Advertisement

ಡಿ.14 ರಂದು ರಾಷ್ಟ್ರೀಯ ಲೋಕ್‌ ಅದಾಲತ್‌: ನ್ಯಾ|ಕುಲಕರ್ಣಿ

11:28 AM Nov 26, 2019 | Suhan S |

ದಾವಣಗೆರೆ: ರಾಷ್ಟ್ರೀಯ ಲೋಕ್‌ ಅದಾಲತ್‌ ಡಿ.14 ರಂದು ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಅಂಬಾದಾಸ್‌ ಕುಲಕರ್ಣಿ ಜಿ ತಿಳಿಸಿದ್ದಾರೆ.

Advertisement

ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ರಾಜೀಯಾಗಬಲ್ಲ ಅಪರಾಧ ಪ್ರಕರಣ, ಚೆಕ್‌ ಬೌನ್ಸ್‌, ಮೋಟಾರ್‌ ವಾಹನ ಅಪಘಾತ ಸಂಬಂಧವಾಗಿ ಪರಿಹಾರ, ಉದ್ಯೋಗದಲ್ಲಿ ಪುನರ್‌ ಸ್ಥಾಪಿಸಲ್ಪಡುವ ಪ್ರಕರಣ, ಕಾರ್ಮಿಕ ವಿವಾದ, ಕೌಟುಂಬಿಕ ನ್ಯಾಯಾಲಯದ ಪ್ರಕರಣ, ಬ್ಯಾಂಕ್‌ ಹಣ ವಸೂಲಾತಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಂಡು ಶೀಘ್ರ ಪರಿಹಾರ ಪಡೆಯಲು ಲೋಕ ಅದಾಲತ್‌ ಉತ್ತಮ ಅವಕಾಶ. ಜಿಲ್ಲೆಯ ನಾಗರಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಕೌಟುಂಬಿಕ ಪ್ರಕರಣ ಸೇರಿದಂತೆ ಯಾವುದೇ ರಾಜೀ ಪ್ರಕರಣಗಳಲ್ಲಿ ಕಕ್ಷಿದಾರನ ವಿರುದ್ಧ ತೀರ್ಪು ನೀಡಲಾಗುವುದಿಲ್ಲ. ಕೊಲೆ, ದರೋಡೆ, ಫೋಕ್ಸೋ, ಅಟ್ರಾಸಿಟಿ ಸೇರಿದಂತೆ ಘೋರ ಕ್ರಿಮಿನಲ್‌ ಪ್ರಕರಣಗಳು ಅದಾಲತ್‌ ವ್ಯಾಪ್ತಿಗೆ ಬರುವುದಿಲ್ಲ. ರಾಜೀ ಸಂಧಾನ ಮೂಲಕ ಅರೆ ಕ್ರಿಮಿನಲ್‌ ಮತ್ತು ಅರೆ ಸಿವಿಲ್‌ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು. ರಾಜೀ ಸಂಧಾನದಿಂದ ಕಕ್ಷಿದಾರರು ಹಾಗೂ ನ್ಯಾಯಾಲಯದ ಸಮಯ, ಹಣ ಉಳಿತಾಯ ಆಗುತ್ತದೆ. ಕಕ್ಷಿದಾರ ನ್ಯಾಯಾಲಯದಲ್ಲಿ ದಾವೆಹೂಡುವಾಗ ಪಾವತಿಸಿದ ಪೂರ್ಣ ಶುಲ್ಕವನ್ನು ರಾಜೀ ಆದ ನಂತರ ಮರು ಪಾವತಿಸಲಾಗುವುದು ಹಾಗೂ ಇಬ್ಬರೂ ದ್ವೇಷ ಮರೆತು ಅನ್ಯೋನ್ಯವಾಗಿ ಇರುವ ಅವಕಾಶ ದೊರೆಯುತ್ತದೆ ಎಂದು ತಿಳಿಸಿದರು.

ಡಿ.14 ರಂದು ಎರಡನೇ ಶನಿವಾರವಾಗಿದ್ದು,ಬೇರೆ ಯಾವುದೇ ಕಲಾಪಗಳು ನಡೆಯದೇ ಸಂಪೂರ್ಣವಾಗಿ ಲೋಕ ಅದಾಲತ್‌ ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ನ್ಯಾಯಾಧೀಶರು ಕಲಾಪ ನಡೆಸುವರು. ತಾಲೂಕು ಮಟ್ಟದಲ್ಲೂ ಅದಾಲತ್‌ ನಡೆಯಲಿದೆ. ನ್ಯಾಯಾಧೀಶರೊಂದಿಗೆ ವಕೀಲರು ಮತ್ತು ಕಕ್ಷಿದಾರರೂ ಕಲಾಪದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಲೋಕ ಅದಾಲತ್‌ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಕಡಿಮೆ ಇದ್ದು, ಮಾಧ್ಯಮದ ಮೂಲಕ ಹೆಚ್ಚಿನ ಪ್ರಚಾರ ಮತ್ತು ಮಾಹಿತಿ ನೀಡುವ ಮೂಲಕ ಅರಿವನ್ನು ಹೆಚ್ಚಿಸಬೇಕು. ಇದೇ ನ. 30 ರಂದು ತಾವು ನಿವೃತ್ತಿ ಹೊಂದಲಿದ್ದು, ಸಣ್ಣ ಪುಟ್ಟ ಪ್ರಕರಣಗಳ ಕುರಿತು ರಾಜೀ ಸಂಧಾನದ ಮೂಲಕ ವ್ಯಾಜ್ಯ ಪರಿಹರಿಸಿಕೊಳ್ಳುವುದರಿಂದ ನ್ಯಾಯಾಲಯಕ್ಕೆ ಬರುವ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.

Advertisement

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್‌.ಬಡಿಗೇರ್‌, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌ .ಟಿ.ಮಂಜುನಾಥ್‌, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌.ಅರುಣ್‌ ಕುಮಾರ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next