Advertisement

Nanjangud; ಟಿಪ್ಪರ್ ಹರಿದು 18 ಕುರಿಗಳು ಸಾವು, ಕುರಿಗಾಹಿ ಆಸ್ಪತ್ರೆಗೆ ದಾಖಲು

10:42 PM Dec 28, 2023 | Team Udayavani |

ನಂಜನಗೂಡು: ತಾಲೂಕಿನ ಹೆಡಿಯಾಲ ಬೇಗೂರು ಮುಖ್ಯರಸ್ತೆಯ ಇಂದಿರಾ ನಗರ ಸಮೀಪ ವೇಗವಾಗಿ ಬಂದ ಎಂ ಸ್ಯಾಂಡ್ ತುಂಬಿದ್ದ ಟಿಪ್ಪರ್ ಲಾರಿಯೊಂದು ಕುರಿ ಮಂದೆಯ ಮೇಲೆ ಹರಿದ ಪರಿಣಾಮ 18 ಕುರಿಗಳು ಸ್ಥಳದಲ್ಲೇ ಸಾವಿಗೀಡಾಗಿದ್ದು 40 ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಗುರುವಾರ ನಡೆದಿದೆ.

Advertisement

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ಮುರುಳಿ ಎಂಬುವರಿಗೆ ಸೇರಿದ ಮಂದೆ ಕುರಿಗಳನ್ನು ಮೇಯಿಸುತ್ತಿದ್ದ ಮೂವರು ಕಾಲ ಕಾಲಕ್ಕೆ ಮೇವಿಗೆ ಸೂಕ್ತವಾದ ಸ್ಥಳವನ್ನು ಅರಸಿಕೊಂಡು ತೆರಳುತ್ತಿದ್ದರು. ಗುರುವಾರ ಬೆಳಗ್ಗೆ ಕುರಿಗಳನ್ನು ಮೇಯಲು ಕರೆದೊಯ್ಯುತ್ತಿದ್ದ ವೇಳೆ ಗುಂಡ್ಲುಪೇಟೆಯಿಂದ ಹೆಡಿಯಾಲ ಕಡೆಗೆ ತೆರಳುತ್ತಿದ್ದ ಎಂ.ಸ್ಯಾಂಡ್ ತುಂಬಿದ್ದ ಟಿಪ್ಪರ್ ಲಾರಿಯೊಂದು ವೇಗವಾಗಿ ಕುರಿ ಮಂದೆ ಮೇಲೆ ನುಗ್ಗಿದ್ದರಿಂದ 18 ಕುರಿಗಳು ಸ್ಥಳದಲ್ಲೇ ಸಾವಿಗೀಡಾದರೆ 40ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿವೆ.

ಈ ಸಂದರ್ಭ ಕುರಿಗಳನ್ನು ಕರೆದೊಯ್ಯುತ್ತಿದ್ದ ಕುರಿಗಾಹಿ ಬೊಮ್ಮಣ್ಣ ಎಂಬುವರಿಗೂ ಗಂಭೀರ ಗಾಯಗಳಾಗಿದ್ದು ಆತನನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತ ಸಂಭವಿಸಿದ ಬಳಿಕ ಲಾರಿ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಿಸಿಕೊಂಡಿರುವ ಹುಲ್ಲಹಳ್ಳಿ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next