Advertisement

ನಾಗಸ್ವರದಿಂದ ಸ್ಯಾಕ್ಸೊಫೋನ್ ವರೆಗೆ: ಕದ್ರಿ ಗೋಪಾಲನಾಥ್ ಸಂಗೀತ ಪಯಣದ ಯಶೊಗಾಥೆ

10:24 AM Oct 12, 2019 | keerthan |

ಸ್ಯಾಕ್ಸೋಫೋನ್ ವಾದನದ ಸ್ವರವೊಂದು ಇಂದು ಕೊನೆಯಾಗಿದೆ. ಕದ್ರಿ ಗೋಪಾಲನಾಥ್ ಎಂಬ ಸ್ಯಾಕ್ಸೋಫೋನ್ ಸಾಹುಕಾರ ತನ್ನ ಸಂಗೀತ ಪಯಣದ ಹೆಜ್ಜೆಯನ್ನು ಪೂರ್ಣಗೊಳಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕದ್ರಿ ಗೋಪಾಲನಾಥ್ ಅವರು ಕೊನೆಯುಸಿರೆಳೆದರು.

Advertisement

ವಿದೇಶಿ ವಾದ್ಯವಾದ ಸ್ಯಾಕ್ಸೋಫೋನ್ ಅನ್ನು ಅಪ್ಪಟ ದೇಶಿ ವಾದನವನ್ನಾಗಿಸಿದ ಕೀರ್ತಿ ಕದ್ರಿಯವರಿಗೆ ಸಲ್ಲುತ್ತದೆ. ಮೂಲತಃ ನಾಗಸ್ವರ ವಾದಕರಾಗಿದ್ದ ಅವರು ಸ್ಯಾಕ್ಸೋಫೋನ್ ಜಗತ್ತಿನ ಚಕ್ರವರ್ತಿಯಾಗಿ ಮೆರೆದಾಡಿದ ಪಯಣ ಅವರ್ಣನೀಯ.

ಗೋಪಾಲನಾಥನ್ ಅವರು ಜನಿಸಿದ್ದು 1948ರ ಡಿಸೆಂಬರ್ 11ರಂದು. ದಕ್ಷಿಣ ಕನ್ನಡ ಜಿಲ್ಲೆಯ ಸಜಿಪ ಗ್ರಾಮದ ಮಿತ್ತಕೆರೆಯಲ್ಲಿ. ತಾಯಿ ಗಂಗಮ್ಮ ತಂದೆ ಪ್ರಸಿದ್ದ ನಾಗಸ್ವರ ವಾದಕ ತನಿಯಪ್ಪ.

ಮನೆಯಲ್ಲಿ ಸಂಗೀತದ ಸಪ್ತಸ್ವರ ಬಾಲ್ಯದಿಂದಲೇ ಗೋಪಾಲನಾಥ್ ಅವರ ಒಡನಾಡಿಯಾಗಿತ್ತು. ತಂದೆಯೇ ಮೊದಲ ಗುರುವಾಗಿದ್ದರು. ತಂದೆಯಿಂದ ನಾಗಸ್ವರ ಕಲಿತ ಅವರು ಅದರಲ್ಲಿ ಪ್ರಾವಿಣ್ಯತೆ ಪಡೆದಿದ್ದರು.

Advertisement

ನಾಗಸ್ವರದಿಂದ ಸ್ಯಾಕ್ಸೋಫೋನ್ ಕಡೆಗೆ

ನಾಗಸ್ವರ ನುಡಿಸುತ್ತಿದ್ದ ಗೋಪಾಲನಾಥರು ಸ್ಯಾಕ್ಸ್ ಫೋನ್ ಕಡೆಗೆ ಒಲವು ಹೊರಳಿದ್ದು ಮೈಸೂರಿನಲ್ಲಿ. ಮೈಸೂರಿನ ಅರಮನೆಯ ಬ್ಯಾಂಡ್ ಸೆಟ್ ನಲ್ಲಿದ್ದ ಸ್ಯಾಕ್ಸೋಫೊನ್ ವಾದನದಿಂದ ಪ್ರೇರೇಪಿತರಾದ ಅವರು ಆ ಹೊಸ ವಾದ್ಯವನ್ನು ಕಲಿಯುವ ಸಂಕಲ್ಪ ಮಾಡಿದರು.

ಮುಂದೆ ಸುಮಾರು ಇಪ್ಪತ್ತು ವರ್ಷಗಳ ಕಠಿಣ ಪರಿಶ್ರಮದಿಂದ ಸ್ಯಾಕ್ಸೋಫೋನ್ ವಾದನದಲ್ಲಿ ನೈಪುಣ್ಯತೆ ಸಾಧಿಸಿದರು. ಗೋಪಾಲಕೃಷ್ಣ ಅಯ್ಯರ್ ಅವರಿಂದ ಸ್ಯಾಕ್ಸೋಫೋನ್ ನಲ್ಲಿ ಕರ್ನಾಟಕ ಸಂಗೀತ ನುಡಿಸುವುದನ್ನು ಕರಗತ ಮಾಡಿಕೊಂಡರು.

ಮುಂದೆ ಚೆನ್ನೈನ ಟಿ.ವಿ ಗೋಪಾಲಕೃಷ್ಣ ಅವರ ಒಡನಾಟದಿಂದ ಕದ್ರಿ ಗೋಪಾಲನಾಥರು ತಮ್ಮ ಸಾಧನೆಯ ಮೇರು ಶಿಖರವನ್ನೇರಿದರು.

1980 ರಲ್ಲಿ ಮುಂಬೈ ನಲ್ಲಿ ನಡೆದ ಕಾರ್ಯಕ್ರಮವೊಂದು ಕದ್ರಿ ಗೋಪಾನನಾಥ್ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಗೊಳಿಸಿತು. ಮುಂಬೈನಲ್ಲಿ ನಡೆದಿದ್ದ ಜಾಸ್ ಕಾರ್ಯಕ್ರಮದಲ್ಲಿ ಗೋಪಾಲನಾಥ್ ಅವರು ತಮ್ಮ ಪ್ರದರ್ಶನ ನೀಡಿದ್ದರು. ಅವರ ವಾದನ ಕೇಳಿ ಬೆರಗಾದ ಕ್ಯಾಲಿಫೋರ್ನಿಯಾ ಮೂಲದ ಅಂತಾರಾಷ್ಟ್ರೀಯ ಜಾಸ್ ಕಲಾವಿದ ಜಾನ್ ಹ್ಯಾಂಡಿ ತಮ್ಮೊಂದಿಗೆ ಜುಗಲ್ಬಂದಿ ನಡೆಸುವಂತೆ ಆಹ್ವಾನ ನೀಡಿದ್ದರು. ಜಾನ್ ಹ್ಯಾಂಡಿಯ ಜಾಸ್ ಮತ್ತು ಕದ್ರಿಯರ ಕರ್ನಾಟಕ ಸಂಗೀತ ಜುಗಲ್ಬಂದಿ ಭಾರಿ ಮನ್ನಣೆಗೆ ಪಾತ್ರವಾಯಿತು. ಮುಂದೆ ಬರ್ಲಿನ್, ಪೆರುಗ್ವೆ, ಮೆಕ್ಸಿಕೋ, ಪ್ಯಾರಿಸ್, ಬಿಬಿಸಿ ಕಾನ್ಸರ್ಟ್ ಲಂಡನ್ ನಲ್ಲಿ ಜಾಸ್ ಕಾರ್ಯಕ್ರಮಗಳಲ್ಲಿ ಕದ್ರಿಯವರು ಮಿಂಚಿದರು.

ಕೆ ಬಾಲಚಂದರ್ ನಿರ್ದೇಶನದ ತಮಿಳು ಚಿತ್ರಕ್ಕಾಗಿ ಕದ್ರಿ ಗೋಪಾಲನಾಥನ್ ಸ್ಯಾಕ್ಸೋಫೋನ್ ನುಡಿಸಿದ್ದರು. ಎ.ಆರ್. ರೆಹಮಾನ್ ಸಂಗೀತ ನಿರ್ದೇಶನದ ಈ ಚಿತ್ರಕ್ಕಾಗಿ ಅವರು ನುಡಿಸಿದ ಕಲ್ಯಾಣವಸ್ತಾನಂ ರಾಗ ಭಾರಿ ಜನಪ್ರೀಯತೆ ಪಡೆದಿತ್ತು. ಇದಾದ ನಂತರ ಸಿಕ್ಕ ಜನಮನ್ನಣೆಯಿಂದ ರೈಲು, ಬಸ್ ಗಳಲ್ಲಿ ಓಡಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಕದ್ರಿಯವರು ಒಂದು ಕಡೆ ನೆನಪಿಸಿಕೊಳ್ಳುತ್ತಾರೆ.

ಅಂತಾರಾಷ್ಟ್ರೀಯ ಕಲಾವಿದರೊಂದಿಗೆ ಹಲವಾರು ಬಾರಿ ವಿಶ್ವಪಯರ್ಟನೆ ಮಾಡಿದ ಖ್ಯಾತಿ ಕದ್ರಿಯವರದ್ದು. ಅಮೇರಿಕಾ, ಸ್ವಿಟ್ಜರ್ ಲ್ಯಾಂಡ್, ಮೆಕ್ಸಿಕೋ, ಲಂಡನ್ಮ ಜರ್ಮನಿ, ಸಿಂಗಾಪುರ, ಬಹ್ರೇನ್, ಕತಾರ್, ಮಸ್ಕತ್, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದಾದ್ಯಂತ ತಮ್ಮ ಸಂಗೀತ ಸುಧೆಯನ್ನುನ ಕದ್ರಿಯವರು ಹರಿಸಿ ಪ್ರಸಿದ್ದರಾಗಿದ್ಧಾರೆ.

ಭಾರತ ಸರ್ಕಾರದ ಪದ್ಮಶ್ರೀ, ಕೇಂದ್ರ ಸಂಗೀತ ನಾಟಕ ಅಕಾಡಮಿ, ತಮಿಳುನಾಡು ಸರಕಾರ ಕಲೈಮಾಮಮಣಿ,  ಕರ್ನಾಟಕ ಕಲಾಶ್ರೀ, ಗಾನಕಲಾ ಭೂಷಣ, ನಾದ ಗಂಧರ್ವ, ನಾದೋಪಾಸನ ಬ್ರಹ್ಮ ಸುನಾದ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ, ಶೃಂಗೇರಿ – ಮಂತ್ರಾಲಯ – ಅಹೋಬಿಲ ಮುಂತಾದ ಪೀಠಗಳಿಂದ ಸನ್ಮಾನ, ಕಂಚಿ ಕಾಮಕೋಠಿ ಆಸ್ಥಾನ ವಿದ್ವಾನ್, ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಕದ್ರಿ ಗೋಪಾಲನಾಥರನ್ನು ಅರಸಿ ಬಂದಿವೆ.

ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಇವರ ಸುಪುತ್ರ. ಅಲ್ಪ ಕಾಲದ ಆರೋಗ್ಯ ಸಮಸ್ಯೆಯಿಂದ ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಕದ್ರಿ ಗೋಪಾಲನಾಥ್ ಅವರ ಅಂತ್ಯಕ್ರಿಯೆ ಪದವಿನಂಗಡಿ ಮನೆಯಲ್ಲಿ ನಡೆಯಲಿದೆ.

ವಿದೇಶಿ ವಾದ್ಯವೊಂದಕ್ಕೆ ದೇಶಿ ಸೊಗಡನ್ನು ನೀಡಿ ವಿಶ್ವಪ್ರಸಿದ್ದಿ ಪಡೆದ ಕದ್ರಿ ಗೋಪಾಲನಾಥರು ಇಂದು ನಮ್ಮನ್ನು ಅಗಲಿದರೂ ಅವರ ಸಾಧನೆ ಅಜರಾಮರ.

Advertisement

Udayavani is now on Telegram. Click here to join our channel and stay updated with the latest news.

Next