Advertisement

ಸುಸ್ಥಿರ ಭವಿಷ್ಯಕ್ಕೆ ವಿಜ್ಞಾನ ತಂತ್ರಜ್ಞಾನ : ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನ

05:52 PM May 11, 2022 | Team Udayavani |

ಭಾರತದ ರಕ್ಷಣ ತಂತ್ರಜ್ಞಾನದಲ್ಲಿ 1998ರ ಮೇ 11 ಒಂದು ಮಹತ್ತರವಾದ ಮೈಲುಗಲ್ಲನ್ನು ಸಾಧಿಸಿದ ದಿನ ಎಂದರೆ ತಪ್ಪಾಗಲಾರದು.

Advertisement

“ಕ್ಷಿಪಣಿ ಪುರುಷ’ ಎಂದೇ ಖ್ಯಾತರಾಗಿದ್ದ ಭಾರತದ ಮಾಜಿ ರಾಷ್ಟ್ರಪತಿಗಳಾಗಿದ್ದ ಡಾ| ಎ.ಪಿ.ಜೆ ಅಬ್ದುಲ್‌ ಕಲಾಂ ಹಾಗೂ ಅವರ ತಂಡದವರು ಅಮೆರಿಕ, ಚೀನ ಮುಂತಾದ ದೇಶಗಳ ಅತ್ಯಾಧುನಿಕ ಉಪಗ್ರಹಗಳ ಹದ್ದಿನ ಕಣ್ಣುಗಳಿಗೂ ತಿಳಿಯದಂತೆ ರಾಜಸ್ಥಾನದ ಪೋಖಾÅನ್‌ನಲ್ಲಿ ಯಶಸ್ವಿಯಾಗಿ ನಡೆಸಿದ ಅಣ್ವಸ್ತ್ರ ಪರೀಕ್ಷೆಯು ಜಗತ್ತಿನ ಎಲ್ಲ ದೇಶಗಳನ್ನು ನಿಬ್ಬೆರಗಾಗುವಂತೆ ಮಾಡಿದ್ದು ಇದೀಗ ಇತಿಹಾಸದ ಪುಟ ಸೇರಿದೆ.

ಅಂತೆಯೇ ಅದೇ ದಿನ ಸಂಪೂರ್ಣ ಸ್ವದೇಶಿಯಾಗಿ ನಿರ್ಮಿಸಲಾದ “ಹಂಸ-3′ ಎನ್ನುವ ವಿಮಾನದ ಯಶಸ್ವಿ ಹಾರಾಟವೂ ಕೂಡಾ ಭಾರತೀಯ ವೈಮಾನಿಕ ವಿಜ್ಞಾನಿಗಳ ಸಾಧನೆಗೆ ಇನ್ನೊಂದು ಹೆಮ್ಮೆಯ ಕಿರೀಟವಾಗಿತ್ತು.

ದೇಶಿಯವಾಗಿ ನಿರ್ಮಿಸಲಾದ “ತ್ರಿಶೂಲ್‌’ ಎಂಬ ಭೂಮಿ ಯಿಂದ ಆಗಸಕ್ಕೆ ನೆಗೆಯಬಲ್ಲ ಕ್ಷಿಪಣಿಯ ಯಶಸ್ವಿ ಪರೀಕ್ಷೆಯೂ ಅದೇ ದಿನದಂದು ನಡೆದಿರುವುದು ಭಾರತೀಯ ವಿಜ್ಞಾನಿಗಳ ಪಾಲಿಗೆ ಇನ್ನೊಂದು ಪಾರಿ ತೋಷಕವೇ ಆಗಿತ್ತು.

ಈ ಮೂರು ಮಹತ್ವದ ರಕ್ಷಣ ತಂತ್ರಜ್ಞಾನಗಳನ್ನು ಸಂಪೂರ್ಣ ದೇಶಿಯವಾಗಿ ಅಭಿವೃದ್ಧಿ ಪಡಿ ಸಿದ ಸಮಸ್ತ ಭಾರತೀಯ ವಿಜ್ಞಾನಿಗಳನ್ನು ಅಭಿನಂದಿಸಲು ಅಂದಿನ ಪ್ರಧಾನಿಗಳಾದ ದಿ| ಅಟಲ್‌ ಬಿಹಾರಿ ವಾಜ ಪೇಯಿ ಅವರು ಮೇ 11ನ್ನು ಪ್ರತಿವರ್ಷವೂ ರಾಷ್ಟ್ರೀಯ ತಂತ್ರ ಜ್ಞಾನ ದಿನವನ್ನಾಗಿ ಆಚರಿಸುವಂತೆ ಕರೆ ನೀಡಿದ್ದರು. ಹಾಗೆ ರಾಷ್ಟ್ರೀಯ ತಂತ್ರಜ್ಞಾನ ದಿನ ಆಚರ ಣೆಗೆ ಆರಂಭ ಸಿಕ್ಕಿತು. ಅಂದಿನಿಂದ ಪ್ರತಿ ವರ್ಷವೂ ವಿವಿಧ ಧ್ಯೇಯ-ಉದ್ದೇಶಗಳಿಂದ ಈ ದಿನ ವನ್ನು ಆಚರಿಸಲಾಗುತ್ತಿದೆ.

Advertisement

ಈ ದಿನದಂದು ನಡೆಯುವ ಕಾರ್ಯಕ್ರಮ ಗಳಲ್ಲಿ ಕೇಂದ್ರ ಸರಕಾರದ ವಿಜ್ಞಾನ ತಂತ್ರ ಜ್ಞಾನ ಇಲಾಖೆ ಹಾಗೂ ತಂತ್ರಜ್ಞಾನ ಅಭಿ ವೃದ್ಧಿ ಮಂಡಳಿ ಅವರು ಜಂಟಿಯಾಗಿ ತೊಡಗಿಸಿಳ್ಳುತ್ತಾರೆ. ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ವಿಶೇಷ ಸಾಧನೆಗೈದ ವಿಜ್ಞಾನಿಗಳಿಗೆ ಹಲವಾರು ಪುರಸ್ಕಾರಗಳನ್ನು ನೀಡಿ ಗೌರವಿ ಸಲಾಗುತ್ತದೆ. ಅಂತೆಯೇ ಈ ವರ್ಷದ ಧ್ಯೇಯ- ”ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಯೋಜಿತ ವಿಧಾನ’ ಎಂಬುದಾಗಿದ್ದು ಈ ವಿಷಯದ ಕುರಿತು ದೇಶ ದಾದ್ಯಂತ ಭಾಷಣ ಗಳು, ಚರ್ಚೆ ಗಳು, ವಿಜ್ಞಾನ ಪ್ರದರ್ಶನಗಳು, ಉಪನ್ಯಾಸಗಳು, ವಿಜ್ಞಾನ-ತಂತ್ರಜ್ಞಾನ ಮಾದರಿ ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ಆಚರಿಸಲಾಗುತ್ತದೆ.

ಇದರ ಮುಖ್ಯ ಉದ್ದೇಶಗಳು:
1. ನಮ್ಮೆಲ್ಲರ ದೈನಂದಿನ ಜೀವನದಲ್ಲಿ ವಿಜ್ಞಾನ ತಂತ್ರಜ್ಞಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು.
2. ವಿಜ್ಞಾನ- ತಂತ್ರಜ್ಞಾನದ ಮುಖೇನ ಆಗಿರುವ ಸಾಧನೆಗಳನ್ನು ಜನಸಾಮಾನ್ಯರ ಗಮನಕ್ಕೆ ತರುವುದು.
3. ದೇಶದ ಹಾಗೂ ನಾಗರಿಕರ ಸಮಸ್ಯೆಗಳನ್ನು ತಂತ್ರಜ್ಞಾನದ ಸಹಾಯದಿಂದ ಬಗೆಹರಿಸುವುದು.
4. ದೇಶದ ಯುವ ಜನರಿಗೆ ವಿಜ್ಞಾನ ಹಾಗೂ ತಂತ್ರಜ್ಞಾನಗಳಲ್ಲಿ ಹೆಚ್ಚಿನ ಸಾಧನೆ, ಆವಿಷ್ಕಾರ ಹಾಗೂ ಅನ್ವೇಷಣೆಗಳನ್ನು ಮಾಡಲು ಉತ್ತೇಜನ ನೀಡುವುದು.

ಈ ವರ್ಷದ ಮುಖ್ಯ ಧ್ಯೇಯ
ಕಳೆದೆರಡು ವರ್ಷಗಳಿಂದ ಜಗತ್ತಿನಾದ್ಯಂತ ಉಂಟಾದ ಸಾಂಕ್ರಾಮಿಕದಿಂದಾಗಿ, ಜನರ ಆದಾಯ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಉತ್ಪಾ ದನೆ ಗಣನೀಯವಾಗಿ ಕುಸಿದಿದ್ದು ಕಳೆದ ಮೂರು- ನಾಲ್ಕು ತಿಂಗಳಿಂದ ಚೇತರಿಸಿಕೊಳ್ಳುತ್ತಿದೆ.

ಕುಸಿದಿರುವ ಈ ಉತ್ಪಾದನೆಯನ್ನು ಇನ್ನು ಮುಂಬರುವ ದಿನಗಳಲ್ಲಿ ಹೆಚ್ಚಿಸಬೇಕಾಗಿದೆ. ಇದನ್ನು ವಿಜ್ಞಾನ-ತಂತ್ರಜ್ಞಾನಗಳ ಸಂಯೋಜಿತ ವಿಧಾನದಿಂದ ಮಾತ್ರ ಸಾಧ್ಯವಾಗಿಸಬಹುದು. ಈ ವರ್ಷದ ಮೊದಲ ಮೂರು ತಿಂಗಳಲ್ಲಿ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ತಂತ್ರಜ್ಞಾನ ಕ್ಷೇತ್ರ ಶೇ.7ರಷ್ಟು ಕೊಡುಗೆಯನ್ನು ನೀಡಿದ್ದು ಕೈಗಾರಿಕಾ ಕ್ಷೇತ್ರಕ್ಕೆ ಉತ್ತೇಜನಕಾರಿಯಾಗಿದೆ. ಅಲ್ಲದೆ ನಮ್ಮ ಆರ್ಥಿಕ ವ್ಯವಸ್ಥೆ ದೃಢ ಆಗಿರುವುದನ್ನು ಇದು ಸೂಚಿಸುತ್ತದೆ.

ನೂತನ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌(ಐ.ಒ.ಟಿ), ಡಾಟಾ ಮಾಡೆಲಿಂಗ್‌, ಬಿಸಿನೆಸ್‌ ಮಾಡೆಲಿಂಗ್‌, ನ್ಯಾನೊ ಹಾಗೂ ಜೀವ ತಂತ್ರಜ್ಞಾನಗಳು ಇನ್ನು ಮುಂಬರುವ ದಿನಗಳಲ್ಲಿ ಕೈಗಾರಿಕಾ ಉತ್ಪನ್ನಗಳನ್ನು ಇನ್ನಷ್ಟು ಪ್ರಮಾಣ ದಲ್ಲಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ.

ಪೆಟ್ರೋಲ್‌ ಡೀಸೆಲ್‌ ಬೆಲೆ ಪ್ರತಿನಿತ್ಯ ಏರುತ್ತಿರುವ ಇಂದಿನ ದಿನಗಳಲ್ಲಿ ಇಂಧನದ ಪರ್ಯಾಯ ಮೂಲವಾಗಿ ವಿದ್ಯುತ್‌ ಶಕ್ತಿ ಚಾಲಿತ ವಾಹನಗಳು ಈಗಾಗಲೇ ರಸ್ತೆಗಿಳಿದಿದೆ. ಇವುಗಳನ್ನು ನಮ್ಮ ದೇಶದಲ್ಲಿ ಉತ್ಪಾದನೆ ಮಾಡಬಲ್ಲ ಹಲವಾರು ಕಂಪೆನಿಗಳು ಕಳೆದ ಎರಡು ವರ್ಷಗಳಲ್ಲಿ ಹುಟ್ಟಿಕೊಂಡಿವೆ. ಜತೆಗೆ ಜಲಜನಕ ಆಧಾರಿತ ಇಂಧನದ ಅಭಿವೃದ್ಧಿಯೂ ಆಗುತ್ತಿದ್ದು ಇನ್ನು ಮುಂಬರುವ ದಿನಗಳಲ್ಲಿ ಈ ಟೆಕ್ನಾಲಜಿಯು ಜನಸಾಮಾನ್ಯರ ಕೈಗೆಟುಕುವ ದಿನಗಳು ದೂರವಿಲ್ಲ. ಹೀಗೆ ವಿಜ್ಞಾನ-ತಂತ್ರಜ್ಞಾನಗಳು ಸದ್ಯೋ ಭವಿಷ್ಯದ ದಿನಗಳಲ್ಲಿ ಪರಿಸರ ಮಾಲಿನ್ಯವನ್ನು ಬಹಳಮಟ್ಟಿಗೆ ಕಡಿಮೆಯಾಗಿಸುವುದಲ್ಲದೆ ದೇಶದ ಆರ್ಥಿಕತೆಯನ್ನು ಇನ್ನಷ್ಟು ಬಲಪಡಿಸಲು ಸಹಕಾರಿಯಾಗಿದೆ.

ಶಿಕ್ಷಕರ ಜವಾಬ್ದಾರಿ
ವಿಜ್ಞಾನ ಹಾಗೂ ತಂತ್ರಜ್ಞಾನಗಳನ್ನು ಜನ ಸಾಮಾನ್ಯರ ಬಳಿಗೆ ಕೊಂಡೊಯ್ಯಲು ನಮ್ಮೆಲ್ಲ ಶಿಕ್ಷಕ ವೃಂದದವರಿಗೆ ಇರುವ ಜವಾಬ್ದಾರಿ ಗುರುತರವಾದ್ದು.
ಮಕ್ಕಳಿಗೆ ಪ್ರಯೋಗಾಧಾರಿತ ವಿಷಯಗಳ ಬೋಧನೆ, ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ/ವಿದ್ಯಾರ್ಥಿಗಳಿಗೆ ಕೌಶಲಾಧಾರಿತ ತರಬೇತಿ ನೀಡುವುದು, ಬೇಸಗೆ ಶಿಬಿರ ಅಥವಾ ಇಂಟರ್ನ್ ಶಿಪ್‌ನಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿ ಗಳಿಗೆ ಸಹಾಯ ಮಾಡುವುದು, ವಿಜ್ಞಾನ-   ತಂತ್ರಜ್ಞಾನಗಳ ನೂತನ ಆವಿಷ್ಕಾರ ಗಳನ್ನು ಮಾತೃ ಭಾಷೆಯಲ್ಲಿ ಉಪನ್ಯಾಸ, ಲೇಖನ ಹಾಗೂ ಸಂವಾದ ಗಳ ಮೂಲಕ ಜನಸಾಮಾನ್ಯರಿಗೆ ತಿಳಿಸುವುದು, ಹೀಗೆ ಬಹಳಷ್ಟು ರೀತಿಯಲ್ಲಿ ಶಿಕ್ಷಕರ ಪಾತ್ರವಿದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ ತಂತ್ರಜ್ಞಾನ ವಿಷಯಗಳಲ್ಲಿ ಇನ್ನೂ ಹೆಚ್ಚಿನ ಆಸಕ್ತಿ ಉಂಟಾಗಿ ಅವರು ನಡೆಸುವ ಸಂಶೋಧ ನೆಗಳಿಂದ ನಮ್ಮ ದೇಶ ಸರ್‌ ಸಿ.ವಿ. ರಾಮನ್‌, ಡಾ| ಕಲಾಮ್‌ರಂತಹ ಶ್ರೇಷ್ಠ ವಿಜ್ಞಾನಿಗಳನ್ನು ವಿಶ್ವದ ಶ್ರೇಯೋಭಿವೃದ್ಧಿಗೆ ನೀಡಬಲ್ಲದು.
(ಲೇಖಕರು: ರಾಸಾಯನ ಶಾಸ್ತ್ರ ಉಪನ್ಯಾಸಕರು, ಎನ್‌ಐಟಿಕೆ ಸುರತ್ಕಲ್‌)

– ಡಾ| ಅರುಣ್‌ ಇಸ್ಲೂರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next