Advertisement

ನಾಗರಹೊಳೆ: 2,537 ಕಿ.ಮೀ. ಫೈರ್‌ಲೈನ್‌ ಪೂರ್ಣ

04:33 PM Dec 18, 2022 | Team Udayavani |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಫೈರ್‌ಲೈನ್‌(ಬೆಂಕಿರೇಖೆ) ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಫೈರ್‌ಲೈನ್‌ಗಾಗಿ ತೆರವುಗೊಳಿಸಿದ್ಧ ಗಿಡಗಳು ಒಣಗಿದ ನಂತರ ಸುಡುವ ಕಾರ್ಯ ನಡೆಸಬೇಕಿದ್ದು, ಈ ಬಾರಿಯೂ ಶೂನ್ಯ ಬೆಂಕಿಯಾಗಿಸಲು ಇಲಾಖೆ ಸರ್ವ ಸಿದ್ಧತೆ ಮಾಡಿಕೊಂಡಿದೆ.

Advertisement

ಸಾಮಾನ್ಯವಾಗಿ ಪ್ರತಿವರ್ಷ ಡಿಸೆಂಬರ್‌ ಅಂತ್ಯದೊಳಗೆ ಫೈರ್‌ಲೈನ್‌ ಕಾರ್ಯ ಮುಗಿಯುತ್ತಿತ್ತು. ನಾಗರಹೊಳೆ ಉದ್ಯಾನವನವು ಹುಣಸೂರು, ವಿರಾಜಪೇಟೆ, ಎಚ್‌.ಡಿ.ಕೋಟೆ ತಾಲೂಕು ವ್ಯಾಪ್ತಿಯಲ್ಲಿದ್ದು, ಈಗಾಗಲೇ ಉದ್ಯಾನವನದ ವೀರನಹೊಸಹಳ್ಳಿ, ಮತ್ತಿಗೋಡು, ನಾಗರಹೊಳೆ, ಕಲ್ಲಳ್ಳ, ಅಂತರಸಂತೆ, ಮೇಟಿಕುಪ್ಪೆ, ಡಿ.ಬಿ.ಕುಪ್ಪೆ, ಹುಣಸೂರು ಸೇರಿದಂತೆ ಎಂಟು ವಲಯಗಳಲ್ಲಿ 2,537 ಕಿ.ಮೀ.ಯಷ್ಟು ಫೈರ್‌ಲೈನ್‌ ನಿರ್ಮಿಸಬೇಕಿದ್ದು, ಈಗಾಗಲೇ ಬೆಂಕಿರೇಖೆ ನಿರ್ಮಿಸುವ ಸಲುವಾಗಿ ಗಿಡಗಳನ್ನು ತೆರವುಗೊಳಿಸಲಾಗಿದೆ. ಆದರೆ ಈ ಬಾರಿ ಅಕಾಲಿಕ ಮಳೆಯಾಗಿದ್ದರಿಂದ ಇನ್ನೂ ಭೂಮಿ ತೇವವಿದ್ದು, ಅಲ್ಲಲ್ಲಿ ಹಸಿರಿರುವುದರಿಂದ ಲೈನ್‌ಸುಡಲು ಸಾಧ್ಯವಾಗಿಲ್ಲ. ಇನ್ನು 6-8 ದಿನಗಳ ಕಾಲ ಬಿಸಿಲು ಬಂದಲ್ಲಿ ಮಾತ್ರ ಜನವರಿ ಮಧ್ಯದಲ್ಲಿ ಫೈರ್‌ ಲೈನ್‌ ಮುಗಿಯಬಹುದಾದರೂ ಮುನ್ನೆಚ್ಚರಿಕೆವಹಿಸ ಲಾಗಿದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ಉದ್ಯಾನದ2 61 ಕೆರೆ-ಕಟ್ಟೆಗಳು ಭರ್ತಿ: ಈಬಾರಿ ಮಾರ್ಚ್‌ ತಿಂಗಳಿಂದ ಡಿಸೆಂಬರ್‌ವರೆಗೂ ಉದ್ಯಾನ ದಲ್ಲಿ ಉತ್ತಮವಾಗಿದ್ದು, ಉದ್ಯಾನದೊಳಗಿನ ಬಫರ್‌ ಝೋನ್‌ನ 105, ಕೋರ್‌ಏರಿಯಾದ 156 ಕೆರೆಗಳು ಸೇರಿದಂತೆ ಒಟ್ಟು 261 ಕೆರೆ-ಕಟ್ಟೆಗಳಲ್ಲಿ ಸಮೃದ್ಧ ನೀರು ತುಂಬಿದೆ. ಅಲ್ಲದೆ 25ಕ್ಕೂ ಹೆಚ್ಚು ಸೋಲಾರ್‌ ಪಂಪ್‌ ಸೆಟ್‌ಗಳು ಸುಸ್ಥಿತಿಯಲ್ಲಿರುವುದರಿಂದ ಇನ್ನೂ ಹಸಿರು ನಳನಳಿಸುತ್ತಿದೆ.

ಮೂರು ನದಿಗಳಲ್ಲೂ ನೀರು: ಉದ್ಯಾನದೊಳಗೆ ಹರಿಯುವ ನಾಗರಹೊಳೆ, ಲಕ್ಷಣತೀರ್ಥ, ಸಾರಥಿ ನದಿಗಳಲ್ಲಿ ಇನ್ನೂ ಹರಿಯುತ್ತಿದೆ. ಅರಣ್ಯದೊಳಗಿನ ಸೋಲಾರ್‌ಪಂಪ್‌ನಿಂದ ಕೆರೆ-ಕಟ್ಟೆಗಳಿಗೆ ನಿರಂತರವಾಗಿ ನೀರು ತುಂಬುತ್ತಿರುವುದರ ಪರಿಣಾಮ ಅರಣ್ಯ ಬೆಂಕಿ ರಕ್ಷಣೆಗೆ ಹಾಗೂ ವನ್ಯಜೀವಿಗಳ ನೀರಿನದಾಹ ನೀಗಿಸಲು ವರದಾನವಾಗಿದ್ದರೂ ಬರುವ ಬೇಸಿಗೆಯಲ್ಲಿ ಒಂದೆಡೆಯಿಂದ ಮತ್ತೂಂದೆಡೆಗೆ ಗಾಳಿಯಿಂದ ಹರಡುವ ಬೆಂಕಿಯಿಂದ ಅರಣ್ಯ ರಕ್ಷಿಸಲು ಫೈರ್‌ಲೈನ್‌ ನಿರ್ಮಾಣ ಅತ್ಯಗತ್ಯವಾಗಿದೆ.

400 ಮಂದಿ ಫೈರ್‌ ವಾಚರ್‌ ನೇಮಕಕ್ಕೆ ಕ್ರಮ: ಪ್ರತಿ ವಲಯದಲ್ಲೂ ಅಗತ್ಯಕ್ಕೆ ತಕ್ಕಂತೆ ಬೆಂಕಿ ನಂದಿಸುವ ಕಾರ್ಯದಲ್ಲಿ ನುರಿತ ಸುಮಾರು 400 ಮಂದಿ ಕಾಡಂಚಿನ ಆದಿವಾಸಿಗಳನ್ನು ಪ್ರತಿವಲಯಕ್ಕೆ 40-50 ಮಂದಿಯಂತೆ ಜನವರಿ ಮೊದಲವಾರದಿಂದಲೇ ನೇಮಿಸಿಕೊಳ್ಳಲಾಗುವುದು. ಇವರಿಗೆ ನಿತ್ಯ ಮಧ್ಯಾಹ್ನ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಸಮವಸ್ತ್ರ, ಅಗತ್ಯ ಪರಿಕರಗಳ ಸೌಲಭ್ಯ ಕಲ್ಪಿಸಲಾಗುವುದು.

Advertisement

ಡ್ರೋಣ್‌-ಕ್ಯಾಮೆರಾ ಕಣ್ಗಾವಲು: ಉದ್ಯಾನದ ಹಲವೆಡೆ ಇರುವ ದೊಡ್ಡದಾದ 31 ವಾಚ್‌ಟವರ್‌ ಮೂಲಕ ಹಾಗೂ ಉದ್ಯಾನದಂಚಿನ ಪ್ರದೇಶದ ಅಲ್ಲಲ್ಲಿ ಮರದ ಮೇಲೆ ಅಟ್ಟಣೆ ನಿರ್ಮಿಸಲಾಗಿದೆ. 24/7 ಮಾದರಿಯಲ್ಲಿ ಹಗಲು-ರಾತ್ರಿವೇಳೆ ಕಣ್ಗಾವಲಿಡಲಾಗು ವುದು. ಛಾಯಾಚಿತ್ರ ತೆಗೆಯುವ ಡ್ರೋಣ್‌ಕ್ಯಾಮೆರಾ ಹಾಗೂ ಅರಣ್ಯದಂಚಿನ ಪ್ರದೇಶಗಳಲ್ಲಿ ಅಕ್ರಮವಾಗಿ ಒಳನುಸುಳುವವರ ಪತ್ತೆಗಾಗಿ ಮರಗಳಲ್ಲಿ ಕ್ಯಾಮೆರಾ ಅಳವಡಿಸಲಾಗುವುದು.

ಜೀಪ್‌ ಮೌಂಟೆಡ್‌ ಟ್ಯಾಂಕರ್‌: ಬೆಂಕಿ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕೆಯಾಗಿ ಪ್ರತಿ ವಲಯಕ್ಕೆ ಒಂದರಂತೆ ಜೀಪ್‌ ಮೌಂಟೆಡ್‌ಟ್ಯಾಂಕರ್‌ (ಮಿನಿವಾಟರ್‌ ಟ್ಯಾಂಕ್‌) ಇದೆ. 80 ಸ್ಪೈಯರ್‌, 15 ಪವರ್‌ ಕಟ್ಟಿಂಗ್‌ ಯಂತ್ರ, 11 ಬ್ಲೋಯರ್‌ಗಳು ಹಾಗೂ ತಲಾ 1 ಅಗ್ನಿಶಾಮಕದಳದ ವಾಹನ ಮತ್ತು ಕ್ಯೂ.ಆರ್‌.ಟಿ.ವಾಹನಗಳನ್ನು ಸನ್ನದ್ಧವಾಗಿಡಲಾಗುವುದು. ಕೆಲ ಎನ್‌ಜಿಒಗಳು ಸಹ ಉಚಿತವಾಗಿ ವಾಹನ ನೀಡಲು ಮುಂದೆ ಬಂದಿದ್ದಾರೆ. ಬಾಡಿಗೆ ವಾಹನಗಳನ್ನು ಸಹ ನಿಯೋಜಿಸಲಾಗುವುದು. ಡಿ.17 ಮತ್ತು 19ರಂದು ಸಿಬ್ಬಂದಿಗೆ ಬೆಂಕಿ ತಡೆ ಕುರಿತ ತರಬೇತಿ ನೀಡಲಾಗುತ್ತಿದೆ. ಅಗತ್ಯ ಬಿದ್ದಲ್ಲಿ ಎಸ್‌ಡಿಆರ್‌ಎಫ್‌ ಹಾಗೂ ಹೆಲಿಕಾಪ್ಟರ್‌ಗೂ ಮನವಿ ಸಲ್ಲಿಸಲಾಗಿದೆ.

ಅರಣ್ಯದಂಚಿನ ಗ್ರಾಮಸ್ಥರಿಗೆ ಅರಿವು : ಜೀವವೈವಿಧ್ಯತೆಯ ಈ ಉದ್ಯಾನವನವನ್ನು ಸಂರಕ್ಷಿಸುವ ಅಗತ್ಯತೆಯನ್ನು ತಿಳಿಸಿ ಕೊಡಲು ಉದ್ಯಾನದಂಚಿನ ಗ್ರಾಮಗಳಲ್ಲಿ ಜಾಗೃತಿ ಜಾಥಾ, ಬೀದಿನಾಟಕ, ನಾಗರಹೊಳೆ ಜೀವ ವೈವಿಧ್ಯತೆ ಅದರ ಅಗತ್ಯತೆ ಹಾಗೂ ಬೆಂಕಿಯಿಂದ ಅರಣ್ಯ ರಕ್ಷಣೆ ಕುರಿತಾಗಿ ಕೊರೊನಾ ಸಂದರ್ಭದಲ್ಲಿ ತಯಾರಿಸಿರುವ ಡಾಕ್ಯುಮೆಂಟರಿ ಚಿತ್ರಪ್ರದರ್ಶನ ಅಲ್ಲದೆ ಈ ಬಾರಿ ವಿಶೇಷವಾಗಿ ಕಾಡಂಚಿನ ಗ್ರಾಮಗಳಲ್ಲಿ ಬೆಂಕಿಯಿಂದ ಅರಣ್ಯರಕ್ಷಣೆಯ ಮಾಹಿತಿಯುಳ್ಳ 2 ಸಾವಿರ ಕ್ಯಾಲೆಂಡರ್‌ ವಿತರಣೆಗೆ ಕ್ರಮವಹಿಸಲಾಗಿದೆ.  ಜೆಎಲ್‌ಆರ್‌ ಸಿಬ್ಬಂದಿ, ಸ್ವಯಂ ಸೇವಕರನ್ನು ಸಹ ಬಳಸಿಕೊಳ್ಳಲಾಗುವುದು. ಕಾಡಂಚಿನ ಅದಿವಾಸಿಗಳಿಗೆ ಆಟೋಟ ಸ್ಪರ್ಧೆಯನ್ನು ನಡೆಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಮೂಲಕ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು.

ನಾಗರಹೊಳೆ ಉದ್ಯಾನದಲ್ಲಿ ಬೆಂಕಿ ತಡೆಗೆ ಸಿಬ್ಬಂದಿ ಸರ್ವ ಸನ್ನದ್ಧರಾಗಿದ್ದಾರೆ. ಅಗತ್ಯಬಿದ್ದಲ್ಲಿ ಎಸ್‌ ಡಿಆರ್‌ಎಫ್‌ ತಂಡ ಹಾಗೂ ಹೆಲಿಕಾಪ್ಟರ್‌ ಬಳಕೆಗೂ ಮನವಿ ಮಾಡಲಾಗಿದೆ. ಕಿಗ್ಸ್‌ಕಾರ್‌ಸಾಕ್‌ ಆಪ್‌ (ಅಪ್ಲಿಕೇಷನ್‌) ಮೂಲಕ ಬೆಂಕಿ ಬೀಳುವ ಪ್ರದೇಶದ ಮಾಹಿತಿಯನ್ನು ಎಸ್‌ಎಂಎಸ್‌ ಮೂಲಕ ಪಡೆದು ಸಿಬ್ಬಂದಿ ತ್ವರಿತಗತಿಯಲ್ಲಿ ಘಟನಾ ಸ್ಥಳಕ್ಕೆ ತೆರಳುವ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಪರಿಸರ ಕಾಳಜಿಯ ಕೆಲ ಸ್ವಯಂಸೇವಾ ಸಂಸ್ಥೆಗಳು ನೆರವಿಗೆ ಮುಂದೆ ಬಂದಿವೆ. ಬೆಂಕಿಯಿಂದ ಅರಣ್ಯ ಸಂರಕ್ಷಣೆಗೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. -ಹರ್ಷಕುಮಾರ್‌ ಚಿಕ್ಕನರಗುಂದ, ಹುಲಿಯೋಜನೆ ನಿರ್ದೇಶಕ(ಮುಖ್ಯಸ್ಥ) ನಾಗರಹೊಳೆ.

– ಸಂಪತ್‌ಕುಮಾರ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next