Advertisement

ಸಾವಿನ ಹೆದ್ದಾರಿಯಾಗುತ್ತಿದೆ ರಾಹೆ-28

01:48 PM Feb 20, 2021 | Team Udayavani |

ಧಾರವಾಡ: ರೈಲು ಬೋಗಿಯಂತೆ ರಸ್ತೆಯುದ್ದಕ್ಕೂ ಚಲಿಸುವ ಕಬ್ಬು ತುಂಬಿದ ಡಬಲ್‌  ಟ್ರ್ಯಾಲಿಯ ದೈತ್ಯ ಟ್ರ್ಯಾಕ್ಟರ್‌ಗಳು, ಮೈಯಲ್ಲಿ ದೆವ್ವ ಬಂದವರಂತೆ ರಸ್ತೆ ತುಂಬಾ ಕುಣಿಯುತ್ತ ಸಾಗುವ ಇಟ್ಟಿಗೆ ಸಾಗಾಟದ ಮಿನಿಟೆಂಪೊಗಳು, ಕಾಗದ ತಯಾರಿಕೆಗೆ ಆಂಧ್ರಪ್ರದೇಶದಿಂದ ನೀಲಗಿರಿ ಕಟ್ಟಿಗೆ ಹೊತ್ತುತರುವ ದೈತ್ಯ ಲಾರಿಗಳು. ಇದರ ಮಧ್ಯೆ ಹೊಲಕ್ಕೆ ಹೋಗುವ ದನಕರು, ಚಕ್ಕಡಿಗಳು. ಒಟ್ಟಿನಲ್ಲಿ ದಿನಕ್ಕೊಂದು ನರ ಅಥವಾ ಜಾನುವಾರು ಬಲಿ ಇಲ್ಲಿ ಕಟ್ಟಿಟ್ಟ ಬುತ್ತಿ.

Advertisement

ಅವಳಿನಗರ ಬೈಪಾಸ್‌ ಅನ್ನು ಕಿಲ್ಲರ್‌ ರಸ್ತೆ ಎಂದೇ ಸಂಬೋಧಿಸುತ್ತಿರುವ ಈ ಸಂದರ್ಭದಲ್ಲಿ ಸದ್ದುಗದ್ದಲವೇ ಇಲ್ಲದೇ ಜನ ಮತ್ತು ಜಾನುವಾರುಗಳನ್ನು ಬಲಿ ಪಡೆಯುತ್ತಿದೆ ರಾಜ್ಯಹೆದ್ದಾರಿ-28. ಸೂಪಾ ಅಣೆಕಟ್ಟು ಅಥವಾ ಗಣೇಶಗುಡಿಯಿಂದದಾಂಡೇಲಿ-ಧಾರವಾಡ-ಹೆಬಸೂರು-ನವಲಗುಂದ ಅಣ್ಣಿಗೇರಿವರೆಗಿನ 122 ಕಿಮೀ ಈ ರಾಜ್ಯ ಹೆದ್ದಾರಿಯಲ್ಲಿ ಧಾರವಾಡದಿಂದ ಹಳಿಯಾಳ ವರೆಗಿನ 35 ಕಿಮೀ ರಸ್ತೆಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ 53 ಜನರು, 250ಕ್ಕೂ ಹೆಚ್ಚು ಜಾನುವಾರುಗಳನ್ನು ಈ ರಸ್ತೆ ಬಲಿ ಪಡೆದಿದೆ. ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಗಡಿ ಸೇರುವ ಈ ರಸ್ತೆಯಲ್ಲಿರುವ ಮೂರ್‍ನಾಲ್ಕು ಸ್ಥಳಗಳಲ್ಲಂತೂ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ. ಧಾರವಾಡ ಗ್ರಾಮೀಣ ಮತ್ತು ಹಳಿಯಾಳ ಪೊಲೀಸರಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇನ್ನು ರೈಲ್ವೆ ಲೆವಲ್‌ ಕ್ರಾಸಿಂಗ್‌ ನಲ್ಲಂತೂ ರೈಲು ದಾಟುವಾಗ ಗೇಟ್‌ ಬಂದ್‌ ಆದಾಗ ವಾಹನ ಸವಾರರಿಗೆ ತೀವ್ರ ಕಿರಿಕಿರಿಯಾಗುತ್ತಿದೆ.

ಸಮೀಕ್ಷೆ ಮುಗಿದ್ರೂ ಆಗಲಿಲ್ಲ ಅಗಲೀಕರಣ :

ನಾಲ್ಕು ವರ್ಷಗಳ ಹಿಂದೆ ರಾಜ್ಯ ಹೆದ್ದಾರಿ-28 ಅಗಲೀಕರಣಕ್ಕೆ ಸ್ಥಳೀಯರು ಹೋರಾಟ ಮಾಡಿದ್ದಕ್ಕೆ ಮಣಿದು ಸರ್ಕಾರ2016-17ರಲ್ಲಿ ಅಗಲೀಕರಣಕ್ಕೆ ಸಮೀಕ್ಷೆ ಕಾರ್ಯ ಮಾಡಿತ್ತು. ನಂತರ ಇದನ್ನು ರಾಷ್ಟ್ರೀಯ ಹೆದ್ದಾರಿ ಮಾಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದೀಗಕೇಂದ್ರದ ನೂತನ ಹೆದ್ದಾರಿಗಳ ಪಟ್ಟಿಯಲ್ಲಿ ಕೂಡ ಈ ರಸ್ತೆಸೇರ್ಪಡೆಯಾಗಿಲ್ಲ. ಇನ್ನು ಕೊನೆ ಪಕ್ಷ ರಾಜ್ಯ ಸರ್ಕಾರವಾದರೂಇದನ್ನು ಧಾರವಾಡ-ಸವದತ್ತಿ, ಧಾರವಾಡ-ರಾಮನಗರ ರಸ್ತೆ ಮಾದರಿಯಲ್ಲಿ (ಕೆ-ಶಿಫ್‌) ನಿರ್ಮಿಸಲಿ ಎನ್ನುತ್ತಿದ್ದಾರೆ ಎರಡೂ ಜಿಲ್ಲೆಗಳ ರಸ್ತೆಯುದ್ದಕ್ಕೂ ಇರುವ ಗ್ರಾಮಸ್ಥರು.

ಪ್ರವಾಸಿಗರು, ಕೈಗಾರಿಕೆಯಿಂದ ಗಿಜಿ ಗಿಜಿ :

Advertisement

ಉತ್ತರ ಕನ್ನಡ ಜಿಲ್ಲೆಯ ರಮ್ಯ ಸ್ಥಳವಾಗಿರುವ ಸೂಪಾ ಅಣೆಕಟ್ಟು, ಕಾಳಿ ರಿವರ್‌ ರಾಫ್ಟಿಂಗ್‌, ಹಾರ್ನ್ಬಿಲ್‌ ಪಕ್ಷಿ ಪ್ರೇಮಿಗಳ ಮೋಜಿನ ತಾಣವಾಗಿರುವ ದಾಂಡೇಲಿ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ವರ್ಷಪೂರ್ತಿ ಜನ ಸುತ್ತಾಡುತ್ತಲೇ ಇರುತ್ತಾರೆ. ಅದರಲ್ಲೂ ಚಳಿಗಾಲದಲ್ಲಿ ಜಂಗಲ್‌ ರೆಸಾರ್ಟ್ ಗಳಿಗೆ ಹೊರ ರಾಜ್ಯಗಳ ಯುವಕ-ಯುವತಿಯರು ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸ ಕೈಗೊಳ್ಳುತ್ತಾರೆ.ದಾಂಡೇಲಿ ಪೇಪರ್‌ ಮಿಲ್‌, ಹಳಿಯಾಳದ ಪ್ಯಾರಿ ಶುಗರ್ ಗೆ ವರ್ಷಪೂರ್ತಿ ಕಬ್ಬು ಹೇರುವ ಟ್ರ್ಯಾಕ್ಟರ್‌ಗಳ ಓಡಾಟ, ಕಾಗದಕ್ಕೆ ನೀಲಗಿರಿ ಕಟ್ಟಿಗೆ ಪೂರೈಸುವ ಆಂಧ್ರ ಮೂಲದ ಲಾರಿಗಳ ಓಡಾಟ ಈ ರಸ್ತೆಯಲ್ಲಿ ಕೊಂಚ ಮೈ ಮರೆತರೂ ಸಾವು ಎನ್ನುವ ಸಂದೇಶವನ್ನು ಸಾರುವಷ್ಟು ಭೀಕರವಾಗಿದೆ. ಎರಡೇ ವರ್ಷದಲ್ಲಿ ಇಲ್ಲಿ ಓಡಾಡುವ ವಾಹನಗಳ ಸಂಖ್ಯೆ ಎರಡು ಪಟ್ಟು ಹೆಚ್ಚಳವಾಗಿದ್ದು, ಕಳೆದ ವರ್ಷ ನಡೆದ ವಾಹನ ಸಂಚಾರ

ಸಮೀಕ್ಷೆಯಲ್ಲಿ ದಿನವೊಂದಕ್ಕೆ 2670ಕ್ಕೂ ಅಧಿಕ ವಾಹನಗಳ ಸಂಚಾರ ದಾಖಲಾಗಿದೆ.ಇನ್ನು ಪ್ರತಿವರ್ಷ ಫೆಬ್ರವರಿ ತಿಂಗಳಿನಲ್ಲಿ ಬರುವ ಉಳವಿ ಜಾತ್ರೆಗೆ ಲಕ್ಷ ಲಕ್ಷ ಜನ ಭಕ್ತಾದಿಗಳು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಎತ್ತು ಚಕ್ಕಡಿ, ಕುದುರೆ ಗಾಡಿ, ಟ್ರ್ಯಾಕ್ಟರ್‌ಗಳು, ಕಾರು, ಬೈಕ್‌, ಬಸ್‌ ಹೀಗೆ ಎಲ್ಲಾ

ವಾಹನಗಳಲ್ಲಿಯೂ ತೆರಳುತ್ತಾರೆ. ವರ್ಷದಿಂದ ವರ್ಷಕ್ಕೆ ವಾಹನ ದಟ್ಟಣೆ ಈ ರಸ್ತೆಯಲ್ಲಿ ಹೆಚ್ಚಾಗುತ್ತಲೇ ಇದೆ. ಅದೂ ಅಲ್ಲದೇ ಹಳಿಯಾಳದಲ್ಲಿ ಹೆಚ್ಚುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಧಾರವಾಡದಿಂದ ಪ್ರತಿದಿನ ಹೋಗಿ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನೂರಾರು ಬಸ್‌ಗಳು ರಸ್ತೆಗೆ ಇಳಿದಿವೆ. ಆದರೆ ರಸ್ತೆ ಮಾತ್ರ ಇನ್ನು ಅಗಲೀಕರಣವೇ ಆಗಿಲ್ಲ.

ನರಕದ ಹೆಬ್ಟಾಗಿಲಾದ ಹಳ್ಳದ ಕ್ರಾಸ್‌ಗಳು  :

ಧಾರವಾಡದಿಂದ ಹಳಿಯಾಳ ವರೆಗಿನ ರಸ್ತೆಯಲ್ಲಿ ಮೇಲಿಂದ ಮೇಲೆ ಅಪಘಾತ ಸಂಭವಿಸುವ ಸ್ಥಳಗಳಿದ್ದು, ಇಲ್ಲಿ ವಾರಕ್ಕೊಂದುಅಪಘಾತ ಪಕ್ಕಾ ಎನ್ನುವಂತಾಗಿದೆ. ಧಾರವಾಡ ನಗರಕ್ಕೆ ಹೊಂದಿಕೊಂಡಿರುವ ಬೈಪಾಸ್‌ ಕ್ರಾಸ್‌ನಲ್ಲಿನ ತೀವ್ರ ತಿರುವು ಹೆಚ್ಚು ಅಪಘಾತಕ್ಕೆ ಕಾರಣವಾದ ಸ್ಥಳ. ಇನ್ನು ಸಲಕಿನಕೊಪ್ಪದ ಸಮೀಪದ ಬೈರಪ್ಪನ ಮಡ, ಏಳು ಕರೆವ್ವನ ತಿರುವು, ಬೇಡ್ತಿ ಹಳ್ಳ, ಟಿ.ಆರ್‌.ನಗರ ತಿರುವು, ಹೊಲ್ತಿಕೋಟೆ ಕ್ರಾಸ್‌, ಡೊಂಕಳ್ಳದ ತಿರುವು, ಮಾವಿನಕೊಪ್ಪ

ಹಳ್ಳ ಮತ್ತು ನಾಕಾ ಡೌನ್‌ ಸ್ಥಳಗಳು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿವೆ. ಈ ರಸ್ತೆಯಲ್ಲಿ ಕಾಯಂ ಸಂಚಾರಿಸುವ ಜನರು ಈ ಸ್ಥಳಗಳನ್ನು ನರಕದ ಹೆಬ್ಟಾಗಿಲು ಎಂದೇ ಕರೆಯುತ್ತಿದ್ದಾರೆ.ಈ ಹೆದ್ದಾರಿಯಲ್ಲಿ 18 ಕಿಮೀನಷ್ಟು ಮಾರ್ಗ ಅರಣ್ಯ ಪ್ರದೇಶದಲ್ಲಿದ್ದು, ಮಳೆಗಾಲದಲ್ಲಿ ತೀವ್ರ ಮಳೆಗೆ ರಸ್ತೆಯ ಅಂಚುಗಳು ಕೊರೆದುಕೊಂಡು ಹೋಗಿರುತ್ತವೆ. ಹೀಗಾಗಿ ವಾಹನ ಸವಾರರು ಕೊಂಚ ಎಡವಿದರೂ ಅಪಘಾತ ಖಚಿತ. ಇನ್ನು ರಸ್ತೆ ಸುರಕ್ಷತಾ ಫಲಕ, ವೇಗ ತಡೆಗೆ ರಸ್ತೆ ಉಬ್ಬುಗಳು, ರಸ್ತೆ ವಿಭಜಕಗಳು ಸೇರಿದಂತೆ ಹೆಚ್ಚು ಅಪಘಾತ ಸಂಭವಿಸುವ ಸ್ಥಳದಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳೇ ಇಲ್ಲ. ಇದು ಕೂಡ ಅಪಘಾತ ಹೆಚ್ಚಾಗಲುಪ್ರಮುಖ ಕಾರಣವಾಗಿದೆ.2017ರಲ್ಲಿ ಬೇಡ್ತಿ ಹಳ್ಳದ ಸಮೀಪ ಲಾರಿ ಮತ್ತು ತವೇರಾ ಮಧ್ಯೆ ಭೀಕರ ಅಪಘಾತ ಸಂಭವಿಸಿ 7 ಜನಮೃತಪಟ್ಟಿದ್ದರು. ಅದಾದ ನಂತರ ಪ್ರತಿವರ್ಷಕಬ್ಬು ಸಾಗಣೆ ಮಾಡುವ ವಾಹನಗಳು ಅಪಘಾತಕ್ಕಿಡಾಗುತ್ತಿದ್ದು, ಮುಗ್ಧ ರೈತರು ಸಾವನ್ನಪ್ಪುತ್ತಿದ್ದಾರೆ.

ಧಾರವಾಡ-ಹಳಿಯಾಳ ರಸ್ತೆ ಅಗಲೀಕರಣಕ್ಕೆ ಅನೇಕ ಬಾರಿ ಸಚಿವರಿಗೆ, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಇದು ಸುಸಜ್ಜಿತ ದ್ವಿಪಥದ ರಾಷ್ಟ್ರೀಯ ಹೆದ್ದಾರಿಯಾಗಬೇಕು. ಪ್ರವಾಸೋದ್ಯಮ ಮತ್ತು ಕೈಗಾರಿಕೆಗಳಿಂದಾಗಿ ವಾಹನದಟ್ಟಣೆ ತೀವ್ರವಾಗಿ ಅಪಘಾತಗಳು ಹೆಚ್ಚುತ್ತಿವೆ. ಕೂಡಲೇ ರಾಜ್ಯ ಸರ್ಕಾರ ಗಮನ ಹರಿಸಬೇಕು. –ಮಲ್ಲನಗೌಡ ಪಾಟೀಲ, ನಿಗದಿ ಗ್ರಾಮಸ್ಥ

ರಾಜ್ಯದಿಂದ ಅಭಿವೃದ್ಧಿಗಾಗಿ ಮನವಿ ಮಾಡಿಕೊಂಡಿದ್ದ ರಾಷ್ಟ್ರೀಯ ಹೆದ್ದಾರಿಗೆ ಮೇಲ್ದರ್ಜೆಗೆ ಏರಿಸುವ ಹೆದ್ದಾರಿಗಳ ಪಟ್ಟಿಯಲ್ಲಿ ರಾಜ್ಯಹೆದ್ದಾರಿ-28 ಇಲ್ಲ. ಹೀಗಾಗಿ ಸದ್ಯಕ್ಕೆ ಈ ರಸ್ತೆ ಮೇಲ್ದರ್ಜೆಗೇರುವುದು ಕಷ್ಟ.  ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಹಿರಿಯ ಅಧಿಕಾರಿ ಡಾ|ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next