Advertisement

ಕತ್ತಲಲ್ಲಿ ರಾಷ್ಟ್ರೀಯ ಹೆದ್ದಾರಿ: ಬೀದಿ ದೀಪಗಳ ದುರಸ್ತಿಗಿಲ್ಲ ಕ್ರಮ

11:13 PM Sep 19, 2019 | Sriram |

ಕೋಟ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಅನಂತರ ಹಲವು ಸಮಸ್ಯೆ ತಲೆದೋರಿವೆೆ. ಇದೀಗ ಒಂದು ತಿಂಗಳಿಂದ ಬೀದಿ ದೀಪ, ಹೈಮಾಸ್ಟ್‌ ದೀಪ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಹಾಗೂ ಉಪಕರಣಗಳು ದಾಸ್ತಾನಿಲ್ಲ ಎನ್ನುವ ಕಾರಣ ನೀಡಿ ದುರಸ್ತಿಗೂ ಕಂಪೆ‌ನಿ ಮುಂದಾಗಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಗಳಾಗುತ್ತಿವೆ.

Advertisement

ಮುಖ್ಯ ಪೇಟೆಗಳಲ್ಲಿ ಕತ್ತಲೆ
ಕೋಟ, ಬ್ರಹ್ಮಾವರದ ಹಲವು ಕಡೆಗಳಲ್ಲಿ ದಾರಿ ದೀಪಗಳ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ ಹಾಗೂ ಕೆಲವು ಕಡೆ ಮಂದವಾದ ಬೆಳಕಿದೆ. ಸಾಸ್ತಾನ ಟೋಲ್‌ಗೇಟ್‌ನಲ್ಲೇ ಹೈಮಾಸ್ಟ್‌ ಸೇರಿದಂತೆ ಹಲವು ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ . ಕೋಟದ ಫ್ಲೆಓವರ್‌, ಸಾಸ್ತಾನ, ಕೋಟ, ಸಾಲಿಗ್ರಾಮ ಮುಖ್ಯ ಪೇಟೆಗಳಲ್ಲಿ, ಕುಂದಾಪುರ ತಾಲೂಕಿನಾದ್ಯಂತ ಕೂಡ ಇದೇ ರೀತಿ ಸಮಸ್ಯೆ ಇದೆ.

ಮಾಬುಕಳದಲ್ಲಿ ಬೀದಿದೀಪದ ವ್ಯವಸ್ಥೆ ಇಲ್ಲ
ಎಕ್ಸ್‌ಪ್ರೆಸ್‌ ಬಸ್‌ ನಿಲ್ದಾಣವಿರುವ ಎಲ್ಲ ಕಡೆಗಳಲ್ಲಿ ತಂಗುದಾಣ, ಹೈಮಾಸ್ಟ್‌, ಬೀದಿ ದೀಪಗಳನ್ನು ಅಳವಡಿಸಲಾಗುತ್ತದೆ. ಆದರೆ ಮಾಬುಕಳದಲ್ಲಿ ಬಸ್‌
ತಂಗುದಾಣ, ದಾರಿ ದೀಪದ ವ್ಯವಸ್ಥೆ ಇಲ್ಲ. ಹೀಗಾಗಿ ಪಂಚಾಯತ್‌ನವರು ಅಳವಡಿಸಿದ ಒಂದೆರಡು ದೀಪಗಳೇ ಇಲ್ಲಿಗೆ ಆಧಾರವಾಗಿದೆ. ಸ್ಥಳೀಯರು ಸಾಕಷ್ಟು ಬಾರಿ ಈ ಕುರಿತು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ರಾತ್ರಿ ವೇಳೆ ಬಸ್‌ಗಾಗಿ ನಿಲ್ಲುವವರು, ಪಾದಚಾರಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.

ಕಳ್ಳತನಕ್ಕೆ ರಹದಾರಿ
ಮಳೆಗಾಲದಲ್ಲಿ ಅಂಗಡಿ-ಮುಂಗಟ್ಟು, ದೇಗುಲಗಳಲ್ಲಿ ಹೆಚ್ಚಾಗಿ ಕಳ್ಳತನದ ದುಷ್ಕೃತ್ಯಗಳು ನಡೆಯು ತ್ತಿವೆ. ಹೀಗಾಗಿ ಕತ್ತಲ ವಾತಾವರಣವಿದ್ದರೆ ಇಂತಹ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎನ್ನುವ ಆತಂಕ ಸಾರ್ವಜನಿಕರಲ್ಲಿದೆ.

ಮನವಿಗೆ ಸೂಕ್ತ ಸ್ಪಂದನೆಯಿಲ್ಲ
ಬೀದಿ ದೀಪ ಸೇರಿದಂತೆ ಹಲವು ಸಮಸ್ಯೆ ಪರಿಹರಿಸುವಂತೆ ಸೆ.6ರಂದು ಹೆದ್ದಾರಿ ಜಾಗೃತಿ ಸಮಿತಿ ಟೋಲ್‌ನ ಮುಖ್ಯಸ್ಥರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು ಹಾಗೂ ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದಕ್ಕೆ ಸೂಕ್ತ ಪ್ರತಿಸ್ಪಂದನೆ ದೊರೆತಿಲ್ಲ.

Advertisement

ಹೋರಾಟಕ್ಕಿಳಿಯುವ ಮುನ್ನ ಎಚ್ಚೆತ್ತುಕೊಳ್ಳಿ
ದಾರಿದೀಪಗಳಿಲ್ಲದೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು ಟೋಲ್‌ ಮುಖ್ಯಸ್ಥರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಆದರೆ ಒಂದೆರಡು ಕಡೆ ದುರಸ್ತಿ ನಡೆಸಿದ್ದು ಹೊರತುಪಡಿಸಿದರೆ ಸಂಪೂರ್ಣ ದುರಸ್ತಿಯಾಗಿಲ್ಲ. ಸಾರ್ವಜನಿಕರು ಪ್ರತಿಭಟನೆ ನಡೆಸುವುದಕ್ಕೆ ಮೊದಲು ಕಂಪೆನಿ ಎಚ್ಚೆತ್ತುಕೊಳ್ಳಬೇಕಿದೆ.
-ಪ್ರತಾಪ್‌ ಶೆಟ್ಟಿ ಸಾಸ್ತಾನ, ಅಧ್ಯಕ್ಷರು ಹೆದ್ದಾರಿ ಜಾಗೃತಿ ವೇದಿಕೆ

ಮರು ಅಳವಡಿಕೆಗೆ ಸೂಚನೆ ನೀಡಲಿ
ಚತುಷ್ಪಥ ಕಾಮಗಾರಿ ಸಂದರ್ಭ ತೆರವುಗೊಳಿಸಲಾದ ಬೀದಿ ದೀಪಗಳನ್ನು ಮತ್ತೆ ಅಳವಡಿಸುವಲ್ಲಿ ನಿರ್ಲಕ್ಷé ವಹಿಸಲಾಗಿದೆ. ಈ ಕುರಿತು ನಮ್ಮ ಗ್ರಾ.ಪಂ. ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೆವು. ಅನಂತರ ಈ ಕುರಿತು ವರದಿ ಕೇಳಲಾಗಿತ್ತು. ಸಂಬಂಧಿಸಿದ ಮಾಹಿತಿ ಕೂಡ ನೀಡಿದ್ದೆವು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಈ ಕುರಿತು ಗಮನಹರಿಸಿ ಅವುಗಳನ್ನು ಮತ್ತೆ ಅಳವಡಿಸುವಂತೆ ಕಂಪೆನಿಗೆ ಸೂಚನೆ ನೀಡಬೇಕಿದೆ.
-ಗೋವಿಂದ ಪೂಜಾರಿ,
ಅಧ್ಯಕ್ಷರು, ಪಾಂಡೇಶ್ವರ ಗ್ರಾ.ಪಂ.

ದಾಸ್ತಾನಿಲ್ಲ; ಒಂದೆರಡು ದಿನದಲ್ಲಿ ಕ್ರಮ
ಉಪಕರಣ ದಾಸ್ತಾನಿಲ್ಲದ ಕಾರಣ ಎಲ್ಲ ಕಡೆ ದಾರಿ ದೀಪದ ದುರಸ್ತಿಗೆ ಹಿನ್ನಡೆಯಾಗಿದೆ. ಈ ಕುರಿತು ಮನವಿ ಸಲ್ಲಿಸಿದ್ದು ಒಂದೆರಡು ದಿನದಲ್ಲಿ ಸ್ಟಾಕ್‌ ಲಭ್ಯ ವಾಗಲಿದ್ದು ಕುಂದಾಪುರದಿಂದ ಉಡುಪಿ ತನಕದ ಎಲ್ಲ ದಾರಿ ದೀಪಗಳನ್ನು ತತ್‌ಕ್ಷಣ ದುರಸ್ತಿಗೊಳಿಸಲಾಗುವುದು.
-ಕೇಶವಮೂರ್ತಿ, ಸಾಸ್ತಾನ ಟೋಲ್‌ ಮ್ಯಾನೇಜರ್‌

ತೆರವುಗೊಳಿಸಿದ ದೀಪ ಅಳವಡಿಸುವವರಾರು?
ಚತುಷ್ಪಥ ಕಾಮಗಾರಿ ಆರಂಭಗೊಳ್ಳುವುದಕ್ಕೆ ಮುಂಚೆ ಉಭಯ ಜಿಲ್ಲೆಗಳ ಹೆದ್ದಾರಿಯ ಇಕ್ಕೆಲಗಳಲ್ಲಿ ಸ್ಥಳೀಯಾಡಳಿತಗಳು ಅಳವಡಿಸಿದ ಬೀದಿ ದೀಪಗಳಿದ್ದವು. ಪಾದಚಾರಿಗಳು, ಸೈಕಲ್‌ ಸವಾರರು ಇದರ ನೆರವಿನಿಂದಲೇ ಸಂಚರಿಸುತ್ತಿದ್ದರು. ಕಾಮಗಾರಿ ಸಂದರ್ಭ ವಿದ್ಯುತ್‌ ಕಂಬಗಳ ಜತೆಯಲ್ಲಿ ಅವುಗಳನ್ನು ತೆರವುಗೊಳಿಸಲಾಯಿತು. ಆದರೆ ಕಾಮಗಾರಿ ಮುಗಿದ ಮೇಲೆ ತೆರವುಗೊಳಿಸಿದ ದೀಪಗಳನ್ನು ಮತ್ತೆ ಅಳವಡಿಸದೆ ಮುಖ್ಯ ಪೇಟೆ, ಫ್ಲೆ$çಓವರ್‌ಗಳಲ್ಲಿ ಮಾತ್ರ ದಾರಿದೀಪ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಹೆಚ್ಚಿನ ಕಡೆಗಳಲ್ಲಿ ಬೀದಿದೀಪವಿಲ್ಲ. ರಸ್ತೆ ನಿರ್ವಹಣೆ ಕಂಪೆನಿಗೆ ಸಂಬಂಧಿಸಿರುವುದರಿಂದ ಅವರೇ ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯಾಡಳಿತಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದವು. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ಪ್ರಸ್ತುತ ಪಾದಚಾರಿ, ಸೈಕಲ್‌ ಸವಾರರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next