Advertisement

ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ:ಪ್ರವಾಸಿಗರಿಗೆ ಪ್ರದರ್ಶಿಸಬೇಕಿದೆ ಸಾಂಸ್ಕೃತಿಕ ಸಂಪತ್ತು

12:58 AM Jan 25, 2021 | Team Udayavani |

ಒಂದೆಡೆಯಿಂದ ಕಡಲು ಮತ್ತೂಂಡೆ ಘಟ್ಟ ಪ್ರದೇಶದಿಂದ ಆವೃತ್ತವಾಗಿರುವ ಕರಾವಳಿ ಜಿಲ್ಲೆಗಳು ಪ್ರವಾಸಿಗರ ಮಟ್ಟಿಗೆ

Advertisement

ಒಂದರ್ಥದಲ್ಲಿ ಸ್ವರ್ಗವೇ ಸರಿ. ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಇರುವ ಸಾಧ್ಯತೆ, ಹೊಸ ಆಯಾಮಗಳ ಬಗೆಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

 

ಆನಂದ, ಆಶ್ಚರ್ಯ, ಆಮೋದಗಳನ್ನು ಏಕಕಾಲ ದಲ್ಲಿ ಪ್ರವಾಸಿಗೆ ನೀಡಬಲ್ಲ ಸೊಗಸಾದ ತಾಣಗಳಲ್ಲಿ ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಪ್ರಮುಖವಾಗಿ ಗುರುತಿಸಲ್ಪಡುತ್ತವೆ. ಹೀಗಿದ್ದರೂ ಈ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಎಷ್ಟು ಅಭಿವೃದ್ಧಿಯಾಗಿದೆ, ಇಲ್ಲಿರುವ ಪ್ರವಾಸಿ ಆಕರ್ಷ ಣೆಯ ಎಷ್ಟು ವಿಷಯಗಳು ತೆರೆದುಕೊಂಡಿವೆ ಅಥವಾ ಅನಾವರಣಗೊಳಿಸಲಾಗಿದೆ ಎಂಬ ಬಗ್ಗೆ ನಾವು ಒಂದಿಷ್ಟು ಚಿಂತಿಸಬೇಕಿದೆ. ಬಹುತೇಕ ನಮ್ಮ ಪ್ರವಾಸೋದ್ಯಮ ಕಡಲ ಕಿನಾರೆಯನ್ನು ಬಿಟ್ಟು ಪೂರ್ವಾಭಿಮುಖವಾಗಿ ನೋಡಿದ ಹಾಗೆ ಅನಿಸುವುದೇ ಇಲ್ಲ. ಹಾಗಾದರೆ ಕಡಲು-ಘಟ್ಟದ ನಡುವೆ ಏನಿದೆ?.

ಸಮುದ್ರ ಕಿನಾರೆ  :

Advertisement

ಸಮುದ್ರ ಎಂದರೆ ಭಯ, ಭವ್ಯತೆ ಯನ್ನು ಹೊಂದಿ ಮನಸೂರೆಗೊಳ್ಳುವ ಒಂದು ವಿಸ್ಮಯ. ನದಿಗಳು ಸಾಗರ ಸಂಗಮಿಸುವ ಅಳಿವೆಗಳು ಪ್ರಕೃತಿ ನಿರ್ಮಿಸಿದ ಸುಂದರ ಪ್ರದೇಶ. ನಿಸರ್ಗ ಸಹಜ ದ್ವೀಪಗಳು (ಕುದುರು), ಹಿನ್ನೀರಿನ ನೋಟ, ಅಗಾಧ ಜಲರಾಶಿಯುಳ್ಳ ಆಕರ್ಷಣೀಯ ಪರಿಸರ.. ಪ್ರವಾಸಿಗರಿಗೆ ಇನ್ನೇನು ಬೇಕು.

ಧಾರ್ಮಿಕ ಕ್ಷೇತ್ರಗಳು :

ಪ್ರಸಿದ್ಧ ದೇವಾಲಯಗಳು, ಪವಿತ್ರ ನದಿ ಸ್ನಾನ -ತೀರ್ಥಸ್ನಾನದ ನದಿ ದಡಗಳು, ನಾಗ ಸನ್ನಿಧಾನಗಳು, ಮಾರಿಗುಡಿಗಳು, ಬ್ರಹ್ಮಸ್ಥಾನಗಳು, ದೈವಸ್ಥಾನಗಳು, ಸಿರಿ ಕ್ಷೇತ್ರಗಳು (ಆಲಡೆಗಳು) ಧಾರ್ಮಿಕ ಮಹತ್ವಗಳೊಂದಿಗೆ ಯಾತ್ರಿಕರನ್ನು ಸೆಳೆ ಯುತ್ತವೆ. ಇಂತಹ ದೇವಾಲಯ, ದೈವಸ್ಥಾನಗಳಲ್ಲಿ ಶಿಲ್ಪಕಲೆಯ ಬೆಡಗು ಇದೆ. ಮೂರ್ತಿಗಳು-ಕಲ್ಲಿನ ಲೋಹಗಳ ವಿಶಿಷ್ಟ ಕಲಾಕೃತಿಗಳು-ಕುಸುರಿ ಕೆಲಸದ ಮಣೆ ಮಂಚಗಳಿವೆ, ದೈವಗಳ ಭಂಡಾರದಲ್ಲಿ ಅಪೂರ್ವ-ಪವಿತ್ರ ವಸ್ತುಗಳಿರುತ್ತವೆ. ಇವೆಲ್ಲದರ ಪ್ರದರ್ಶನಕ್ಕೆ ಅವಕಾಶ ಒದಗಬೇಕು. ವಾರ್ಷಿಕ ಉತ್ಸವ ಸಂದರ್ಭಗಳಲ್ಲಿ ಇದು ಸಾಧ್ಯ.

ಪ್ರಾಚೀನ ಚರ್ಚ್‌, ಮಸೀದಿಗಳು ಉಭಯ ಜಿಲ್ಲೆಗಳಲ್ಲಿವೆ. ಮಸೀದಿಗಳಲ್ಲಿ ನಡೆಯುವ ಉರೂಸ್‌, ಚರ್ಚ್‌ನ ವಾರ್ಷಿಕ ಹಬ್ಬಗಳು ಹಾಗೂ ವಿಶಿಷ್ಟ ಆಚರಣೆಗಳು ಪ್ರವಾಸಿಗೆ ಆಕರ್ಷಣೀಯವಾಗ ಬಹುದು. ಪುರಾತನ ಚರ್ಚ್‌, ಮಸೀದಿಗಳ ಐತಿಹಾ ಸಿಕ ಮಹತ್ವ, ರಚನಾ ಶೈಲಿಗಳು ಮಹತ್ವಪೂರ್ಣ ವಾದವುಗಳೇ. ಈ ಮೂಲಕ ಧಾರ್ಮಿಕ ಪ್ರವಾಸೋ ದ್ಯಮವನ್ನು ವಿಸ್ತರಿಸಲು ಸಾಧ್ಯ.

 ಐತಿಹಾಸಿಕ ಸ್ಥಳಗಳು :

ಚರಿತ್ರೆಗೆ ಸಾಕ್ಷಿಯಾಗಿ ಉಳಿದಿರುವ ಅರಮನೆ ಗಳು, ಕೋಟೆಗಳ ಅವಶೇಷಗಳು, ಅಪೂರ್ವ ದಾರುಶಿಲ್ಪ ಗಳಿರುವ ಪ್ರಾಚೀನ ಮಠ ಮತ್ತು ಗುತ್ತಿನ ಮನೆಗಳು, ಚೌಕಿಮನೆಗಳು, ಜಾನಪದ ವೀರರು ಹುಟ್ಟಿದ ಸ್ಥಳ, ನಡೆದಾಡಿದ ಪರಿಸರ, ಸಾಧಕ ವಿದ್ಯೆ ಕಲಿತ ಐಗಳಮಠ- ಗರಡಿಗಳು, ಪಾಡ್ದನ-ಜಾನಪದಗಳಿಗೆ ಸಂಬಂಧಿಸಿದ ಸ್ಥಳಗಳು ಇತಿಹಾಸ- ಸಂಸ್ಕೃತಿ ಪ್ರೀತಿಯ  ಪ್ರವಾಸಿಗಳ ಗಮನ ಸೆಳೆಯದಿದ್ದೀತೆ.

ಆಚರಣೆ-ಆರಾಧನೆ-ಕ್ರೀಡೆ :

ಪ್ರಖ್ಯಾತ ದೈವಸ್ಥಾನಗಳ ವಿಶಿಷ್ಟ ಕೋಲ-ನೇಮ -ಮೆಚ್ಚಿ -ಗೆಂಡ, ನಾಗಮಂಡಲ -ಢಕ್ಕೆಬಲಿ- ಪಾಣರಾಟಗಳು ನಡೆಯುವಲ್ಲಿಗೆ ಆಸಕ್ತ ಯಾತ್ರಿ ಗಳನ್ನು ಕರೆದೊಯ್ಯಬಹುದಾಗಿದೆ. ದೇವಾಲಯಗಳ ವಾರ್ಷಿಕ ಜಾತ್ರೆ, ಕೋಲ-ನೇಮದ ಬಳಿಕ ವರ್ಷಂಪ್ರತಿ ವಾಡಿಕೆಯಂತೆ ನಡೆಯುವ ಸಾಂಪ್ರದಾಯಿಕ ಕೋಳಿ ಅಂಕ, ಕಂಬಳಗಳನ್ನೂ ಪ್ರವಾಸಿಗಳಿಗೆ ತೋರಿಸ ಬಹುದು. ತೆಂಗಿನಕಾಯಿ ಕುಟ್ಟುವ, ಬೇಟೆಯಾಡುವ (ಕೆಡ್ಡಸ ಬೋಂಟೆ) ಮುಂತಾದ ಜಾನಪದ ಕ್ರೀಡೆ ಗಳನ್ನೂ ಏರ್ಪಡಿಸಿ ಪ್ರದರ್ಶಿಸಬಹುದು.

ವಾದನ-ನರ್ತನ ವೈಭವ :

ವಾದನ-ನರ್ತನಗಳು ಸಂತೋಷ, ಸಂಭ್ರಮದ ಸಂಕೇತಗಳಾಗಿ, ದೈವ-ದೇವರ ಸೇವೆಯ ಪ್ರಧಾನ ಅಂಗವಾಗಿ ರೂಢಿಯಲ್ಲಿವೆ. ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೈಭವವನ್ನು ಒದಗಿಸಲು ವಾದನ -ನರ್ತನ ಪ್ರಮುಖವಾದುದು. ಜಾನಪದ ನಾಗಸ್ವರ, ಕೊಳಲು ಸಹಿತ ಬಾಯಿಯಿಂದ ಊದಿ ನುಡಿಸುವ ವಾದ್ಯಗಳು, ದುಡಿ ತೆಂಬರೆ, ಢಕ್ಕೆ, ನಗರಿ, ಡೋಲು ಮತ್ತು ಬ್ಯಾಂಡ್‌ ಸೆಟ್‌ ಮುಂತಾದ ಸಾಂಪ್ರದಾಯಿಕ ಜಾನಪದ ಚರ್ಮವಾದ್ಯಗಳು ನಮ್ಮ ಆಚರಣೆಗಳಲ್ಲಿದ್ದು ಆಕರ್ಷಣೀಯವಾಗಿವೆ.

ಕರಾವಳಿಯ ಗಂಡುಕಲೆ ಯಕ್ಷಗಾನದ ವರ್ಣ- ವಾದನ- ನರ್ತನ-ಸಾಹಿತ್ಯ ವೈಭವ, ಭೂತಾ ರಾಧನೆಯ ರಮ್ಯಾದ್ಭುತ ಸೊಗಸು, ನಂಬಿಕೆ ಆಧರಿಸಿದ ಉಪಾಸನಾ ಪದ್ಧತಿ, ನಾಗಮಂಡಲ- ಢಕ್ಕೆಬಲಿ ಗಳಲ್ಲಿರುವ ನಾಟ್ಯ, ವಾದನ ಮತ್ತು ಬಣ್ಣ..ಹೀಗೆ ಬಣ್ಣನೆಗೆ ನಿಲುಕದ ಗಮನ ಸೆಳೆಯುವ ಆರಾಧನಾ ಕಲೆಗಳು, ಪ್ರದರ್ಶನ ರಂಗಕಲೆಗಳು ನಮ್ಮಲ್ಲಿವೆ.

ಆಹಾರ ವೈವಿಧ್ಯ :

ನಮ್ಮಲ್ಲಿನ ಆಹಾರ ವೈವಿಧ್ಯ ಅದರದ್ದೇ ಆದ ರುಚಿಯಿಂದ ವಿಶೇಷ ಖ್ಯಾತಿಯನ್ನು ಪಡೆದಿದೆ. ಕಡಲಿನಿಂದ ದೊರೆಯುವ ತಾಜಾ, ಶುದ್ದ ಮೀನು ಕರಾವಳಿಯ ವಿಶೇಷ. ಪ್ರವಾಸಿಗಳು ಭೇಟಿ ನೀಡುವ ಸ್ಥಳಗಳಲ್ಲಿ ಈ ಆಹಾರ ವೈವಿಧ್ಯವನ್ನು ಸುಲಭದಲ್ಲಿ ಲಭ್ಯವಾಗುವಂತೆ ಮಾಡಬಹುದು.

ಕರಾವಳಿಯ ಉತ್ಪನ್ನಗಳು :

ನಮ್ಮ ಕರಾವಳಿ ಸೀಮೆಯ ಉತ್ಪನ್ನಗಳಾದ ಕೈಮಗ್ಗದ ಬಟ್ಟೆಗಳು, ಜಾನಪದ ಸೊಗಸುಳ್ಳ ಚಿನ್ನ- ಬೆಳ್ಳಿಯ ಆಭರಣಗಳು, ದೈವ ದೇವರ ಮುಖ, ಮೂರ್ತಿ, ಆಭರಣಗಳು, ಪಂಚಲೋಹ -ಕಂಚಿನ ಮೂರ್ತಿಗಳು, ಪಾತ್ರೆಗಳು ಕಬ್ಬಿಣದ ಚೂರಿ, ಕತ್ತಿ, ಕೊಡಲಿ, ಬೀಗಗಳು ಮತ್ತು ಮರದ ನಿತ್ಯೋಪಯೋಗಿ ವಸ್ತಗಳಾದ ಸಂಬಾರದ ಮರಿಗೆ, ಸೇರು, ಪಾವು, ಕಳಸೆ, ಕಡೆಗೋಲು, ಮಣೆ, ಮೆಟ್ಟುಕತ್ತಿ, ಹೆರೆಮಣೆ ಹಾಗೂ ಪೀಠೊಪಕರಣಗಳನ್ನು ಪ್ರದರ್ಶಿಸಿ ಪ್ರವಾಸಿಗಳು ಖರೀದಿಸುವಂತೆ ಮಾಡಬಹುದು.

ಪ್ರಕೃತಿಜನ್ಯ ಮೂಲವಸ್ತುಗಳಿಂದ ಸಿದ್ಧಗೊಳಿಸುವ ಹೆಡಿಗೆ, ಗೆರಸೆ, ಬುಟ್ಟಿ, ಹುರಿಹಗ್ಗ, ನಾರಿನಹಗ್ಗ, ಬೀಳಿನ ಸಣ್ಣ ಹೆಡಿಗೆ ಮುಂತಾದುವುಗಳನ್ನು ಪ್ರವಾಸಿಗರು ನೆರೆಯುವ ಕಡಲಕಿನಾರೆಯಲ್ಲಿ, ಜಾತ್ರೆಗಳಲ್ಲಿ, ಕೋಲ-ನೇಮಗಳಲ್ಲಿ ಸುಲಭವಾಗಿ ಲಭಿಸುವಂತೆ ಮಾಡಬಹುದು. ಇದರಿಂದ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದಂತಾಗುವುದಿಲ್ಲವೇ?.

ಸಾಂಸ್ಕೃತಿಕ ಭವ್ಯತೆ

ನಮ್ಮದೆನ್ನುವ ಸಾಂಸ್ಕೃತಿಕ ಭವ್ಯತೆ ನಮ್ಮಲ್ಲಿವೆ. ಅವುಗಳನ್ನು ಪ್ರದರ್ಶಿಸಬೇಕು, ವಿವರಿಸಬೇಕು, ಯಾತ್ರಿಗಳನ್ನು ಸೆಳೆಯುವ ಕೆಲಸವಾಗಬೇಕು. ಇಂತಹ ಪ್ರದರ್ಶನಗಳಿಂದ ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ನೋವಾಗಬಾರದು. ಇತಿಹಾಸವನ್ನು ತಿರುಚ ಬಾರದು. ಈ ಧಾರ್ಮಿಕ, ಐತಿಹಾಸಿಕ, ಜಾನಪದ ಸಂಪತ್ತನ್ನು ಗೌರವದಿಂದ ನಮ್ಮ ಪೂರ್ವಸೂರಿಗಳ ಸಾಂಸ್ಕೃತಿಕ ಕೊಡುಗೆ ಎಂದು ಪ್ರವಾಸಿಯ ಮುಂದೆ ಪ್ರದರ್ಶಿ ಸಬೇಕು. ವರ್ಣ, ವರ್ಗ ತಾರತಮ್ಯ ಪರಿಗಣಿಸದೆ ಪ್ರಶಸ್ತವಾದುದನ್ನು ಸ್ವೀಕರಿಸುವ, ಪ್ರಚುರಪಡಿಸುವ ಮತ್ತು ಅಳವಡಿಸಿ ಕೊಳ್ಳುವ ವಿಶಾಲ ಮನೋಭಾವ ಅಗತ್ಯ.

 

 ಕೆ. ಎಲ್.ಕುಂಡಂತಾಯ

Advertisement

Udayavani is now on Telegram. Click here to join our channel and stay updated with the latest news.

Next