Advertisement

ಜಿಲ್ಲೆಯ ಸರ್ಕಾರಿ ಶಾಲೆ ಪುನಾರಂಭಕ್ಕೆ ಆಕರ್ಷಣೀಯ ಸ್ವಾಗತ

02:49 PM May 30, 2019 | Team Udayavani |

ಮೈಸೂರು: ನಗರದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಮಕ್ಕಳನ್ನು ವಿಜೃಂಭಣೆಯಿಂದ ಬರಮಾಡಿ ಕೊಳ್ಳುವ ಮೂಲಕ ಶಾಲೆಯತ್ತ ಮಕ್ಕಳನ್ನು ಆಕರ್ಷಿಸಲಾಯಿತು.

Advertisement

ಮೈಸೂರು ನಗರದ 1915 ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು, 232 ಸರಕಾರಿ ಪ್ರೌಢಶಾಲೆ, ಅನುಧಾನಿತ 275 ಹಾಗೂ ಅನುದಾನ ರಹಿತ 910 ಶಾಳೆಗಳು ಸೇರಿದಂತೆ 3,332 ಶಾಲೆಗಳಲ್ಲಿ ಬುಧವಾರ ಮಕ್ಕಳಿಗೆ ಆರತಿ ಬೆಳಗುವ ಹಾಗೂ ಹೂ ನೀಡುವ ಮೂಲಕ ಬರಮಾಡಿಕೊಳ್ಳಲಾಯಿತು.

ಬುಧವಾರ ಶಾಲಾ ಆವರಣ ತಳಿರು ತೋರಣ ಗಳಿಂದ ಶೃಂಗಾರಗೊಂಡಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಜೊತೆಗೆ ಮೈಸೂರು ತಾಲೂಕು ವ್ಯಾಪ್ತಿಯ ಕೆಲವು ಶಾಲೆಗಳಲ್ಲಿ ಎತ್ತಿನಗಾಡಿಯಲ್ಲಿ ಮಕ್ಕಳನ್ನು ಕರೆತಂದು ಸಿಹಿಯೂಟ ಬಡಿಸಲಾಯಿತು.

ಶಾಲೆ ಆರಂಭವಾಗುವ ಕಾರಣ ಮಂಗಳವಾರವೇ ಶಾಲಾ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ಶಾಲೆಗೆ ಭೇಟಿ ನೀಡಿ ಶಾಲೆಯ ಅಂಗಳ, ಶೌಚಗೃಹ ಗಳನ್ನು ಸ್ವಚ್ಛಗೊಳಿಸಿದ್ದರು. ಮೊದಲ ದಿನ ಮಕ್ಕಳಿಗೆ ಬಿಸಿಯೂಟದ ಜತೆ ಸಿಹಿ ನೀಡಲಾಯಿತು.

ಪಠ್ಯ ಪುಸ್ತಕ ವಿತರಣೆ: ಮಕ್ಕಳನ್ನು ಶಾಲೆಗೆ ವಿಶೇಷ ವಾಗಿ ಆಹ್ವಾನಿಸಲು ಸ್ಥಳೀಯ ಮಟ್ಟದ ಜನಪ್ರತಿನಿಧಿ ಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು ಭಾಗವಹಸಿ ಮಕ್ಕಳಿಗೆ ಶುಭ ಹಾರೈಸಿದರು. ನಂತರ ಶಾಲೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಯಿತು.

Advertisement

ಅಕ್ಕನಬಳಗ ಸರ್ಕಾರಿ ಶಾಲೆಯಲ್ಲಿ ಪ್ರತಿ ವರ್ಷ ದಂತೆ ಕೆ.ಎಂ.ಪಿ.ಕೆ.ಚಾರೀಟಬಲ್ ಟ್ರಸ್ಟ್‌ ವತಿಯಿಂದ ಶಾಲಾ ಮಕ್ಕಳಿಗೆ ಹೂವುಗಳ ಮೇಲೆ ನಡೆದು ಬರುವಂತೆ ವ್ಯವಸ್ಥೆ ಮಾಡಿ, ಗುಲಾಬಿ ಹೂ ಮತ್ತು ಸಿಹಿಯನ್ನು ಕೊಡುವ ಮೂಲಕ ಸ್ವಾಗತಿಸ ಲಾಯಿತು.

ನಂತರ ಮಹಾಪೌರರಾದ ಪುಷ್ಪಲತಾ ಜಗನ್ನಾಥ್‌ ಮಾತನಾಡಿ, ಇಂದು ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳದ ಸಂಗತಿ. ಉತ್ತಮ ಶಿಕ್ಷಣ ಮತ್ತು ಹೆಚ್ಚಿನ ಸವಲತ್ತು ಗಳನ್ನು ರಾಜ್ಯ ಸರ್ಕಾರ ಮಕ್ಕಳಿಗೆ ನೀಡುತ್ತ ಬಂದಿದೆ. ಸರ್ಕಾರಿ ಶಾಲೆಯಲ್ಲಿ ಓದಿದ ತುಂಬಾ ಜನರು ಇಂದು ದೊಡ್ಡ ಹುದ್ದೆಯಲ್ಲಿದ್ದಾರೆ. ಸಂಘ ಸಂಸ್ಥೆಗಳು ತಮ್ಮ ಅಸು ಪಾಸಿನ ವ್ಯಾಪ್ತಿಯಲ್ಲಿರುವ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಪ್ರೇರೆಪಿಸಬೇಕು ಎಂದರು.

ಸಮಾಜಸೇವಕ ಡಾ.ಕೆ ರಘುರಾಂ ವಾಜಪೇಯಿ ಮಾತನಾಡಿದರು. ಲಯನ್‌ ಸಂಸ್ಥೆಯ ಯೋಗ ನರಸಿಂಹ (ಮುರಳಿ), ಟ್ರಸ್ಟ್‌ನ ಕಾರ್ಯದರ್ಶಿ ವಿನಯ್‌ ಕಣಗಾಲ್, ಮಾಜಿ ನಗರ ಪಾಲಿಕೆ ಸದಸ್ಯ ಎಂಡಿ ಪಾರ್ಥಸಾರಥಿ, ಮಂಜು ಕೊಪ್ಪಳ, ಕಾಸರಗೋಡಿನ ಸಾಯಿಕೃಷ್ಣ , ಬಿಎಸ್ಪಿ ನಗರಾಧ್ಯಕ್ಷ ಬಸವರಾಜು ಶಿಕ್ಷಕ ವೃಂದ ಹಾಜರಿದ್ದರು.

ತಾಲೂಕಿನ ಮೆಲ್ಲಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಹೂ ನೀಡಿ ಸ್ವಾಗತಿಸಲಾಯಿತು. ಗ್ರಾಪಂ ಅಧ್ಯಕ್ಷೆ ಮಂಚಮ್ಮ, ಪಿಡಿಒ ರವಿಕುಮಾರ್‌, ಶಾಲೆಯ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಮಕ್ಕಳಿಗೆ ಶಾಲಾ ಪ್ರಾರಂಭೋತ್ಸವದಲ್ಲಿ ಹೂ ನೀಡಿ ಸ್ವಾಗತಿಸುವ ಜೊತೆಗೆ ಮಧ್ಯಾಯನದ ಬಿಸಿಯೂಟ ದಲ್ಲಿ ಸಿಹಿ ಬಡಿಸುವ ಮೂಲಕ ಶುಭಕೋರಿದರು.

ಶಾಲೆಯಲ್ಲಿ ಗುಲಾಬಿ ಹೂವಿನ ಆಕರ್ಷಣೆ
ಹುಣಸೂರು: ಶಾಲೆ ಪುನರಾಂಭ ಇಡೀ ಶಾಲೆ ಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ವಿದ್ಯಾರ್ಥಿ ಗಳಿಗೆ ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸ ಲಾಯಿತು. ಹುಣಸೂರು ತಾಲೂಕಿನ ನಾಗರ ಹೊಳೆ ರಾಷ್ಟ್ರೀಯ ಉದ್ಯಾನದಂಚಿನ ನೇರಳಕುಪ್ಪೆ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಆರಂಭಕ್ಕೆ ಸಡಗರದಿಂದ ನಡೆದ ಸರಳ ಕಾರ್ಯಕ್ರಮದಲ್ಲಿ ನೇರಳಕುಪ್ಪೆ ಗ್ರಾಪಂ ಅಧ್ಯಕ್ಷ ಕೆ.ಡಿ.ಮಹೇಶ್‌, ಎಸ್‌ಡಿಎಂಸಿ ಅಧ್ಯಕ್ಷ ರಾಮೇಗೌಡ ಹಾಗೂ ಸದಸ್ಯರು ಶಾಲೆಗೆ ಸಂಭ್ರಮದಿಂದ ಆಗಮಿಸಿದ ವಿದ್ಯಾರ್ಥಿ ಗಳನ್ನು ಗುಲಾಬಿ ಹೂ ನೀಡಿ ಸ್ವಾಗತಿಸಿದರು. ಮಕ್ಕಳೊಂದಿಗೆ ಶಾಲಾ ಪ್ರಾರ್ಥನೆ, ರಾಷ್ಟ್ರಗೀತೆ ಯಲ್ಲಿ ಭಾಗವಹಿಸಿದ್ದರು. ಬಳಿಕ ಸರಕಾರದ ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ಮದ್ಯಾಹ್ನ ಸಿಹಿಯೊಂದಿಗೆ ಬಿಸಿಯೂಟ ಬಡಿಸಲಾಯಿತು. ಈ ವೇಳೆ ಮುಖ್ಯ ಶಿಕ್ಷಕ ಕುಮಾರಸ್ವಾಮಿ, ತಾಪಂ ಮಾಜಿ ಸದಸ್ಯ ಗಣಪತಿ, ಗ್ರಾಪಂ ಕಾರ್ಯದರ್ಶಿ ರಾಮಚಂದ್ರ ಹಾಗೂ ಸಹ ಶಿಕ್ಷಕರು ಸಹ ಮಕ್ಕಳನ್ನು ನಗುಮೊಗದೊಂದಿಗೆ ಬರಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next