Advertisement

10ರಿಂದ 10 ದಿನ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

02:27 PM Dec 02, 2021 | Team Udayavani |

ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2021 ಈ ಬಾರಿ ತಾಯಿ ಶೀರ್ಷಿಕೆಯೊಂದಿಗೆ ನಡೆಯಲಿದ್ದು, ನಾಟಕೋತ್ಸವ ವನ್ನು ಪದ್ಮಶ್ರೀ ಪುರಸ್ಕೃತರಾದ ವೃಕ್ಷಮಾತೆ ತುಳಸಿ ಗೌಡ ಉದ್ಘಾಟಿಸಲಿದ್ದಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಹೇಳಿದರು.

Advertisement

ಮೈಸೂರು ರಂಗಾಯಣದ ಬಿ.ವಿ. ಕಾರಂತ ರಂಗ ಚಾವಡಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಡಿ.10ರಿಂದ 19ರವರೆಗೆ ನಡೆಯುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಕನ್ನಡ ಸೇರಿದಂತೆ 12 ಭಾಷೆಗಳ 33 ನಾಟಕಗಳು ಪ್ರದರ್ಶನಗೊಳ್ಳಲಿವೆ. ಡಿ.11ರಂದು 5.30ಕ್ಕೆ ವನರಂಗ ವೇದಿಕೆಯಲ್ಲಿ ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ಖ್ಯಾತಿಯ ತುಳಸಿಗೌಡ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಚಲನಚಿತ್ರ ನಟಿ ಮಾಳವಿಕಾ ಅವಿನಾಶ್‌ ಆಶಯ ಭಾಷಣ ಮಾಡಲಿದ್ದಾರೆ.

ಎಲ್ಲಾ ನಾಟಕಗಳು ಭೂಮಿಗೀತ, ಕಲಾಮಂದಿರ, ವನರಂಗ, ಬಿ.ವಿ.ಕಾರಂತ ರಂಗಚಾವಡಿ, ಸಂಪತ್‌ ರಂಗ ಮಂದಿರ, ಕಿಂದರ ಜೋಗಿ ಜನಪದರಂಗದಲ್ಲಿ ಪ್ರದರ್ಶನಗೊಳ್ಳಲಿವೆ ಎಂದರು. ವಿವಿಧ ರಾಜ್ಯಗಳ, ವಿವಿಧ ಭಾಷೆಗಳ ಶ್ರೇಷ್ಠ ನಾಟಕಗಳು ಪ್ರದರ್ಶನಗೊಳ್ಳುವುದರೊಂದಿಗೆ ಜಾನಪದ ಕಲಾ ಪ್ರದರ್ಶನ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ವಿಚಾರ ಸಂಕಿರಣ, ಪುಸ್ತಕ ಪ್ರದರ್ಶನ, ಕರಕುಶಲ ವಸ್ತು ಪ್ರದರ್ಶನ, ಪ್ರಾತ್ಯಕ್ಷಿಕೆ ಸೇರಿದಂತೆ ಹಲವು ಕಾರ್ಯಕ್ರಮಗಳು ಈ ಬಾರಿಯ ನಾಟಕೋತ್ಸವದಲ್ಲಿ ಇರಲಿದೆ ಎಂದರು.

12 ಭಾಷೆಯ 33 ನಾಟಕ ಪ್ರದರ್ಶನ: ನಾಟಕೋತ್ಸವದಲ್ಲಿ ಕನ್ನಡದ 21, ಹಿಂದಿಯ 2, ಇಂಗ್ಲಿಷ್‌, ಪಂಜಾಬಿ, ಒರಿಯಾ, ಮರಾಠಿ, ಮಲಯಾಳಂ, ತೆಲುಗು, ರಾಜಸ್ಥಾನಿ, ತಮಿಳು, ತುಳು, ಕೊಂಕಣಿಯ ತಲಾ ಒಂದು ನಾಟಕ ಪ್ರದರ್ಶನ ಗೊಳ್ಳಲಿದೆ. ಜತೆಗೆ ಸಲಾಕೆ ಗೊಂಬೆಯಾಟ, ತೊಗಲು ಗೊಂಬೆಯಾಟ, ಯಕ್ಷಗಾನ, ಬಯಲಾಟ, ದೊಡ್ಡಾಟ, ತಾಳಮದ್ದಲೆಯೂ ಇರಲಿದೆ ಎಂದು ತಿಳಿಸಿದರು.

ಜಾನಪದ ಕಲಾ ಮೆರುಗು: ಈ ಬಾರಿಯ ನಾಟಕೋತ್ಸವದಲ್ಲಿ ಜಾನಪದ ಕಲೆಗಳಿಗೆ ಹೆಚ್ಚು ಆದ್ಯತೆ ನೀಡಿದ್ದು, ಡಿ.10ರಂದು ಜನಪದ ರಂಗ ವೇದಿಕೆಯಲ್ಲಿ ಸಂಜೆ 5.30ಕ್ಕೆ ಜನಪದೋತ್ಸವಕ್ಕೆ ಚಾಲನೆ ಸಿಗಲಿದೆ. ಇದರಲ್ಲಿ ವಿವಿಧ ಜಿಲ್ಲೆಗಳ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ ಎಂದರು.

Advertisement

ವಿಚಾರ ಸಂಕಿರಣ, ಭಾಷಣ ಸ್ಪರ್ಧೆ: ನಾಟಕೋತ್ಸವದಲ್ಲಿ ವಿಚಾರ ಸಂಕಿರಣ ಮತ್ತು ಭಾಷಣ ಸ್ಪರ್ಧೆಯನ್ನು ಡಿ.12, 13ರಂದು ಆಯೋಜಿಸಲಾಗಿದ್ದು, 12ರಂದು ಬೆಳಗ್ಗೆ 10.30ಕ್ಕೆ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ನಡೆಯುವ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ನಾ.ಡಿಸೋಜ ಉದ್ಘಾಟಿಸಲಿದ್ದಾರೆ. ಲೇಖಕಿ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ, ಚೂಡಾರತ್ನಮ್ಮ, ದಕ್ಷಿಣಾಮೂರ್ತಿ ಭಾಗವಹಿಸಲಿದ್ದಾರೆ.

ಅಂದು ಮಧ್ಯಾಹ್ನ 12.15ರಿಂದ 1.30ರವರೆಗೆ ಸೃಜನಶೀಲತೆ ಮತ್ತು ತಾಯ್ತನದ ಕುರಿತು ಗೋಷ್ಠಿ ನಡೆಯಲಿದ್ದು, ರಂಗಕರ್ಮಿ ಅಭಿರುಚಿ ಚಂದ್ರು, ಹಿರಿಯ ಕವಯತ್ರಿ ಭುವನೇಶ್ವರಿ ಹೆಗಡೆ ವಿಷಯ ಮಂಡಿಸಲಿದ್ದಾರೆ. ಎಚ್‌.ಎಸ್‌. ವೆಂಕಟೇಶಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 2.30ರಿಂದ 4.30ರವರೆಗೆ 2ನೇ ಗೋಷ್ಠಿ ನಡೆಯಲಿದ್ದು, ರೈತ ಮತ್ತು ತಾಯ್ತನದ ಕುರಿತು ಪತ್ರಕರ್ತ ಅಂಶಿ ಪ್ರಸನ್ನ, ಲೇಖಕಿ ಕೆ.ರಾಜಲಕ್ಷ್ಮೀ ವಿಷಯ ಮಂಡಿಸಲಿದ್ದಾರೆ. ಕರ್ನಾಟಕ ಸಾವಯವ ಕೃಷಿ ಮಿಷನ್‌ ಅಧ್ಯಕ್ಷ ಡಾ.ಆ.ಶ್ರೀ.ಆನಂದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಇದನ್ನೂ ಓದಿ;- ಪರಿಷತ್ ಪ್ರಚಾರದಿಂದ ದೂರ : ಕಾರಣ ತಿಳಿಸಿದ ಸಂಸದ ಅನಂತಕುಮಾರ‌ ಹೆಗಡೆ

ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಡಿ.13ರಂದು ಭಾಷಣ ಸ್ಪರ್ಧೆ ಆಯೋಜಿಸಲಾಗಿದ್ದು, 5 ನಿಮಿಷದ ಭಾಷಣದಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ರಂಗಾಯಣ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ, ನಾಟಕೋತ್ಸವದ ಮುಖ್ಯ ಸಂಚಾಲಕ ಅಂಜು ಸಿಂಗ್‌, ಹಿರಿಯ ಕಲಾವಿದ ರಾಮನಾಥ್‌, ಗೀತಾ ಮೊಂಡಡ್ಕ, ಪ್ರಶಾಂತ್‌, ಮಹೇಶ್‌ ಹಿರೇಮಠ ಹಾಜರಿದ್ದರು.

ಟಾಂಗಾದಲ್ಲಿ ಪೋಸ್ಟರ್‌ ಬಿಡುಗಡೆ

ಈ ಬಾರಿಯ ನಾಟಕೋತ್ಸವವನ್ನು ತಾಯಿ ಶೀರ್ಷಿಕೆಯಲ್ಲಿ ಆಯೋಜಿಸಿರುವುದರಿಂದ ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯತೆ ನೀಡುವ ಹಿನ್ನೆಲೆಯಲ್ಲಿ ನಾಟಕೋತ್ಸವದ ಪೋಸ್ಟರನ್ನು ವಿಶೇಷವಾಗಿ ಬಿಡುಗಡೆ ಮಾಡಲಾಯಿತು. ಟಾಂಗಾ ಗಾಡಿಯಲ್ಲಿ ಪೋಸ್ಟರ್‌ ಹಿಡಿದು ಬಂದ ರಂಗಾಯಣದ ಮಹಿಳಾ ಕಲಾವಿದರು ಬಹುರೂಪಿ ನಾಟಕೋತ್ಸವದ ಪೋಸ್ಟರ್‌ ಬಿಡುಗಡೆ ಮಾಡಿದರು.

 ಡಿ.11ರಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಡಿ.11ರಿಂದ 18ರವರೆಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲಾಗಿದ್ದು, ತಾಯಿ ಶೀರ್ಷಿಕೆಯಡಿ ಚಿತ್ರಗಳು ಪ್ರದರ್ಶನವಾಗಲಿದೆ. ಚಲನಚಿತ್ರೋತ್ಸವವನ್ನು ಚಲನಚಿತ್ರನಟ ಸುರೇಸ್‌ ಹೆಬ್ಳೀಕರ್‌ ಉದ್ಘಾಟಿಸಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ, ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್‌ ಪುರಾಣಿಕ್‌ ಭಾಗವಹಿಸಲಿದ್ದಾರೆ. ಉತ್ಸವದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್‌, ಪ್ರಂಚ್‌, ಇಟಾಲಿಯನ್‌, ರಷ್ಯನ್‌, ಬೆಂಗಾಲಿ ಸೇರಿದಂತೆ ಯುಕೆ, ಪ್ರಾನ್ಸ್‌, ರಷ್ಯ, ದಕ್ಷಿಣಕೊರಿಯಾ, ಕಜಕೀಸ್ತಾನ್‌ ದೇಶಗಳ ವಿವಿಧ ಭಾಷೆಯ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಕರಕುಶಲ, ಪುಸ್ತಕ, ಆಹಾರ ಮೇಳ

ಕೊರೊನಾ ಸೋಂಕು ಹಿನ್ನೆಲೆ ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಡಿಸೆಂಬರ್‌ನಲ್ಲಿ ನಡೆಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕರಕುಶಲ ಮೇಳ, ಪುಸ್ತಕ ಮಾರಾಟ ಮತ್ತು ಪ್ರದರ್ಶನ ಹಾಗೂ ಆಹಾರ ಮೇಳವನ್ನು ಆಯೋಜಿಸಲಾಗುತ್ತಿದೆ. ಪುಸ್ತಕ ಮೇಳಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕೊರೊನಾ ಸೋಂಕು ಹಿನ್ನೆಲೆ ನಾಟಕೋತ್ಸವಕ್ಕೆ ಭಾಗಿಯಾಗುವ ಕಲಾವಿದರು, ಪ್ರೇಕ್ಷಕರು ಸೇರಿದಂತೆ ಎಲ್ಲರಿಗೂ ಎರಡು ಬಾರಿ ವ್ಯಾಕ್ಸಿನ್‌ ಆಗಿರಬೇಕು. ಜೊತೆಗೆ ಆರ್‌ಟಿಪಿಸಿ ಟೆಸ್ಟ್‌ ಕಡ್ಡಾಯ ಎಂದು ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next