Advertisement

“ಪ್ರಜ್ಞಾ’ವಂತಿಕೆಯಿಂದ ಕೂಡಿರಲಿ ಮಾತು

10:05 PM Nov 29, 2019 | mahesh |

ವಿವಾದಾತ್ಮಕ ಹೇಳಿಕೆ ನೀಡಿದ ಪ್ರಜ್ಞಾಗೆ ರಕ್ಷಣಾ ಸಮಿತಿಯಿಂದ ಕೊಕ್‌ ಕೊಟ್ಟದ್ದು ಬರೀ ಲಘು ಶಿಕ್ಷೆಯಾಯಿತು. ಇದು ಪುನರಾವರ್ತನೆಯಾಗುವುದನ್ನು ತಡೆಯಲು ಕಠಿನ ನಿರ್ಧಾರ ಕೈಗೊಳ್ಳುವುದು ಅಗತ್ಯ.

Advertisement

ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌ ಮತ್ತೂಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಗುರುವಾರ ಸಂಸತ್ತಿನಲ್ಲಿ ಮಾತನಾಡುವಾಗ ಗಾಂಧೀಜಿಯನ್ನು ಹತ್ಯೆ ಮಾಡಿರುವ ನಾಥೂರಾಂ ಗೋಡ್ಸೆಯನ್ನು “ದೇಶ ಭಕ್ತ’ ಎಂದು ಕರೆದಿರುವುದು ವಿವಾದಕ್ಕೆ ಕಾರಣವಾದ ವಿಷಯ. ವಿಪಕ್ಷಗಳು ಭಾರೀ ಪ್ರತಿಭಟನೆ ನಡೆಸಿದ ಬಳಿಕ ಪ್ರಜ್ಞಾ ತನ್ನ ಹೇಳಿಕೆಗೆ ಕ್ಷಮೆ ಯಾಚಿಸುವುದರೊಂದಿಗೆ ಸದ್ಯಕ್ಕೇನೋ ಈ ವಿವಾದ ತಣ್ಣಗಾಗಬಹುದು. ಆದರೆ ಈ ಮಾದರಿಯ ಘಟನೆಗಳು ಇಲ್ಲಿಗೆ ಮುಗಿಯಬಹುದು ಎಂದು ಹೇಳುವಂತಿಲ್ಲ. ಸಾರ್ವಜನಿಕ ಬದುಕಿನಲ್ಲಿರುವವರು ಮಾತು ಮತ್ತು ಕೃತಿಯಲ್ಲಿ ಘನತೆಯನ್ನು ಕಳೆದುಕೊಂಡಾಗಲೆಲ್ಲ ಇಂಥ ವಿವಾದಗಳು ಭುಗಿಲೇಳುತ್ತಾ ಇರುತ್ತವೆ.

ಪ್ರಜ್ಞಾ ಸಿಂಗ್‌ ಈ ಮಾದರಿಯ ವಿವಾದಗಳನ್ನು ಸೃಷ್ಟಿಸುತ್ತಿರುವುದು ಇದೇ ಮೊದಲೇನಲ್ಲ. ಲೋಕಸಭೆ ಚುನಾವಣಾ ಪ್ರಚಾರ ಸಂದರ್ಭದಲ್ಲೇ ಅವರು ಗೋಡ್ಸೆಯನ್ನು ದೇಶ ಭಕ್ತ ಎಂದು ಕರೆದಿರುವುದು ವಿವಾದಕ್ಕೆಡೆ ಮಾಡಿಕೊಟ್ಟಿತ್ತು. ಅನಂತರ ಮುಂಬಯಿ ಪೊಲೀಸ್‌ ಅಧಿಕಾರಿ ಹೇಮಂತ್‌ ಕರ್ಕರೆ ತನ್ನ ಶಾಪದಿಂದಲೇ ಹತ್ಯೆಯಾದರು ಎಂದು ಇನ್ನೊಂದು ವಿವಾದವನ್ನು ಸೃಷ್ಟಿಸಿದ್ದರು. ಪ್ರಜ್ಞಾ ಸಿಂಗ್‌ ಆರೋಪಿಯಾಗಿದ್ದ ಮಾಲೇಗಾಂವ್‌ ಬಾಂಬ್‌ ಸ್ಫೋಟ ಪ್ರಕರಣದ ತನಿಖೆ ನಡೆಸಿದ ಅಧಿಕಾರಿ ಕರ್ಕರೆ. ಪ್ರಜ್ಞಾ ಬಂಧನಕ್ಕೊಳಗಾಗಲು ಅವರು ಕಾರಣರಾಗಿದ್ದರು.

ಚುನಾವಣೆ ಸಂದರ್ಭದಲ್ಲಿ ಪ್ರಜ್ಞಾ ಹೇಳಿಕೆಗಳಿಂದ ಬಿಜೆಪಿ ಅನೇಕ ಬಾರಿ ಮುಜುಗರವನ್ನು ಅನುಭವಿಸಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ “ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿರುವವರನ್ನು ನಾನು ಕ್ಷಮಿಸುವುದಿಲ್ಲ’ ಎಂದು ಹೇಳಿದ್ದರು. ಅಧ್ಯಕ್ಷ ಅಮಿತ್‌ ಶಾ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡದಂತೆ ತಾಕೀತು ಮಾಡಿದ್ದರು. ಇದರ ಹೊರತಾಗಿಯೂ ಪ್ರಜ್ಞಾ ಸಿಂಗ್‌ ಇದೀಗ ಸಂಸತ್ತಿನಲ್ಲೇ ಹಿಂದಿನ ತಪ್ಪನ್ನು ಪುನರಾವರ್ತಿಸಿರುವುದು ಏನನ್ನು ಹೇಳುತ್ತದೆ? ಅವರು ಪಕ್ಷವನ್ನು ಮೀರಿ ಬೆಳೆದಿದ್ದಾರೆಯೇ ಅಥವಾ ಪಕ್ಷದ ಉನ್ನತ ನಾಯಕರನ್ನೇ ಗಣನೆಗೆ ತೆಗೆದುಕೊಳ್ಳುತ್ತಿಲ್ಲವೆ?

ಪ್ರಜ್ಞಾ ಸಿಂಗ್‌ಗೆ ಭೋಪಾಲದಿಂದ ಸ್ಪರ್ಧಿಸಲು ಟಿಕೆಟ್‌ ನೀಡಿದ್ದೇ ಅನೇಕ ಅಚ್ಚರಿಗಳಿಗೆ ಕಾರಣವಾಗಿತ್ತು. ಆರೋಪ ಹೊತ್ತವರು ಚುನಾವಣೆಯಲ್ಲಿ ಸ್ಪರ್ಧಿಸುವುದು ಹೊಸದಲ್ಲ. ಚುನಾವಣಾ ನಿಯಮಗಳೂ ಆರೋಪ ಸಾಬೀತಾದರೆ ಮಾತ್ರ ಚುನಾವಣೆಯಿಂದ ಸ್ಪರ್ಧಿಸುವುದನ್ನು ನಿರ್ಬಂಧಿಸುತ್ತದೆ. ಬಾಂಬ್‌ ಸ್ಫೋಟ ಪ್ರಕರಣದಲ್ಲಿ ನ್ಯಾಯಾಲಯ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರನ್ನು ಖುಲಾಸೆಗೊಳಿಸಿದೆ. ಆದರೆ ಹೀಗೊಂದು ಗಂಭೀರ ಆಪಾನೆಗೊಳಗಾದ ವ್ಯಕ್ತಿಯನ್ನೇ ಆರಿಸಿ ಟಿಕೇಟ್‌ ನೀಡಿದ ಹಿಂದಿನ ಉದ್ದೇಶ ಏನಿತ್ತು ಎನ್ನುವುದನ್ನು ಪಕ್ಷದ ನಾಯಕರು ಇನ್ನೂ ಬಹಿರಂಗಪಡಿಸಿಲ್ಲ.

Advertisement

ಹಿಂದಿನ ಅವಧಿಯಲ್ಲೂ ನಾಯಕರ ಲಗಾಮಿಲ್ಲದ ಮಾತುಗಳಿಂದ ಪಕ್ಷ ಮತ್ತು ಸರಕಾರ ಅನೇಕ ಸಲ ಮುಜುಗರದ ಪ್ರಸಂಗಗಳನ್ನು ಎದುರಿಸಿತ್ತು. ಈ ಪೈಕಿ ಕೆಲವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಸಿಗಲಿಲ್ಲ. ಉಳಿದವರು ಮೋದಿಯ ಕಟ್ಟುನಿಟ್ಟಿನ ಸೂಚನೆಗಳನ್ನನುಸರಿಸಿ ತಮ್ಮ ನಾಲಗೆಗೆ ಲಗಾಮು ಹಾಕಿಕೊಂಡಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ಈ ಮಾದರಿಯ ವಿವಾದಗಳು ಕಡಿಮೆಯಾಗಿರುವುದನ್ನು ಗಮನಿಸಬಹುದು. ಆದರೆ ಪ್ರಜ್ಞಾ ಸಿಂಗ್‌ ಒಬ್ಬರೇ ಈಗ ವಿವಾದಗಳಿಗೆ ಕಾರಣವಾಗುತ್ತಿದ್ದಾರೆ. ಪ್ರಜ್ಞಾ ಇನ್ನೂ ಯುವ ಸಂಸದೆ. ರಾಜಕೀಯದಲ್ಲಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಇದು ಸಾಧ್ಯವಾಗಬೇಕಾದರೆ ಅವರು ತಮ್ಮ ಮಾತುಗಳಿಗೆ ಸಂಯಮದ ಲಗಾಮು ತೊಡಿಸಬೇಕು. ಸಂಸತ್ತಿನಲ್ಲಿ ಮಾತನಾಡುವುದು ಬೇರೆ, ಸಂಸತ್ತಿನ ಹೊರಗೆ ಮಾತನಾಡುವುದು ಬೇರೆ ಎಂಬ ಪ್ರಜ್ಞಾವಂತಿಕೆ ಅವರಿಗಿರಬೇಕು. ಪ್ರಜ್ಞಾ ಸಿಂಗ್‌ ಎಂದಲ್ಲ ಸಂಸತ್ತಿನಂಥ ಘನವೆತ್ತ ಸ್ಥಳದಲ್ಲಿ ಪ್ರತಿಯೊಂದು ಶಬ್ದವನ್ನೂ ಅಳೆದು ತೂಗಿ ನೋಡಿ ಆಡಬೇಕು. ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ರಕ್ಷಣಾ ಸಮಿತಿಯಿಂದ ಕೊಕ್‌ ಕೊಟ್ಟದ್ದು ಬರೀ ಲಘು ಶಿಕ್ಷೆಯಾಯಿತು. ಬಿಜೆಪಿ ನಾಯಕತ್ವ ಇಂಥ ವಿವಾದಗಳು ಪುನರಾವರ್ತನೆಯಾಗುವುದನ್ನು ತಡೆಯಲು ತುಸು ಕಠಿನ ನಿರ್ಧಾರ ಕೈಗೊಳ್ಳುವುದು ಅಗತ್ಯ.

ಇದೇ ವೇಳೆ ಸಂಸದರೊಬ್ಬರನ್ನು ಭಯೋತ್ಪಾದಕಿ ಎಂದು ಕರೆದದ್ದು ಕೂಡ ಗೋಡ್ಸೆಯನ್ನು ರಾಷ್ಟ್ರಭಕ್ತ ಎಂದ ಕರೆದಷ್ಟೇ ಗಂಭೀರವಾದ ತಪ್ಪು ಆಗುತ್ತದೆ. ಆರೋಪ ಮುಕ್ತಿ ಹೊಂದಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದಿರುವ ಸಂಸದೆಯನ್ನು ಭಯೋತ್ಪಾದಕಿ ಎನ್ನುವುದು ಪರೋಕ್ಷವಾಗಿ ಅವರನ್ನು ಆರಿಸಿದ ಜನರಿಗೆ ಮಾಡಿದ ಅವಮಾನವೂ ಹೌದು. ಈ ಹೇಳಿಕೆಯನ್ನು ಹಿಂದೆಗೆದುಕೊಳ್ಳುವುದಿಲ್ಲ ಎಂದು ಹೇಳುವುದು ಮೊಂಡುತನವಾಗುತ್ತದೆ. ಮಾನದಂಡ ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next