Advertisement

ಮೈಸೂರನ್ನು ಪ್ರವಾಸಿ ಹಬ್‌ ಮಾಡುವೆ

11:44 AM Oct 20, 2018 | |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ದಸರಾ ಸಂದರ್ಭಕ್ಕೆ ಸೀಮಿತವಾಗದೆ ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುವಂತೆ ಮೈಸೂರು-ಮಂಡ್ಯ,ಕೊಡಗು ಜಿಲ್ಲೆಗಳನ್ನೊಳೊಂಡ ಪ್ರವಾಸಿ ಹಬ್‌ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ದಸರಾ ಉತ್ಸವಕ್ಕೆ ಮೈಸೂರು ನಗರಕ್ಕೆ ದೊಡ್ಡಮಟ್ಟದಲ್ಲಿ ಪ್ರವಾಸಿಗರು ಬಂದಿದ್ದಾರೆ. ದಸರೆಯ ಪ್ರತಿಯೊಂದು ಕಾರ್ಯಕ್ರಮಗಳಿಗೂ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಒಟ್ಟಾರೆ ದಸರಾ ಉತ್ಸವಕ್ಕೆ ಪ್ರವಾಸಿಗರು, ಸ್ಥಳೀಯರು ಸೇರಿದಂತೆ 25ಲಕ್ಷಕ್ಕೂ ಹೆಚ್ಚು ಜನ ಮೈಸೂರಿಗೆ ಬಂದು ಹೋಗಿದ್ದಾರೆ.

ಕುಪ್ಪಣ ಪಾರ್ಕ್‌ನಲ್ಲಿ ಗಾಜಿನಮನೆ ಉದ್ಘಾಟನೆ ಜೊತೆಗೆ ಫ‌ಲಪುಷ್ಪ ಪ್ರದರ್ಶನಕ್ಕೆ 4.5ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. ಕೆ.ಆರ್‌.ಎಸ್‌. ಬೃಂದಾವನ =ಕ್ಕೆ ಗುರುವಾರ ಒಂದೇ ದಿನ ಒಂದು ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿದ್ದಾರೆ.

ಹೀಗಾಗಿ ದಸರಾ ಸಂದರ್ಭದಲ್ಲಿ ಮಾತ್ರ ಮೈಸೂರಿಗೆ ಪ್ರವಾಸಿಗರನ್ನು ಆಕರ್ಷಿಸುವ ಬದಲಿಗೆ, ಕೆಆರ್‌ಎಸ್‌, ಮೇಲುಕೋಟೆ, ಸೋಮನಾಥಪುರ, ಮೈಸೂರು ನಗರದ ಪಾರಂಪರಿಕ ಕಟ್ಟಡಗಳು, ಕೊಡಗು ಜಿಲ್ಲೆಯ ತಾಣಗಳನ್ನು ಸೇರಿಸಿ ಪ್ರವಾಸಿ ಹಬ್‌ ಮಾಡಿದಾಗ ಪ್ರವಾಸೋದ್ಯಮ ಅಭಿವೃದ್ಧಿಯಾಗುವ ಜೊತೆಗೆ ಉದ್ಯೋಗ ಸೃಷ್ಟಿಯಾಗಲಿದೆ.

ಕೆಆರ್‌ಎಸ್‌ನಲ್ಲಿ ಶಾಶ್ವತ ದೀಪಾಲಂಕಾರ, ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ದೊಡ್ಡಮಟ್ಟದ ಯೋಜನೆ ತರಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಜೊತೆಗೆ ಮೈಸೂರಿನಲ್ಲಿ  ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇದಕ್ಕಾಗಿ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ ಎಂದರು.

Advertisement

ಓಪನ್‌ ಸ್ಟ್ರೀಟ್‌ಫೆಸ್ಟಿವಲ್‌ ರದ್ದು: ಈ ವರ್ಷ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ನಲ್ಲಿ ಕೆಲ ಗೊಂದಲಗಳಾಗಿರುವುದು ಗಮನಕ್ಕೆ ಬಂದಿದೆ.ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ ಎಂಬ ಸುದ್ದಿ ಇದೆ. ಪೊಲೀಸರು ಇಷ್ಟು ಜನರನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿಗೆ ಇಂತಹ ಕಪ್ಪು ಚುಕ್ಕೆ ಬರಬಾರದು, ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಜೊತೆಗೆ ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆಗೆ ಸೂಚಿಸುವುದಾಗಿ ಹೇಳಿದರು. ಒಟ್ಟಾರೆ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ, ವಿರೋಧವಿದ್ದರೆ ರದ್ದುಪಡಿಸುವುದಾಗಿ ತಿಳಿಸಿದರು.

ಆರೋಗ್ಯಕರ್ನಾಟಕ ಯೋಜನೆಯ ಸಾಧಕ-ಬಾಧಕಗಳು ಗೊತ್ತಾಗಿದ್ದು,ಮುಂದಿನ ಒಂದು ವಾರದಲ್ಲಿ ಇದನ್ನು ಸರಿಪಡಿಸಲಾಗುವುದು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು ನೀಡಲು ಎಪಿಎಲ್‌, ಬಿಪಿಎಲ್‌ಕಾರ್ಡ್‌ಕೇಳುವುದಿಲ್ಲ.ನೆರವು ಕೋರಿ ಎಲ್ಲ ಬಡವರಿಗೆ ಸಹಾಯ ನೀಡಲಾಗುವುದು.

ಕಳೆದ ನಾಲ್ಕು ತಿಂಗಳಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 18 ಕೋಟಿ ನೆರವು ನೀಡಿರುವುದಾಗಿ ಹೇಳಿದರು. ರೈತರ ಸಾಲಮನ್ನಾ ಸಂಬಂಧ ಬ್ಯಾಂಕ್‌ಗಳಿಗೆ ಸ್ಪಷ್ಟ ಸೂಚನೆ ನೀಡಿದ್ದು, ನವೆಂಬರ್‌ 1ರಿಂದಸಮರೋಪಾದಿಯಲ್ಲಿ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಇಷ್ಟು ದೊಡ್ಡ ಮೊತ್ತದ ಸಾಲಮನ್ನಾ ಮಾಡಿದರೂ ಇನ್ನೂ ರೈತರ ಆತ್ಮಹತ್ಯೆ ನಿಂತಿಲ್ಲ. ಹೀಗಾಗಿ ರೈತರ ಆತ್ಮಹತ್ಯೆಗೆ ಬೇರೆ ಕಾರಣವೂ ಇರಬೇಕು ಎನಿಸುತ್ತಿದ್ದು, ಆ ಕಾರಣಗಳನ್ನು ಹುಡುಕುವ ಜೊತೆಗೆ ರೈತರಿಗೆ ಆರ್ಥಿಕ ಶಕ್ತಿ ತುಂಬಲು ತಮ್ಮ ಸರ್ಕಾರಹೊಸ ಕೃಷಿ ಪದ್ಧತಿಗೆ ಚಾಲನೆ ನೀಡುತ್ತಿರುವುದಾಗಿ ಹೇಳಿದರು.

ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್‌, ಶ್ರೀನಿವಾಸ್‌,ಮಾಜಿ ಸಚಿವ ಎನ್‌.ಮಹೇಶ್‌, ಶಾಸಕರಾದ ಅಶ್ವಿ‌ನ್‌ ಕುಮಾರ್‌, ಅನ್ನದಾನಿ, ಕೆ.ಮಹದೇವ, ಕೆ.ಟಿ.ಶ್ರೀಕಂಠೇಗೌಡ ಹಾಜರಿದ್ದರು.

ಐದು ಕ್ಷೇತ್ರಗಳಲ್ಲೂ ಗೆಲುವು – ಸಿಎಂ: ಮೈಸೂರು: ಉಪ ಚುನಾವಣೆ ನಡೆಯುತ್ತಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್‌-ಕಾಂಗ್ರೆಸ್‌ ಹೊಂದಾಣಿಕೆ ಮೂಲಕ ಗೆಲ್ಲುತ್ತೇವೆ. ಒಟ್ಟಾಗಿಯೇ ಚುನಾವಣಾ ಪ್ರಚಾರ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಉಪ ಚುನಾವಣೆ ಪ್ರಚಾರದ ರೂಪುರೇಷೆ ಸಿದ್ಧಪಡಿಸುವ ಸಂಬಂಧ ಶನಿವಾರ ಬೆಂಗಳೂರಿನಲ್ಲಿ ಎಚ್‌.ಡಿ.ದೇವೇಗೌಡ, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್‌, ದಿನೇಶ್‌ ಗುಂಡೂರಾವ್‌ ಎಲ್ಲರೂ ಸೇರಿ ಜಂಟಿ ಸಭೆ ನಡೆಸಲಿದ್ದೇವೆ ಎಂದರು.

ತಮ್ಮ ಸರ್ಕಾರದ ಕುರಿತು ಯಡಿಯೂರಪ್ಪ ಹೇಳಿಕೆಗಳು ಅವರ ವರ್ತನೆಯನ್ನು ತೋರಿಸುತ್ತದೆ. ಸರ್ಕಾರಕ್ಕೆ ಅವರು ನೀಡುತ್ತಿರುವ ಡೆಡ್‌ಲೈನ್‌ಗಳು ಕಾರ್ಯರೂಪಕ್ಕೆ ಬರಲ್ಲ, ಬದಲಿಗೆ ಅವರ ಡೆಡ್‌ಲೈನ್‌ಗಳು ವಿಸ್ತರಣೆಯಾಗುತ್ತಾ ಹೋಗುತ್ತವೆ ಎಂದು ವ್ಯಂಗ್ಯವಾಡಿದರು. ಮಾಜಿ ಸಚಿವ ಎನ್‌.ಮಹೇಶ್‌ ನಮ್ಮ ಜೊತೆಗೇ ಇದ್ದಾರೆ. ಪಕ್ಷ ಸಂಘಟನೆಗಾಗಿ ಅವರು ರಾಜೀನಾಮೆ ನೀಡಿದ್ದಾರೆಯೇ ವಿನಾ ಬೇರೆ ಕಾರಣಕ್ಕಲ್ಲ ಎಂದು ಸ್ಪಷ್ಟಪಡಿಸಿದರು.

ದಸರಾ ಮಹೋತ್ಸವಕ್ಕೆ ಸ್ಥಳೀಯ ಕಾಂಗ್ರೆಸ್ಸಿಗರು ಭಾಗವಹಿಸದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಣ್ಣಪುಟ್ಟ ಸಮಸ್ಯೆಗಳಿರಬಹುದು, ಆದರೆ ಎರಡೂ ಪಕ್ಷಗಳವರೂ ಚೆನ್ನಾಗಿದ್ದೇವೆ. ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್‌ ಸೇರಿದಂತೆ ಕಾಂಗ್ರೆಸ್‌ನ ಹಲವು ಸಚಿವರು ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next