Advertisement

ನಾಯರ್‌, ಪಾಂಡೆ ಪರಾಕ್ರಮ: ಸೆಮಿಫೈನಲ್‌ಗೆ ನೆಗೆದ ಕರ್ನಾಟಕ

12:30 AM Jan 19, 2019 | |

ಬೆಂಗಳೂರು: ಗೆಲ್ಲುವ ಬಗ್ಗೆ ಆತ್ಮವಿಶ್ವಾಸಕ್ಕಿಂತ ಆತಂಕವನ್ನೇ ಹೆಚ್ಚಾಗಿ ಹೊಂದಿದ್ದ ಕರ್ನಾಟಕ ತಂಡ, ಶುಕ್ರವಾರ ಅದ್ಭುತವಾಗಿ ಆಡಿ ರಾಜಸ್ಥಾನ ವಿರುದ್ಧದ 6 ವಿಕೆಟ್‌ ಜಯ ಸಾಧಿಸಿ ರಣಜಿ ಟ್ರೋಫಿ ಪಂದ್ಯಾವಳಿಯ ಸೆಮಿಫೈನಲ್‌ಗೆ ನೆಗೆದಿದೆ.

Advertisement

ಗೆಲ್ಲಲು 184 ರನ್‌ ಗಳಿಸುವ ಗುರಿ ಪಡೆದಿದ್ದ ಕರ್ನಾಟಕ ತಂಡ, ಗುರುವಾರ 45 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡು ಆತಂಕಕ್ಕೊಳಗಾಗಿತ್ತು. ಹಿಂದಿನ ಮೂರೂ ದಿನಗಳಲ್ಲಿ ಚಿನ್ನಸ್ವಾಮಿ ಅಂಕಣ ವರ್ತಿಸಿದ್ದ ರೀತಿ ಕಂಡಾಗ ಶುಕ್ರವಾರ ಕರ್ನಾಟಕದ ಸ್ಥಿತಿ ಕಷ್ಟವಿದೆ ಎಂದೇ ಭಾವಿಸಲಾಗಿತ್ತು. 4ನೇ ದಿನದಾರಂಭದಲ್ಲೇ ರೋನಿತ್‌ ಮೋರೆ ಔಟಾಗಿದ್ದರು. ಇದು ರಾಜ್ಯಕ್ಕೆ ಭೀತಿ ಹುಟ್ಟಿಸಿತ್ತು.

ಅಜೇಯ 129 ರನ್‌ ಜತೆಯಾಟ
ಈ ಆತಂಕವನ್ನು ದೂರ ಮಾಡಿದ್ದು ಖ್ಯಾತ ಆಟಗಾರ ಕರುಣ್‌ ನಾಯರ್‌ ಹಾಗೂ ನಾಯಕ ಮನೀಷ್‌ ಪಾಂಡೆ. ಇಬ್ಬರೂ ಕೂಡಿಕೊಂಡು 5ನೇ ವಿಕೆಟಿಗೆ 129 ರನ್‌ ಜತೆಯಾಟ ನಡೆಸಿ ತಂಡವನ್ನು ಸುರಕ್ಷಿತವಾಗಿ ದಡ ಮುಟ್ಟಿಸಿದರು. ಈ ತಾಳ್ಮೆಯ ಆಟದ ವೇಳೆ ಕರುಣ್‌ ನಾಯರ್‌ 129 ಎಸೆತ ಎದುರಿಸಿ 6 ಬೌಂಡರಿ ಸಹಿತ 61 ರನ್‌ ಮಾಡಿದರು.

ನಾಯಕ ಮನೀಷ್‌ ಪಾಂಡೆ ಇದಕ್ಕೆ ವ್ಯತಿರಿಕ್ತವಾಗಿ ಬ್ಯಾಟ್‌ ಬೀಸಿದರು. ಆಕ್ರಮಣಕಾರಿಯಾಗಿ ಆಡಿದ ಅವರು 87 ರನ್‌ ಬಾರಿಸಿದರು. ಇದಕ್ಕಾಗಿ ಎದುರಿಸಿದ್ದು ಕೇವಲ 75 ಎಸೆತ. ಈ ವೇಳೆ 14 ಬೌಂಡರಿ, 2 ಸಿಕ್ಸರ್‌ ಚಚ್ಚಿದರು. ಒಂದು ಕಡೆ ಕರುಣ್‌ ತಾಳ್ಮೆಯ ಆಟ, ಮತ್ತೂಂದು ಕಡೆ ಮನೀಷ್‌ ಸ್ಫೋಟಕ ಬ್ಯಾಟಿಂಗ್‌ ರಾಜ್ಯದ ಇನ್ನಿಂಗ್ಸ್‌ಗೆ ಸಮತೋಲನ ತಂದಿತ್ತಿತು. ರಾಜಸ್ಥಾನ ಬೌಲರ್‌ಗಳು ಹಿಡಿತ ಕಳೆದುಕೊಳ್ಳಲು ಇಷ್ಟು ಸಾಕಾಯಿತು.

ರಾಜಸ್ಥಾನ ಪರ ಅನಿಕೇತ್‌ ಚೌಧರಿ 32 ರನ್‌ ನೀಡಿ 2 ವಿಕೆಟ್‌ ಉರುಸಿದರು. ಕರ್ನಾಟಕದ ಮಾಜಿ ನಾಯಕ ವಿನಯ್‌ ಕುಮಾರ್‌ ಮೊದಲ ಇನ್ನಿಂಗ್ಸ್‌ನಲ್ಲಿ ತೋರಿದ ಅಮೋಘ ಬ್ಯಾಟಿಂಗ್‌ ಸಾಧನೆಗಾಗಿ ಪಂದ್ಯಶ್ರೇಷ್ಠ ಗೌರವ ಪಡೆದರು.

Advertisement

ಸಂಕ್ಷಿಪ್ತ ಸ್ಕೋರ್‌: ರಾಜಸ್ಥಾನ-224 ಮತ್ತು 222. ಕರ್ನಾಟಕ-263 ಮತ್ತು 4 ವಿಕೆಟಿಗೆ 185 (ಪಾಂಡೆ ಅಜೇಯ 87, ನಾಯರ್‌ ಅಜೇಯ 61).
ಪಂದ್ಯಶ್ರೇಷ್ಠ: ವಿನಯ್‌ ಕುಮಾರ್‌.

ಎದುರಾಳಿ ಇಂದು ಇತ್ಯರ್ಥ
ಕೇರಳ ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. ಕರ್ನಾಟಕ ಉಪಾಂತ್ಯ ತಲುಪಿದ 2ನೇ ತಂಡವಾಗಿದೆ. ಈ ತಂಡಗಳ ಎದುರಾಳಿ ಯಾರೆಂಬುದು ಶನಿವಾರ ಇತ್ಯರ್ಥವಾಗಲಿದೆ.

ನಾಗಪುರದಲ್ಲಿ ವಿದರ್ಭ ವಿರುದ್ಧ ಉತ್ತರಖಂಡ್‌ ಇನ್ನಿಂಗ್ಸ್‌ ಸೋಲಿನ ಸುಳಿಗೆ ಸಿಲುಕಿದೆ. ಉಳಿದ 5 ವಿಕೆಟ್‌ಗಳಿಂದ ಇನ್ನೂ 122 ರನ್‌ ಮಾಡಬೇಕಾದ ಒತ್ತಡದಲ್ಲಿದೆ. ಹೀಗಾಗಿ ವಿದರ್ಭ ಸೆಮಿಫೈನಲ್‌ ಪ್ರವೇಶಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಲಕ್ನೋದಲ್ಲಿ ಉತ್ತರಪ್ರದೇಶ-ಸೌರಾಷ್ಟ್ರ ಪಂದ್ಯ ರೋಚಕ ಘಟ್ಟ ತಲುಪಿದೆ. ಗೆಲುವಿಗೆ 372 ರನ್‌ ಸವಾಲು ಪಡೆದಿರುವ ಸೌರಾಷ್ಟ್ರ 2 ವಿಕೆಟಿಗೆ 195 ರನ್‌ ಗಳಿಸಿ ಹೋರಾಟ ಜಾರಿಯಲ್ಲಿರಿದೆ. ಸೆಮಿಗೆ ಏರಬೇಕಾದರೆ ಸೌರಾಷ್ಟ್ರಕ್ಕೆ ಗೆಲುವು ಅನಿವಾರ್ಯ. ಅಕಸ್ಮಾತ್‌ ಪಂದ್ಯ ಡ್ರಾಗೊಂಡರೆ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿರುವ ಯುಪಿಗೆ ಈ ಅವಕಾಶ ಲಭಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next