Advertisement

ಪ್ರಕೃತಿಯ ಕೊಡುಗೆ ʼನಾಮದ ಚಿಲುಮೆʼ

03:54 PM Aug 30, 2020 | Karthik A |

ಮಳೆಯಲ್ಲಿ ನೆನೆದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ವನ.

Advertisement

ಅಲ್ಲಲ್ಲಿ ಕೆಂಪನೆ ವಜ್ರದಂತೆ ಪ್ರಜ್ವಲಿಸುವ ಗುಲ್‌ ಮೋಹರ್‌ ಮರಗಳ ಪುಷ್ಪಗಳು.

ಅವಕ್ಕೆ ಸಾಥ್‌ ನೀಡುವ ಕಾಡು ಮಂದಾರ, ಹಗಲು ರಾಣಿ, ಹುಣಸೆ ಮರದ ಚಿಗುರು, ಟೊಕೊಮೋ ಹೂವಿನ ಮರಗಳು…ಇಂತಹ ಮನಮೋಹಕ ದೃಶ್ಯ ಕಂಡುಬಂದದ್ದು ದೇವರಾಯನದುರ್ಗದ ನಾಮದ ಚಿಲುಮೆ ಎಂಬ ಪ್ರೇಕ್ಷಣೀಯ ಸ್ಥಳದಲ್ಲಿ.

ತುಮಕೂರಿನಿಂದ 8 ಕಿಲೋ ಮೀಟರ್‌ ದೂರದಲ್ಲಿ ಇರುವ ಈ ಸ್ಥಳಕ್ಕೆ ಮಳೆಗಾಲ ಹಾಗೂ ಚಳಿಗಾಲದಲ್ಲಿ ತೆರಳುವುದು ಸ್ಮರಣೀಯ ಅನುಭವವಾಗಿರುತ್ತದೆ.

ನಗರದಿಂದ ಅಂತರವನ್ನು ಕಾಯ್ದುಕೊಂಡಿರುವ ನಾಮದ ಚಿಲುಮೆ ಆಗಮಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಹೂವಿನ ಮರಗಳಿಂದ ಬೀಳುವ ಹೂಗಳು, ಅಲ್ಲಲ್ಲಿ ಕಾಣ ಸಿಕಗುವ ಮಾವಿನ ಕಾಯಿ ಗೊಂಚಲು, ಕರಿಮೋಡದಿಂದ ಬೀಸುವ ತಣ್ಣನೆಯ ಗಾಳಿ, ಹಾಗೇ ಹಾರಾಡುತ್ತಾ ರಸ್ತೆಯ ಪರಿವಿಲ್ಲದೆ ಹಾರುವ ಪಾತರಗಿತ್ತಿಗಳು, ದೈತ್ಯ ಬೆಟ್ಟಗಳ ಸಾಲು, ಪ್ರವಾಸಿಗರ ಆಗಮನ ನಿರೀಕ್ಷೆಯಲ್ಲಿ ಕಾದು ಕುಳಿತ ವಾನರ ಸೈನ್ಯ…ಇವೆಲ್ಲವೂ ಭವ್ಯ ಸ್ವಾಗತ ಕೋರುತ್ತವೆ. ಮೂರು ನಾಲ್ಕು ಬೆಟ್ಟಗಳ ನಡುವೆ ಇರುವ ಉದ್ಯಾನವನದಲ್ಲಿ ಮನಸ್ಸಿಗೆ ಮುದನೀಡುವ ವಾತಾವರಣವಿದೆ.

Advertisement

1996ರಲ್ಲಿ  ಉದ್ಯಾನವನ ನಿರ್ಮಾಣ
ತುಮಕೂರಿನ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಲ್ಲಿ ನಾಮದ ಚಿಲುಮೆ ಸ್ಥಾನ ಪಡೆದುಕೊಂಡಿದೆ. 1996ರಲ್ಲಿ ಈ ಉದ್ಯಾನವನವನ್ನು ನಿರ್ಮಿಸಲಾಗಿದೆ. ಪ್ರಕೃತಿ ಪ್ರೇಮಿಗಳನ್ನು ಸೆಳೆಯುವ ತಾಕತ್ತು ಈ ನಾಮದ ಚಿಲುಮೆಗಿದೆ. ಇಲ್ಲಿಗೆ ರಾಜ್ಯ ಮತ್ತು ಹೊರರಾಜ್ಯಗಳಿಂದಲೂ ಪ್ರವಾಸಿಗರು ಬರುತ್ತಾರೆ.

ಚಿಲುಮೆಯ ಚರಿತ್ರೆ
ಉದ್ಯಾನವನದಲ್ಲಿರುವ ಸಿಹಿನೀರಿನ ಚಿಲುವೆಯ ಹಿಂದೆ ಒಂದು ಕಥೆ ಇದೆ. ತ್ರೇತಾಯುಗದಲ್ಲಿ ರಾಮ, ಸೀತೆ, ಲಕ್ಷ್ಮಣರು ದೇವರಾಯನದುರ್ಗ ಬೆಟ್ಟದಲ್ಲಿ ವನವಾಸವಿದ್ದರು. ಒಂದು ದಿನ ರಾಮ ಹಣೆಗೆ ತಿಲಕ ವಿಡುವ ಸಂದರ್ಭದಲ್ಲಿ ನೀರಿಗಾಗಿ ಸುತ್ತಲೂ ನೋಡಿದ. ನೀರು ಸಿಗದಿದ್ದಾಗ ರಾಮ ಬಾಣವನ್ನು ಬಂಡೆಯ ಮೇಲೆ ಬಿಟ್ಟಾಗ ರಂಧ್ರವಾಗಿ ಸಿಹಿನೀರಿನ ಬುಗ್ಗೆ ಚಿಮ್ಮಲು ಆರಂಭಿಸಿತು. ಆದ್ದರಿಂದ ಈ ಪ್ರದೇಶವನ್ನು ನಾಮದ ಚಿಲುಮೆ ಎಂದೇ ಕರೆಯಲಾಗುತ್ತದೆ ಎನ್ನುವ ಪ್ರತೀತಿ ಇದೆ. 2003ರಲ್ಲಿ ಈ ನೀರಿನ ಚಿಲುಮೆ ಒಂದು ವರ್ಷ ಬತ್ತಿ ಹೋಗಿತ್ತು. ಮತ್ತೆ ಶಾಂತಿ ಹೋಮ ಮಾಡಿಸಿದ ಬಳಿಕವೇ ನೀರು ಬರಲಾರಂಭಿಸಿತು ಎನ್ನುತ್ತಾರೆ ಸ್ಥಳೀಯರು. ಆ ಕಾರಣಕ್ಕಾಗಿಯೇ ಆ ಸಿಹಿನೀರಿನ ಚಿಲುಮೆಯ ಒಳ ಕಲ್ಲಿನ ಸುತ್ತ ಯಾರೂ ಸುಳಿಯದಂತೆ ರಕ್ಷಣೆಯ ಮೆಸ್‌ಗಳನ್ನು ಅಳವಡಿಸಲಾಗಿದೆ.

ಸಸ್ಯ ಸಂಜೀವಿನಿ ವನ
ನಾಮದ ಚಿಲುಮೆ ಅನೇಕ ಗಿಡಮೂಲಿಕೆಗಳ ಸಂಪತ್ತನ್ನು ಒಳಗೊಂಡಿದೆ. ಅಶ್ವಗಂಧ, ಲೋಳೆಸರ, ಜೀವಂತಿ, ಜ್ವರಕ್ಕೆ ಮದ್ದಾದ ನೆಲಬೇವು, ಬೃಂಗರಾಜ, ವಿಟಮಿನ್‌ ಎಬಿಸಿ ಹೊಂದಿರುವ ಚಕ್ರಮುನಿ ಸಸ್ಯ, ಆಡು ಮುಟ್ಟದ ಬೇರು, ಈಶ್ವರಿ ಬೇರು, ಮಾಕಳಿ ಬೇರು, ಅಮೃತಬೇರು, ಸಕ್ಕರೆ ಕಾಯಿಲೆಗೆ ಮದ್ದಾದ ಮಧುನಾಶಿನಿ, ಸೀತಾ ಅಶೋಕ, ರಾಮಫ‌ಲ ಹೀಗೆ 300ಕ್ಕೂ ಹೆಚ್ಚು ಗಿಡಮೂಲಿಕೆಗಳನ್ನು ಅರಣ್ಯ ಇಲಾಖೆ ಇಲ್ಲಿ ಕಾಪಾಡುತ್ತಾ ಬಂದಿದೆ. ಮಾತ್ರವಲ್ಲಿ ಅರ್ಜುನ, ಗೋಣಿ, ಹತ್ತಿಮರ, ಬಸರಿ, ನೀಲಿ, ಹಸಿರು ಲಕ್ಕಿ, ಕದಂಬ, ಭಿಲ್ವಪತ್ರೆ (ಈಶ್ವರನು ಇದೇ ಮರದ ಕಾಯಿಯಿಂದ ಭಿಕ್ಷೆ ಬೇಡಿದನೆಂಬ ಪ್ರತೀತಿ ಇದೆ) ಮರಗಳಿವೆ. ಬಿಲ್ವ ಪತ್ರೆ, ಚಳ್ಳೆ ಹಣ್ಣು, ಸಾಂಬಾರು ಹಲಸು, ಜಗಳ ಗಂಟಿಮರ, ಮುಳ್ಳು ಬುರುಗದ ಮರ ಹೀಗೇ ಎರಡು ಸಾವಿರಕ್ಕಿಂತ ಹೆಚ್ಚು ಪ್ರಾಚೀನ ಮರಗಳು ನಾಮದ ಚಿಲುಮೆ ಅರಣ್ಯದಲ್ಲಿ ಬೆಳೆದಿವೆ. ರಾಶಿನಕ್ಷತ್ರ ವನ, ಅಷ್ಟ ದಿಕಾ³ಲಕ ವನ, ನವಗ್ರಹ ವನ, ಶಿವಪಂಚಾಯತಿ ವನ ಹೀಗೆ ವನದೊಳಗೆ ವನವನ್ನು ಹೊಂದಿರುವುದು ವಿಶೇಷ. ಸುಮಾರು 20 ಎಕ್ರೆಯಿಂದ ಕೂಡಿದ ಅರಣ್ಯ ಪ್ರದೇಶದಲ್ಲಿ ಉದ್ಯಾನವನವನ್ನು ನಿರ್ಮಿಸಲಾಗಿದೆ. ಸೋಮವಾರ ರಜೆ ಇರುತ್ತದೆ.

ಜಿಂಕೆವನ
ಮನ್ನಾ ಜಂಗ್ಲಿ (ಕಾಯ್ದಿರಿಸಿದ ಅರಣ್ಯ ಪ್ರದೇಶ)ನಾಮದ ಚಿಲುಮೆಯ ಒಂದು ಭಾಗ. ಇಲ್ಲಿ ಜಿಂಕೆಗಳಿಗೆಂದೇ ಪ್ರತ್ಯೇಕ ಸ್ಥಳಗಳನ್ನು ಗೊತ್ತುಮಾಡಿ ಸುಮಾರು ವರ್ಷಗಳಿಂದ ಸಾಕಲಾಗುತ್ತಿದೆ. 6 ಎಕ್ರೆಯ ಜಿಂಕೆ ವನದಲ್ಲಿ 95 ಜಿಂಕೆಗಳು ಆಶ್ರಯ ಪಡೆದಿವೆ. ನಾಮದ ಚಿಲುಮೆ ಜಿಂಕೆವನಕ್ಕೆ ಬರುವ ಪ್ರವಾಸಿಗರಿಂದ 10 ರೂ.ಗಳನ್ನು ಸಂಗ್ರಹಿಸಿ ಚಿಲುಮೆಯ ಅಭಿವೃದ್ಧಿಗಾಗಿ ಬಳಸಲಾಗುತ್ತಿದೆ.

ಇತ್ತೀಚಿಗೆ ಜಿಂಕೆವನಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಅವರಿಗಾಗಿ ಆಸನ ವ್ಯವಸ್ಥೆ, ಜಿಂಕೆ ವೀಕ್ಷಣೆಗೆ ಅನುಕೂಲವಾದ ಸ್ಥಳ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಅರಣ್ಯ ಇಲಾಖೆ ಒದಗಿಸಿದೆ. ರಾಮ ಸೀತೆಯರು ಈ ವನಕ್ಕೆ ಭೇಟಿ ಕೊಟ್ಟ ನೆನಪಿಗಾಗಿ ಜಿಂಕೆಯನ್ನು ಸಾಕಲಾಗುತ್ತಿದೆ. ಮತ್ತು ಸಾವಿರಾರು ಎಕರೆ ಅರಣ್ಯ ಪ್ರದೇಶದ ನಡುವೆ ಜಿಂಕೆವನ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆಯೂ ಇದೆ.

 ಪ್ರವೀಣ್‌ ಕುಮಾರ್‌ ಎನ್‌., ತುಮಕೂರು ವಿವಿ 

 

 

 

 

Advertisement

Udayavani is now on Telegram. Click here to join our channel and stay updated with the latest news.

Next