Advertisement

POP Ganapati: ಸದ್ದಿಲ್ಲದೇ ಬರುವ ಪಿಒಪಿ ಗಣಪನಿಗೆ ಬ್ರೇಕ್‌?

03:55 PM Aug 19, 2023 | Team Udayavani |

ಮೈಸೂರು: ಕೆಲ ದಿನಗಳಲ್ಲೇ ಗಣೇಶ ಚತುರ್ಥಿ ಹಬ್ಬ ಸಮೀಪಿಸುತ್ತಿದ್ದು, ನಿಷೇಧಿತ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ (ಪಿಒಪಿ) ಮತ್ತು ಪೇಪರ್‌ ಮೌಲ್ಡ್‌ ಗಣೇಶ ಮೂರ್ತಿಗಳು ಮಾರುಕಟ್ಟೆ ಪ್ರವೇಶಿದಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕಿದೆ. ಜತೆಗೆ ಸಾರ್ವಜನಿಕರೂ ಇಂತಹ ಮೂರ್ತಿಗಳನ್ನು ಖರೀದಿಸುವುದಿಲ್ಲ ಎಂಬ ವಾಗ್ಧಾನ ಮಾಡುವ ಮೂಲಕ ಪರಿಸರ ಸ್ನೇಹಿ ಗಣಪನತ್ತ ಒಲವು ತೋರಬೇಕಿದೆ.

Advertisement

ಜಲಮೂಲ, ಜಲಚರ ಸೇರಿ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಮತ್ತು ಪೇಪರ್‌ ಮೌಲ್ಡ್‌ ಗಣೇಶ ಮೂರ್ತಿಗಳ ಮಾರಾಟ ಮತ್ತು ತಯಾರಿಕೆಯನ್ನು ಸರ್ಕಾರ ನಿಷೇಧಿಸಿದ್ದರೂ ಕೆಲವೆಡೆ ಪಿಒಪಿ ಗಣೇಶ ಮೂರ್ತಿಗಳು ಸದ್ದಿಲ್ಲದೇ ತಯಾರಾಗುತ್ತಿದ್ದು ಮಾರುಕಟ್ಟೆ ಪ್ರವೇಶಕ್ಕೆ ಅಣಿಯಾಗುತ್ತಿವೆ. ಈ ಎಲ್ಲಾ ಚಟುವಟಿಕೆ ನಿಯಂತ್ರಿಸಲು ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮಹಾನಗರ ಪಾಲಿಕೆ ಸೇರಿ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಗ್ರಾಪಂ ಪಿಒಪಿ ಗಣೇಶ ಮೂರ್ತಿ ಖರೀದಿಸದಂತೆ ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಮಾರಾಟ ಮಾಡದಂತೆ ಎಚ್ಚರ ವಹಿಸಬೇಕಿದೆ.

ವಾರದ ಹಿಂದೆ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಸದಸ್ಯರು ಸೇರಿ ಎಲ್ಲ ಹಂತದವರೊಂದಿಗೆ ಸಭೆ ನಡೆಸಿದ್ದು, ಪಿಒಪಿ ಮೂರ್ತಿ ತಯಾರಿಸದೆ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನೇ ತಯಾರಿಸಬೇಕು. ಹೊರ ರಾಜ್ಯ, ಜಿÇÉೆಗಳಿಂದ ಸಹ ಪಿಒಪಿ ಮೂರ್ತಿಗಳು ಜಿಲ್ಲೆ ಪ್ರವೇಶಿಸದಂತೆ ತಡೆಯಲು ಸೂಚಿಸಲಾಗಿದೆ.

ಹೊರ ರಾಜ್ಯದಿಂದ ಮಾರುಕಟ್ಟೆ ಪ್ರವೇಶ: ಪ್ರತಿವರ್ಷ ನೆರೆಯ ತಮಿಳುನಾಡಿನಿಂದ ಪಿಒಪಿ ಮತ್ತು ಪೇಪರ್‌ ಮೌಲ್ಡ್‌ ಗಣಪ ಮೈಸೂರಿನ ಮಾರುಕಟ್ಟೆ ಪ್ರವೇಶಿಸುತ್ತಿವೆ. ಪೊಲೀಸ್‌ ಇಲಾಖೆ ರಾಜ್ಯದ ಗಡಿ ಭಾಗದ ಚೆಕ್‌ಪೋಸ್ಟ್‌ಗಲ್ಲಿ ತಪಾಸಣೆ ತೀವ್ರಗೊಳಿಸುವ ಮೂಲಕ ನಿಷೇಧಿತ ಮೂರ್ತಿ ರಾಜ್ಯ ಪ್ರವೇಶಿದಂತೆ ನೋಡಿಕೊಳ್ಳಬೇಕಿದೆ.

ಮಂಡಳಿಯಿಂದ ಜಾಗೃತಿ: ಪ್ರತಿವರ್ಷ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಶಾಲಾ-ಕಾಲೇಜುಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಹಬ್ಬ ಆಚರಿಸುವಂತೆ ಹಾಗೂ ನಿಷೇಧಿತ ಪಿಒಪಿ, ಪೇಪರ್‌ ಮೌಲ್ಡ್‌ ಮೂರ್ತಿ ಖರೀದಿ ಮಾಡದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಪಿಒಪಿ, ಪೇಪರ್‌ ಮೌಲ್ಡ್‌ ಮೂರ್ತಿಗಳಿಂದಾಗುವ ಹಾನಿ ಸಂಬಂಧ ಬೀದಿ ನಾಟಕ, ಚರ್ಚಾ ಸ್ಪರ್ಧೆ ಏರ್ಪಡಿಸಿ ಯುವ ಸಮೂಹದಲ್ಲಿ ಅರಿವು ಮೂಡಿಸಲಾಗುತ್ತಿದೆ. ಒಂದು ವೇಳೆ ನಿಯಮ ಮೀರಿದರೆ ಅಂತಹ ಮೂರ್ತಿಗಳನ್ನು ವಶಪಡಿಸಿಕೊಳ್ಳುವ ಜತೆಗೆ ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.

Advertisement

ಪರಿಸರ ಮೂರ್ತಿಗೆ ಡಿಮ್ಯಾಂಡ್‌:

ನೈಸರ್ಗಿಕ ಬಣ್ಣ ಲೇಪನದೊಂದಿಗೆ ಮಣ್ಣಿನಿಂದ ತಯಾರಿಸಿದ ಗಣಪತಿ-ಗೌರಿ ಮೂರ್ತಿಗಳ ಖರೀದಿಗೆ ಜನ ಹೆಚ್ಚು ಉತ್ಸುಕರಾಗಿದ್ದು, ಸಾವಿರಾರು ಮೂರ್ತಿಗಳಿಗೆ ಮುಂಗಡ ಹಣ ನೀಡುತ್ತಿದ್ದಾರೆ. ಜತೆಗೆ ತಯಾರಕರು ಅರ್ಧ ಅಡಿಯಿಂದ ಹಿಡಿದು 6 ಅಡಿ ಎತ್ತರದವರೆಗಿನ ಪರಿಸರ ಸ್ನೇಹಿ ಗಣೇಶ ಮೂರ್ತಿ ಸಿದ್ಧಪಡಿಸಿದ್ದಾರೆ. ಒಂದೊಂದು ಮೂರ್ತಿಯೂ ವಿಭಿನ್ನ ಶೈಲಿ, ಬಣ್ಣ, ಭಂಗಿಯೊಂದಿಗೆ ನೋಡುಗರನ್ನು ಆಕರ್ಷಿಸುತ್ತಿವೆ.

ಪಿಒಪಿ ಮೂರ್ತಿಗಳ ನಿಷೇಧ ಏಕೆ?:

ಮಣ್ಣಿನಿಂದ ತಯಾರಿಸಿದ ಮೂರ್ತಿಗಳು ಸಾಮಾನ್ಯವಾಗಿ 6 ಅಡಿ ಎತ್ತರ ಮಾತ್ರ ಇರಲಿವೆ. ಆದರೆ 8ರಿಂದ 10 ಅಡಿ ಎತ್ತರದ ಮೂರ್ತಿಗಳು ಬೇಕಾದರೆ ಪಿಒಪಿ ಬಳಸಬೇಕು. ಕೆಲವರು ಎತ್ತರದ ಗಣೇಶನಿಗಾಗಿ ಪಿಒಪಿ ಮೂರ್ತಿಗಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಈ ಮೂರ್ತಿಗಳನ್ನು ರಸಾಯನಿಕ ವಸ್ತುಗಳಿಂದ ತಯಾರಿಸುವುದಲ್ಲದೇ ಇವುಗಳನ್ನು  ಕೆರೆ, ಬಾವಿ ಸೇರಿ ಇತರ ಜಲ ಮೂಲಗಳಲ್ಲಿ ವಿಸರ್ಜಿಸಿದರೆ ಕರಗುವುದಿಲ್ಲ. ಜತೆಗೆ ನೀರು ಹಾಳಾಗುವುದಲ್ಲದೇ ಪರಿಸರವೂ ನಾಶವಾಗುತ್ತದೆ.

ಏನಿದು ಪೇಪರ್‌ ಮೋಲ್ಡ್‌ ಗಣಪ?:

ಇತ್ತೀಚಿನ ದಿನಗಳಲ್ಲಿ ಪಿಒಪಿ ಬದಲಿಗೆ ಕಡಿಮೆ ತೂಕದ ಎತ್ತರ ಮತ್ತು ಆಕರ್ಷಕ ಪೇಪರ್‌ ಮೋಲ್ಡ್‌ ಗಣಪತಿ ಮೂರ್ತಿಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಇವು ಸಹ ಪರಿಸರಕ್ಕೆ ಮಾರಕವಾಗಿವೆ. ಪೇಪರ್‌ ಅಚ್ಚಿನ ಮೂಲಕ ತಯಾರಿಸಲ್ಪಡುವ ಇವು ಬಹು ದಿನಗಳ ಕಾಲ ಇಡಲು ಕೆಮಿಕಲ್‌ ಬಳಸಲಾಗುತ್ತದೆ. ಇದನ್ನು ನೀರಿನಲ್ಲಿ ವಿಸರ್ಜನೆ ಮಾಡಿದರೆ ಕರಗುವುದಿಲ್ಲ. ಜತೆಗೆ ಮೂರ್ತಿಯಲ್ಲಿರುವ ವಿಷ ಪದಾರ್ಥ ನೀರಿಗೆ ಸೇರುತ್ತದೆ. ಇದರಿಂದ ನೀರು ಮಲಿನವಾಗಿ ಜಲಚರಗಳಿಗೆ ಹಾನಿಯಾಗುವ ಸಂಭವವಿದೆ.

ಪಿಒಪಿ, ಪೇಪರ್‌ ಮೋಲ್ಡ್‌ ಗಣೇಶ ಮೂರ್ತಿ  ನಿಷೇಧಿಸಲಾಗಿದೆ. ಇವುಗಳನ್ನು ಖರೀದಿಸದಂತೆ  , ಪರಿಸರ ಹಾನಿ ಬಗ್ಗೆ ಮಂಡಳಿಯಿಂದ ಶಾಲಾ-ಕಾಲೇಜುಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.-ಹರಿಶಂಕರ್‌, ಪರಿಸರ ಅಧಿಕಾರಿ, ಪ್ರಾದೇಶಿಕ ಕಚೇರಿ 1, ಮಾಲಿನ್ಯ ನಿಯಂತ್ರಣ ಮಂಡಳಿ. 

-ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next