Advertisement

ನಮ್‌ ಕುಂದಾಪ್ರ ಸ್ವಚ್ಛ ಕುಂದಾಪ್ರ 

06:00 AM Nov 23, 2018 | Team Udayavani |

ವಿದ್ಯಾಲಯಗಳು ಎಂದ ಮೇಲೆ ಅಲ್ಲೊಂದಿಷ್ಟು ವ್ಯಕ್ತಿತ್ವ ವಿಕಸನ, ನೈತಿಕತೆ, ಸ್ವಚ್ಛತೆ, ಶಿಸ್ತು ಇತ್ಯಾದಿ ವಿಚಾರಗಳ ಬಗೆಗೆ ಒಂದಷ್ಟು ಕಾರ್ಯಕ್ರಮಗಳು ನಡೆಯುವುದು ಸಾಮಾನ್ಯ. ವಿದ್ಯಾಲಯದಲ್ಲಿ ಹಮ್ಮಿಕೊಳ್ಳುವ ಇಂತಹ ಕಾರ್ಯಕ್ರಮಗಳು ಕಾಲೇಜಿನ ಅಂಗಳವನ್ನು  ಮೀರಿ ಸುತ್ತಲಿನ  ಸಮಾಜದ ಅಗತ್ಯತೆಗಳಿಗೆ ಕಾರ್ಯಾರ್ಥ ಪೂರ್ಣವಾಗಿ ಸ್ಪಂದಿಸಿ ಆ ಮೂಲಕ ಸಮಾಜದ ಜನರಲ್ಲಿ ಬಹಳ ದೊಡ್ಡ ಪ್ರೇರಣೆಯನ್ನು ತುಂಬುವಂತಾದರೆ ಆ ಕಾರ್ಯಕ್ರಮಗಳು ನಿಜವಾದ ಅರ್ಥದಲ್ಲಿ ಯಶಸ್ಸಿನ ಧನ್ಯತೆಯನ್ನು ಪಡೆಯುತ್ತವೆ. ಅಂತಾದ್ದೊಂದು ಅದ್ಭುತ ಕಾರ್ಯಕ್ರಮವನ್ನು ಬೃಹತ್‌ ಮಟ್ಟದಲ್ಲಿ ಸಂಘಟಿಸಿ ಸುತ್ತಲಿನ ಸಮಾಜದಲ್ಲಿ ಸ್ವತ್ಛತೆಯ ಬಗೆಗೆ ಮತ್ತಷ್ಟು ಅರಿವು ಮೂಡಿಸಿ ಪ್ರೇರೇಪಣೆ ನೀಡಿದ ಕೀರ್ತಿ ಕುಂದಾಪುರದ ಭಂಡಾರ್‌ಕಾರ್ಸ್‌ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ಸಲ್ಲುತ್ತದೆ. 

Advertisement

ನಿಜ. ಅದು ಅಕ್ಟೋಬರ್‌ ಎರಡು. ದೇಶ ಕಂಡ ಎರಡು ಮಹಾನ್‌ ಸಾಧಕರಾದ ಗಾಂಧೀಜಿ ಮತ್ತು ಶಾಸ್ತ್ರೀಜಿ ಜನಿಸಿದ ದಿನ. ಆ ಪ್ರಯುಕ್ತ ಸ್ವತ್ಛತಾ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳೋಣ ಎಂದು ಪೂರ್ವಭಾವಿಯಾಗಿ ಭಂಡಾರ್‌ಕಾರ್ಸ್‌ ಕಲಾ ಮತ್ತು ವಿಜ್ಞಾನ ಕಾಲೇಜಿನ ಬಳಗ ಸಭೆ ನಡೆಸಿದಾಗ ಈ ಸ್ವಚ್ಛತಾ ಕಾರ್ಯಕ್ರಮವನ್ನು ಕೇವಲ ಕಾಲೇಜಿನ ಪರಿಸರಕ್ಕೆ ಸೀಮಿತವಾಗಿರಿಸದೆ ಇಡೀ ಕುಂದಾಪುರ ನಗರದ 23 ವಾರ್ಡುಗಳಲ್ಲೂ ಸ್ವತ್ಛತಾ ಅಭಿಯಾನವನ್ನು ನಡೆಸಿದರೆ ಹೇಗೆ ಎನ್ನುವ ಪ್ರಸ್ತಾಪವೊಂದು ಎದುರಾಯಿತು. ಅಷ್ಟಾದದ್ದೇ  ಹೊಸ ಹೊಳಹೊಂದು ಎಲ್ಲರಿಗೂ ಹುರುಪನ್ನು ತುಂಬಿ ಅದರ ರೂಪುರೇಷೆಗಳ ಬಗೆಗೆ ಸಿದ್ಧತೆಗಳು ಆರಂಭವಾದವು. 

ಅಷ್ಟು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ  ಹಮ್ಮಿಕೊಳ್ಳುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಗೊಂದಲಗಳಿಗೆ ಅವಕಾಶವಿಲ್ಲದಂತೆ ಸೂಕ್ತವಾದ ಪೂರ್ವಸಿದ್ಧತೆ ಮಾಡಿಕೊಳ್ಳಬೇಕಿತ್ತು. ಮೊದಲನೆಯದಾಗಿ ಕುಂದಾಪುರ ಪುರಸಭೆಯನ್ನು ಸಂಪರ್ಕಿಸಿ ಈ ಬಗೆಗೆ ಚರ್ಚಿಸಲಾಯಿತು. ಪುರಸಭೆ  ಸಂತೋಷದಿಂದ ಜೈ ಎಂದಿತ್ತು. ಅದೇ ಸಮಯದಲ್ಲಿ ಕಾಲೇಜಿನಲ್ಲಿನ 2400ಕ್ಕೂ ಅಧಿಕ  ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಯಿತು. ಅವರಿಗೆ ಸ್ವಚ್ಛತೆ, ಒಣಕಸ, ಹಸಿಕಸ , ತ್ಯಾಜ್ಯ ನಿರ್ವಹಣೆ ಇತ್ಯಾದಿ ವಿಚಾರಗಳ ಬಗೆಗೆ ಅರಿವನ್ನು ಮೂಡಿಸಲಾಯಿತು. ಪ್ರತೀ ವಾರ್ಡಿಗೆ ಸಂಬಂಧಪಟ್ಟ ವಿದ್ಯಾರ್ಥಿಗಳನ್ನು ಗುರುತಿಸಿ ಆಯಾ ವಾರ್ಡಿನ ಉಸ್ತುವಾರಿಯನ್ನು ಅವರು ಹೆಚ್ಚು ಮುತುವರ್ಜಿಯಿಂದ ನಿರ್ವಹಿಸುವಂತೆ ಕೇಳಿಕೊಳ್ಳಲಾಯಿತು. ವಿದ್ಯಾರ್ಥಿ ತಂಡಗಳ ರಚನೆಯಾದವು. 

ಈ ಬೃಹತ್‌ ಸ್ವಚ್ಛತಾ ಜಾಗೃತಿ ಅಭಿಯಾನಕ್ಕೆ  “ನಮ್‌ ಕುಂದಾಪ್ರ ಸ್ವತ್ಛ ಕುಂದಾಪ್ರ’ ಎನ್ನುವ ಹೆಸರು ನೀಡಲಾಯಿತು. ಕುಂದಾಪುರದ ಹತ್ತಾರು ಸಂಸ್ಥೆಗಳು ಈ  ಕಾರ್ಯದಲ್ಲಿ  ಸ್ವಯಂಪ್ರೇರಿತರಾಗಿ ಕೈ ಜೋಡಿಸಿದವು. ಪುರಸಭೆ ಸ್ವತ್ಛತಾ ಕಾರ್ಯಕ್ರಮಕ್ಕೆ ಅಗತ್ಯವಿದ್ದ ಕೈಗವಸು, ಮುಖ ವಸ್ತ್ರ, ಚೀಲ, ವಿಲೇವಾರಿ ವಾಹನ ಇತ್ಯಾದಿಗಳನ್ನು ದಂಡಿಯಾಗಿ ನೀಡಿತ್ತು. ಸ್ವಯಂಪ್ರೇರಣೆಯ ಮೂಲಕವೇ ಸ್ವತ್ಛತೆಯ ಅರಿವು ಸಾಧ್ಯ ಎನ್ನುವ ವಿಚಾರಕ್ಕೆ ಬದ್ಧರಾಗಿ ಈ ಕಾರ್ಯಕ್ರಮದಲ್ಲಿ ಪಾಲುಗೊಳ್ಳುವುದನ್ನು ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಿರಲಿಲ್ಲ. ಆದರೆ, ಅನಾರೋಗ್ಯ ಕಾರಣದಿಂದಾಗಿ ಒಂದಷ್ಟು  ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು ಬಿಟ್ಟರೆ ಪದವಿ ಮತ್ತು ಪದವಿಪೂರ್ವ ಕಾಲೇಜಿನ ಅಷ್ಟೂ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದಲೇ ಇದರಲ್ಲಿ ತೊಡಗಿಸಿಕೊಂಡದ್ದು ವಿಶೇಷ.

ಅಕ್ಟೋಬರ್‌ ಎರಡರಂದು ನಿಗದಿಪಡಿಸಿದ ವಿವಿಧ ಸ್ಥಳದಲ್ಲಿ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಿದ್ದರು. ಆಯಾ ವಾರ್ಡಿನ ಪ್ರತೀ ಮನೆಗಳಿಗೆ ವಿದ್ಯಾರ್ಥಿಗಳು ತಂಡಗಳಾಗಿ ಹೋಗಿ ಸ್ವತ್ಛತೆಯ ಬಗೆಗೆ ವಿಚಾರ ವಿನಿಮಯ ನಡೆಸಿದರು. ಮನೆಯವರಿಂದಲೂ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ಹೊಸ ಆಲೋಚನೆಗಳ ಬಗೆಗೆ ಮಾಹಿತಿ ಪಡೆದರು. ವಾಪಸು ಬರುವ ದಾರಿಯಲ್ಲಿ ರಸ್ತೆಯುದ್ದಕ್ಕೂ ಸ್ವತ್ಛತೆಯನ್ನು ಮಾಡಿಕೊಂಡು ಬಂದರು. 

Advertisement

ಈ ಕಾರ್ಯದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ವೃಂದದವರು ಬೆಂಗಾವಲಾಗಿ ನಿಂತಿದ್ದರು. ಜೊತೆಗೆ ಕುಂದಾಪುರ ಪುರಸಭೆಯ ಹಾಲಿ ಮತ್ತು ಮಾಜಿ ಸದಸ್ಯರುಗಳು ರಾಜಕೀಯಕ್ಕೆ ಅವಕಾಶವಿಲ್ಲದಂತೆ ಸಹಕಾರ ನೀಡಿದ್ದರು. ವಿವಿಧ ಸಂಸ್ಥೆಗಳ ಸದಸ್ಯರು  ನೇರವಾಗಿ ಭಾಗಿಯಾಗಿ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಹುರುಪನ್ನು ತುಂಬಿದ್ದರು. ಅಲ್ಲಲ್ಲಿ ವಿದ್ಯಾರ್ಥಿಗಳಿಗೆ ಲಘು ಉಪಹಾರ, ಸಿಹಿತಿಂಡಿ, ಐಸ್‌ಕ್ರೀಮ್‌, ಪಾನೀಯಗಳ ವ್ಯವಸ್ಥೆಯನ್ನು ನಾಗರಿಕರು ಒದಗಿಸಿದ್ದರು. 

ಆ ದಿನ ಬೆಳಿಗ್ಗೆ ಕಾಲೇಜಿನ ಎನ್‌ಸಿಸಿಯ ಭೂದಳ ಮತ್ತು ನೌಕಾದಳದವರು ಬ್ಯಾಂಡ್‌ ಜೊತೆಗೆ ಕುಂದಾಪುರ ನಗರದ ಮುಖ್ಯ ರಸ್ತೆಯಲ್ಲಿ  ಸ್ವಚ್ಛತೆಯ ಅರಿವನ್ನು ಮೂಡಿಸುವ ಬಗೆಗೆ ಜಾಥಾ ನಡೆಸಿದರು. ರೋವರ್ ಮತ್ತು ರೇಂಜರ್ ಘಟಕವೂ ಸಾಥ್‌ ನೀಡಿತ್ತು. ವಿದ್ಯಾರ್ಥಿ ಸಮುದಾಯದ ಈ ಎಲ್ಲಾ ಶ್ಲಾಘನೀಯ ನಡೆ ಕುಂದಾಪುರ ಜನತೆಯಲ್ಲಿ ಹೊಸ ಪ್ರೇರಣೆಯ ಪುಳಕ ಮೂಡಿಸಿತ್ತು. 

ಒಟ್ಟಿನಲ್ಲಿ ಶಿಕ್ಷಣ ಸಂಸ್ಥೆಯೊಂದು ಬೃಹತ್‌ ಮಟ್ಟದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಸ್ವತ್ಛತಾ ಅಭಿಯಾನವನ್ನು ಅರ್ಥಪೂರ್ಣವಾಗಿ ಕೈಗೊಂಡ ಪರಿ ಮತ್ತು ಸುತ್ತಲಿನ ಸಮಾಜ, ಪುರಸಭೆ, ಸಮಾಜಸೇವಾ ಸಂಸ್ಥೆಗಳು ಅದಕ್ಕೆ ಸ್ಪಂದಿಸಿದ ರೀತಿ ಸ್ತುತ್ಯರ್ಹ ಮತ್ತು ಅನುಕರಣೀಯ ಕೂಡ. 

ನರೇಂದ್ರ ಎಸ್‌. ಗಂಗೊಳ್ಳಿ
ವಾಣಿಜ್ಯಶಾಸ್ತ್ರ ಉಪನ್ಯಾಸಕರು,
ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು, ಗಂಗೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next