Advertisement

ಕೆರೆಯ ಹೂಳಿನಡಿ ಇದೆ ಸಮೃದ್ಧ ನೀರು!

10:34 PM Mar 21, 2021 | Team Udayavani |

ಕಾರ್ಕಳ:  ನಗರದ ಸೌಂದರ್ಯಕ್ಕೆ  ಮುಕುಟ ಮಣಿಯಂತಿರುವ  ಇಲ್ಲಿಯ ಅನಂತಶಯನ ಬಳಿಯ ನಾಗರಬಾವಿ ಕೆರೆಯ ಒಡಲಲ್ಲಿ ಹೂಳು ತುಂಬಿಕೊಂಡಿದೆ. ಕೆರೆಯ ಹೂಳನ್ನು ಸಂಪೂರ್ಣ ತೆಗೆದು  ಶಾಶ್ವತವಾಗಿ ಅಭಿವೃದ್ಧಿಗೊಳಿಸಿದಲ್ಲಿ  ಸಮೃದ್ಧ ನೀರು ಬಳಕೆಗೆ  ಸಿಗಲಿದೆ.  ಇದರಿಂದ  ನಗರದ ಸೌಂದರ್ಯವೂ  ಹೆಚ್ಚಲಿದೆ.

Advertisement

ಪುರಸಭೆ ವ್ಯಾಪ್ತಿಯ ಅನಂತಶಯನ ಬಳಿ ಈ ಕೆರೆ ಇದ್ದು  ಸರಕಾರಿ ಕೆರೆ ಇದಾಗಿದೆ.   ಇದರಲ್ಲಿ ನೀರು ಯಥೇತ್ಛ ಸಂಗ್ರಹವಾಗುವುದರಿಂದ ಅಂತರ್ಜಲ ಹೆಚ್ಚಳಗೊಂಡು ಸುತ್ತಮುತ್ತಲಿನ ಪರಿಸರದವರ  ಬಾವಿಗಳಲ್ಲಿ ನೀರಿನ ಮಟ್ಟ ಕೂಡ ಏರಿಕೆಯಾಗುತ್ತದೆ. ಇದು  ನಗರದ ಮಧ್ಯದಲ್ಲಿದ್ದು ಅಭಿವೃದ್ಧಿಗೊಂಡಲ್ಲಿ  ನಗರದ ನೀರಿನ ಸಮಸ್ಯೆ ಸ್ವಲ್ಪವಾದರೂ ಕಡಿಮೆಗೊಳಿಸಬಹುದು.ಕೆರೆಯಲ್ಲಿ  “ಸಾಲ್ವೇನಿಯ’ ಜಾತಿ ಕಳೆ ತುಂಬಿಕೊಂಡು ಬಳಕೆಗೆ ಆಗದಷ್ಟು  ಮಲಿನವಾಗಿತ್ತು. ಇದನ್ನು ಮನಗಂಡ   ಕಾರ್ಕಳದ ಸಮಾಜಮುಖೀ ಸಂಸ್ಥೆ ರೋಟರಿ ಕ್ಲಬ್‌ನವರು ಈ ಕೆರೆಯನ್ನು ಆಗಾಗ್ಗೆ   ಸ್ವಚ್ಛಗೊಳಿಸುತ್ತ ಬರುತ್ತಿದ್ದಾರೆ. ಕೆಲ ಸಮಯದ ಹಿಂದೆಯಷ್ಟೇ ಕರಿಯಕಲ್ಲು  ಸಾರ್ವಜನಿಕ ಹಿಂದೂ ರುದ್ರಭೂಮಿ ವ್ಯವಸ್ಥಾಪನ ಸಮಿತಿ ಸದಸ್ಯರ ಸಹಕಾರದಲ್ಲಿ ರೋಟರಿ ಕ್ಲಬ್‌ನವರು 50 ಸಾವಿರ ರೂ. ವ್ಯಯಿಸಿ, ಕೆರೆಯ ಕಳೆಗಳನ್ನೆಲ್ಲ  ತೆರವುಗೊಳಿಸಿದ್ದರು. 2015 ಹಾಗೂ 2016ರಲ್ಲೂ  ಕೂಡ ಕ್ಲಬ್‌ನವರು   ಕೆರೆ ಸ್ವತ್ಛಗೊಳಿಸಿ ಸೌಂದರ್ಯ  ಹೆಚ್ಚಿಸಿದ್ದರು.

ಅಪರೂಪವಾಗುತ್ತಿರುವ ಕೆರೆಗಳು ನಗರದೊಳಗಡೆ ಕೆರೆಗಳು ಸಿಗುವುದೇ ಅಪರೂಪ. ಅಂತದ್ದರಲ್ಲಿ ಕಾರ್ಕಳ ಪುರಸಭೆ ವ್ಯಾಪ್ತಿಯೊಳಗೆ   ಇರುವ ಈ  ಕೆರೆಯನ್ನು  ನಿರ್ಲಕ್ಷಿಸುವುದು  ಸರಿಯಲ್ಲ.  ಇದನ್ನು   ನಿರ್ಲಕ್ಷಿಸಿದ ಪರಿಣಾಮ   ಸಾರ್ವಜನಿಕಸಂಸ್ಥೆಗಳು ಇದರ ಪರಿಸ್ಥಿತಿ ಕಂಡು  ಸುಮ್ಮನಿರಲಾರದೆ ಮರು ನಿರ್ವಹಣೆ ಮಾಡುವ   ಹಂತಕ್ಕೆ  ತಲುಪಿವೆ  ಎನ್ನುವುದು  ಬೇಸರದ ಸಂಗತಿ.

ಸರಕಾರಕ್ಕೂ  ಮನವಿ ಹೋಗಿದೆ :

ನಗರದಲ್ಲಿರುವ ಅಪರೂಪದ ನಾಗರ ಬಾವಿ ಕೆರೆಯ ಅಭಿವೃದ್ಧಿಗಾಗಿ ಅನುದಾನ  ಬಿಡುಗಡೆಗೊಳಿಸುವಂತೆ  ರೋಟರಿ ಸಂಸ್ಥೆ   ಅಂದಾಜು ಪಟ್ಟಿ ಸಹಿತ ಸರಕಾರಕ್ಕೆ  ಮೂರು ವರ್ಷಗಳ  ಹಿಂದೆಯೇ  ಮನವಿ ಮಾಡಿತ್ತು.  ಅದರೆ ಯಾವುದೇ ಅನುದಾನಗಳು ಒದಗಿ ಬಂದಿಲ್ಲ. ಕೆರೆ ಸ್ಥಿತಿ ಕೂಡ ಬದಲಾಗಿಲ್ಲ.

Advertisement

ನಾಗರಬಾವಿ ಕೆರೆ ದಡದಲ್ಲಿದೆ ನಾಗನಕಟ್ಟೆ  :

ನದಿ, ಕೆರೆ, ಕೊಳ, ಬಾವಿಗಳಿಗೂ ದೇವಸ್ಥಾನ, ದೈವಸ್ಥಾನ, ದೇವರಕಟ್ಟೆ   ಇತ್ಯಾದಿಗಳಿಗೆ  ಹಿಂದಿನಿಂದಲೂ ನಂಟು ಬೆಸೆದಿದೆ. ಅಂತೆಯೇ ಈ ಕೆರೆಗೂ ದೈವಿಕ ಶಕ್ತಿಯಿದೆ. ಅದಕ್ಕೆ ಪೂರಕವಾಗಿ ಕೆರೆಯಿರುವ  ತಟದಲ್ಲಿ ನಾಗದೇವತೆಯಾದ   ನಾಗನಕಟ್ಟೆ ಕೂಡ ಇದ್ದು   ಕೆರೆಗೆ ದೈವಿಕ ನಂಬಿಕೆಯಿದೆ. ಕೆರೆಗೂ ನಾಗರಬಾವಿ ಎಂದು ಹೆಸರು  ನಾಗನ ಕಟ್ಟೆ  ಇರುವುದರಿಂದಲೇ ಬಂದಿದೆ ಎನ್ನುವ ನಂಬಿಕೆಯೂ  ಹಿರಿಯರಲ್ಲಿದೆ.

ಕೆರೆಗಳನ್ನು ಉಳಿಸೋಣ ಬನ್ನಿ :

ನಾಗರಬಾವಿ ಕೆರೆ  ಅಭಿವೃದ್ಧಿಗೊಳಿಸಿದಲ್ಲಿ  ನಗರಕ್ಕೆ  ನೀರು ಪೂರೈಸಲು  ಸಾಧ್ಯವಿದೆ.  ಸಾರ್ವಜನಿಕರ ಬಳಕೆಗಾಗಿ  ಪುರಸಭೆ  ವ್ಯಾಪ್ತಿಯಲ್ಲಿ  ಎಷ್ಟೇ ನೀರಿನ ಯೋಜನೆ

ಗಳಿದ್ದರೂ ಇಂತಹ  ಪ್ರಕೃತಿದತ್ತ ಕೆರೆಯ ಸದ್ಬಳಕೆ ಮಾಡಬೇಕಿದೆ.  ಹಿಂದೆ  ನೀರಿನ ಕಣಜಗಳಾಗಿದ್ದ  ಕೆರೆಗಳು ಇಂದು  ವಿನಾಶದ ಅಂಚಿಗೆ ತಲುಪಿ ಇತಿಹಾಸ ಸೇರುವ ಹಂತಕ್ಕೆ ಬಂದು ತಲುಪಿವೆ. ಇಂತಹ ಸಂದರ್ಭಗಳಲ್ಲಿ  ಪುರಾತನ ಕೆರೆಗಳನ್ನು ಉಳಿಸಿ ಸಂರಕ್ಷಿಸಿ ಮುಂದಿನ ಜನಾಂಗಕ್ಕೆ  ಕೆರೆಗಳನ್ನು ಪರಿಚಯಿಸುವ  ದೃಷ್ಟಿಯಿಂದಲೂ  ಕೆರೆಯ ಅಭಿವೃದ್ಧಿ  ನಡೆಸಬೇಕಿದೆ. ಇಲ್ಲವಾದಲ್ಲಿ  ಮುಂದಿನ ಜನಾಂಗದವರಿಗೆ  ಇಂತಹದ್ದೊಂದು ಕೆರೆ  ಇತ್ತು ಎನ್ನುವುದೇ ಗೊತ್ತಾಗದು.

100 ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಕೆರೆ

40 ಸೆಂಟ್ಸ್‌  ವಿಸ್ತೀರ್ಣದಲ್ಲಿದೆ ಸರಕಾರಿ ಕೆರೆ

50 ಸಾವಿರ ರೂ. ಖಾಸಗಿ ವೆಚ್ಚದಲ್ಲಿ ದುರಸ್ತಿ

2019 ರಲ್ಲಿ   ಸರಕಾರಕ್ಕೆ ಅನುದಾನಕ್ಕೆ ಮನವಿ

ನಾಗರಬಾವಿ ಕೆರೆಯನ್ನು  ಕರಾವಳಿ ಪ್ರಾಧಿಕಾರ ಅಥವಾ ಸಣ್ಣ ನೀರಾವರಿ ಇತ್ಯಾದಿ  ಇಲಾಖೆಯಿಂದ ಫ‌ಂಡ್‌ ತರಿಸಿಕೊಂಡು ಅಭಿವೃದ್ಧಿಪಡಿಸಲು ಅವಕಾಶವಿದೆ.  ಈ ನಿಟ್ಟಿನಲ್ಲಿ  ಮುಂದಿನ ದಿನಗಳಲ್ಲಿ  ಪ್ರಯತ್ನ ನಡೆಸಲಾಗುವುದು. -ಸುಮಾ ಕೇಶವ್‌,  ಅಧ್ಯಕ್ಷೆ, ಪುರಸಭೆ, ಕಾರ್ಕಳ

ಪುರಸಭೆಯಿಂದ ಕೆರೆಯ ಹೂಳೆತ್ತಲು  50 ಸಾವಿರ ರೂ. ಮೊತ್ತದ ಯೋಜನೆ ಸಿದ್ಧಪಡಿಸಲಾಗಿತ್ತು. ಅದೇ ವೇಳೆಗೆ ರೋಟರಿ ಸಂಸ್ಥೆಯವರು ಹೂಳೆತ್ತುವ ಕೆಲಸ ನಡೆಸಿದ್ದರು. – ರೇಖಾ ವಿ. ಶೆಟ್ಟಿ,  ಮುಖ್ಯಾಧಿಕಾರಿ

 

– ಬಾಲಕೃಷ್ಣ  ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next