Advertisement

BJP vs Congress ; ಧಾರವಾಡದಲ್ಲಿ ಯಾರೇ ಗೆದ್ದರೂ ದಾಖಲೆ!

04:02 PM May 05, 2024 | Team Udayavani |

ಹುಬ್ಬಳ್ಳಿ: ವಿದ್ಯಾಕಾಶಿ, ಛೋಟಾ ಮುಂಬೈ ಖ್ಯಾತಿಯ ವಾಣಿಜ್ಯ ನಗರಿ ಹೀಗೆ ಸರಸ್ವತಿ-ಲಕ್ಷ್ಮೀಯ ಸಮ್ಮಿಲನ, ಸಂಗೀತ ದಿಗ್ಗಜರ ತವರು, ಪೇಡೆ ಸವಿಯ ಹುಬ್ಬಳ್ಳಿ-ಧಾರವಾಡ ಮಹಾನಗರ ವನ್ನು ಒಳಗೊಂಡ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯ ಮತ ಸಮರದಲ್ಲಿ ಬಿಜೆಪಿ-ಕಾಂಗ್ರೆಸ್‌ನಲ್ಲಿ ಯಾರೇ ಗೆದ್ದರೂ ದಾಖಲೆ ಆಗಲಿದೆ.
ಎರಡೂವರೆ ದಶಕಗಳ ವಿಜಯ ದುಂಧುಬಿ ಮುಂದುವ ರಿಸಲು ಬಿಜೆಪಿ ಯತ್ನಿಸುತ್ತಿದ್ದರೆ, 25 ವರ್ಷಗಳಿಂದ ಕಳೆದು ಕೊಂಡ ಕ್ಷೇತ್ರ ಮರುವಶಕ್ಕೆ ಕಾಂಗ್ರೆಸ್‌ ಹವಣಿಸುತ್ತಿದೆ.

Advertisement

ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸತತ ನಾಲ್ಕು ಬಾರಿ ಗೆಲುವು ಕಂಡು ಇದೀಗ ಐದನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹಿಂದೆ ಸರೋಜನಿ ಮಹಿಷಿ, ಡಿ.ಕೆ. ನಾಯ್ಕರ್‌ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಜೋಶಿ ಆ ದಾಖಲೆ ಮುರಿಯುವ ತವಕದಲ್ಲಿದ್ದಾರೆ. ಇನ್ನು 1996ರಿಂದ ಕ್ಷೇತ್ರದ ಮೇಲಿನ ಪ್ರಭುತ್ವ ಕಳೆದುಕೊಂಡಿರುವ ಕಾಂಗ್ರೆಸ್‌ ಗೆಲುವಿಗೆ ಹವಣಿಸುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಗೆದ್ದರೆ ಲೋಕಸಭಾ ಚುನಾವಣೆಯ ಮೊದಲ ಯತ್ನದಲ್ಲೇ ಗೆಲುವು ಸಾಧಿಸಿದ ದಾಖಲೆ ಬರೆಯಲಿದ್ದಾರೆ.

ಸತತ ಆಯ್ಕೆಯ ಖ್ಯಾತಿ: ಧಾರವಾಡ ಲೋಕಸಭಾ ಕ್ಷೇತ್ರ ಈ ಹಿಂದೆ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರವಾಗಿತ್ತು. 2008 ರಲ್ಲಿ ಧಾರವಾಡ ಕ್ಷೇತ್ರವಾಗಿ ಹೊರಹೊಮ್ಮಿದೆ. 1952ರಿಂದ 2019ರ ವರೆಗೆ ಒಟ್ಟು 17 ಲೋಕಸಭಾ ಚುನಾವಣೆ ನಡೆದಿದ್ದು, ಇದರಲ್ಲಿ 1952ರಿಂದ 1991ರ ವರೆಗೆ ಸತತ 10 ಬಾರಿ ಕಾಂಗ್ರೆಸ್‌ ಗೆದ್ದಿದೆ. 1996ರಲ್ಲಿ ಕಾಂಗ್ರೆಸ್‌ನಿಂದ ಕ್ಷೇತ್ರ ಕಿತ್ತುಕೊಂಡ ಬಿಜೆಪಿ 2019ರ ವರೆಗೆ ಸತತವಾಗಿ 7 ಬಾರಿ ಗೆಲುವು ಸಾಧಿಸುತ್ತ ಬಂದಿದೆ.
ಈ ಕ್ಷೇತ್ರದ ವಿಶೇಷವೆಂದರೆ ಲೋಕಸಭಾ ಚುನಾವಣೆಯ 72 ವರ್ಷಗಳಲ್ಲಿ ಇದುವರೆಗೆ ಸಂಸದರಾದವರು ಕೇವಲ ಐವರು ಮಾತ್ರ. ಸತತವಾಗಿ ಮೂರ್‍ನಾಲ್ಕು ಬಾರಿ ಒಬ್ಬರನ್ನೇ ಆಯ್ಕೆ ಮಾಡುವುದು ಈ ಕ್ಷೇತ್ರದ ವಿಶೇಷ. ಕಾಂಗ್ರೆಸ್‌ನ ಡಿ.ಪಿ.ಕರಮಕರ ಸತತ ಎರಡು ಬಾರಿ ಆಯ್ಕೆಯಾದರೆ, ಕಾಂಗ್ರೆಸ್‌ನ ಸರೋಜಿನಿ ಮಹಿಷಿ ಹಾಗೂ ಡಿ.ಕೆ.ನಾಯ್ಕರ್‌ ತಲಾ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದರು. ಬಿಜೆಪಿಯ ವಿಜಯ ಸಂಕೇಶ್ವರ ಸತತ ಮೂರು ಬಾರಿ ಆಯ್ಕೆಯಾಗಿದ್ದರು. ಬಿಜೆಪಿಯ ಹಾಲಿ ಸಂಸದ ಪ್ರಹ್ಲಾದ್‌ ಜೋಶಿ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಬಿಜೆಪಿ ಪ್ರಹ್ಲಾದ್‌ ಜೋಶಿ ಎಬಿವಿಪಿ, ಸಂಘ ಹಿನ್ನೆಲೆಯೊಂದಿಗೆ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿದ್ದರು. ಹುಬ್ಬಳ್ಳಿಯಲ್ಲಿ ನಡೆದ ಈದ್ಗಾ ಮೈದಾನ ರಾಷ್ಟ್ರಧ್ವಜ ಹೋರಾಟ, ನೈಋತ್ಯ ರೈಲ್ವೇ ವಲಯ, ಹೈಕೋರ್ಟ್‌ ಪೀಠ ಹೀಗೆ ವಿವಿಧ ಹೋರಾಟಗಳ ಮೂಲಕ ಗುರುತಿಸಿಕೊಂಡು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿ ಸೇರಿಕೊಂಡು ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯಾಧ್ಯಕ್ಷ ಹುದ್ದೆವರೆಗೇರಿದವರು. ಲೋಕಸಭೆ ಚುನಾವಣೆಯಲ್ಲಿ ಮೊದಲ ಯತ್ನದಲ್ಲೇ ಗೆಲುವಿನ ನಗೆ ಬೀರಿದವರು. ಕಾಂಗ್ರೆಸ್‌ನಿಂದ ಲೋಕಸಭೆಗೆ ಸ್ಪರ್ಧಿಸಿರುವ ವಿನೋದ ಅಸೂಟಿ ಯುವ ಕಾಂಗ್ರೆಸ್‌ನ ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, 2018ರ ವಿಧಾನಸಭಾ ಚುನಾವಣೆಯಲ್ಲಿ ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಇದೀಗ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದ್ದಾರೆ.

2019ರ ಲೋಕಸಭಾ ಚುನಾವಣೆ ವೇಳೆಗೆ ಈ ಕ್ಷೇತ್ರದ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಬಿಜೆಪಿ, ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದವು. ಈಗ ಬಿಜೆಪಿ ಹಾಗೂ ಕಾಂಗ್ರೆಸ್‌ ತಲಾ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಸಮಬಲ ಸಾಧಿಸಿವೆ.

ಈ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌ ಜತೆಗೆ ಪಕ್ಷೇತರ ಅಭ್ಯರ್ಥಿಯಾಗಿ ಶಿರಹಟ್ಟಿಯ ಶ್ರೀದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಸಿದ್ದರು. ತ್ರಿಕೋನ ಸ್ಪರ್ಧೆ ಖಚಿತ ಎಂದು ಭಾವಿಸಲಾಗಿತ್ತಾದರೂ, ದಿಢೀರ್‌ ಬೆಳವಣಿಗೆಯಲ್ಲಿ ಕಣದಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಈಗ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿ ದೇಶದ ಹಿತ-ಮೋದಿ ಅಲೆ ಜತೆಗೆ ಕಳೆದ ನಾಲ್ಕು ಅವಧಿಯಲ್ಲಿ ಜೋಶಿಯವರ ಸಾಧನೆಯನ್ನು ಮುಂದಿಟ್ಟು ಪ್ರಚಾರ ನಡೆಸುತ್ತಿದ್ದರೆ; ಕಾಂಗ್ರೆಸ್‌ ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯ ಹಾಗೂ ಗ್ಯಾರಂಟಿಗಳ ಹೆಸರಲ್ಲಿ ಮತಸೆಳೆಯಲು ಯತ್ನಿಸುತ್ತಿದೆ.

Advertisement

ಜಾತಿ ಲೆಕ್ಕಾಚಾರ ಹೇಗಿದೆ?

ವೀರಶೈವ-ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಮುಸ್ಲಿಮರು ಎರಡನೇ ಸ್ಥಾನದಲ್ಲಿ ಬರುತ್ತಾರೆ. ಪರಿಶಿಷ್ಟ ಜಾತಿ-ಪಂಗಡ ಹಾಗೂ ಕುರುಬರು ಅನಂತರದ ಸ್ಥಾನದಲ್ಲಿದ್ದಾರೆ. ಪ್ರಹ್ಲಾದ್‌ ಜೋಶಿ ಬ್ರಾಹ್ಮಣ ಸಮಾಜಕ್ಕೆ ಸೇರಿದ್ದರೆ, ಯುವಕ ವಿನೋದ ಅಸೂಟಿ ಕುರುಬ ಸಮಾಜಕ್ಕೆ ಸೇರಿದ್ದಾರೆ. ಒಂದೊಮ್ಮೆ ಕುರುಬ ಹಾಗೂ ಮುಸ್ಲಿಂ ಮತಗಳು ಕಾಂಗ್ರೆಸ್‌ನತ್ತ ವಾಲಿದರೆ, ಲಿಂಗಾಯತರು ಹಾಗೂ ಪರಿಶಿಷ್ಟರ ಮತಗಳು ನಿರ್ಣಾಯಕವಾಗಲಿವೆ.

ಪ್ರಹ್ಲಾದ್‌ ಜೋಶಿ  ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಸಂಸದನಾಗಿ ಕೈಗೊಂಡಿರುವ ದಾಖಲೆ ರೂಪದ ವಿವಿಧ ಅಭಿ ವೃದ್ಧಿ ಯೋಜನೆಗಳನ್ನು ಜನರು ಮನಗಂಡಿದ್ದಾರೆ. ಇದುವೇ ನನ್ನ ಗೆಲುವಿಗೆ ಶ್ರೀರಕ್ಷೆೆ.

ಸಾಮರ್ಥ್ಯ
ಮೋದಿ ಅಲೆ, ಕ್ಷೇತ್ರದಲ್ಲಿ ಹಿಂದುತ್ವದ ಬಲ
ಸತತ 4ಬಾರಿ ಗೆದ್ದು ಕ್ಷೇತ್ರಕ್ಕೆ ಅಭ್ಯರ್ಥಿ ಚಿರಪರಿಚಿತ
ಅಭಿವೃದ್ಧಿ ಕಾರ್ಯಗಳು ಕೈಹಿಡಿಯುವ ಭರವಸೆ

ವಿನೋದ ಅಸೂಟಿ ಕಾಂಗ್ರೆಸ್‌ ಅಭ್ಯರ್ಥಿ

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಮೊದಲ ಬಾರಿಗೆ ಸ್ಪರ್ಧಿಸಿದ್ದರೂ ಜನ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ರಾಜ್ಯ ಸರಕಾರ ಜಾರಿಗೊಳಿಸಿದ ಐದು ಗ್ಯಾರಂಟಿ ಯೋಜನೆಗಳು ಹಾಗೂ ಪಕ್ಷದ ಪ್ರಣಾಳಿಕೆಯ ಭರವಸೆಗಳು ಜನರಲ್ಲಿ ಪಕ್ಷದ ಬಗ್ಗೆ ವಿಶ್ವಾಸ ಹೆಚ್ಚಿಸಿದೆ.

ಸಾಮರ್ಥ್ಯ
ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಇರುವುದು
ಸರಕಾರದ 5 ಗ್ಯಾರಂಟಿ ಕೈ ಹಿಡಿಯುವ ವಿಶ್ವಾಸ
ಯುವ-ಹೊಸ ಮುಖಕ್ಕೆ ಮನ್ನಣೆ ನಿರೀಕ್ಷೆ

*ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next