Advertisement

ನಗರ ಜಿಲ್ಲೆಯಲ್ಲಿ ನಡೆಯದ ನರೇಗಾ

10:27 AM Nov 29, 2019 | Suhan S |

ಬೆಂಗಳೂರು: ನರೇಗಾ ಯೋಜನೆ ಕೆಲಸಕ್ಕೆ ಬೆಂಗಳೂರು ನಗರ ಜಿಪಂ ವ್ಯಾಪ್ತಿಯ ಜನರು ಅಷ್ಟೊಂದು ಉತ್ಸಾಹ ತೋರುತ್ತಿಲ್ಲ. ಸಕಾಲಕ್ಕೆ ಸರಿಯಾಗಿ ಸರ್ಕಾರ ಜನರ ಬ್ಯಾಂಕ್‌ ಖಾತೆಗೆ ಹಣ ಹಾಕಿದರೂ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕೆಲಸಕ್ಕೆ ಗ್ರಾಮಸ್ಥರು ಆಸಕ್ತಿ ತೋರಿಸುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

Advertisement

ಉದ್ಯೋಗಕ್ಕಾಗಿ ವಲಸೆ ನಿಯಂತ್ರಣ, ಪರಿಸರ ಸಂರಕ್ಷಣೆ, ಸಾಮಾಜಿಕ ಸಮಾನತೆ ಉತ್ತೇಜಿಸುವುದು, ಗ್ರಾಮೀಣ ಮಹಿಳೆಯರ ಸಬಲೀಕರಣ, ಅರಣ್ಯಪ್ರದೇಶ ಹೆಚ್ಚಳ ಸೇರಿದಂತೆ ಹಲವು ಕಾರಣಕ್ಕಾಗಿಯೇಈ ಹಿಂದೆ ಯುಪಿಎ ಸರ್ಕಾರ 2006ರಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಜಾರಿಗೆ ತಂದಿತ್ತು.

ಈ ಯೋಜನೆಯಿಂದ ರಾಜ್ಯದ ಹಲವು ಭಾಗಗಳ ಜನರಿಗೆ ಅನುಕೂಲವಾಗಿದೆ. ಆದರೆ ನಗರ ಜಿಪಂವ್ಯಾಪ್ತಿಯ ಜನರು ಮಾತ್ರ ರಾಜ್ಯದ ಇತರೆ ಕಡೆಗಳಲ್ಲಿ ಈ ಕೆಲಸಕ್ಕೆ ತೋರಿದಷ್ಟು ಉತ್ಸಾಹ ತೋರುತ್ತಿಲ್ಲ. ನಗರ ಜಿಪಂ ವ್ಯಾಪ್ತಿಯಲ್ಲಿ ಅನೇಕಲ್‌, ಬೆಂಗಳೂರು ದಕ್ಷಿಣ, ಉತ್ತರ ಮತ್ತು ಪಶ್ಚಿಮ ತಾಲೂಕುಗಳಿವೆ. ಇವುಗಳ ವ್ಯಾಪ್ತಿಗೆ ಸುಮಾರು 96 ಗ್ರಾಪಂಗಳು ಬರುತ್ತವೆ. ಈ ಎಲ್ಲಾ ಗ್ರಾಪಂಗಳು ಬೆಂಗಳೂರು ನಗರಕ್ಕೆ ಹೊಂದಿ ಕೊಂಡಿರುವ ಹಿನ್ನೆಲೆಯಲ್ಲಿ ಅಧಿಕ ಕೂಲಿ ನೀಡುವ ಕೆಲಸಗಳನ್ನು ಅರಸಿ ನಗರದತ್ತ ಮುಖ ಮಾಡುತ್ತಾರೆ. ಆ ಹಿನ್ನೆಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕೆಲಸದತ್ತ ಆಸಕ್ತಿ ತೋರುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಒಬ್ಬರಿಗೆ 249 ರೂ. ಕೂಲಿ: ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಒಬ್ಬ ವ್ಯಕ್ತಿಗೆ ದಿನಕ್ಕೆ 249 ರೂ.ದಿನ ಕೂಲಿ ನೀಡಲಾಗುತ್ತದೆ. ಪುರುಷರಷ್ಟೇ ಮಹಿಳೆಯರಿಗೂ ಸಮಾನ ವೇತನವಿದೆ. ಆದರೆ ಈ ಕೂಲಿ ನಗರ ಜಿಪಂ ವ್ಯಾಪ್ತಿಯ ನಿವಾಸಿಗಳಿಗೆ ಸಾಲದು. ಪ್ರತಿನಿತ್ಯ ನಗರ ಪ್ರದೇಶಕ್ಕೆ ಕೂಲಿಗಾಗಿ ತೆರಳುವ ಅವರು ದಿನಕ್ಕೆ ಸುಮಾರು 500 ರಿಂದ 600ರೂ.ವರೆಗೆ ಸಂಪಾದಿಸುತ್ತಾರೆ. ಹೀಗಾಗಿಯೇ ನರೇಗಾ ಕೆಲಸದಲ್ಲಿ ತೊಡಗಿಸಿಕೊಳ್ಳಲು ಅವರು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ನರೇಗಾ ಯೋಜನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

65 ಸಾವಿರ ಜನ ಮಾತ್ರ ಭಾಗಿ: ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಗರ ಜಿಪಂ ವ್ಯಾಪ್ತಿಯಲ್ಲಿ ವರ್ಷಕ್ಕೆ ಸುಮಾರು 1.3 ಲಕ್ಷ ಜನರಿಗೆಕೆಲಸ ನೀಡಬೇಕು. ಆದರೆ, ಈ ವರ್ಷ ಸುಮಾರು 65ಸಾವಿರ ಜನರು ಮಾತ್ರ ನರೇಗಾ ಕೆಲಸದಲ್ಲಿ ತೊಡಗಿ ಕೊಂಡಿದ್ದಾರೆ.

Advertisement

ಈ ಯೋಜನೆಯ ನಿಯಮದ ಪ್ರಕಾರ ಕೆಲಸಕ್ಕೆಜನರನ್ನು ಬಿಟ್ಟು ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಳ್ಳುವಂತಿಲ್ಲ. ಹೀಗಾಗಿ ಸಮಸ್ಯೆ ಎದುರಾಗಿದೆ ಎಂದು ಬೆಂಗಳೂರು ನಗರ ಜಿಪಂನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೂ ನರೇಗಾದಿಂದ 19 ಸಾವಿರ ರೂ.ನೀಡಲಾಗುತ್ತದೆ. ಆಕಾರ್ಯಕ್ಕೂ ಜನರು ಉತ್ಸಾಹ ತೋರುತ್ತಿಲ್ಲ. ಕೃಷಿ ಹೊಂಡ, ರಸ್ತೆ ರಿಪೇರಿ, ಅಂಗನವಾಡಿ ಮತ್ತು ಶಾಲೆಗಳಕಾಂಪೌಂಡ್‌ ದುರಸ್ತಿಗೂ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಲು ಹೆಚ್ಚಿನ ಒಲವು ತೋರುತ್ತಿಲ್ಲ ಎಂದು ತಿಳಿಸಿದ್ದಾರೆ.

ನರೇಗಾದಲ್ಲಿ ಯಾವೆಲ್ಲಾ ಕೆಲಸ: ನರೇಗಾ ಯೋಜನೆ ಅಡಿ ಹಳ್ಳಿಗಳಲ್ಲಿ ಕೆರೆ, ಗೋಕಟ್ಟೆ ಹೂಳೆತ್ತುವುದು. ಕೊಳವೆ ಬಾವಿ, ಚೆಕ್‌ ಡ್ಯಾಂ ನಿರ್ಮಾಣ, ಹೊಲಗಳಿಗೆ ಹೋಗುವ ದಾರಿ, ಕೃಷಿ ಹೊಂಡ, ಅಂಗನವಾಡಿ ಕೇಂದ್ರ, ಕೃಷಿ ಗೋದಾಮು, ಸ್ಮಶಾನ ಅಭಿವೃದ್ಧಿ, ಉದ್ಯಾನವನ, ಕಾಂಕ್ರಿಟ್‌ ರಸ್ತೆ ಅಭಿವೃದ್ಧಿಯಂತಹ ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಬಹುದಾಗಿದೆ. ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬದ ವಯಸ್ಕ ಜನರಿಗೆ ಕನಿಷ್ಠ 100 ದಿನಗಳ ಉದ್ಯೋಗ ಒದಗಿಸಿ ಅದಕ್ಕೆ ಸಮರ್ಪಕ ಕೂಲಿ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

 

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next