Advertisement

ನಾಗರ ಪಂಚಮಿಯಿಂದ ಪ್ರಾರಂಭ ಹಬ್ಬಗಳ ಕಾಲ

11:46 PM Aug 01, 2022 | Team Udayavani |

ಹಿಂದೂ ಹಬ್ಬಗಳ ಪಂಕ್ತಿಯಲ್ಲಿ ಪ್ರಥಮವಾಗಿ ಒದಗಿ ಬರುವ ಹಬ್ಬವೇ ನಾಗರಪಂಚಮಿ. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.

Advertisement

ನಾಗದೇವರನ್ನು ಆರಾಧಿಸಿ ಅನುಗ್ರಹವನ್ನು ಪಡೆದುಕೊಳ್ಳುವ ಪರ್ವಕಾಲವಿದು. ಎಲ್ಲ ಹಬ್ಬ ಗಳನ್ನೂ ವ್ರತರೂಪದಲ್ಲಿ ಆಚರಿಸಿ ದೇವತಾ ರಾಧನೆಗಳನ್ನು ಮಾಡುವುದು ಸನಾತನ ಪದ್ಧತಿ ಯಾಗಿರುತ್ತದೆ. ಸ್ಕಂದ ಪುರಾಣದ ಪ್ರಕಾರ ಪುರಾಣ ಕಾಲದಲ್ಲಿ ವೇದಶರ್ಮನೆಂಬ ಶ್ರೋತ್ರೀಯ ಬ್ರಾಹ್ಮಣನು ತನ್ನ ಮನೆಯಲ್ಲಿ ಆಶ್ರಯವರಸಿ ಬಂದ ಒಂದು ಸರ್ಪವನ್ನು ಪೋಷಣೆ ಮಾಡುತ್ತಿರುತ್ತಾನೆ. ಆ ಸರ್ಪವು ಪ್ರತೀದಿನ ಚಿನ್ನವನ್ನು ಬ್ರಾಹ್ಮಣನಿಗೆ ನೀಡುತ್ತಿರುತ್ತದೆ. ಆ ಬ್ರಾಹ್ಮಣನಿಗೆ ಎಂಟು ಗಂಡು ಮಕ್ಕಳು, ಸುಶೀಲೆಯೆಂಬ ಓರ್ವ ಹೆಣ್ಣು ಮಗಳೂ ಇರುತ್ತಾರೆ. ಲೋಭಿಗಳಾದ ಗಂಡು ಮಕ್ಕಳು ಇನ್ನೂ ಹೆಚ್ಚು ಚಿನ್ನ ನೀಡುವಂತೆ ಆಗ್ರಹಿಸಿ ಸರ್ಪವನ್ನು ತುಳಿದಾಗ ಕೋಪಗೊಂಡ ಸರ್ಪವು ಆ ಎಂಟೂ ಗಂಡು ಮಕ್ಕಳನ್ನು ಕಚ್ಚಿ ಸಾಯಿಸುತ್ತದೆ.

ಸುಶೀಲೆಯು ಇದರಿಂದ ಚಿಂತಾಕ್ರಾಂತಳಾಗಿ ಶ್ರೀಮನ್ನಾ ರಾಯಣನ ಮೊರೆ ಹೋಗುತ್ತಾಳೆ. ಶ್ರೀಮನ್ನಾ ರಾಯಣನು ಸುಶೀಲೆಯ ಭಕ್ತಿಗೆ ಒಲಿದು ಅವಳ ಅಣ್ಣಂದಿರನ್ನು ಬದುಕಿಸುವಂತೆ ವಾಸುಕಿಗೆ ಆಜ್ಞಾಪಿಸುತ್ತಾನೆ ಮತ್ತು ಈ ಶುಭದಿನದಂದು ಸರ್ಪ ರಾಜನಾದ ವಾಸುಕಿಯನ್ನು ಆರಾಧಿಸಿದಲ್ಲಿ ಅವರಿಗೆ ಧನಧಾನ್ಯಾದಿ ಸಂಪತ್ತು, ವಂಶಾಭಿವೃದ್ಧಿ, ಇಷ್ಟಾರ್ಥಗಳು ಪ್ರಾಪ್ತಿಯಾಗಲೆಂದು ಹರಸುತ್ತಾನೆ. ಅಂದು ಮೊದಲ್ಗೊಂಡು ಲೋಕದ ಎಲ್ಲ ಜನರೂ ಪ್ರತೀ ಮನೆಯ ದ್ವಾರದ ಇಕ್ಕೆಲಗಳಲ್ಲಿ ನಾಗದೇವರ ರೂಪವನ್ನು ಬರೆದು ಅಥವಾ ನಾಗಶಿಲೆಗಳಿಗೆ ಪಂಚಾಮೃತ ಅಭಿಷೇಕ, ಅರಸಿನ ಚೂರ್ಣದ ಅಲಂಕಾರ, ಅರಳು ಬೆಲ್ಲ ಲಡ್ಡಿಗೆಗಳ ಸಮರ್ಪಣೆ ಸಹಿತವಾಗಿ ಆರಾಧನೆಯನ್ನು ಮಾಡಿ ಪುನೀತ ರಾಗುತ್ತಾರೆ. ಇದು ನಾಗರಪಂಚಮಿಯ ಹಿನ್ನೆಲೆಯಾಗಿರುತ್ತದೆ.

ನಾಗರಪಂಚಮಿಯ ಹಿನ್ನೆಲೆ ಕುರಿತು ಹಲವಾರು ಕಥೆಗಳಿವೆ. ಒಂದು ಕಥೆಯ ಪ್ರಕಾರ ಜನಮೇಜಯ ರಾಜನು ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು ಸರ್ಪಯಜ್ಞವನ್ನು ಮಾಡಲು ಆರಂಭಿಸುತ್ತಾನೆ. ಯಜ್ಞಕ್ಕೆ ಎಲ್ಲ ಕಡೆಗಳಿಂದ ಸರ್ಪಗಳು ಬಂದು ಬೀಳುತ್ತಿರುತ್ತವೆ. ಈ ವೇಳೆ ಸರ್ಪಗಳು ಮಾಡಿಕೊಂಡ ವಿನಂತಿಯಂತೆ ಆಸ್ತಿಕ ಮುನಿಗಳು ಸರ್ಪಯಜ್ಞ ಮಾಡುವ ಜನಮೇಜಯ ನನ್ನು ಪ್ರಸನ್ನಗೊಳಿಸುತ್ತಾರೆ. ಜನಮೇಜಯನು ವರ ಕೇಳು ಎಂದು ಹೇಳಿದಾಗ ಆಸ್ತಿಕ ಮುನಿಗಳು ಪ್ರಾಣಿಹಿಂಸೆ ಮಹಾಪಾಪವಾಗಿದ್ದು, ಈಗಾಗಲೇ ನೀನು ಮಾಡು ತ್ತಿರುವ ಸರ್ಪಯಜ್ಞವನ್ನು ಕೂಡಲೇ ನಿಲ್ಲಿಸ ಬೇಕು ಎಂಬ ವರವನ್ನು ಕೇಳುತ್ತಾರೆ. ರಾಜ ಜನಮೇಜಯನು ಮುನಿಗಳ ಮಾತಿಗೆ ಬೆಲೆ ಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸುತ್ತಾನೆ. ಆ ದಿನವನ್ನೇ ನಾಗರಪಂಚಮಿ ಎಂದೂ ಕರೆಯಲಾಗುತ್ತದೆ.

ಇನ್ನೊಂದು ಕಥೆಯ ಸಾರ ಹೀಗಿದೆ. ಬಾಲಕೃಷ್ಣನು ಯಮುನಾ ನದಿಯ ತೀರದಲ್ಲಿ ಆಡುತ್ತಿದ್ದಾಗ ಚೆಂಡು ನದಿ ದಂಡೆಯಲ್ಲಿದ್ದ ಮರದ ಕಾಂಡದಲ್ಲಿ ಸಿಕ್ಕಿ ಹಾಕಿಕೊಂಡಿತು. ಆ ಚೆಂಡನ್ನು ಎತ್ತಿಕೊಳ್ಳಲು ಹೋದಾಗ ಕೃಷ್ಣನು ಜಾರಿ ನದಿಯಲ್ಲಿ ಬಿದ್ದನು. ಯಮುನಾ ನದಿಯಲ್ಲಿ ಕಾಲೀಯ ಎನ್ನುವ ವಿಷಪೂರಿತ ನಾಗ ವಾಸವಾಗಿದ್ದು, ಕೃಷ್ಣ ನದಿಗೆ ಬಿದ್ದಾಗ ಹಾವು ಅವನ ಮೇಲೆ ದಾಳಿ ಮಾಡುತ್ತದೆ. ಆಗ ಕೃಷ್ಣನು ಕಾಲೀಯನ ವಿರುದ್ಧ ಹೋರಾಡುತ್ತಾನೆ. ಈ ವೇಳೆ ಹಾವಿಗೆ ಕೃಷ್ಣನು ಸಾಮಾನ್ಯ ಬಾಲಕನಲ್ಲ ಎಂಬುದು ಅರಿವಾಗುತ್ತದೆ. ಅದು ತನ್ನನ್ನು ಕೊಲ್ಲಬೇಡವೆಂದು ಕೃಷ್ಣನನ್ನು ಕೇಳಿಕೊಳ್ಳುತ್ತದೆ. ಕಾಲೀಯನ್ನು ಕ್ಷಮಿಸಿದ ಕೃಷ್ಣನು ಜನರಿಗೆ ತೊಂದರೆ ಮಾಡಬೇಡ ಎಂದು ಬುದ್ಧಿವಾದ ಹೇಳಿ ಆ ಹಾವನ್ನು ಬಿಟ್ಟು ಬಿಡುತ್ತಾನೆ. ಹೀಗಾಗಿ ಕೃಷ್ಣನು ಕಾಲೀಯ ಮರ್ದನ ಮಾಡಿದ ದಿವಸದಂದು ನಾಗರಪಂಚಮಿ ಮಾಡಲಾಗುತ್ತದೆ.

Advertisement

ಪರಶುರಾಮ ಸೃಷ್ಟಿಯೆನಿಸಿದ ಈ ಭೂಪ್ರದೇಶ ದಲ್ಲಿ ಎಲ್ಲ ಕಡೆಗಳಲ್ಲಿಯೂ ನಾಗಾರಾಧನೆಯ ಸಂಕೇತಗಳಾಗಿ ನಾಗವನಗಳಿದ್ದು, ಅಲ್ಲಿ ನಾಗದೇವ ರಿಗೆ ಹಾಲು, ಸೀಯಾಳ, ಪಂಚಾಮೃತ ಅಭಿಷೇಕ ಗಳನ್ನು ಮಾಡಿ ತಂಬಿಲಸೇವೆಗಳನ್ನು ಅರ್ಪಿಸಿ ಭಕ್ತಜನರು ಕೃತಾರ್ಥರಾಗುತ್ತಾರೆ. ಸುಶೀಲೆಯು ಅಣ್ಣಂದಿರನ್ನು ಬದುಕಿಸಿದ ದಿನವಾದ್ದರಿಂದ ಈ ದಿವಸವನ್ನು ಅಣ್ಣತಂಗಿಯರ ಹಬ್ಬವೆಂದೂ ಕರೆಯುತ್ತಾರೆ. ಉತ್ತರ ಭಾರತದಲ್ಲಿ ಪಂಚಮಿ ತಿಥಿಯ ಬದಲಾಗಿ ಚತುರ್ಥಿಯಂದೇ ಈ ನಾಗಾರಾಧನೆಯನ್ನು ಮಾಡುವ ಸಂಪ್ರದಾಯವಿದ್ದು, ಅದನ್ನು ನಾಗಚತುರ್ಥಿ ಎಂದೂ ಕರೆಯುತ್ತಾರೆ. “ನಾಗರಪಂಚಮಿ ನಾಡಿಗೆ ದೊಡ್ಡದು’ ಎಂಬ ಲೋಕೋಕ್ತಿಯಂತೆ ನಾಗರಪಂಚಮಿ ದಿವಸದಂದು ನಾಗಾರಾಧನೆಯು ಸಾರ್ವತ್ರಿಕವಾಗಿ ನಡೆದು, ಅದರಿಂದ ಸಂತುಷ್ಟನಾದ ನಾಗದೇವರು ಲೋಕಕ್ಕೆ ಸನ್ಮಂಗಲವನ್ನು ಉಂಟು ಮಾಡಲಿ.

-ಕೃಷ್ಣರಾಜ ತಂತ್ರಿ ಕುಡುಪು

 

Advertisement

Udayavani is now on Telegram. Click here to join our channel and stay updated with the latest news.

Next