Advertisement

ನಿರ್ವಹಣೆ ಇಲ್ಲದೆ ಸೊರಗಿದ ಸೊರಕೆ ಕಿಂಡಿ ಅಣೆಕಟ್ಟು

05:25 AM Feb 07, 2019 | |

ನರಿಮೊಗರು : ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಅಂತರ್ಜಲ ವೃದ್ಧಿಗೆ ಪೂರಕವಾದ ಯೋಜನೆಯೊಂದು ಹಳ್ಳ ಹಿಡಿದಿದೆ. ಮುಂಡೂರು ಗ್ರಾ.ಪಂ. ವ್ಯಾಪ್ತಿಯ ಸರ್ವೆ ಗ್ರಾಮದ ಸೊರಕೆಯಲ್ಲಿ 20 ವರ್ಷಗಳ ಹಿಂದೆ 20 ಲಕ್ಷ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟು ಸದ್ಯ ಉಪಯೋಗ ಶೂನ್ಯವಾಗಿದೆ.

Advertisement

ಸುಮಾರು 35 ಮೀ. ಅಗಲ ಮತ್ತು 2 ಮೀಟರ್‌ ಎತ್ತರವಿರುವ ಈ ಅಣೆಕಟ್ಟು ಪ್ರಸ್ತುತ 2 ಕೋಟಿ ರೂ. ಮೌಲ್ಯದ ಯೋಜನೆಯಾಗಿದೆ. ನಿರ್ಮಾಣಗೊಂಡ 3 ವರ್ಷಗಳ ಕಾಲ ಹಲಗೆ ಹಾಕಲು ಆಸಕ್ತಿ ತೋರಿದ್ದ ಇಲಾಖೆ ನಿರ್ವಹಣೆಯ ವೆಚ್ಚ ಭರಿಸಿತ್ತು. ಅನಂತರ 17 ವರ್ಷಗಳ ಕಾಲ ಅಣೆಕಟ್ಟನ್ನು ನಿರ್ವಹಿಸುವ ಗೋಜಿಗೆ ಹೋಗಿಲ್ಲ. ಈ ನಡುವೆ ಅಣೆಕಟ್ಟೆಯ ಒಂದು ಬದಿಯ ತಡೆಗೋಡೆ ಕುಸಿದು ಹೋಗಿದೆ. ಹಲಗೆಗಳು ಶಿಥಿಲಗೊಂಡಿವೆ.

ಸ್ಥಳೀಯರ ಮುತುವರ್ಜಿ
ಮೂರು ವರ್ಷಗಳಿಂದ ಕಿಂಡಿ ಅಣೆೆಕಟ್ಟಿನ ಫಲಾನುಭವಿಗಳಲ್ಲಿ ಓರ್ವರಾದ ಜಿ.ಪಂ. ಮಾಜಿ ಸದಸ್ಯ ಸುರೇಶ್‌ ಕುಮಾರ್‌ ಸೊರಕೆ ಅವರು ವರ್ಷಕ್ಕೆ 25 ಸಾವಿರ ರೂ.ಗಳನ್ನು ವ್ಯಯಿಸಿ ಶಿಥಿಲಗೊಂಡಿರುವ ಹಲಗೆಗೆ ಟಾರ್ಪಾಲ್‌ ಹೊದಿಸಿ ಹಲಗೆ ಅಳವಡಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಹಲಗೆಗಳು ಶಿಥಿಲಗೊಂಡಿರುವ ಕಾರಣ ಹಾಗೂ ಹೊಳೆಯ ಒಂದು ಬದಿಯಲ್ಲಿ ತಡೆಗೋಡೆ ಇಲ್ಲದೆ ಗರಿಷ್ಠ ಸಾಮರ್ಥ್ಯದ ತನಕ ನೀರು ಶೇಖರಣೆಯಾಗುತ್ತಿಲ್ಲ.

ಈ ಕುರಿತು ಹಲವು ವರ್ಷಗಳಿಂದ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡುತ್ತಿರುವ ಸುರೇಶ್‌ ಕುಮಾರ್‌ ಸೊರಕೆ, ಹೊಸ ಮಾದರಿಯ ಹಲಗೆಗಳನ್ನು ನೀಡುವಂತೆಯೂ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಹಾಗೂ ಇತರ ದುರಸ್ತಿ ಕಾರ್ಯ ಮಾಡುವಂತೆಯೂ ಇಲಾಖೆಗೆ ಮನವಿ ಮಾಡಿದ್ದರು.

ಟೆಂಡರ್‌ ಆಗಿದ್ದರೂ ನಡೆದಿಲ್ಲ ಕಾಮಗಾರಿ!
ತಡೆಗೋಡೆ ನಿರ್ಮಾಣಕ್ಕೆ 2017ರಲ್ಲಿ ಟೆಂಡರ್‌ನಲ್ಲಿ ಕಾಮಗಾರಿಯ ಗುತ್ತಿಗೆ ಪಡೆದುಕೊಂಡವರು ಈವರೆಗೂ ಕಾಮಗಾರಿಯನ್ನು ಪ್ರಾರಂಭಿಸಿಲ್ಲ. ಕೇವಲ ನೋಟಿಸ್‌ಗಳನ್ನು ಜಾರಿ ಮಾಡಿ ಸುಮ್ಮನಾಗಿರುವ ಇಲಾಖೆ ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಿಂಡಿ ಅಣೆಕಟ್ಟಿನಲ್ಲಿ ಗರಿಷ್ಠ ಸಾಮರ್ಥ್ಯದ ವರೆಗೆ ನೀರು ನಿಂತರೆ ಒಲೆಮುಂಡೋವು ತನಕ 2 ಕಿ.ಮೀ. ಉದ್ದಕ್ಕೆ ನೀರು ಸಂಗ್ರಹಿಸುವ ಅವಕಾಶ ಇದೆ. ಸರ್ವೆ ಹಾಗೂ ಪುಣ್ಚಪ್ಪಾಡಿ ಗ್ರಾಮಗಳ ಅಂತರ್ಜಲ ಮಟ್ಟ ಸುಧಾರಣೆ ಆಗುವುದರಲ್ಲಿ ಸಂದೇಹವಿಲ್ಲ. 70 ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಸರ್ವೆಯ ವೆಂಕಟರಮಣ ಭಟ್ ಅವರು ತಾತ್ಕಾಲಿಕ ಕಟ್ಟೆ ನಿರ್ಮಾಣ ಮಾಡಿ ಸರ್ವೆಗೆ ಸೊರಕೆಯಿಂದ ನೀರನ್ನು ತಮ್ಮ ಕೃಷಿಗಾಗಿ ಸರಬರಾಜು ಮಾಡುತ್ತಿದ್ದರು.

Advertisement

ನಿರ್ಲಕ್ಷ್ಯದಿಂದ ಬೇಸರ
ಸರ್ವೆ, ಪುಣ್ಚಪ್ಪಾಡಿ ಗ್ರಾಮಗಳ ಅಂತರ್ಜಲ ವೃದ್ಧಿಗಾಗಿ ನಾನು ಜಿ.ಪಂ. ಸದಸ್ಯನಾಗಿದ್ದಾಗ ಅನುಷ್ಠಾನಗೊಂಡ ಈ ಯೋಜನೆಯನ್ನು ಉಳಿಸಿಕೊಳ್ಳಬೇಕೆನ್ನುವ ಆಸಕ್ತಿಯಿಂದ ಅಣೆಕಟ್ಟೆಯ ನಿರ್ವಹಣೆ ಮಾಡುತ್ತಿದ್ದೇನೆ. ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯ  ಭಾರಿ ಬೇಸರ ತಂದಿದೆ. 
– ಸುರೇಶ್‌ ಕುಮಾರ್‌ ಸೊರಕೆ,
ಜಿ.ಪಂ. ಮಾಜಿ ಸದಸ್ಯ

ಕಾಮಗಾರಿ ಆರಂಭಿಸಿಲ್ಲ
ಸುರೇಶ್‌ ಕುಮಾರ್‌ ಸೊರಕೆ ಅವರಿಗೆ 3 ವರ್ಷಗಳ ನಿರ್ವಹಣ ವೆಚ್ಚ ಪಾವತಿ ಮಾಡಿಲ್ಲ. ಪಾವತಿಸಲು ಕ್ರಮವನ್ನು ಕೈಗೊಳ್ಳಲಾಗುವುದು. ತಡೆ ಗೋಡೆ ಕಾಮಗಾರಿಗೆ 2 ವರ್ಷಗಳ ಹಿಂದೆ ಟೆಂಡರ್‌ ಆಗಿದೆ.
-ಆನಂದ ಭಂಜನ್‌,
ಎಂಜಿನಿಯರ್‌, ನೀರಾವರಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next