Advertisement

ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ

07:20 AM Sep 13, 2017 | Harsha Rao |

ನವದೆಹಲಿ: ದಸರಾ ಸಂಭ್ರಮಕ್ಕೆ ಮೊದಲೇ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. 50 ಲಕ್ಷ ಸರ್ಕಾರಿ ನೌಕರರು ಹಾಗೂ 61 ಲಕ್ಷ ಪಿಂಚಣಿದಾರರ ತುಟ್ಟಿಭತ್ಯೆ ಹಾಗೂ ತುಟ್ಟಿಭತ್ಯೆ ಪರಿಹಾರವನ್ನು ಶೇ.1ರಷ್ಟು ಹಾಗೂ ಶೇ.5ವರೆಗೆ ಹೆಚ್ಚಿಸಿ ಕೇಂದ್ರ ಸಚಿವ ಸಂಪುಟ ಮಂಗಳವಾರ ನಿರ್ಣಯ ಕೈಗೊಂಡಿದೆ.

Advertisement

ಸಚಿವ ಸಂಪುಟ ಪುನಾರಚನೆ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ಒಟ್ಟು 1.11 ಕೋಟಿ ಸರ್ಕಾರಿ ನೌಕರರು ಇದರ ಪ್ರಯೋಜನ ಪಡೆಯಲಿದ್ದಾರೆ. ದಿನಬಳಕೆ ವಸ್ತುಗಳ ದರ ಹೆಚ್ಚಳಕೆಕ ಅನುಗುಣವಾಗಿ ಈ ಹಿಂದೆ ಶೇ.4ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇ.5ಕ್ಕೆ ಹೆಚ್ಚಿಸಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಹೊಸ ದರ ಇದೇ ಜು.1ರಿಂದ ಅನ್ವಯವಾಗಲಿದೆ. ಈ ಮೂಲಕ ಸರ್ಕಾರಕ್ಕೆ ವಾರ್ಷಿಕ 3,068 ಕೋಟಿ ಹಾಗೂ 2017-18ನೇ ಸಾಲಿನಲ್ಲಿ ಸುಮಾರು 2,045 ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.

ಇತ್ತೀಚೆಗಷ್ಟೇ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಿರ್ಮಲಾ ಸೀತಾರಾಮನ್‌, ಪ್ರಧಾನಿ ನೇತೃತ್ವದ ರಕ್ಷಣೆಗೆ ಸಂಬಂಧಿಸಿದ ಸಂಪುಟ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ವರೊಂದಿಗೆ ರೈಲ್ವೆ ಸಚಿವ ಪಿಯೂಶ್‌ ಘೋಯಲ್‌ ಹಾಗೂ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ ಅವರೂ ಪ್ರಮುಖ ಸಮಿತಿಗಳಿಗೆ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಗ್ರಾಚುಟಿ ಮಿತಿ ದುಪ್ಪಟ್ಟು
ಇದೇ ವೇಳೆ ಗ್ರಾಚುಟಿ ಮಸೂದೆ ತಿದ್ದುಪಡಿಯನ್ನು ಅಂಗೀಕರಿಸಿರುವ ಸಂಪುಟ, ತೆರಿಗೆ ರಹಿತ ಗ್ರಾಚುಟಿ ಮಿತಿಯನ್ನು ದುಪ್ಪಟ್ಟು ಮಾಡಿ, 20 ಲಕ್ಷ ರೂ.ಗೆ ಹೆಚ್ಚಿಸಿದೆ. ಈ ತಿದ್ದುಪಡಿ ಪ್ರಕಾರ ಸಾರ್ವಜನಿಕ ಹಾಗೂ ಖಾಸಗಿ ವಲಯ ಮತ್ತು ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಗಳ, ಪಿಂಚಣಿ ನಿಯಮಗಳ ವ್ಯಾಪ್ತಿಗೆ ಒಳಪಡದ ನೌಕರರ ತೆರಿಗೆ ರಹಿತ ಗ್ರಾಚುಟಿಯ ಗರಿಷ್ಠ ಮಿತಿ 20 ಲಕ್ಷ ರೂ. ಆಗಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next