Advertisement

ನಾಡು- ನುಡಿ, ಸಂಸ್ಕೃತಿಗೆ ಮಿಡಿದ ಮೂಡಬಿದಿರೆ!

10:29 AM Dec 02, 2017 | Team Udayavani |



Advertisement

ವಿದ್ಯಾಗಿರಿ (ಆಳ್ವಾಸ್‌): ಮುಂಜಾನೆಯ ಮಂಜು ಹನಿ ಉದಯ ರವಿಯ ಸ್ಪರ್ಶಕ್ಕೆ ಕರಗುತ್ತಿದ್ದಂತೆಯೇ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ಸಾಹಿತ್ಯ ಪ್ರಭೆಯು ದಿಗಂತದೆಡೆಗೆ ಅರಳಲು ತವಕಿಸಿತ್ತು. ಸಾಹಿತ್ಯ- ಸಂಗೀತ- ಸಾಂಸ್ಕೃತಿಕ ಕಲಾ ವೈಭವದೊಂದಿಗೆ ಮಹಾನ್‌ ಉಚ್ಚಯಕ್ಕೆ ವಿದ್ಯಾಕಾಶಿ- ಜೈನಕಾಶಿ ನಾಮಾಂಕಿತ ಮೂಡಬಿದಿರೆ ಶುಕ್ರವಾರ ಮುಂಜಾನೆಯಿಂದಲೇ ಸರ್ವ ಆಯಾಮಗಳಿಂದ ಸಾಕ್ಷಿಯಾಯಿತು. ನಿರೀಕ್ಷೆಗೂ ಮೀರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಸಾಹಿತ್ಯಾಸಕ್ತ ಮನಸ್ಸುಗಳ ಸಂಭ್ರಮದಿಂದಾಗಿ ವಿದ್ಯಾಗಿರಿ ಕನ್ನಡ ನುಡಿ ಕುಣಿದಾಡುವ ಆಲಯವಾಗಿತ್ತು.

ಕನ್ನಡದ ಪುಟ್ಟ ಲೋಕ
ಕನ್ನಡ ನಾಡು-ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್‌ ನುಡಿಸಿರಿ ಶುಕ್ರವಾರ ಬೆಳಗ್ಗಿನಿಂದ ಆರಂಭಗೊಂಡಿದ್ದು, ಕನ್ನಡದ ಪುಟ್ಟ ಲೋಕವೇ ಮೂಡಬಿದಿರೆಯಲ್ಲಿ ಸೃಷ್ಟಿಯಾದಂತೆ ಅನುಭವವಾಗುತ್ತಿದೆ. ಇಡೀ ಮೂಡಬಿದಿರೆಯೆ ಕನ್ನಡಮಯವಾಗಿ ಕಂಗೊಳಿಸುತ್ತಿದೆ. ಮಾತು, ಕೃತಿ, ಸಂಗೀತ, ನೃತ್ಯ ಹೀಗೆ ಎಲ್ಲದರ ಮೂಲಕ ಕನ್ನಡ ಲೋಕವೊಂದು ತೆರೆದುಕೊಂಡಂತಾಗಿದೆ.

ಮೂಡಬಿದಿರೆಯಲ್ಲಿ ಸಮ್ಮೇಳನ ಆರಂಭವಾಗುವ ಮುನ್ನ ನಡೆದ ಸಾಂಸ್ಕೃತಿಕ ಮೆರವಣಿಗೆಯೇ ಸಾಹಿತ್ಯ-ಸಾಂಸ್ಕೃತಿಕದ ಹೊಸ ಲೋಕವೊಂದನ್ನು ಪರಿಚಯಿಸಿತು. ಊರು-ಪರವೂರಿನಿಂದ ಬಂದ ನೂರಾರು ಸಾಂಸ್ಕೃತಿಕ ತಂಡಗಳು ಮೂಡಬಿದಿರೆಯನ್ನು ರಾಜ್ಯದ ಸಾಂಸ್ಕೃತಿಕ ರಾಯಭಾರಿಯಾಗಿ ಪರಿವರ್ತಿಸಿದವು. ಸಭಾ ಕಾರ್ಯಕ್ರಮದ ಮೂಲಕ ಸಮ್ಮೇಳನಕ್ಕೆ ವಿಧ್ಯೂಕ್ತ ಚಾಲನೆ ದೊರೆಯಿತು. ರತ್ನಾಕರ ವರ್ಣಿ ವೇದಿಕೆಯ ಮುಂಭಾಗದ ಸಭಾಂಗಣ ಸಾಹಿತ್ಯಿಕ ಮನಸ್ಸುಗಳಿಂದ ತುಂಬಿ ತುಳುಕುತ್ತಿತ್ತು.

ಎಲ್ಲಿ ನೋಡಿದರಲ್ಲಿಯೂ ನಾಟ್ಯ ಮಯೂರಿಗಳೇ ಕಾಣಿಸುತ್ತಿದ್ದರು. ಹೆಜ್ಜೆಗೊಂದರಂತೆ ಸಿಗುತ್ತಿದ್ದ ಒಂದೊಂದು ಸಾಂಸ್ಕೃತಿಕ ವೇದಿಕೆಯಲ್ಲೂ (11 ವೇದಿಕೆ) ಇಡೀ ದಿನ ನಾಟ್ಯ, ಸಂಗೀತ, ಗಾಯನ, ಕುಣಿತ, ಹಾಸ್ಯ, ಹಾಡುಗಾರಿಕೆ ಕಣ್ಮನ ಸೆಳೆಯುತ್ತಿದ್ದವು. ಸಾವಿರಾರು ಕಲಾವಿದರು ತಮ್ಮ ಕಲಾ ಚಾತುರ್ಯ ಪ್ರದರ್ಶಿಸಿ ಗಮನ ಸೆಳೆದರು. ನುಡಿಸಿರಿಯ ವೈಭವಕ್ಕೆ ಮುಕುಟದಂತೆ ಕಂಗೊಳಿಸಿದ ಕೃಷಿ ಸಿರಿ ಎಲ್ಲರ ಆಕರ್ಷಣೆಯಾಗಿದೆ. ಇಲ್ಲಿ ಎಲ್ಲವನ್ನು ನೋಡಲು ಒಂದು ದಿನ ಸಾಲದು ಎಂಬಷ್ಟರ ಮಟ್ಟಿಗೆ ಕೃಷಿ ಲೋಕದ ಅನಾವರಣವಾಗಿದೆ.

Advertisement

ಸ್ವಚ್ಛ-ಸಮಯಬದ್ಧ ನುಡಿಸಿರಿ..!
ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವುದು ಆಳ್ವಾಸ್‌ ನುಡಿಸಿರಿಯ ಹಿರಿಮೆ. ಊಟ, ಸಾಂಸ್ಕೃತಿಕ ಕಾರ್ಯಕ್ರಮ, ಸಾಹಿತ್ಯ ಗೋಷ್ಠಿಗಳು, ಕೃಷಿ ಪ್ರದರ್ಶನ ಎಲ್ಲವೂ ಸಕಾಲದಲ್ಲಿ ನಡೆದವು. ವಿಜ್ಞಾನ ಹಾಗೂ ಕಂಬಳದ ಕೋಣದ ಪ್ರದರ್ಶನವೂ ಸಾಂಗ. ಎಲ್ಲ ಕಡೆಗಳಲ್ಲೂ ಸಮಯಕ್ಕೆ ವಿಶೇಷ ಆದ್ಯತೆ ಹಾಗೂ ಸ್ವಚ್ಛತೆಗೆ ವಿಶೇಷ ಗಮನ ನೀಡಲಾಗಿತ್ತು.

ಎಲ್ಲಿ ನೋಡಿದರೂ ಜನವೋ ಜನ..!
ಮೂಡಬಿದಿರೆಯ ಸಮ್ಮೇಳನದ ಆವರಣ ಮೊದಲ ದಿನವೇ ಜನಜಾತ್ರೆಯಲ್ಲಿ ಮಿಂದಾಡಿತು. ಎಲ್ಲಿ ನೋಡಿದರೂ ಜನವೋ ಜನ. ಸಾಹಿತ್ಯದ ಮನಸ್ಸು ಉಳ್ಳವರು ಒಂದೆಡೆಯಾದರೆ, ಕುಣಿತ, ನಾಟ್ಯದ ಸುಧೆಯ ಆಸ್ವಾದಿಸುವ ಕಲಾರಾಧಕರು ಇನ್ನೊಂದೆಡೆ. ಮಸ್ತಕಕ್ಕೆ ಅನುಭವ ಧಾರೆ ಎರೆಯುವ ಆಸಕ್ತಿಯ ಪುಸ್ತಕ ಪ್ರಿಯರ ಮಧ್ಯೆ ಕರುನಾಡಿನ ಕೃಷಿಕ ಸಮಾಜವನ್ನು ಒಂದೆಡೆ ನೋಡುವ ಕುತೂಹಲದ ಕಣ್ಣುಗಳು ನೂರಾರು… ಎಲ್ಲ ವಯೋಮಾನದವರು ಭಾಗವಹಿಸಿ ನಡುಸಿರಿಗೂ ವಿಶೇಷ ಮೆರುಗು ತಂದು ಕೊಟ್ಟಿದ್ದಾರೆ. ಹೆಜ್ಜೆಗೊಂದು ಸಿಗುವ ವಿಶೇಷ-ವಿಭಿನ್ನ ವಿದ್ಯಾಮಾನವನ್ನು ಸವಿಯುವ ಯುವ ಮನಸುಗಳಿದ್ದವು. ರಾತ್ರಿಯಾಗುತ್ತಿದ್ದಂತೆ ಸಂಗೀತ ಲೋಕದ ಹೊಸ ಮನ್ವಂತರ ಬರೆಯುವ ವಿಭಿನ್ನ ಆಯಾಮಗಳನ್ನು ಆಸ್ವಾದಿಸುವ ಸಾವಿರ-ಸಾವಿರ ಜನರ ರಾಶಿಯೇ ಮೂಡಬಿದಿರೆಯನ್ನು ಕಿರಿದು ಮಾಡಿದೆ.

ಈ ನಡುವೆ, ಶುಕ್ರವಾರ ರಾಜ್ಯದೆಲ್ಲೆಡೆಯಿಂದ ಹರಿದು ಬಂದ ಜನಸಾಗರದ ಜತೆಗೆ ವಾಹನಗಳ ಸಂಖ್ಯೆಯೂ ಕಡಿಮೆ ಇರಲಿಲ್ಲ. ಆದರೆ, ಎಲ್ಲ ವಾಹನಗಳಿಗೂ ಸುಸೂತ್ರ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿದ್ದು, ಎಲ್ಲಿಯೂ ಟ್ರಾಫಿಕ್‌ ಕಿರಿಕಿರಿ ಕಂಡುಬರಲಿಲ್ಲ. ಇಷ್ಟೊಂದು ಸಂಖ್ಯೆಯಲ್ಲಿ ಹರಿದು ಬಂದ ಜನರನ್ನು ಯಾವುದೇ ಗೊಂದಲ, ನೂಕು-ನುಗ್ಗಲು ಇಲ್ಲದೆ ಬಹಳ ವ್ಯವಸ್ಥಿತವಾಗಿ ನಿಭಾಯಿಸಿದ್ದು, ಆಳ್ವಾಸ್‌ ಸಂಸ್ಥೆಯ ವಿದ್ಯಾರ್ಥಿಗಳು. ನಡೆದಾಡುವುದಕ್ಕೆ ಕಷ್ಟವಾದವರನ್ನು ಕೈ ಹಿಡಿದು ಮುನ್ನಡೆಸುತ್ತ, ಸರದಿಯಲ್ಲಿ ನಿಂತು ಊಟ ಮಾಡಲು ತೊಂದರೆ. ಅಂಥವರಿಗೆ ಕುಳಿತಲ್ಲಿಗೇ ತಂದು ಆತಿಥ್ಯ ನೀಡುತ್ತಿದ್ದ ಸ್ವಯಂ ಸೇವಕರ ಮುತುವರ್ಜಿ ಶ್ಲಾಘನೀಯ.

36,482 ಪ್ರತಿನಿಧಿಗಳು..!
ಆಳ್ವಾಸ್‌ ನುಡಿಸಿರಿಯಲ್ಲಿ ಭಾಗವಹಿಸುವ ಇರಾದೆಯಿಂದ 100 ರೂ.ಪಾವತಿಸಿ ಒಟ್ಟು 36,482 ಪ್ರತಿನಿಧಿಗಳು ನೋಂದಣಿ ಮಾಡಿಸಿಕೊಂಡು ಪ್ರತಿನಿಧಿಗಳಾಗಿ ಪಾಲ್ಗೊಂಡಿದ್ದಾರೆ. ಇದರಲ್ಲಿ ಕರ್ನಾಟಕದಿಂದ 34,055 ಜನರು ಹಾಗೂ ಇತರ ರಾಜ್ಯದಿಂದ 2427 ಜನರಿದ್ದಾರೆ. ಬೆಂಗಳೂರಿನಿಂದ ಅತ್ಯಧಿಕ 6096 ಜನರು, ದಕ್ಷಿಣ ಕನ್ನಡ ಜಿಲ್ಲೆಯ 4080, ಉಡುಪಿಯ 1190 ಜನರು ಪ್ರತಿನಿಧಿಗಳಾಗಿ ಪಾಲ್ಗೊಂಡಿದ್ದಾರೆ. ಊರು ಪರವೂರಿನ ಸಾವಿರಾರು ಸಾಹಿತ್ಯಾಸಕ್ತರೂ ಭಾಗವಹಿಸಿದ್ದರು.

ಸಾಹಿತ್ಯದ ಜತೆಗೆ ಯೋಗ ಭಾಗ್ಯ..!
ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳುವ ಜನರಿಗೆ ನೆರವಾಗುವ ನೆಲೆಯಲ್ಲಿ ಆನಂದಮಯ ಎಂಬ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಶುಕ್ರವಾರದಿಂದ ರವಿವಾರದವರೆಗೆ ವೈದ್ಯಕೀಯ ಶಿಬಿರ ನಡೆಯಲಿದೆ. ಆಳ್ವಾಸ್‌ ಪಿಯು ಕಾಲೇಜಿನ ಕಟ್ಟಡದ ಕೊಠಡಿ ಸಂಖ್ಯೆ 123 ಹಾಗೂ 125ರಲ್ಲಿ ಶಿಬಿರ ನಡೆಯುತ್ತದೆ. ಯೋಗಾಭ್ಯಾಸ ಮತ್ತು ಪ್ರಕೃತಿ ಚಿಕಿತ್ಸೆಯ ವಿವರಣೆ, ಅಕ್ಯುಪ್ರಶರ್‌ ಚಿಕಿತ್ಸೆ ಹಾಗೂ ಉಪಕರಣಗಳ ಮಾರಾಟ, ಆಹಾರ ಪದ್ಧತಿಯ ಮಾಹಿತಿ, ಮಣ್ಣಿನ ಚಿಕಿತ್ಸೆ ಸೇವೆಗಳು ನುರಿತ ತಜ್ಞ ವೈದ್ಯರಿಂದ ಲಭ್ಯವಿದೆ.

ಪುಸ್ತಕ ಓದಿದವರು ಸಿನೆಮಾ ನೋಡಿದರು..!
ನುಡಿಸಿರಿಯಲ್ಲಿ ಸಾಹಿತ್ಯಿಕ ಅಂಶಗಳಿಗೆ ಮಾತ್ರ ವೇದಿಕೆ ನೀಡಿದ್ದಲ್ಲ. ಸಾಂಸ್ಕೃತಿಕ ಚಟುವಟಿಕೆ ಗೂ ಆದ್ಯತೆ ನೀಡಲಾಗಿದೆ. ಸಿನೆಮಾ ನೋಡುವುದಕ್ಕೂ ಇಲ್ಲಿ ಅವಕಾಶ ಕಲ್ಪಿಸಿರುವುದು ವಿಶೇಷ. ಆಳ್ವಾಸ್‌ ಸ್ನಾತಕೋತ್ತರ ಕೇಂದ್ರದ ಪುಟ್ಟಣ್ಣ ಕಣಗಾಲ್‌ ವೇದಿಕೆಯಲ್ಲಿ ಶುಕ್ರವಾರ ಸಿನೆಮಾ ಪ್ರದರ್ಶನವಿತ್ತು. ವಿದ್ಯಾಗಿರಿಯಲ್ಲಿ ಪುಸ್ತಕ ಓದುತ್ತಿದ್ದವರು ಅಲ್ಲಿ ಸಿನೆಮಾ ನೋಡುತ್ತಿದ್ದರು. ಬೆಳಗ್ಗೆ ಬೂತಯ್ಯನ ಮಗ ಅಯ್ಯು, ಮಧ್ಯಾಹ್ನ ತಿಥಿ, ಸಂಜೆ ಮಾತಾಡ್‌ ಮಾತಾಡ್‌ ಮಲ್ಲಿಗೆ ಪ್ರದರ್ಶ ನವಿತ್ತು. ನುಡಿಸಿರಿಯ 2ನೇ ದಿನ ಶರಪಂಜರ, ಕೇರ್‌ ಆಫ್ ಫುಟ್‌ಪಾತ್‌, ಚಿಗುರಿದ ಕನಸು ಪ್ರದರ್ಶನಗೊಳ್ಳಲಿದೆ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next