Advertisement

ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ ನಾಮಕರಣ

09:21 PM Aug 21, 2019 | Lakshmi GovindaRaj |

ಮೈಸೂರು: ಸಂಗೊಳ್ಳಿ ರಾಯಣ್ಣನಂತಹ ನಿಸ್ವಾರ್ಥ ದೇಶಭಕ್ತ ಹಾಗೂ ದೇಶಪ್ರೇಮಿ ರಾಜಕಾರಣಿಗಳಿಗೆ ಮಾದರಿಯಾಗಬೇಕಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು. ಮೈಸೂರು ಕನ್ನಡ ವೇದಿಕೆ ವತಿಯಿಂದ ನಗರದ ಸುಬ್ಬರಾಯನಕೆರೆಯಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಮೈಸೂರಿನಲ್ಲಿ ರಾಯಣ್ಣನ ವೃತ್ತ ಸ್ಥಾಪಿಸಿ, ಪ್ರತಿಮೆ ನಿರ್ಮಿಸಲು ಪಾಲಿಕೆ ಮುಂದಾದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿಸಿದರೂ ಅವಳ ಹೆಸರನ್ನು ಮೈಸೂರಿನ ರಸ್ತೆಗಾಗಲಿ, ವೃತ್ತಕ್ಕಾಗಲಿ ಇಟ್ಟಿಲ್ಲ. ಆದರೆ ಉತ್ತರ ಭಾರತದ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಹೆಸರಿಡಲಾಗಿದೆ. ಉತ್ತರದವರು ಕರ್ನಾಟಕದ ಹೋರಾಟಗಾರರನ್ನು ಸ್ಮರಿಸುವುದಿಲ್ಲ.

ಆದರೆ, ನಾವು ಅವರ ಹೆಸರನ್ನು ರಸ್ತೆಗೆ ನಾಮಕರಣ ಮಾಡಿ ಸ್ಮರಿಸತ್ತೇವೆ. ಇನ್ನಾದರೂ ಮಹಾನಗರ ಪಾಲಿಕೆ ನಗರದ ಯಾವುದಾದರೊಂದು ರಸ್ತೆಗೆ ಚೆನ್ನಮ್ಮನ ಹೆಸರಿಡಬೇಕು. ಅಲ್ಲದೇ ಜಿಲ್ಲಾಡಳಿತ ರಾಯಣ್ಣನ ಜಯಂತಿಯನ್ನು ಆಚರಿಸಬೇಕು ಎಂದು ಆಗ್ರಹಿಸಿದರು. ನಿಸ್ವಾರ್ಥದಿಂದ ರಾಯಣ್ಣ ನಾಡಿನ ಮತ್ತು ದೇಶದ ರಕ್ಷಣೆಗೆ ನಿಂತಿದ್ದರೆ ನಮ್ಮ ರಾಜಕಾರಣಿಗಳು ದೇಶವನ್ನೇ ತಮ್ಮ ಸ್ವಾರ್ಥಕ್ಕಾಗಿ ಮಾರಲು ಹೊರಟಿದ್ದಾರೆ.

ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ರಾಜಕಾರಣ. ಅತೃಪ್ತರಾಗಿದ್ದುಕೊಂಡು ಸಮ್ಮಿಶ್ರ ಸರ್ಕಾರ ಕೆಡವಿ ಅನರ್ಹ ಶಾಸಕರಾಗಿರುವವರು ಈಗ ತಮಗೆ ಅಧಿಕಾರ ಸಿಗಲಿಲ್ಲವೆಂದು ಮತ್ತೆ ಅತೃಪ್ತ ಶಾಸಕರಾಗಿ ಸಭೆ ನಡೆಸಿ ಈ ಸರ್ಕಾರವನ್ನೂ ಕೆಡವಲು ಹೊರಟಿದ್ದಾರೆ. ಇಂತಹ ದುರಾಸೆಯ, ದುಷ್ಟ ಬುದ್ಧಿಯ, ಅಧಿಕಾರ ಲಾಲಸೆಯ ಭ್ರಷ್ಟ ಶಾಸಕರನ್ನು ಪ್ರಸ್ತುತ ಸರ್ಕಾರ ಯಾವುದೇ ಕಾರಣಕ್ಕೂ ತನ್ನೊಳಗೆ ಬಿಟ್ಟುಕೊಳ್ಳಬಾರದು.

ಅಲ್ಲದೆ ಇವರನ್ನು ಶಾಸಕರಾಗಿ ಆಯ್ಕೆ ಮಾಡಿರುವ ಆಯಾ ಕ್ಷೇತ್ರಗಳ ಮತದಾರರು ಮತ್ತೆ ಇವರ ಮರು ಆಯ್ಕೆ ಮಾಡದೆ ದೂರವಿಡಬೇಕು ಎಂದರು. 1857ರಲ್ಲಿ ನಡೆದ ಸಿಪಾಯಿ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ನಮ್ಮ ಇತಿಹಾಸ ಹೇಳುತ್ತದೆ. ಆದರೆ ವಾಸ್ತವವಾಗಿ ಸಿಪಾಯಿದಂಗೆಗೂ ಮೊದಲೇ ಸ್ವಾತಂತ್ರ್ಯ ಹೋರಾಟ ನಡೆದಿದೆ. ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕದೇವಿ, ಸಿಂಧೂರ ಲಕ್ಷ್ಮಣರಂತಹ ನೂರಾರು ಮಂದಿ ದೇಶಭಕ್ತರು ಬ್ರಿಟಿಷರ ವಿರುದ್ಧ ಹೋರಾಡಿ ಅವರ ಜೀವ,

Advertisement

ಜೀವನವನ್ನೆಲ್ಲಾ ಬಲಿದಾನಗೈದಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮ ಮೊದಲು ಆರಂಭಗೊಂಡಿದ್ದು ಇಂತಹ ವೀರ ಯೋಧರುಗಳಿಂದ. ಹಾಗಾಗಿ ಇತಿಹಾಸದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಹೇಳುವಾಗ ಇಂತಹ ಹೋರಾಟಗಳನ್ನು ಪರಿಗಣಿಸಬೇಕು. ಇತಿಹಾಸವೆಲ್ಲವೂ ಸತ್ಯವಲ್ಲವಾದ್ದರಿಂದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಮರು ಮೌಲ್ಯಮಾಪನ ಮಾಡಬೇಕಿದೆ ಎಂದು ಹೇಳಿದರು.

ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರ ವೈ.ಸಿ.ರೇವಣ್ಣ, ಸಮಾಜ ಸೇವಕರಾದ ಡಿ.ರವಿ, ಎಂ.ಶ್ರೀಕಂಠಸ್ವಾಮಿ, ಕನಕದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಯುಆರ್‌ಡಿಎ ಅಧ್ಯಕ್ಷ ಡಾ.ಭರತ್‌ಕುಮಾರ್‌, ಪತ್ರಕರ್ತ ಮಹದೇವಮೂರ್ತಿ ಅವರಿಗೆ ಸಂಗೊಳ್ಳಿರಾಯಣ್ಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಾಲಿಕೆ ಸದಸ್ಯೆ ಪ್ರಮೀಳಾ , ಸಮಾಜ ಸೇವಕ ಡಾ.ಕೆ.ರಘುರಾಂ ವಾಜಪೇಯಿ, ಸಾಹಿತಿ ಸವಿತಾ ದಸರಗುಪ್ಪೆ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್‌.ಬಾಲಕೃಷ್ಣ, ನಾಲಾ ಬೀದಿ ರವಿ, ಪ್ಯಾಲೆಸ್‌ ಬಾಬು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next