇದನ್ನೂ ಓದಿ : ಮೊದಲ ಪತ್ನಿಯನ್ನು ಕೊಂದು ಜೈಲಿಗೆ ಹೋಗಿ ಬಂದವ 2ನೇ ಮದುವೆಯಾಗಿ ಅವಳನ್ನೂ ಕೊಂದೇ ಬಿಟ್ಟ

Advertisement

ಇನ್ನಷ್ಟು ಜಾಗೃತಿಗೆ ಸಿದ್ದ
ನಿಸರ್ಗ ಚಿಕಿತ್ಸೆ ಮಹತ್ವ, ಪ್ರಯೋಜನ ಕುರಿತು ಕಳೆದ ಎರಡು ವರ್ಷಗಳಿಂದ ಧಾರವಾಡ ಭಾಗದಲ್ಲಿ ಜಾಗೃತಿ, ಪ್ರೇರಣೆ ಕಾಯಕದಲ್ಲಿ ತೊಡಗಿದ್ದೇನೆ. ಈ ಭಾಗದಲ್ಲಿ ಇನ್ನಷ್ಟು ಜಾಗೃತಿ
ಅವಶ್ಯಕತೆ ಇದೆ. ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮುಂದೆ ಬಂದರೆ ಅವರೊಂದಿಗೆ ಸೇರಿ ಹಳ್ಳಿ ಹಳ್ಳಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ನಿಸರ್ಗ ಚಿಕಿತ್ಸೆ ಜಾಗೃತಿ ಕಾರ್ಯದಲ್ಲಿ ತೊಡಗಿಕೊಳ್ಳಲು ಸಿದ್ಧ. ಹಳ್ಳಿಯಲ್ಲಿಯೇ ಸಮೃದ್ಧತೆ ಪಡೆದಿದ್ದ ನಿಸರ್ಗ ಚಿಕಿತ್ಸೆ ಜ್ಞಾನ ಇದೀಗ ಅಲ್ಲಿಯೇ ಮಾಯವಾಗುತ್ತಿದೆ. ಇದನ್ನು ಮತ್ತೆ ಪುನರುತ್ಥಾನಗೊಳಿಸಬೇಕಾಗಿದೆ. ಅದೆಷ್ಟೋ ವ್ಯಾಧಿಗಳಿಗೆ ಮನೆ ಮದ್ದು, ಯೋಗ, ಆಹಾರ ಪದ್ಧತಿ, ಜೀವನ ಶೈಲಿ, ಯೋಗದಿಂದ ಪರಿಹಾರ ಸಾಧ್ಯ ಎಂಬುದನ್ನು ಮನವರಿಕೆ ಮಾಡಬೇಕಾಗಿದೆ. ನಗರವಾಸಿಗಳಲ್ಲಿ ಅಷ್ಟು ಇಷ್ಟು ಜಾಗೃತಿ ಮೂಡುತ್ತಿದೆಯಾದರೂ ಅದು ಸಾಲದಾಗಿದೆ.

ಪಾರ್ಲರ್‌ಗಿಂತ ವೆಚ್ಚ ಕಡಿಮೆ
ಬಡವರಿಗೆ ಉತ್ತಮ ಆರೋಗ್ಯ ದೊರೆಯಬೇಕೆಂಬ ಕಾರಣಕ್ಕಾಗಿಯೇ ಮಹಾತ್ಮಗಾಂಧಿ ಅವರು ನಿಸರ್ಗ ಚಿಕಿತ್ಸೆಗೆ ಒತ್ತು ನೀಡಿದ್ದರು. ಅದರ ಜಾಗೃತಿ ಹಾಗೂ ಪ್ರತಿಪಾದನೆಗೆ ಮುಂದಾಗಿದ್ದರು. ಕೆಲವೊಂದು ಪ್ರತಿಷ್ಠಿತ ಸಂಸ್ಥೆ-ಕಂಪೆನಿಗಳು ನಿಸರ್ಗ ಚಿಕಿತ್ಸೆ ಕೇಂದ್ರ ಆರಂಭಿಸಿರುವುದು, ಪ್ರತಿಷ್ಠಿತರು, ಗಣ್ಯರು ಅಲ್ಲಿಗೆ ಹೋಗಿ ಚಿಕಿತ್ಸೆ ಪಡೆಯುವುದು ಗಮನಿಸಿ, ನಿಸರ್ಗ ಚಿಕಿತ್ಸೆ ಏನಿದ್ದರೂ ಉಳ್ಳವರು, ಪ್ರತಿಷ್ಠಿತರಿಗೆ ಮಾತ್ರ ಸೀಮಿತ ಎಂಬ ಭಾವನೆ ಅನೇಕರಲ್ಲಿ ಮೂಡಿರಲು ಸಾಧ್ಯ. ಆದರೆ ಅದೇ ಕೇಂದ್ರಗಳಲ್ಲಿಯೇ ಸಾಮಾನ್ಯರಿಗೂ ನಿಸರ್ಗ ಚಿಕಿತ್ಸೆ ದೊರೆಯಲಿದೆ ಎಂಬುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಬ್ಯೂಟಿ ಪಾರ್ಲರ್‌ಗಳಿಗೆ ನೀಡುವ ವೆಚ್ಚಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ನಿಸರ್ಗ ಚಿಕಿತ್ಸೆ ದೊರೆಯುತ್ತದೆ. ವಿಶೇಷವಾಗಿ ದೀರ್ಘ‌ಕಾಲಿನ ವ್ಯಾಧಿಗಳಾದ ಮಧುಮೇಹ, ರಕ್ತದೊತ್ತಡ, ಸಂಧಿವಾತ, ಬೊಜ್ಜು ಸಮಸ್ಯೆಗಳಿಗೆ ನಿಸರ್ಗ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಪರಿಹಾರವಿದೆ. ಸಂಧಿವಾತದಿಂದ ನಡೆಯಲು ಸಾಧ್ಯವಾಗದೆ, ನಿರಂತರವಾಗಿ ಮಾತ್ರೆ-ಔಷಧ ಸೇವಿಸಿ ಅಡ್ಡ ಪರಿಣಾಮಗಳಿಗೆ ಗುರಿಯಾಗಿ, ಮಾತ್ರೆಗಳನ್ನು ಬಿಟ್ಟಿರಲು ಸಾಧ್ಯವಾಗದು ಎಂದು ಭಾವಿಸಿದ ಕೆಲ ಮಹಿಳೆ-ಪುರುಷರು ನನ್ನಲ್ಲಿ ಚಿಕಿತ್ಸೆ ಪಡೆದು ಇದೀಗ ಮಾತ್ರೆ-ಔಷಧ ಇಲ್ಲದೆಯೇ ಸಾಮಾನ್ಯ ಜೀವನ ಸಾಗಿಸುತ್ತಿದ್ದಾರೆ. ಮಧುಮೇಹ, ರಕ್ತದೊತ್ತಡದಿಂದ ಬಳಲುವವರು ಪಡೆಯುವ ಬಾಹ್ಯ ಇನ್ಸುಲಿನ್‌, ಮಾತ್ರೆ-ಔಷಧಗಳ ನಿರಂತರ ಸೇವನೆಯಿಂದ
ಮೂತ್ರಪಿಂಡ, ಹೃದಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮಧುಮೇಹಿಗಳಿಗೆ ನಿತ್ಯ ಬಳಸುವ ಟೂಥ್‌ ಪೇಸ್ಟ್‌ ಹಾನಿಕಾರಕವಾಗಿದೆ. ಮುಖ್ಯವಾಗಿ ನಿಸರ್ಗ ಚಿಕಿತ್ಸೆ ಮನೋಬಲ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.ಕೋವಿಡ್‌ ಸೋಂಕಿಗೊಳಗಾಗಿದ್ದ ಗರ್ಭಿಣಿಯೊಬ್ಬರಿಗೆ ಮನೆಮದ್ದು, ಸಂಪೂರ್ಣ ವಿಶ್ರಾಂತಿ ಮೂಲಕ ವಾಸಿಯಾಗಿದ್ದು ಇದೆ. ಜೈಪುರದ ವಿಜ್ಞಾನಿಯೊಬ್ಬರು ನನ್ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಚೆನ್ನೈನ ಮಹಿಳೆಯೊಬ್ಬರು ಸಂಧಿವಾತದಿಂದ ಬಳಲುತ್ತಿದ್ದರು, ಧಾರವಾಡದ 84 ವರ್ಷದ ವೃದ್ಧರೊಬ್ಬರು ನಡೆದಾಡಲಾಗದ ಸ್ಥಿತಿಯಲ್ಲಿದ್ದವರು ನಂತರ ಸ್ವತಂತ್ರವಾಗಿ ನಡೆದಾಡುವಂತಾದರು. ಕೇವಲ 12 ದಿನಗಳಲ್ಲಿಯೇ 2-3 ಕೆಜಿ ತೂಕ ಆರೋಗ್ಯಕರ ರೀತಿಯಲ್ಲಿ ಕಡಿಮೆ ಮಾಡಿದ್ದೂ ಇದೆ ಎನ್ನುತ್ತಾರೆ ಡಾ| ಸುಕುಮಾರಿ.

– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next