Advertisement

ನಿಷೇಧದ ಮಧ್ಯೆ, ನದಿ ಆಚೆ ಮುಡಿ ಸಲ್ಲಿಸಿದ ಭಕ್ತರು

02:24 PM Jul 13, 2021 | Team Udayavani |

ನಂಜನಗೂಡು: ಶ್ರೀಕಂಠೇಶ್ವರ ಸನ್ನಿಧಿಯಲ್ಲಿ ಮುಡಿ ಸೇವೆ ನಿಷೇಧಿಸಿದ್ದರೂ ಸೊಮವಾರ ಭಕ್ತರು ಕೋವಿಡ್‌ ನಿಯಮಾವಳಿ ಬದಿಗಿಟ್ಟು ಕಪಿಲಾ ನದಿ ದಡದ ಆಚೆಯಲ್ಲಿ ಮುಡಿ ಸಮರ್ಪಿಸಿದರು.

Advertisement

ಕೊರೊನಾದಿಂದ ಕಳೆದ ಎರಡೂವರೆ ತಿಂಗಳಿಂದಲೂದೇವಾಲಯದಬಾಗಿಲುಬಂದ್‌ ಆಗಿದ್ದರಿಂದ ದೇವರಿಗೆ ಹರಕೆ ಹೊತ್ತ ಭಕ್ತರು ಮುಡಿ ಅರ್ಪಿಸಲು ಕಾತುರರಾಗಿದ್ದರು. ಇದೀಗ ದೇಗುಲ ತೆರೆಯಲು ಅವಕಾಶ ನೀಡಲಾಗಿದ್ದು, ಆದರೆ ಮುಡಿ ಸೇವೆ ನಿಷೇಧಿಸಲಾಗಿದೆ. ಕಪಿಲಾ ಸ್ನಾನಘಟ್ಟ ಸಮೀಪದ ಮುಡಿಕಟ್ಟೆ ಹಾಗೂ ಸುತ್ತಮುತ್ತ ಮುಡಿ ತೆಗೆಯದಂತೆ ನೋಡಿಕೊಳ್ಳಲು ಪೊಲೀಸರನ್ನು ನಿಯೋಜಿಸಲಾಗಿದೆ. ಹೀಗಾಗಿ ಹರಕೆ ಹೊತ್ತ ಭಕ್ತರು ಮುಡಿ ನೀಡಲಾಗದೆ ಪರಿತಪಿಸುತ್ತಿದ್ದರು. ಹೇಗಾದರೂ ಮಾಡಿ ಮುಡಿ ಕೊಡಲೇಬೇಕೆಂದು ಪಟ್ಟು ಹಿಡಿದ ಭಕ್ತರು ಕಪಿಲೆ ನದಿಯ ಆಚೆ ದಡದಲ್ಲಿ ಮುಡಿ ಕೊಡುವ ಪ್ರಕ್ರಿಯೆಯನ್ನು ಸೋಮವಾರ ಆರಂಭಿಸಿಯೇ ಬಿಟ್ಟರು.

ಹೆಜ್ಜಿಗೆ ಸೇತುವೆ ಮೇಲಿಂದ ನದಿಯ ಆಚೆ ದಡಕ್ಕೆ ಭಕ್ತರನ್ನು ಕರೆದೊಯ್ದು ಮುಡಿ ತೆಗೆಯಲಾಯಿತು. ಬಳಿಕ ಕಪಿಲಾ ನದಿಯಲ್ಲಿ ಮಿಂದೆದ್ದು ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆಯುತ್ತಿದ್ದರು. ಹಲವು ಭಕ್ತರ ತಲೆಗಳು ನುಣ್ಣು ಕಾಣುತ್ತಿದ್ದರಿಂದ ಅಧಿಕಾರಿಗಳು ಹಾಗೂ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತು. ಮುಡಿ ಸೇವೆ ನಿಷೇಧಿಸಿದ್ದರೂ ಎಲ್ಲಿ ಮುಡಿ ತೆಗೆಯಲಾಗುತ್ತಿದ್ದ ಎಂದು ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ನದಿಯ ಆಚೆ ದಡದ ಬಯಲಿನಲ್ಲಿ ಮುಡಿ ಕಾರ್ಯ ಭರದಿಂದ ನಡೆಯುತ್ತಿರುವುದುಕಂಡು ಬಂದಿತು.

ನದಿ ದಡ ಆಚೆ ಮುಡಿ ತೆಗೆಯುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಇದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಹರಕೆ ಹೊತ್ತ ಭಕ್ತರು ನದಿ ದಡದ ಆಚೆ ಕ್ಷೌರಿಕರನ್ನು ಹುಡುಕಿಕೊಂಡು ಹೋಗಿ ಮುಡಿ ಸಮರ್ಪಿಸಿ ಧನ್ಯತಾ ಭಾವ ಮೆರೆದರು.

Advertisement

Udayavani is now on Telegram. Click here to join our channel and stay updated with the latest news.

Next