Advertisement

National tourism day: ಶಿಶಿಲ ಬೆಟ್ಟಕ್ಕೆ ಚಾರಣ ಹೊರಟ ಕ್ಷಣ..

11:35 AM Jan 25, 2024 | Team Udayavani |

ಶಿಶಿಲ ಬೆಟ್ಟ ಚಾರಣ ಒಂದು ಮರೆಯಲಾಗದ ಚಾರಣ. ಸಂಖ್ಯಾ ಶಾಸ್ತ್ರ ವಿಭಾಗದ ಗೆಳೆಯರೊಂದಿಗೆ ಈ ಒಂದು ಚಾರಣ ಕೈಗೊಂಡಿದ್ದೆ. ನಾನು ಹೋಗುವ ಜಾಗಗಳು, ಪೋಸ್ಟ್ ಗಳನ್ನು ನೋಡಿ ನಮ್ಮನ್ನು ಕರೆದುಕೊಂಡು ಹೋಗು ಎಂದು ಸಹ ಪಾಠಿಗಳು  ಹೇಳುತ್ತಿದ್ದರು. ಆಯಿತು ಎಂದು ಶಿಶಿಲ ಬೆಟ್ಟವನ್ನು ನಾನು ಕೂಡ ನೊಡದಿದ್ದ ಕಾರಣ ಒಂದು ದಿನ ಹೋಗುವ ಎಂದು ಹೇಳಿ ಬಿಟ್ಟೆ.

Advertisement

ನಾನು, ಪ್ರಸಾದಣ್ಣ, ಅರುಣ್ ಅಣ್ಣ ಹಾಗೂ 5 ಜನ  ಸಹಪಾಠಿಗಳು ತಯಾರಾದೆವು. ಶ್ರುತಿ ಎಂಬ ಸಹಪಾಠಿಯ ಮನೆಯಲ್ಲಿ ಬೆಳಿಗ್ಗೆ ಇಡ್ಲಿ, ಬನ್ಸ್ ತಿಂದು ಧರ್ಮಸ್ಥಳ ದಿಂದ 30km ದೂರ ಇರುವ ಶಿಶಿಲ ಊರಿಗೆ ತೆರಳಿ ಅಲ್ಲಿಯ ಜನರ ಬಳಿ ಹೋಗುವುದು ಹೇಗೆ ಎಂದು ಕೇಳಿದೆವು. ಆಗ ಅಲ್ಲಿಯ ಜನರು 13km ಕಾಡಿನಲ್ಲಿ ನಡೆಯಬೇಕು, ಒಬ್ಬ ದಾರಿ ತೋರುವ ಗಾರ್ಡ್ ಇದ್ದರೆ ಮಾತ್ರ ಹೋಗಲು ಸಾಧ್ಯ, ಅದರಲ್ಲೂ ಆನೆಗಳು ಬೇರೆ ಇವೆ ಎಂದಾಗ ಎಲ್ಲರಿಗೂ ಒಮ್ಮೆಲೆ ಸ್ವಲ್ಪ ಭಯ ಶುರು ವಾಯಿತು. ಅರುಣಣ್ಣ ‘ಬಂದಿದ್ದು ಬಂದಾಗಿದೆ, ಯಾರಾದರೂ ಗಾರ್ಡ್ ಸಿಕ್ಕಿದರೆ ಹೋಗಿ ಬಂದು ಬಿಡೋಣ” ಎಂದರು. ಎಲ್ಲರೂ ಅರೆ ಬರೆ ಮನಸಿನಲ್ಲಿದ್ದರೂ ಅರುಣಣ್ಣ ನೀಡಿದ ಧೈರ್ಯಕ್ಕೆ ಒಂದು ಕೈ ನೋಡಿಯೇ ಬಿಡೋಣ ಎಂದು ಯಾರಾದರೂ ಗಾರ್ಡ್ ಕಳಿಸಿಕೊಡಿ ಎಂದೆವು. ಅಲ್ಲೇ ಇದ್ದ ಒಬ್ಬ ಅಂಗಡಿಯವ 3-4 ಜನಕ್ಕೆ ಫೋನು ಮಾಡಿ ಚೋಮ ಎಂಬ ಗಟ್ಟಿಮುಟ್ಟಾದ ಗಾರ್ಡ್ ಅನ್ನು ಕರೆಸಿ ಪರಿಚಯ ಮಾಡಿಕೊಟ್ಟ.

ಕೈಯಲ್ಲಿ ಒಂದು ಕತ್ತಿ, ತಲೆಗೆ ಒಂದು ಮುಂಡಾಸು ಕಟ್ಟಿ ಒಂದು ಹೊಳೆಯ ಬದಿಯಲ್ಲೇ ಸ್ವಲ್ಪ ದೂರ ನಡೆಸಿದ. 1-2ಕಿ. ಮೀ ಹೊಳೆಯಲ್ಲೆ ನಡೆದಿದ್ದರಿಂದ ಯಾರಿಗೂ ಏನೂ ಕಷ್ಟ ಎಂದು ಅನಿಸಲಿಲ್ಲ. 2ಕಿ. ಮೀ ಆದ ಬಳಿಕ ಕಾಡು ದಾರಿ ಶುರು.

ಕಾಡಿನಲ್ಲಿ ಇನ್ನೆರಡು ಕಿ. ಮೀ ದೂರ ನಡೆದಿದ್ದೇ ತಡ ಚಿಕ್ಕ ಜಲಪಾತ, ಒಂದು 20 ಅಡಿ ಇರಬಹುದು, ಸೊಂಟದ ತನಕ ಬರುವಷ್ಟು ದೊಡ್ಡ ಗುಂಡಿ. ಎಲ್ಲರೂ ಅಲ್ಲಿ ಹೋಗಿ ನೋಡೋಣ ಎಂದಾಗ ನಮ್ಮ ಗಾರ್ಡ್ ಚೋಮಣ್ಣ ಈಗ ಬೇಡ ಬರುವಾಗ ಹೇಗೂ ಸುಸ್ತಾಗಿರುತ್ತದೆ ಆಗ ನೀರಿಗೆ ಇಳಿಯೋಣ ಎಂದು ಹೇಳಿದಾಗ ಎಲ್ಲರಿಗೂ ಸರಿ ಎನ್ನಿಸಿತು.

Advertisement

ಮತ್ತೆ ದಟ್ಟ ಕಾನನದೊಳಗೆ  ಚಾರಣ ಮುಂದುವರೆಯಿತು. ಸಮಯ ಕಳೆದ ಹಾಗೆ ದಾರಿಯುದ್ದಕ್ಕೂ ಆನೆ ಲದ್ದಿಗಳೆ ಕಾಣ ತೊಡಗಿದವು ಅದರ ಭಯ ಒಂದು ಆದರೆ ಇನೊಂದು ಬದಿ ಕಾಟ ಕೊಡುವ ಜಿಗಣೆಗಳು, ಮೊದಲು ಬರುವಾಗಲೇ ಒಂದೊಂದು ಬಾಟಲಿ ನೀರು ತರಲು ಹೇಳಿದ್ದರಿಂದ ಬಚಾವ್, ಎಲ್ಲರೂ ಅವರವರ ಬಳಿ ಇರುವ ನೀರನ್ನು ದಣಿದಾಗ ಅಲ್ಲೇ ನಿಂತು ಜಿಗಣೆ ತೆಗೆಯುತ್ತಾ ಸ್ವಲ್ಪ ಸ್ವಲ್ಪವೇ ನೀರು ಖಾಲಿ ಮಾಡತೊಡಗಿದರು. ಒಂದು 5 ಕಿ. ಮೀ ನಡೆದಿದ್ದೆವೇನೋ ಸಹಪಾಠಿ ಗಳ ಕಾಲು ನಡುಗತೊಡಗಿತು. ಎಲ್ಲರೂ ಸುಸ್ತಿನಿಂದ “ರಾಘು ಇನ್ನೆಷ್ಟು ದೂರ” ಉಂಟ ಅಂತ ಕೇಳ ತೊಡಗಿದರು. ಇಲ್ಲೇ ಬಂತು 10 ನಿಮಿಷ ನಿಲ್ಲಬೇಡಿ ಸ್ವಲ್ಪ ಸ್ವಲ್ಪವೇ ಹೆಜ್ಜೆ ಇಡುತ್ತಾ ಬನ್ನಿ ಎಂದು ಹುಮ್ಮಸ್ಸು ನೀಡುತ್ತಾ ಇನ್ನೂ ಒಂದೆರಡು ಕಿ. ಮೀ ನಡೆಸಿದೆ 7-8 ಕಿ. ಮೀ ಆಗಿರಬಹುದು, ಅಕ್ಷತ ಹಾಗೂ ತೇಜಸ್ವಿನಿ “ರಾಘು ಸಾಕು ನಿಂದು 5 ನಿಮಿಷ,  ಸೀದದಿಂದ ಹೇಳು ಎಸ್ಟು ದೂರ ಉಂಟು ಅಂತ ಇಲ್ಲದಿದ್ದರೆ ನಾವು ಮುಂದೆ ಬರುವುದೇ ಇಲ್ಲ ಎಂದು ಎಚ್ಚರಿಕೆ ನೀಡಿದರು”.ನಾನು ಒಂದು 10 ನಿಮಿಷ ಕೂತು,ನೀರು ಕುಡಿದು ಹೋಗುವ ಇನ್ನೂ ಸ್ವಲ್ಪವೇ ದೂರ ಎಂದು ಹೇಳಿ ಸಮಾಧಾನ ಪಡಿಸಿದೆ.

ಎಲ್ಲ ಸಹಪಾಠಿಗಳು ನಡೆದು ನಡೆದು ಅರೆ ಜೀವವಾಗಿತ್ತು. ಮುಂದೆಯಿಂದ ನಾನು ಚೋಮಣ್ಣ ನಡೆದರೆ ಹಿಂದೆಯಿಂದ ಪ್ರಸಾದಣ್ಣ, ಅರುಣಣ್ಣ ಮಧ್ಯದಲ್ಲಿ 5 ಜನ ಸಹಪಾಠಿಗಳು. ಯಾರು ಹಿಂದೆ ಉಳಿಯದಂತೆ ಹಾಗೂ ನಮ್ಮಿಂದ ಮುಂದೆ ಹೋಗದಂತೆ ಮೊದಲೇ ಸೂಚನೆ ನೀಡಿದ್ದೆವು. 10 ನಿಮಿಷ ಕೂತು ಮತ್ತೆ ನಡೆಯಲು ಶುರು, ಹಾಗೆ ಜೀವವನ್ನು ವಾಲಿಸುತ್ತ, ಸುಸ್ತಿನಲ್ಲಿ ಮೇಲೆ ನೋಡುತ್ತಾ, ಇವತ್ತು ಮನೆಗೆ ವಾಪಸು ತಲುಪಿದರೆ ಸಾಕು ಎಂಬಷ್ಟು ಸಹಪಾಠಿಗಳಿಗೆ ಸಾಕಾಗಿತ್ತು. ಅಕ್ಷತ ಅಂತೂ “ರಾಘು ಇನ್ನೂ ನಿನ್ನೊಟ್ಟಿಗೆ ಚಾರಣ ಬರುವುದೇ ಇಲ್ಲ ಎಂದು” ಆಗಾಗ ಬೈಯುತ್ತಾ ಹೇಳುತ್ತಿದ್ದಳು. ಬೆಳಗ್ಗೆ 8 ಗಂಟೆಗೆ ಚಾರಣ ಶುರು ಮಾಡಿದ್ದೆವು ಗಂಟೆ ಮದ್ಯಾಹ್ನ 1 ಆದರೂ ಬೆಟ್ಟ ತಲುಪಿರಲಿಲ್ಲ, ನೀರು ಕುಡಿ, ಕೂರು, ಮೂಗು ಬಾಯಲ್ಲಿ ಉಸಿರಾಡು, ನಡಿ ಇಷ್ಟೇ ಆಗಿತ್ತು. ಸುಮಾರು 10 ಕಿ. ಮೀ ಆದ ಒಂದೆರಡು ಬಾಟಲಿ ನೀರು ಇತ್ತ ಏನೋ ಎಲ್ಲರೂ ನೀರು ಕಾಲಿ ಎನ್ನ ತೊಡಗಿದರು. 2 ಬಾಟಲಿ ಇದೆಯಲ್ಲ ಇದ್ರಲ್ಲೆ ಅಡ್ಜಸ್ಟ್ ಮಾಡಿಕೊಳ್ಳುವ ಇನೊಂದು 2 ಕಿ. ಮೀ ಇರುವುದು ಅಷ್ಟೇ ಎಂದೇ. ಬರೋಬ್ಬರಿ 11 ಕಿ. ಮೀ ಆದ ನಂತರ ಬೆಳಕು ಕಾಣಿಸಿತು. ಯಾವುದೋ ಗುಡ್ಡ ದ ಮೇಲೆ ಅಂತೂ ಇದ್ದೇವೆ ಅನ್ನೋ ಭಾಸವಾಯಿತು. ಎಲ್ಲರೂ ಬೆಟ್ಟ ದ ಮೇಲೆ ಒಂದು 5 ನಿಮಿಷ ಕೋರೋಣ ಎಂದಾಗ ಪಕ್ಕದಲ್ಲೇ ಏನೋ ಶಬ್ಧ ವಾಗ ತೊಡಗಿತು. ನಮ್ಮ ಚೋಮಣ್ಣ ಇಲ್ಲೇ ಇರಿ ಏನಂದು ನೋಡಿ ಬರುತ್ತೇನೆ ಎಂದು ಹೊರಟ. ಕೈಯಲ್ಲಿ ನೀರಿಲ್ಲ, ಹೊಟ್ಟೆಗೆ ಏನೂ ತಂದಿಲ್ಲ ಆದರೂ ಬೆಟ್ಟದ ಮೇಲೆ ತಂಪು ಗಾಳಿಯ ಹಿತ ಅದೆಲ್ಲವನ್ನೂ ಮರೆಸುವಂತೆ ಮಾಡಿತ್ತು. ನಾವು ತಲುಪಬೇಕಾದ ಬೆಟ್ಟ ಹಾಗೂ ಸುತ್ತ ಇರುವ ಪಾಂಡವರ ಬೆಟ್ಟ, ಜೇನುಕಲ್ಲು, ದೀಪದಕಲ್ಲು, ಅಮೇಧಿಕಲ್ಲು, ಹಾಗೂ ಒಂಭತ್ತು ಗುಡ್ಡ ನಾವು ಕೂತಲ್ಲಿಂದ ಕಾಣುತ್ತಿತ್ತು.

ಶಿಶಿಲ ಬೆಟ್ಟಕ್ಕೆ ಮೂಡಿಗೆರೆ ಬದಿಯಿಂದ ಕೂಡ ದಾರಿ ಇದೆ ಎಂದು ನನಗೆ ಮೊದಲೇ ಗೊತ್ತಿತ್ತು, ಅದು ಬರೀ 20 ನಿಮಿಷ ಚಾರಣ , ಮಜಾ ಬರುವುದಿಲ್ಲವೆಂದು ಈ ದಾರಿ ನಾನು ಆಯ್ಕೆ ಮಾಡಿಕೊಂಡಿದ್ದೆ. ಅಲ್ಲೇ ಒಂದು 3-4 ಫೋಟೋ ತೆಗೆದು ಮತ್ತೆ ನಡೆಯೋಕೆ ರೆಡಿ ಆಗಿದ್ದೆವು. ಅಷ್ಟರಲ್ಲೇ ಚೋಮಣ್ಣ ಓಡಿ ಬಂದು ಇಲ್ಲೇ ಹತ್ತಿರದಲ್ಲಿ ಆನೆಗಳು ಇದ್ದಾವೆ, ನಾವು ಬೆಟ್ಟಕ್ಕೆ ತೆರಳಿ ವಾಪಸು ಬರುವಾಗ ಸಿಕ್ಕರೆ ತೊಂದರೆ ಹಾಗಾಗಿ ವಾಪಸು ಹೋಗುದಾದ್ರೆ ಹೋಗುವ ಎಂದ. ಹುಡುಗಿಯರು ಬೇರೆ ಇದ್ದಾರೆ ಸುಮ್ಮನೆ ರಿಸ್ಕ್ ಬೇಡ ಬಂದದ್ದು ಗಮ್ಮತ್ ಆಗಿದೆ ಹೋಗಿ ನೀರಿನಲ್ಲಿ ಸ್ವಲ್ಪ ಈಜಾಡಿ ಹೋಗುವ ಎಂದೆ. ಎಲ್ಲರೂ ತಿರುಗಿ ಬೆಟ್ಟ ಇಳಿಯ ತೊಡಗಿದೆವು. ಸುತ್ತ ಮುತ್ತ ಬೆಟ್ಟ ಗುಡ್ಡ ನೋಡುತ್ತಾ ಆನೆಗಳ ಭಯ ಮರೆಯುತ್ತಾ ಸಾಗಿದೆವು. ಒಂದು 3 ಕಿ. ಮೀ ಇಳಿದಾಗ ಆಗ ತಾನೇ ಆನೆ ಹೋಗಿರುವ ದಾರಿ ಕಾಣಿಸಿತು. ದಾರಿಯಲ್ಲಿ ಆಗ ತಾನೇ ಬಿದ್ದ ಲದ್ದಿ, ಬಿದ್ದು ಕೊಂಡಿರುವ ಚಿಕ್ಕ ಪೊದೆಗಳು ಇವೆಲ್ಲವೂ ಮೆರೆಯುತ್ತಿದ್ದ ಆನೆಗಳ ಭಯವನ್ನು ಮತ್ತೆ ನೆನಪಿಸ ತೊಡಗಿತು. ನಮ್ಮ ಗಾರ್ಡ್ ಚೋಮಣ್ಣ ಶಬ್ಧ ಮಾಡಬೇಡಿ ಸುಮ್ಮನೇ ಬೇಗ ಬೇಗ ಬನ್ನಿ, ಕೆಳಗೆ ಬೇಗನೆ ಇಳಿದು ಬಿಡೋಣ ಎಂದ. ನಾವು ಕೂಡ ಕಾಲಿಗೆ ಚಕ್ರ ಕಟ್ಟಿದಂತೆ ಬೇಗ ಬೇಗ ಇಳಿಯ ತೊಡಗಿದೆವು. ಸಂಜೆ 4 ಆಗುತ್ತಿದ್ದ ಹಾಗೆ ನಾವು ನೋಡಿದ ಚಿಕ್ಕ ಜಲಪಾತ ಕಾಣಿಸಿತು. ಜಲಪಾತದಲ್ಲಿ ಆಡುವುದಕ್ಕಿಂತ ಜಾಸ್ತಿ ಬಾಟಲಿಗೆ ನೀರು ತುಂಬಿಸಿ ನೀರು ಕುಡಿಯುವ ಆಲೋಚನೆ ಎಲ್ಲಾರದಾಗಿತ್ತು. ಎರಡು ಕ್ಷಣ ಕೂತು ನೀರಿಗೆ ಇಳಿದೆವು. ಸುಮಾರು ಒಂದು ಗಂಟೆ ಅಷ್ಟು ಹೊತ್ತು ನೀರಿನಲ್ಲೇ ಈಜಾಡಿ, ಫೋಟೋ ಎಲ್ಲ ತೆಗೆದು ಮತ್ತೆ ನಾವು ಇಟ್ಟ ಕಾರುಗಳತ್ತ ಸಾಗಿದೆವು. ಸುಮಾರು ಸಂಜೆ 6:30 ಹೊತ್ತಿಗೆ ಉಜಿರೆ ತಲುಪಿ ಅಲ್ಲಿಂದ ಎಲ್ಲರೂ ಅವರವರ ಮನೆಗೆ ತಲುಪಿದೆವು. ಅಲ್ಲಿ ಕಳೆದ ನೆನಪುಗಳು ನಮ್ಮನ್ನು ಆ ರಾತ್ರಿ ಕಾಡುತ್ತಿದ್ದರೂ ಇನ್ನೊಂದು ಬದಿಯ ಸುಸ್ತು ನಮ್ಮನ್ನು ಗಾಢ ನಿದ್ರೆಗೆ ಜಾರುವಂತೆ ಮಾಡಿತ್ತು.

ಇಂದಿಗೂ ಸಹಪಾಠಿಗಳು ಸಿಕ್ಕರೆ ಇದರ ಬಗ್ಗೆ ಸ್ವಲ್ಪ ಹೊತ್ತು ಚರ್ಚಿಸಿ ಹಳೆಯ ನೆನಪುಗಳನ್ನು ಮೆಲುಕು ಹಾಕುವುದುಂಟು. ಎಷ್ಟೇ ಚರ್ಚಿಸಿದರೂ ಕೊನೆಗೆ ಎಲ್ಲಾದರೂ ಮತ್ತೆ ಚಾರಣಕ್ಕೆ ಹೋಗುವ ಆದರೆ ಸುಲಭವಾಗಿ ತಲುಪುವ ಜಾಗಕ್ಕೆ ಕರೆದುಕೊಂಡು ಹೋಗು ಎಂದು ಈಗಲೂ ಹೇಳುತ್ತಾರೆ. ನೆನಪುಗಳು ಒಂದೆಡೆ ಆದರೆ ಜವಾಬ್ದಾರಿ ಇನೊಂದು ಕಡೆ. ಮುಂದೆ ಇಂತಹ ಕ್ಷಣಗಳು ಮತ್ತೆ ಬರಲಿ ಎಂದು ಇಂದಿಗೂ ಯೋಚಿಸುತ್ತಾ ನನ್ನ ಚಾರಣ ದ ಚಟವನ್ನು ಮುಂದುವರೆಸುತ್ತಲೆ ಇದ್ದೇನೆ.

ರಾಘವ ಭಟ್

Advertisement

Udayavani is now on Telegram. Click here to join our channel and stay updated with the latest news.

Next