Advertisement

ನಾರಾಯಣನ ಸೌಂಡು ಜೋರು

10:56 AM Jun 09, 2019 | Team Udayavani |

ಅಂತೂ ಬಹಳ ದಿನಗಳಿಂದಲೂ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ್ದ “ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಬಿಡುಗಡೆಯಾದ ಟೀಸರ್‌ಗೆ ಎಲ್ಲೆಡೆಯಿಂದಲೂ ಭರ್ಜರಿ ಮೆಚ್ಚುಗೆ ಸಿಕ್ಕಿದೆ. ಅವರ ಅಭಿಮಾನಿಗಳು ಟೀಸರ್‌ನಲ್ಲಿ ಏನೆಲ್ಲಾ ನಿರೀಕ್ಷೆ ಮಾಡಿದ್ದರೋ, ಅದಕ್ಕಿಂತ ಜಾಸ್ತಿಯೇ ಸಿಕ್ಕಿರುವುದರಿಂದ ಸಹಜವಾಗಿಯೇ ಅಭಿಮಾನಿಗಳಿಗೆ ಸಂತಸವಾಗಿದೆ.

Advertisement

ಟೀಸರ್‌ ನೋಡಿದ ಅಭಿಮಾನಿಗಳು, ಸಾಮಾಜಿಕ ತಾಣಗಳಲ್ಲಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಟೀಸರ್‌ ಶುರುವಾಗುತ್ತಿದ್ದಂತೆಯೇ “ನಾನ್‌ ಯಾವತ್ತೂ ನಿನ್ನಲ್ಲಿ ನನ್ನನ್ನು ನೋಡಿದ್ದೇನೆ ಜಯರಾಮ..’ ಎಂಬ ಡೈಲಾಗ್‌ ಶುರುವಾಗುತ್ತೆ. ಅದೊಂದು ರೀತಿಯ ಹೊಸ ವಿಶ್ಯುಯಲ್‌ನೊಂದಿಗೆ ನೋಡುಗರನ್ನು ಆಕರ್ಷಿಸುತ್ತದೆ.

ಅಲ್ಲಿಂದ ಇನ್ನೊಂದು ಹಂತಕ್ಕೆ ಕರೆದೊಯ್ಯುವ ಟೀಸರ್‌ನಲ್ಲಿ ಕೇಳಿಬರುವ ವಾಯ್ಸ ಓವರ್‌ನಲ್ಲಿ ಹಲವು ಸಂಗತಿಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. “ರಾಕ್ಷಸನ ಎದುರಿಸಬೇಕಾದರೆ, ಮೊದಲು ನಮ್ಮೊಳಗಿನ ರಾಕ್ಷಸನಿಂದ ಮುಕ್ತವಾಗಬೇಕು. ಅಜ್ಞಾನನ ಮೆಟ್ಟಿನಿಲ್ಲಬೇಕು. ಅಂಧಕಾರನ ಸೀಳಬೇಕು. ಅನೀತಿಯನ್ನು ಮಣಿಸಬೇಕು, ಆವಾಗ ನಮ್ಮೊಳಗೆ ಅವನು ಜಾಗೃತನಾಗುತ್ತಾನೆ….

ಈ ಹಿನ್ನೆಲೆ ಧ್ವನಿಯ ಬಳಿಕ.. ಅಲ್ಲೊಂದು ನಾಟಕ ಮಂಡಳಿಯ ಕಲಾವಿದರ ಚಿತ್ರಣದೊಂದಿಗೆ ಯಾರು…? ಎಂಬ ಧ್ವನಿ ಕೇಳಿಸುತ್ತೆ. ಆ ನಂತರ “ಅವನೇ ಶ್ರೀಮನ್ನಾರಾಯಣ’ ಕಮಿಂಗ್‌ ಸೂನ್‌ ಎಂಬ ಪದ ಕಾಣಿಸಿಕೊಳ್ಳುತ್ತದೆ. ರಕ್ಷಿತ್‌ಶೆಟ್ಟಿ ಅವರ ಹುಟ್ಟುಹಬ್ಬದ ದಿನ ಬಿಡುಗಡೆಯಾದ ಈ ಟೀಸರ್‌ನಲ್ಲಿ ಆರಂಭದಿಂದ ಅಂತ್ಯದವರೆಗೂ ಮಾಸ್‌ ಎಲಿಮೆಂಟ್ಸ್‌ಗಳು ತುಂಬಿವೆ.

ವಿಶೇಷವಾದಂತಹ ಅಂಶಗಳೇ ಕಾಣಸಿಗುತ್ತವೆ. ಜೊತೆಗೆ ಚಿತ್ರದಲ್ಲಿ ಗಟ್ಟಿ ಕಥಾಹಂದರವಿರುವುದು ಗೊತ್ತಾಗುತ್ತದೆ. ಟೀಸರ್‌ ನೋಡಿದವರಿಗೆ ಅದೊಂದು ಪಕ್ಕಾ ಎಂಟರ್‌ಟೈನರ್‌ ಸಿನಿಮಾ ಎಂಬುದರ ಜೊತೆಗೆ ಕನ್ನಡದಲ್ಲೊಂದು ಹೊಸ ಬಗೆಯ ಸಿನಿಮಾ ಎನಿಸಿಕೊಳ್ಳುತ್ತದೆ ಎಂಬ ಫೀಲ್‌ ಹುಟ್ಟುಹಾಕುತ್ತದೆ. ಅಂದಹಾಗೆ, ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ಪಾತ್ರಗಳಲ್ಲಿ ವಿಭಿನ್ನತೆ ಕಾಣಬಹುದು,

Advertisement

ಹಿನ್ನೆಲೆ ಸಂಗೀತ, ಸೆಟ್‌ ವರ್ಕ್‌, ಛಾಯಾಗ್ರಹಣ, ಕಲಾವಿದರು ಎಲ್ಲವೂ ಹೊಸತೆನಿಸುತ್ತದೆ. ಇನ್ನು, ರಕ್ಷಿತ್‌ಶೆಟ್ಟಿ ಅವರ ಬರ್ತ್‌ಡೇ ದಿನ ಟೀಸರ್‌ಗಾಗಿ ಕಾದಿದ್ದ ಅವರ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾಗಿದ್ದು ನಿಜ. ಅದಕ್ಕೆ ಕಾರಣ, “ಅವನೇ ಶ್ರೀಮನ್ನಾರಾಯಣ’ ಟೀಸರ್‌ ಈಗ ಬರುತ್ತೆ, ಆಗ ಬರುತ್ತೆ ಅಂತ ಕಾದಿದ್ದವರಿಗೆ ತುಂಬ ತಡವಾಗಿ ಟೀಸರ್‌ ಹೊರಬಂತು. ಆದರೂ, ಅಭಿಮಾನಿಗಳು ಪ್ರೀತಿಯಿಂದಲೇ ಆ ಟೀಸರ್‌ ಸ್ವೀಕರಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಕ್ಷಿತ್‌ ಶೆಟ್ಟಿ ಇತ್ತೀಚೆಗಷ್ಟೇ, ಸೋಶಿಯಲ್‌ ಮೀಡಿಯಾಗೆ ಹಿಂದಿರುಗಿದ್ದಾರೆ. ಈಗ “ಅವನೇ ಶ್ರೀಮನ್ನಾರಾಯಣ’ ಟೀಸರ್‌ ಕೂಡ ಹೊರಬಂದಿದೆ. ಇದು ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ಹೆಚ್ಚಿಸಿದೆ. ಸದ್ಯಕ್ಕೆ ಚಿತ್ರ ಬಿಡುಗಡೆಯ ಕೆಲಸಗಳಲ್ಲಿ ಬಿಝಿಯಾಗಿದೆ. ಚಿತ್ರಕ್ಕೆ ಸಚಿನ್‌ ನಿರ್ದೇಶಕರು. ಇದು ಪುಷ್ಕರ್‌ ಫಿಲ್ಮ್ಸ್ ಮತ್ತು ಶ್ರೀದೇವಿ ಎಂಟರ್‌ಟೈನರ್ ಬ್ಯಾನರ್‌ನಲ್ಲಿ ನಿರ್ಮಾಣಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next