ಉಡುಪಿ: ಖಾಸಗಿ ಬಸ್ ಮಾಲಕರಿಂದ ನರ್ಮ್ ಬಸ್ಗೆ ಯಾವುದೇ ತೊಂದರೆಯಾಗಿಲ್ಲ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ಕೆ. ರಾಜವರ್ಮ ಬಲ್ಲಾಳ್ ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಖಾಸಗಿ ಬಸ್ ಮಾಲಕರು ನರ್ಮ್ ಬಸ್ಗಳಿಗೆ ತಡೆಯಾಜ್ಞೆ ತಂದಿರುವುದು ಖಂಡನೀಯ ಎಂದಿದ್ದಾರೆ. ಇದು ದುರದೃಷ್ಟಕರ. ಸಚಿವರಲ್ಲಿ ಸಂಘದ ನಿಯೋಗ ಹೋಗಿ ಬಸ್ ವ್ಯವಸ್ಥೆ ಇಲ್ಲದ ಊರಿಗೆ ನರ್ಮ್ ಬಸ್ ಹಾಕಿ. ಪ್ರಯಾಣಿಕರಿಗೂ ಅನುಕೂಲ. ಖಾಸಗಿ ಉದ್ಯಮವೂ ಬೆಳೆಯುತ್ತದೆ ಎಂದು ಹಲವು ಬಾರಿ ವಿನಂತಿಸಿದ್ದೆವು. ಆದರೆ ಬಸ್ ಇಲ್ಲದ ಊರುಗಳಿಗೆ ಕೇವಲ ಒಂದೆರಡು ಬಸ್ ಹಾಕಿದ್ದು ಬಿಟ್ಟರೆ ಬೇರೆಲ್ಲಾ ಬಸ್ಗಳನ್ನು ಹೆಚ್ಚು ಬಸ್ ಇರುವ ಊರುಗಳಿಗೆ ಬಿಟ್ಟಿರುವ ಹಿಂದಿನ ಉದ್ದೇಶ ಅರ್ಥವಾಗುತ್ತಿಲ್ಲ. ಉದಾಹರಣೆಗೆ ಕುಂದಾಪುರದಿಂದ ಉಡುಪಿ-ಕಾರ್ಕಳಕ್ಕೆ ಐದು, ಹತ್ತು ನಿಮಿಷಕ್ಕೆ ಖಾಸಗಿ ಬಸ್ಗಳಿವೆ. ಇದೇ ಮಾರ್ಗದಲ್ಲಿ ನರ್ಮ್ ಬಸ್ ಆವಶ್ಯಕತೆ ಇದೆಯೆ? ಅದೂ ಕೂಡ ಒಂದೇ ಸಮಯದಲ್ಲಿ ಸಾಧ್ಯವೆ? ಎಂದು ಪ್ರಶ್ನಿಸಿದ್ದಾರೆ.
ಷರತ್ತು ಉಲ್ಲಂಘನೆಯಲ್ಲವೆ?
ನರ್ಮ್ ಕೇಂದ್ರ ಸರಕಾರದ ಯೋಜನೆಯಾಗಿದ್ದು ಬಸ್ ಸೌಕರ್ಯ ಇಲ್ಲದ ನಗರಗಳಿಗೆ ಮೂಲಸೌಕರ್ಯ ಒದಗಿಸುವ ಯೋಜನೆಯಾಗಿದೆ. ಆದರೆ ಕೆಎಸ್ಸಾರ್ಟಿಸಿಯವರು ಅಂತರ್ಜಿಲ್ಲೆ, ನಗರ ಪ್ರದೇಶ ಬಿಟ್ಟು ಹೊರಗೆ ಬಸ್ ಹಾಕುವುದು ಯೋಜನೆಯ ಷರತ್ತಿನ ಉಲ್ಲಂಘನೆಯಲ್ಲವೆ? ಸುಮಾರು ನೂರು ವರ್ಷ ಸಾರ್ವಜನಿಕರಿಗೆ ಸೇವೆ ನೀಡಿದ್ದೇವೆ. ತಪ್ಪುಗಳು ಇರಬಹುದು. ಆದರೆ ಏಕಾಏಕಿ ಈ ರೀತಿ ಮಾಡಿದರೆ ಒಂದೆರಡು ಬಸ್ನವರ ಪಾಡೇನು? ಎಂದು ಪ್ರಶ್ನಿಸಿರುವ ಬಲ್ಲಾಳ್ ಅವರು ನಾವು ಸದಾ ಮಾತುಕತೆಗೆ ಸಿದ್ಧ ಎಂದು ತಿಳಿಸಿದ್ದಾರೆ.