Advertisement

ನೀವು ಯಾವ ನಕ್ಷತ್ರದಲ್ಲಿ ಹುಟ್ಟಿದ್ದೀರ?

12:31 PM May 19, 2018 | |

ಯಾರಾದರೂ ನಿಮ್ಮನ್ನು ನಿಂದು ಯಾವ ನಕ್ಷತ್ರ ಅಂತ ಕೇಳ್ತಾರಲ್ಲಾ ಅಥವಾ ಕೋಪ ಬಂದಾಗ ಯಾವ ನಕ್ಷತ್ರದಲ್ಲಿ ಹುಟ್ಟಿದೆಯೋ ಮಾರಾಯ/ಮಾರಾಯ್ತಿ ಅಂತ ಕಿಚಾಯಿಸ್ತಾರಲ್ಲಾ? ಆ ನಕ್ಷತ್ರಗಳ ಬಗ್ಗೆ ತಿಳಿದುಕೊಳ್ಳಬೇಕೇ? ಇಲ್ಲಿ ಹಂಚಿಕೊಂಡಿದ್ದೇನೆ. ಓದಿ. 

Advertisement

ಒಟ್ಟು ನಕ್ಷತ್ರಗಳು 27
ಅಶ್ವಿ‌ನಿ, ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರಾ, ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮಖೆ, ಪೂರ್ವಾಫಾಲ್ಗುಣಿ, ಉತ್ತರಾ ಫಾಲ್ಗುಣಿ,  ಹಸ್ತಾ, ಚಿತ್ತಾ, ಸ್ವಾತಿ, ವಿಶಾಖ, ಅನುರಾಧ, ಜೇಷ್ಠ, ಮೂಲಾ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಧನಿಷ್ಠ, ಶತಭಿಷಾ, ಪೂರ್ವಾಭಾದ್ರ, ಉತ್ತರಾಭಾದ್ರ, ರೇವತಿ. 
ಈ 27 ನಕ್ಷತ್ರಗಳನ್ನು ಮೂರರಂತೆ ಭಾಗಿಸಿ 9 ಗ್ರಹಗಳ ನಿಯಂತ್ರಣದಲ್ಲಿರುವಂತೆ ನಿಯೋಜಿಸಲಾಗಿದೆ. ಅಂದರೆ ಪ್ರತಿ ಮೂರು ನಕ್ಷತ್ರಕ್ಕೆ ಒಂದು ಗ್ರಹ ಅಧಿಪತಿಯಾಗಿರುತ್ತಾನೆ.

ನಕ್ಷತ್ರಗಳು    ಅಧಿಪತಿ
ಕೃತ್ತಿಕ, ಉತ್ತರಾಷಾಢ, ಉತ್ತರಾಫಾಲ್ಗುಣಿ    ಸೂರ್ಯ
ರೋಹಿಣಿ, ಹಸ್ತಾ, ಶ್ರವಣ    ಚಂದ್ರ
ಮೃಗಶಿರಾ, ಚಿತ್ತಾ, ಧನಿಷ್ಠ:    ಮಂಗಳ
ಆಶ್ಲೇಷ, ಜೇಷ್ಠಾ, ರೇವತಿ    ಬುಧ
ಪುನರ್ವಸು, ವಿಶಾಖ, ಪೂರ್ವಾಭಾದ್ರಾ    ಗುರು
ಭರಣಿ, ಪೂರ್ವಾಫಾಲ್ಗುಣಿ ಪೂರ್ವಾಷಾಢ    ಶುಕ್ರ
ಪುಷ್ಯ, ಅನೂರಾಧ, ಉತ್ತರಾಭಾದ್ರ    ಶನಿ
ಆರಿದ್ರಾ, ಸ್ವಾತಿ, ಶತಭಿಷಾ    ರಾಹು
ಆಶ್ವಿ‌ನಿ, ಮಖೆ, ಮೂಲಾ:   ಕೇತು

ಪ್ರತಿ ನಕ್ಷತ್ರಕ್ಕೆ ನಾಲ್ಕು  ಪಾದಗಳಿರುತ್ತವೆ. ಒಂದು ರಾಶಿಗೆ ಒಂಬತ್ತು ಪಾದಗಳಿರಬೇಕು. ಹೀಗಾಗಿ ಒಂದೊಂದು ರಾಶಿಯಲ್ಲಿ 2-3 ನಕ್ಷತ್ರಗಳು ಅಡಕವಾಗಿರುತ್ತವೆ. 
ನಕ್ಷತ್ರಗಳು/ಪಾದಗಳು    ರಾಶಿಗಳು
ಅಶ್ವಿ‌ನಿ4, ಭರಣಿ4 ಕೃತ್ತಿಕಾ1    ಮೇಷ
ಕೃತ್ತಿಕಾ 3, ರೋಹಿಣಿ4, ಮೃಗಶಿರಾ 2    ವೃಷಭ
ಮೃಗಶಿರಾ2, ಆರಿದ್ರಾ4, ಪುನರ್ವಸು3    ಮಿಥುನ

ಪುನರ್ವಸು1, ಆಶ್ಲೇಷ 4, ಪುಷ್ಯ 4    ಕಟಕ
ಮಖೆ4, ಪೂರ್ವಾ ಫಾಲ್ಗುಣಿ4, ಉತ್ತರಾ1    ಸಿಂಹ
ಉತ್ತರಾ 3, ಹಸ್ತಾ 4, ಚಿತ್ತಾ 2,     ಕನ್ಯಾ
ಚಿತ್ತಾ 2, ಸ್ವಾತಿ 4, ಶಾಖ 3,    ತುಲಾ
ವಿಶಾಖಾ 1, ಅನೂರಾಧಾ 4, ಜೇಷಾ 4    ವೃಶ್ಚಿಕ
ಮೂಲಾ 4, ಪೂರ್ವಾಷಾಢ 4, ಉತ್ತರಾಷಾಢಾ 1, ಧನುಸ್ಸು.
ಉತ್ತರಾಷಾಢ 3, ಶ್ರವಣಾ 4, ಧನಿಷಾ 2, ಮಕರ
ಧನಿಷ್ಠಾ 2, ಶತಭಿಷಾ 4, ಪೂರ್ವಾಭಾದ್ರಾ 3, ಕುಂಭ
ಪೂರ್ವಾಭಾದ್ರಾ 1, ಉತ್ತರಾಭಾದ್ರಾ 4, ರೇವತಿ4, ಮೀನ

Advertisement

ಈಗ ಯಾವರಾಶಿಗಳಿಗೆ ಯಾವ ಗ್ರಹ ಅಧಿಪತಿ ಎಂಬುದನ್ನು ನೋಡೋಣ.
ಮೇಷ-ವೃಶ್ಚಿಕ ;  ಮಂಗಳ 
ವೃಷಭ-ತುಲಾ :  ಶುಕ್ರ
ಮಿಥುನ-ಕನ್ಯಾ:  ಬುಧ
ಕಟಕ:          ಚಂದ್ರ
ಸಿಂಹ:         ಸೂರ್ಯ
ಧನುಸು-ಮೀನ:   ಗುರು
ಮಕರ-ಕುಂಭ:    ಶನಿ
ರಾಹು ಮತ್ತು ಕೇತುಗಳಿಗೆ ಯಾವ ರಾಶಿಯೂ ಇಲ್ಲ. 

ನಕ್ಷತ್ರದ ಪ್ರಕಾರ ಆಯಾ ನಕ್ಷತ್ರದವರ ಸ್ವಭಾವವನ್ನು ಹೇಳುವುದಾದರೆ ಆ ನಕ್ಷತ್ರದ ಅಧಿಪತಿಯನ್ನೂ ಗಮನದಲ್ಲಿಟ್ಟುಕೊಂಡು ಹೇಳಬೇಕು. ರಾಶಿಯ ಪ್ರಕಾರ ಹೇಳಬೇಕೆಂದರೆ ಅದು ರ್‍ಯಾಂಡಮ್‌ ಆಗಿರುತ್ತೆ. ಯಾಕೆಂದರೆ ಒಂದು ರಾಶಿಯಲ್ಲಿ ಮೂರು ನಕ್ಷತ್ರ ಬರುತ್ತದೆ, ಮೂರೂ ನಕ್ಷತ್ರದ ಅಧಿಪತಿಗಳು ಬೇರೆ ಇರುತ್ತಾರೆ. ಹೀಗಾಗಿ ರಾಶಿ ಪ್ರಕಾರ ಸ್ವಭಾವ ಹೇಳುವುದಕ್ಕಿಂತ ನಕ್ಷತ್ರದ ಪ್ರಕಾರ ಸ್ವಭಾವ ಹೇಳುವುದು ಸರಿಯಾಗಿರುತ್ತದೆ ಎಂದು ನನ್ನ ಭಾವನೆ. ಇಲ್ಲಿ ಹೇಳಿರುವುದರಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿರಬಹುದು. ಏಕೆಂದರೆ ಒಬ್ಬ ವ್ಯಕ್ತಿಯ ಗುಣ ಸ್ವಭಾವದ ಬಗ್ಗೆ ಹೇಳಲು ಹೊರಟಾಗ ಅವರು ಹುಟ್ಟಿದ ಜನ್ಮಲಗ್ನ, ರಾಶಿಯೂ ಗಣನೆಗೆ ಬರುತ್ತದೆ. ಅನುವಂಶಿಕ ಗುಣವೂ ಕಾರಣವಾಗಿರುತ್ತದೆ. 

ಈಗ ಇಲ್ಲಿ ಸಂಕ್ಷಿಪ್ತವಾಗಿ ಅಂದರೆ ಆಯಾ ನಕ್ಷತ್ರದವರ ಗುಣಸ್ವಭಾವಗಳನ್ನು ವಿವರಣೆಯಿದೆ. 
ಕೃತ್ತಿಕಾ, ಉತ್ತರಾಫಾಲ್ಗುಣಿ, ಉತ್ತರಾಷಾಢ ನಕ್ಷತ್ರಗಳಿಗೆ ಸೂರ್ಯ ಅಧಿಪತಿ. ಇವರು ಸ್ವಭಾವದಲ್ಲಿ ಸೂರ್ಯನಷ್ಟೇ ಪ್ರಖರ. ಎಲ್ಲಾ ಕೆಲಸದಲ್ಲೂ ಒಂದು ಕ್ರಮಬದ್ಧತೆ ಇರುತ್ತದೆ. ಅಶಿಸ್ತನ್ನು ಸಹಿಸುವುದಿಲ್ಲ. ಕೊಳಕನ್ನು ಕಂಡರಾಗದು. ಪ್ರಾಮಾಣಿಕರು. ಇತರರಿಂದಲೂ ಅದೇ ಶಿಸ್ತು, ಶುಚಿಯೂ ಪ್ರಮಾಣಿಕತೆಯನ್ನು ಬಯಸುತ್ತಾರೆ. ಸುಳ್ಳು, ಮೋಸ ಎಂದರೆ ಈ ನಕ್ಷತ್ರದವರು ಮಾರು ದೂರ. ಎಷ್ಟೇ ಕಷ್ಟಪಡಲೂ ತಯಾರು. ಕೆಳಗೆ ಬಿದ್ದರೂ ಛಲದಿಂದಲೇ ಮೇಲೆದ್ದು ಬರುತ್ತಾರೆ. ಇವರಿಗೆ ಸ್ವಾಭಿಮಾನ ಜಾಸ್ತಿ. ಕಷ್ಟ ಸಹಿಷ್ಣುಗಳು. ಅನ್ಯಾಯ, ಶೋಷಣೆ ಸಹಿಸುವುದಿಲ್ಲ. ಒಮ್ಮೆ ಮಾತು ಕೊಟ್ಟರೆ ತಪ್ಪುವುದಿಲ್ಲ. ಏನೇ ಕಷ್ಟ ಬಂದರೂ ತಾವು ನುಡಿದ ಮಾತಿನ ಮೇಲೆಯೇ ನಿಲ್ಲುತ್ತಾರೆ.. ಕೋಪ ಬಂದರೆ ಮಾತ್ರ ಅವರ ಸಿಟ್ಟು, ಆ ಸಂದರ್ಭದಲ್ಲಿನ ವರ್ತನೆ, ಉರಿಯುವ ಸೂರ್ಯನಷ್ಟೇ ಶಕ್ತಿಯುತವಾಗಿರುತ್ತದೆ. ಸ್ನೇಹಿತರ ವಿಷಯದಲ್ಲಿ ತುಂಬಾ ಚೂಸಿ. ತಮಗೆ ಸಂಬಂಧ ಪಡದ ವಿಷಯದಲ್ಲಿ ಅನಗತ್ಯವಾಗಿ ಮೂಗು ತೂರಿಸುವುದಿಲ್ಲ. ಹೃದಯವಂತಿಕೆಯುಳ್ಳವರು. ರಹಸ್ಯಗಳನ್ನು ಕಾಪಾಡುತ್ತಾರೆ. ವಿನಯಕ್ಕೆ ಮಣಿಯುವುದಿಲ್ಲ. ದರ್ಪಕ್ಕೆ, ಅಹಂಕಾರಕ್ಕೆ ಮಣಿಯರು. ಸಡ್ಡುಹೊಡೆದು ನಿಲ್ಲುತ್ತಾರೆ. ಪ್ರೀತಿಗೆ ಸೋಲುತ್ತಾರೆ. ಪ್ರೀತಿಗೆ ನಿಷ್ಠಾವಂತರು. ಆದರೆ ಅವಮಾನವನ್ನು ಕೊಂಚವೂ ಸಹಿಸುವುದಿಲ್ಲ. ಇವರಿಗೆ ಶಿಕ್ಷಣ, ಆಡಳಿತ, (ಎಚ್‌.ಆರ್‌ ಅಥವಾ ಅಡ್ಮಿನಿಸ್ಟ್ರೇಶನ್‌, ವಿಭಾಗ) ಹೇಳಿಮಾಡಿಸಿದ್ದು.

ರೋಹಿಣಿ,  ಹಸ್ತಾ, ಶ್ರವಣಾ ನಕ್ಷತ್ರಗಳಿಗೆ ಚಂದ್ರ ಅಧಿಪತಿ. ಚಂದ್ರ ಮನಸೋ ಜಾತಃ ಎನ್ನುತ್ತಾರೆ. ಮನಸ್ಸಿಗೆ ಅಧಿಪತಿ ಚಂದ್ರ. ಚಂದ್ರನ ನಕ್ಷತ್ರದವರೇ ಆದ ಇವರಿಗೆ ಮನೋಬಲ ಹೆಚ್ಚು. ಮನಸ್ಸಿಗೂ ನಾಲಿಗೆಗೂ ಹೊಂದಾಣಿಕೆ ಇರುತ್ತದೆ. ಅಂದರೆ ತಾವೇನು ಮಾತನಾಡುತ್ತಿದ್ದೇವೆ ಎಂಬುದರ ಬಗ್ಗೆ ಗಮನವಿರುತ್ತದೆ. ಹಗುರವಾಗಿ ಮಾತನಾಡುವುದಿಲ್ಲ. ಸರಿಯಾಗಿ ಯೋಚಿಸದೆ ಯಾವ ತೀರ್ಮಾನವನ್ನೂ ತೆಗೆದುಕೊಳ್ಳುವುದಿಲ್ಲ. ಯಾವುದೇ ವಿಷಯದಲ್ಲೂ ಇದು ಹೀಗೇ ಮಾಡಬೇಕೆಂಬ ನಿರ್ಧಾರ ಇರುತ್ತದೆ. ಯಾವಾಗಲೂ ಉನ್ನತ ಮಟ್ಟದ ಯೋಚನೆ. ಆಧುನಿಕ ಯೋಚನೆಗಳು ಇವರದಾಗಿರುತ್ತದೆ. ಉನ್ನತ ಮಟ್ಟದಲ್ಲಿಯೇ ಇರುತ್ತಾರೆ. ಏನನ್ನಾದರೂ ಹೇಳುವುದಿದ್ದರೆ ಎದುರಿನವರ ಮನಸ್ಸಿಗೆ ನಾಟುವಂತೆ ಖಡಕ್ಕಾಗಿ ಹೇಳುತ್ತಾರೆ. ಅಂದರೆ ಕನ್‌ವಿನ್ಸ್‌ ಮಾಡುವುದು ಇವರಿಗೆ ಸುಲಭ. ಸಭಾ ಕಂಪನವಿರುವುದಿಲ್ಲ. ಎಷ್ಟೇ ದೊಡ್ಡ ಸಭೆಯನ್ನಾದರೂ ಉದ್ದೇಶಿಸಿ ನಿರರ್ಗಳವಾಗಿ ಮಾತಾಡಬಲ್ಲರು. ಶುಚಿ-ಶಿಸ್ತಿಗೆ ಹೆಚ್ಚು ಪ್ರಾಧಾನ್ಯತೆ. ಅವಮಾನ ಸಹಿಸರು. ನಂಬಿದವರನ್ನು ಸಲಹುತ್ತಾರೆ. ಮೋಸ ವಂಚನೆ ಇವರ ಸ್ವಭಾವದಲ್ಲಿಲ್ಲ. ರಸಿಕರು. ಸೃಜನಶೀಲತೆ, ಯಾವುದಾದರೂ ಕಲೆಯಲ್ಲಿ ಆಸಕ್ತಿ. ಇವರ ಸ್ವಭಾವ. ಚಂದ್ರನಂತೆಯೇ ತಂಪಾದ ಗುಣದವರು. ಯಾವುದೇ ಕ್ಷೇತ್ರಕ್ಕೂ ನ್ಯಾಯ ಒದಗಿಸುತ್ತಾರೆ. ವೃತ್ತಿಯಲ್ಲಿ ಬಹಳ ನಿಷ್ಠೆ. ತಿರುಗಾಟ ಹೆಚ್ಚು ಪ್ರಿಯ, ಅಥವಾ ವೃತ್ತಿಯಲ್ಲಿ ತಿರುಗಾಟ ಸಾಮಾನ್ಯ. 

ಮೃಗಶಿರಾ, ಚಿತ್ತಾ, ಧನಿಷ್ಠಾ ನಕ್ಷತ್ರಗಳಿಗೆ ಕುಜ ಅಧಿಪತಿ. ಕುಜ ಸೈನ್ಯಾಧಿಪತಿ ಶೂರ. ಹೀಗಾಗಿ ಇವರು ಸ್ವಭಾವದಲ್ಲಿ ಕಠಿಣರು. ಮಾತೂ ಕಠಿಣವೇ.  ಹಠದ ಸ್ವಭಾವದವರು. ನೋಡಲು ಮೃದುವಾಗಿಯೇ ಕಾಣುತ್ತಾರೆ. ಆದರೆ ಪ್ರತಿ ವಿಷಯದಲ್ಲೂ ತಮ್ಮ ಮಾತೇ ನಡೆಯಬೇಕೆಂಬ ಕೆಚ್ಚು. ಅದಕ್ಕಾಗಿ ಏನು ಬೇಕಾದರೂ ಮಾಡಲು ತಯಾರಾಗಿರುತ್ತಾರೆ. ಇದು ಒಮ್ಮೊಮ್ಮೆ  ಅವರಿಗೇ ವ್ಯತಿರಿಕ್ತವಾಗುತ್ತದೆ. ನೇರ ನಡೆನುಡಿ. ಧೈರ್ಯ ಹೆಚ್ಚು. ಯಾರಿಗೂ ಕೇರ್‌ ಮಾಡುವುದಿಲ್ಲ. ಶುಚಿಯಲ್ಲದ ಕೆಲಸಗಳನ್ನು ಮಾಡಲೂ ಹೇಸುವುದಿಲ್ಲ. ಆದ್ದರಿಂದ ಇವರಿಂದ ಶುಚಿತ್ವವನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ. ಕೊಲೆ,  ರಕ್ತಪಾತವೆಂದರೂ ಈ ಜನರಿಗೆ ಹೆದರಿಕೆ ಇಲ್ಲ. ಎಂಥ ಕಠಿಣ ಪರಿಸ್ಥಿತಿಗಳಿಗೂ ತಮ್ಮನ್ನು ಒಡ್ಡಿಕೊಳ್ಳಲೂ ತಯಾರಾಗುತ್ತದೆ.  ಉಪವಾಸ ವನವಾಸವಾದರೂ ಸಹಿಸುತ್ತಾರೆ. ಬಲಿಷ್ಠ ಮೈಕಟ್ಟು ಹೊಂದಿರುತ್ತಾರೆ. ಎತ್ತರವಾಗಿಯೂ ಇರುತ್ತಾರೆ. ಸಾಹಸಪ್ರಿಯರು. ಸ್ವಾಭಿಮಾನಿಗಳು. ಇಂಥವರು ಹೆಚ್ಚಾಗಿ ಪೊಲೀಸ್‌ ಹಾಗೂ ಮಿಲಿಟರಿ ಕೆಲಸಕ್ಕೆ ಹೊಂದುತ್ತಾರೆ. ಒಳ್ಳೆಯ ಶಸ್ತ್ರಚಿಕಿತ್ಸಾ ತಜ್ಞರೂ ಆಗಿರುತ್ತಾರೆ. ಹೆಮೆಟಾಲಜಿಸ್ಟ್‌ (ರಕ್ತ ತಜ್ಞ) ಆಗಿರಬಹುದು. 

ಆಶ್ಲೇಷಾ, ಜೇಷ್ಠಾ, ರೇವತಿ ನಕ್ಷತ್ರಗಳಿಗೆ ಬುಧ ಅಧಿಪತಿ. ಈ ನಕ್ಷತ್ರದವರು ಅತಿ ಬುದ್ಧಿವಂತಿಕೆಯ ಜನ. ಇವರಿಗೆ ಲೆಕ್ಕಾಚಾರದ ಬುದ್ಧಿ ಜಾಸ್ತಿ. ಹಣಕಾಸನ್ನು ನಿಭಾಯಿಸುವುದರಲ್ಲಿ ಬಹಳ ಯೋಚನೆ ಮಾಡುತ್ತಾರೆ. ಅಗತ್ಯವಿದೆಯೇ ಇಲ್ಲವೇ ಎಂದು ಎರಡೆರಡು ಬಾನಿ ಲೆಕ್ಕ ಹಾಕಿ ಆನಂತರವೇ ಕೈಬಿಡುತ್ತಾರೆ.  ಶಿಸ್ತು ಸಂಯಮ ಎಲ್ಲಾ ಸಾಧಾರಣ. ಮಾತು ಹೆಚ್ಚು. ಆತುರವೂ ಜಾಸ್ತಿ. ಆತುರದಿಂದ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾರೆ. ತಿಂಡಿಪ್ರಿಯರು. ನೆನಪಿನ ಶಕ್ತಿ ಚುರುಕಾಗಿರುತ್ತದೆ. ಗಣಿತದಲ್ಲಿ, ಅಕೌಂಟ್ಸ್‌ನಲ್ಲಿ ಚುರುಕಾಗಿರುತ್ತಾರೆ. ವಾಕ್‌ಶಕ್ತಿ ಚೆನ್ನಾಗಿರುತ್ತದೆ. ಹೀಗಾಗಿ ಒಳ್ಳೆಯ ವಕೀಲರೂ ಆಗಬಹುದು. ಚಾರ್ಟೆಡ್‌ ಅಕೌಂಟೆಂಟ್‌ ಆಗಬಹುದು. ಮಾತಿನಿಂದ ಲಾಭವಾಗುವ ವೃತ್ತಿ ಇವರಿಗೆ ಚೆನ್ನಾಗಿ ಹೊಂದುತ್ತದೆ. ಒಳ್ಳೆಯ ಬರಹಗಾರರೂ ಆಗಿರುತ್ತಾರೆ. ಸ್ನೇಹಪ್ರಿಯರು. ಬಂಧುಪ್ರಿಯರು. ಹಾಸ್ಯಪ್ರಿಯರು. ಇದರಲ್ಲಿ ಜೇಷ್ಠಾ ನಕ್ಷತ್ರದವರು ಮಾತ್ರ ಮೂಡಿಯಾಗಿರುತ್ತಾರೆ. ಕ್ಷಣಚಿತ್ತ ಕ್ಷಣಪಿತ್ಥ ಎಂಬಂತೆ ಅವರ ಗುಣ ಸ್ವಭಾವ ಇರುತ್ತದೆ. 
(ಮುಂದುವರೆಯುತ್ತದೆ)

ಅನಂತಶಾಸ್ತ್ರಿ 

Advertisement

Udayavani is now on Telegram. Click here to join our channel and stay updated with the latest news.

Next