ಬೆಂಗಳೂರು :ಪ್ರಧಾನಿ ನರೇಂದ್ರ ಮೋದಿಯವರು 46 ತಿಂಗಳ ಆಡಳಿತಾವಧಿ ಪೂರೈಸಿದರೂ ದೇಶದ ಜನತೆಗೆ ಯಾವುದೇ ರೀತಿಯಲ್ಲೂ ಪ್ರಯೋಜನವಾಗಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಶಕೀಲ್ ಅಹ್ಮದ್ ಆರೋಪಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಧಾನಿ ಮೋದಿಯವರು 46 ತಿಂಗಳ ಆಡಳಿತ ಮುಗಿಸಿ¨ªಾರೆ. ಆದರೆ, ದೇಶದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ನೋಟ್ ಬ್ಯಾನ್ ಮೂಲಕ ಜನರಿಗೆ ಇನ್ನಷ್ಟು ಸಂಕಷ್ಟ ನೀಡಿದ್ದಾರೆ ಎಂದು ದೂರಿದರು.
ಗರಿಷ್ಠ ಮೌಲ್ಯದ ನೋಟು ರದ್ದತಿ ಮೂಲಕ ಭಯೋತ್ಪಾದನೆ ತಡೆಯುತ್ತೇವೆ ಎಂದಿದ್ದರು. ಆದರೆ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ಹೆಚ್ಚುತ್ತಲೇ ಇದೆ. ದೇಶದಲ್ಲಿ ನಕ್ಸಲ್ ಹಾವಳಿ ಅತಿಯಾಗುತ್ತಿದೆ. ಉಗ್ರರ ದಾಳಿಯಿಂದ ಗಡಿಭಾಗದಲ್ಲಿ ಸೈನಿಕರನ್ನು ಕಳೆದುಕೊಳ್ಳುತ್ತಿದ್ದೇವೆ ಹಾಗೂ ನಾಗರಿಕರೂ ಬಲಿಯಾಗುತ್ತಿದ್ದಾರೆ. ಒಟ್ಟಿನಲ್ಲಿ ಭಯೋತ್ಪಾದನೆ ನಿಗ್ರಹದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.
ಡೊಕ್ಲಾಮ್ನಲ್ಲಿ ಚೈನಾ ದೇಶದ ಸೇನೆ ಭೂ ಅತಿಕ್ರಮಣ ಮಾಡಿದೆ. ನಮ್ಮ ದೇಶದ ಗಡಿಭಾಗವನ್ನು ಅತಿಕ್ರಮಣ ಮಾಡಿಕೊಳ್ಳುತ್ತಿದ್ದರೂ, ಪ್ರತಿಕಾರ ಏನೂ ನಡೆಯುತ್ತಿಲ್ಲ. ನಮ್ಮ ಗಡಿಯೊಳಗೆ ಬಂಕರ್, ರಸ್ತೆ, ಬಿಲ್ಡಿಂಗ್ ಮಾಡಿಕೊಂಡಿದೆ. ಹೀಗಿದ್ದರೂ ಪ್ರಧಾನಿ ಮೋದಿ ಚೀನಾಗೆ ಭೇಟಿ ಕೊಟ್ಟಿದ್ದಾರೆ. ಇನ್ನೊಂದೆಡೆ ಪಾಕ್ ಅತಿಕ್ರಮಣಕ್ಕೆ ಮುಂದಾಗಿದೆ. ಇದೆಲ್ಲವನ್ನೂ ಹತ್ತಿಕ್ಕಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು.
ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ಅತ್ಯಾಚಾರ ಮಾಡಿದ ಆರೋಪವು ಬಿಜೆಪಿ ಶಾಸಕನ ಮೇಲಿದ್ದರೂ, ಯಾವುದೇ ಕ್ರಮ ತೆಗೆದುಕೊಂಡಿಲ್ಲ. ತಮ್ಮ ಶಾಸಕನನ್ನು ರಕ್ಷಿಸುವ ಕೆಲಸ ಮಾಡುತ್ತಾರೇ ಹೊರತು, ದೌರ್ಜನ್ಯಕ್ಕೆ ಒಳಗಾದ ಕುಟುಂಬದ ಬಗ್ಗೆ ಬಿಜೆಪಿ ನಾಯಕರು ತುಟಿ ಬಿಚ್ಚುತ್ತಿಲ್ಲ ಎಂದು ಆರೋಪಿಸಿದರು.