Advertisement

ಗೆಲುವಿನ ಹಾದಿಯಲ್ಲಿ ನಳಿನ್‌ ವಿಜಯೋತ್ಸವ

11:11 PM May 24, 2019 | Team Udayavani |

ಬೆಳ್ತಂಗಡಿ: ಹ್ಯಾಟ್ರಿಕ್‌ ವಿಜಯ ವನ್ನು ಗುರುವಾರ ದಾಖಲಿಸಿದ ನಳಿನ್‌ ಕುಮಾರ್‌ ಕಟೀಲು ಶುಕ್ರವಾರ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಜತೆಗೆ ಪಾಲ್ತಾಡಿಯ ಮನೆಗೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದರು.

Advertisement

ಮಧ್ಯಾಹ್ನ ಕೊಕ್ಕಡ ಶ್ರೀ ವೈದ್ಯನಾಥ ವಿಷ್ಣು ಮೂರ್ತಿ ದೇವಸ್ಥಾನದಿಂದ ವಿಜಯೋತ್ಸವ ಆರಂಭಗೊಂಡಿತು. ಕೊಕ್ಕಡ ಶ್ರೀ ಸೌತಡ್ಕ ಮಹಾ ಗಣಪತಿ ದೇವಸ್ಥಾನ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ ಡಾ| ಹೆಗ್ಗಡೆಯವರು ಕ್ಷೇತ್ರದ ವತಿಯಿಂದ ಅವರನ್ನು ಗೌರವಿಸಿ ಶುಭಹಾರೈಸಿದರು. ಬಳಿಕ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಉಜಿರೆ ಮುಖೇನ ಬೆಳ್ತಂಗಡಿ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು.

ಬೆಳ್ತಂಗಡಿ ಬಿಜೆಪಿ ಕಚೇರಿಗೆ ಭೇಟಿ ನೀಡಿದಾಗ ಕಾರ್ಯಕರ್ತರು ಮತ್ತು ಮುಖಂಡರು ಜಯಘೋಷ ಕೂಗಿದರು. ಗುರುವಾಯನಕೆರೆ ಯಾಗಿ ಮಡಂತ್ಯಾರು, ಪುಂಜಾಲಕಟ್ಟೆಯ ವರೆಗೆ ವಿಜಯ ಯಾತ್ರೆ ಅದ್ದೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಸಂಸದರೊಂದಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಸಕ ಸಂಜೀವ ಮಠಂದೂರು, ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ, ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್‌, ವಿಭಾಗ ಸಹಪ್ರಭಾರಿ ಪ್ರತಾಪಸಿಂಹ ನಾಯಕ್‌, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್‌ ಕುಮಾರ್‌, ಮಂಡಲದ ಪದಾಧಿಕಾರಿಗಳು, ಜಿ.ಪಂ., ತಾ.ಪಂ. ಸದಸ್ಯರು, ಸಂಘಟನೆಯ ಪ್ರಮುಖರು ಕಾರ್ಯಕರ್ತರು ಭಾಗವಹಿಸಿದರು.

ಕನ್ಯಾಡಿ ಕ್ಷೇತ್ರ ಭೇಟಿ
ಶುಕ್ರವಾರ ಸಂಜೆ ನಳಿನ್‌ ಅವರು ಧರ್ಮಸ್ಥಳ ಕನ್ಯಾಡಿ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರಕ್ಕೆ ಭೇಟಿ ನೀಡಿದ ನಳಿನ್‌, ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಸ್ವಾಮೀಜಿ ಕ್ಷೇತ್ರದ ವತಿಯಿಂದ ಸಂಸದರನ್ನು ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next