Advertisement

ನಿತ್ಯ ಹಸಿರು ಕ್ರಾಂತಿಯಾದರೆ ರೈತ ಸದೃಢ

06:00 AM Jan 14, 2018 | |

ಬೆಳಗಾವಿ: ದೇಶದಲ್ಲಿ ಮತ್ತೆ ಹಸಿರು ಕ್ರಾಂತಿಯಾದರೆ ರೈತರು ಅಭಿವೃದ್ಧಿ ಆಗುವುದಿಲ್ಲ. ಆದರೆ ನಿತ್ಯ ಹಸಿರು ಕ್ರಾಂತಿಯಾದರೆ ಮಾತ್ರ ರೈತರು ಸದೃಢರಾಗಲು ಸಾಧ್ಯ ಎಂದು ಕೇಂದ್ರದ ಗೃಹ ಸಚಿವ ರಾಜನಾಥ ಸಿಂಗ್‌ ಹೇಳಿದರು.

Advertisement

ನಗರದಲ್ಲಿ ಕೆಎಲ್‌ಇ ಡಾ| ಜಿರಗೆ ಸಭಾಂಗಣದಲ್ಲಿ ಭಾರತೀಯ ಕೃಷಿಕ ಸಮಾಜ ವತಿಯಿಂದ ಶನಿವಾರ ನಡೆದ ರಾಷ್ಟ್ರೀಯ ಪರಿಷತ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿತ್ಯ ಹಸಿರು ಕ್ರಾಂತಿ ಯೋಜನೆ ರೈತರ ಬದುಕು ಹಸನಾಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

2022ರ ವೇಳೆಗೆ ಕೃಷಿ ಕ್ಷೇತ್ರ ಪ್ರಕಾಶಮಾನವಾಗಿ(ಸನ್‌ರೈಸ್‌ ಸೆಕ್ಟರ್‌) ಬೆಳೆಯಲಿದೆ.  ಕೃಷಿ ಕ್ಷೇತ್ರದಲ್ಲಿ  ನೀರಾವರಿ ಸೇರಿ ಎಲ್ಲ ಸೌಕರ್ಯಗಳು ಸಿಗುವಂತಾಗಬೇಕು. ಅಂದಾಗ ಮಾತ್ರ ಭಾರತ ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಸಬಲವಾಗಿ ಬೆಳೆಯಲು ಸಾಧ್ಯ.  ಕೃಷಿ ಆದಾಯವೂ ದ್ವಿಗುಣಗೊಳ್ಳಲಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದರು.

ರೈತರಿಗೆ ಕಡಿಮೆ ಬಡ್ಡಿ ದರಲ್ಲಿ ಸಾಲ ನೀಡಬೇಕು ಎಂದು 2003ರಲ್ಲಿ ಸುಬ್ರಮಣಿಯನ್‌ಸ್ವಾಮಿ ಅಧ್ಯಕ್ಷತೆಯಲ್ಲಿ ಕೃಷಿ ಆಯೋಗ ರಚಿಸಲಾಯಿತು. ಕೃಷಿ ಸಾಲಕ್ಕೆ ಶೇ. 4ಕ್ಕಿಂತ ಹೆಚ್ಚಿನ ಬಡ್ಡಿ ದರ ವಿಧಿಸಬಾರದು ಎಂದು ಆಯೋಗ ಸೂಚನೆ ನೀಡಿತ್ತು. 2007ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರ್ಕಾರ  ಇದ್ದಾಗ ಬಿ.ಎಸ್‌.ಯಡಿಯೂರಪ್ಪ ಹಣಕಾಸು ಸಚಿವರಾಗಿದ್ದರು. ಆಗ ಶೇ.4ಕ್ಕಿಂತ ಕಡಿಮೆ ದರದಲ್ಲೇ ರೈತರಿಗೆ ಸಾಲ ಒದಗಿಸುವಂತೆ ಮನವಿ ಮಾಡಿದ್ದೆ. ನಂತರ ಈ ದರ ಇಳಿಮುಖಗೊಳಿಸುತ್ತ ಸದಸ್ಯ ಬಡ್ಡಿ ರಹಿತ ಸಾಲ ವಿತರಿಸುವ ಯೋಜನೆ ಜಾರಿಗೆ ಬಂದಿದೆ. ನಮ್ಮ ಸರ್ಕಾರ ಇರುವ ಪ್ರತಿ ರಾಜ್ಯದಲ್ಲೂ ಇದನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಎಲ್ಲಿವರೆಗೆ ನಾವು ಆಂತರಿಕ ವೆಚ್ಚವನ್ನು ಕಡಿಮೆಗೊಳಿಸುವುದಿಲ್ಲವೋ ಅಲ್ಲಿಯವರೆಗೆ ಕೃಷಿಯನ್ನು ಲಾಭದಾಯಕಗೊಳಿಸಲು ಸಾಧ್ಯವಿಲ್ಲ. ಕೃಷಿಗೆ ಅಗತ್ಯವಾಗಿ ಬೇಕಾಗುವ ವಸ್ತುಗಳ ದರ ಕಡಿಮೆಯಾದರೆ ಕೃಷಿ ಕ್ಷೇತ್ರ ಸುಧಾರಣೆಯತ್ತ ಸಾಗಲಿದೆ. ಕೃಷಿ ಕ್ಷೇತ್ರದ  ಜಿಡಿಪಿ ದರ ಈ ಮುಂಚೆ ಶೇ.50 ರಷ್ಟಾಗಿತ್ತು. ಈಗ ಕಡಿಮೆಯಾಗುತ್ತ ಸದ್ಯ ಶೇ. 13ರ ಆಸುಪಾಸಿನಲ್ಲಿದೆ ಎಂದು ಹೇಳಿದರು.

Advertisement

ರೈತ ಕುಟುಂಬಗಳಲ್ಲಿ ಓರ್ವ ಯುವಕನನ್ನು ನಾವು ಕೃಷಿ ಬಿಟ್ಟು ಬೇರೆ ಉದ್ಯೋಗದಲ್ಲೂ ಸೇರಿಸಬೇಕಿದೆ.  ಆಗ ರೈತನ ಸ್ಥಿತಿ ಸುಧಾರಿಸಲು ಸಾಧ್ಯ. ಬರ ಅಥವಾ ನೆರೆಯಿಂದ ಶೇ. 50ರಷ್ಟು ಬೆಳೆ ನಾಶವಾದರೆ ಮಾತ್ರ ಕೃಷಿ ಫಸಲ್‌ ಬಿಮಾ ಯೋಜನೆಯ ಲಾಭ ಸಿಗುತ್ತಿತ್ತು. ಇನ್ನು ಮುಂದೆ ಶೇ. 30ರಷ್ಟು ನಾಶವಾದರೂ ಯೋಜನೆಯ ಅನುಕೂಲ ರೈತರಿಗೆ ಆಗಲಿದೆ ಎಂದರು.

ಸಂಸದರಾದ ಸುರೇಶ ಅಂಗಡಿ,  ಪ್ರಹ್ಲಾದ ಜೋಶಿ, ರಾಜ್ಯಸಭಾ ಸದಸ್ಯ ಡಾ| ಪ್ರಭಾಕರ ಕೋರೆ, ಭಾರತೀಯ ಕೃಷಿಕ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಕಿಶನವೀರ, ಭಾರತೀಯ ಕೃಷಿಕ ಸಮಾಜ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ ಸೇರಿ ಹಲವರು ಉಪಸ್ಥಿತರಿದ್ದರು.

ನಾನೂ ರೈತ, ತಂದೆಯೂ ರೈತ
ನನ್ನ ತಂದೆ ರೈತನಾಗಿದ್ದು, ನಾನೂ ರೈತನಾಗಿದ್ದೇನೆ. ಹೀಗಾಗಿ ರೈತರ ಸ್ಥಿತಿ ಏನು ಎಂಬುದು ನನಗೆ ಗೊತ್ತು. ಈ ದೇಶದ ಬೆನ್ನೆಲುಬು ಆಗಿರುವ ರೈತನ ಪರಿಸ್ಥಿತಿಯ ಅರಿವಿದೆ. ದೇಶದಲ್ಲಿ ಕೃಷಿ ಕ್ಷೇತ್ರ ದಿನದಿನಕ್ಕೂ ಪ್ರಗತಿಯತ್ತ ಸಾಗಬೇಕು ಎಂಬುದೇ ನನ್ನ ಆಶಯ ಎಂದು ಸಚಿವ ರಾಜನಾಥ ಸಿಂಗ್‌ ಹೇಳುತ್ತಿದ್ದಂತೆ ಸಭಿಕರು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಇ-ನಾಮ ರಾಜ್ಯದಲ್ಲಿ ಜಾರಿ ಆಗಿಲ್ಲ
ದೇಶದಲ್ಲಿ ರೈತರಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಸಿಗಲಿ ಎಂಬ ಉದ್ದೇಶದಿಂದ ಇ-ಮಾರುಕಟ್ಟೆ ಜಾರಿಗೆ ತರಲಾಗಿದೆ. ಇ-ನಾಮ (ರಾಷ್ಟ್ರೀಯ ಕೃಷಿ ಮಾರುಕಟ್ಟೆ) ಎಂಬ ಹೆಸರಿನಲ್ಲಿ ಜಾರಿಗೆ ತರಲಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭದಾಯಕವಾಗಿದೆ.

ಆದರೆ, ಕರ್ನಾಟಕದಲ್ಲಿ ಮಾತ್ರ ಇದು ಈವರೆಗೂ ಜಾರಿ ಆಗದಿರುವುದು ಕಳವಳಕಾರಿಯಾಗಿದೆ ಎಂದು ಕೇಂದ್ರ
ಗೃಹ ಸಚಿವ ರಾಜನಾಥ ಸಿಂಗ್‌ ವಿಷಾದ ವ್ಯಕ್ತಪಡಿಸಿದರು. ಈ-ನಾಮ ಯೋಜನೆಗೆ ರೈತರನ್ನು ಜೋಡಿಸದಿರುವುದು ಆಶ್ಚರ್ಯವಾಗುತ್ತದೆ ಎಂದು ಸಚಿವ ರಾಜನಾಥ ಸಿಂಗ್‌ ಹೇಳುತ್ತಿದ್ದಂತೆ ಸಂಸದ ಪ್ರಹ್ಲಾದ ಜೋಷಿ ರಾಜ್ಯದಲ್ಲಿ ಜಾರಿಯಾಗಿದೆ. ಆದರೆ, ಇದನ್ನು ರೈತರಿಗೆ ಜೋಡಿಸಿಲ್ಲ ಎಂದು ಹೇಳಿದರು.

ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಲೆ ನಿಗದಿ ಪಡಿಸಿದರೂ ರೈತರಿಗೆ ಹೆಚ್ಚಿನ ಲಾಭ ಸಿಗುವುದಿಲ್ಲ.
ರೈತರು ಬೆಳೆಯುವ ಪ್ರತಿ ಬೆಳೆಯ ಮೌಲ್ಯ ವರ್ಧಿಸಬೇಕಾಗಿದೆ. ಜತೆಗೆ ಆಹಾರ ಸಂಸ್ಕರಣೆಯತ್ತ, ಎಲೈಟ್‌ ವಲಯದತ್ತ, ಕೃಷಿಗೆ ಸಂಬಂಧಿತ ಎಲ್ಲ ಕ್ಷೇತ್ರಗಳು ಊರಿನಿಂದ ದಿಲ್ಲಿವರೆಗೆ ತಲುಪಿಸುವ ಅಗತ್ಯವಿದೆ. ಹೈನುಗಾರಿಕೆ, ಡೈರಿ ಸೆಕ್ಟರ್‌ ಬೆಳೆಸುತ್ತ ಹೋದರೆ ರೈತರ ಲಾಭ ಹೆಚ್ಚಳವಾಗಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಸಚಿವರಿಗೆ ಕಳಸಾ-ಬಂಡೂರಿ ಬಿಸಿ
ಬೆಳಗಾವಿ
: ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಹೆಸರು ಹೇಳುತ್ತಿದ್ದಂತೆ ರೈತರು, ಕನ್ನಡದಲ್ಲಿ ಮಾತನಾಡಬೇಕು. ಇಲ್ಲದಿದ್ದರೆ ಕನ್ನಡದಲ್ಲಿ ಅನುವಾದ ಮಾಡಿ ಹೇಳಬೇಕು ಎಂದು ಕೂಗಿದರು.

ಜತೆಗೆ, ಕಳಸಾ-ಬಂಡೂರಿ ಬಗ್ಗೆ ವಿಷಯ ಪ್ರಸ್ತಾಪಿಸಿ ಎಂದು ಘೋಷಣೆ ಕೂಗಿದರು. ಆಗ ರಾಜನಾಥ ಸಿಂಗ್‌ ಅವರು ನಗುತ್ತ ಕನ್ನಡದಲ್ಲಿ ಮಾತನಾಡಬೇಕಾ ಎಂದು ಕೇಳಿದರು. ಕೂಡಲೇ ಸಂಸದ ಸುರೇಶ ಅಂಗಡಿ ಮಧ್ಯ ಪ್ರವೇಶಿಸಿ, ಸದ್ಯ ಸಚಿವರು ಹಿಂದಿಯಲ್ಲಿ ಮಾತನಾಡುತ್ತಾರೆ. ನಂತರ ತಿಳಿಯಲಿಲ್ಲ ಎಂದರೆ ಕನ್ನಡದಲ್ಲಿ ತಿಳಿಸಿ ಹೇಳುತ್ತೇನೆ. ನಿಮಗೆಲ್ಲರಿಗೂ ಹಿಂದಿ ಅರ್ಥವಾಗುತ್ತದೆ ಅಲ್ವ ಎಂದು ಮರು ಪ್ರಶ್ನಿಸಿದಾಗ ಎಲ್ಲ ರೈತರು ಸುಮ್ಮನಾದರು. ಅಲ್ಲದೆ, ಸಚಿವರು ಸಭಾಂಗಣಕ್ಕೆ ಬರುತ್ತಿದ್ದಂತೆ ರೈತರ ಸಾಲ ಮನ್ನಾ ಆಗಬೇಕು ಎಂದು ರೈತರು ಘೋಷಣೆ ಕೂಗಿದರು.

Advertisement

Udayavani is now on Telegram. Click here to join our channel and stay updated with the latest news.

Next