Advertisement

ಕುಡಿಯಲು ಎಡದಂಡೆ ಕಾಲುವೆಗೆ ನೀರು

03:04 PM Apr 26, 2019 | Team Udayavani |

ನಾರಾಯಣಪುರ: ನಾರಾಯಣಪುರ ಬಸವಸಾಗರ ಜಲಾಶಯದಿಂದ 1.50 ಟಿಎಂಸಿ ಅಡಿ ನೀರನ್ನು ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ (ಎನ್‌ಎಲ್ಬಿಸಿ) ಮೂಲಕ ಹರಿಸಲಾಗುತ್ತಿದೆ ಎಂದು ಅಣೆಕಟ್ಟು ಗೇಟ್ಸ್‌ ಉಪವಿಭಾಗದ ಎಇಇ ಆರ್‌.ಎಲ್. ಹಳ್ಳೂರ ತಿಳಿಸಿದ್ದಾರೆ.

Advertisement

ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಆಲಮಟ್ಟಿ ಮತ್ತು ನಾರಾಯಣಪುರ ವೃತ್ತಗಳ ಅಧೀಕ್ಷಕ ಅಭಿಯಂತರರೊಂದಿಗೆ ಸಭೆ ನಡೆಸಿ ತಾಂತ್ರಿಕ ಅಭಿಪ್ರಾಯ ಪಡೆದು ಆದೇಶ ಹೊರಡಿಸಲಾಗಿದೆ. ಆದೇಶದಲ್ಲಿ ಸೂಚಿಸಿದಂತೆ ಆಲಮಟ್ಟಿ ಜಲಾಶಯದಿಂದ ಜನ ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕೆ ನಾರಾಯಣಪುರ ಜಲಾಶಯಕ್ಕೆ ಹಾಗೂ ವಿವಿಧ ಏತ ನೀರಾವರಿ ಯೋಜನೆಗಳ ಕಾಲುವೆ ಜಾಲಗಳಡಿ ಬರುವ ಕೆರೆಗಳು, ಬಾಂದಾರುಗಳಿಗೆ ನೀರು ಹರಿಸಲಾಗುತ್ತಿದೆ. ಅದರಂತೆ ಏ.23ರಂದು ಬೆಳಗ್ಗೆ 11:00ರಿಂದ ಆಲಮಟ್ಟಿ ಜಲಾಶಯದಿಂದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ 6700 ಕ್ಯೂಸೆಕ್‌ ನೀರು ಹರಿಬಿಡಲಾಗಿದೆ. ಬಸವಸಾಗರಕ್ಕೆ ಹಿನ್ನೀರು ಹರಿದು ಬಂದ ಹಿನ್ನೆಲೆಯಲ್ಲಿ ಆದೇಶದಲ್ಲಿನ ಸೂಚನೆಯಂತೆ ಏ.24ರಂದು ಬೆಳಗ್ಗೆ 8:00ರಿಂದ ನಾರಾಯಣಪುರದ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲು ಆರಂಭಿಸಲಾಗಿದೆ ಎಂದು ಹಳ್ಳೂರ ತಿಳಿಸಿದ್ದಾರೆ.

ಶಾಖಾ ಕಾಲುವೆಗಳ ಮೂಲಕ ನೀರು: ಜಲಾಶಯ ಅವಲಂಬಿತ ನಗರ-ಪಟ್ಟಣಗಳಿಗೆ ಮುಖ್ಯ ಕಾಲುವೆ ಮೂಲಕ 1.50 ಟಿಎಂಸಿ ಅಡಿ ನೀರು ಹರಿಸಲು ನಿಗದಿ ಮಾಡಲಾದ ಪ್ರಮಾಣದಲ್ಲಿ ಅರ್ಧ ಟಿಎಂಸಿ ಅಡಿ ನೀರನ್ನು ಶಹಾಪುರ ಶಾಖಾ ಕಾಲುವೆ ಮೂಲಕ ಹರಿಸಲಾಗುತ್ತದೆ. ನಂತರದಲ್ಲಿ ಕಲಬುರಗಿ ನಗರಕ್ಕೆ ಅರ್ಧ ಟಿಎಂಸಿ ಅಡಿ ನೀರು ನಿಗದಿ ಮಾಡಲಾಗಿದೆ. ಅದನ್ನು ಜೇವರ್ಗಿ ಶಾಖಾ ಕಾಲುವೆ ಮೂಲಕ ಹರಿಸಲಾಗುತ್ತಿದೆ. ಉಳಿದಂತ ಅರ್ಧ ಟಿಎಂಸಿ ಅಡಿ ಇಂಡಿ ಶಾಖಾ ಕಾಲುವೆ ಮೂಲಕ ಬಳಗಾನೂರು ಕೆರೆಗೆ ನೀರು ಹರಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಕಾಲುವೆ ಜಾಲದ ಮೂಲಕ ಬಿಡುಗಡೆ ಮಾಡಲಾದ ನೀರನ್ನು ಕುಡಿಯುವ ನೀರಿನ ಉದ್ಧೇಶಕ್ಕೆ ಮಾತ್ರ ಬಳಸಬೇಕು. ಪೋಲಾಗದಂತೆ ಎಚ್ಚರವಹಿಸಬೇಕು ಎಂದು ಆದೇಶದಲ್ಲಿ ಉಲ್ಲೇಖೀಸಲಾಗಿದೆ.

ಜಲಾಶಯದ ಮಟ್ಟ: ಜಲಾಶಯದಲ್ಲಿ ಪ್ರಸ್ತುತ 16.09 ಟಿಎಂಸಿ ಅಡಿ ನೀರು ಸಂಗ್ರಹ ಇದೆ. ಆಲಮಟ್ಟಿ ಜಲಾಶಯದಿಂದ ಒಳಹರಿವು 6700 ಕ್ಯೂಸೆಕ್‌ ಇದೆ. ಹೊರಹರಿವು 1335 ಕ್ಯೂಸೆಕ್‌ (ಎಡದಂಡೆ ಮುಖ್ಯ ಕಾಲುವೆ) ಇದೆ.

Advertisement

Udayavani is now on Telegram. Click here to join our channel and stay updated with the latest news.

Next